i
ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದ ರೈತರು…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತ ಸಂಘದ ನೇತೃತ್ವದಲ್ಲಿ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ರೈತರು ಪ್ರತಿಭಟನೆ ನಡೆದಿಸಿದರು.
ಹಿರಿಯೂರು ಬೆಸ್ಕಾಂ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನೇತೃತ್ವ ವಹಿಸಿ ತಾಲೂಕು ರೈತ ಸಂಘದ ಅಧ್ಯಕ್ಷ ಕೆ ಟಿ ತಿಪ್ಪೇಸ್ವಾಮಿ ಮಾತನಾಡಿ ಅಕ್ರಮ ಸಕ್ರಮ ಯೋಜನೆಯಲ್ಲಿ ನಮ್ಮ ತಾಲೂಕಿನ ರೈತರು 1/ 11 /20 ರಿಂದ ಇಲ್ಲಿಯವರೆಗೂ ಸುಮಾರು 3000 ಜನ ಹಣ ತುಂಬಿದ ರೈತರಿಗೆ ಪರಿವರ್ತಕ ಹಾಗೂ ಮೂಲಭೂತ ಸೌಕರ್ಯ ಒದಗಿಸಿರುವುದಿಲ್ಲ ಅನೇಕ ಬಾರಿ ಹೋರಾಟ ಮಾಡಿ ಸರ್ಕಾರ ಗಮನ ಸೆಳೆದರೂ ಇದುವರೆಗೂ ಕಾರ್ಯಗತವಾಗಿಲ್ಲ. ಕೂಡಲೇ ಕಾಮಗಾರಿಯನ್ನು ಪ್ರಾರಂಭಿಸಬೇಕು ಮತ್ತು ಸುಟ್ಟುಹೋದ ಪರಿವರ್ತಕಗಳಿಗೆ 24 ಗಂಟೆ ಒಳಗಾಗಿ ಬದಲಾಯಿಸುತ್ತೇವೆ ಎಂಬ ಸರ್ಕಾರದ ನಿಯಮವಿದ್ದರೂ 25 ದಿನವಾದರೂ ಪರಿವರ್ತಕಗಳನ್ನು ಕೊಡುತ್ತಿಲ್ಲ ಹಾಗೂ ತೋಟದ ಮನೆಯಲ್ಲಿ ವಾಸ ಮಾಡುವ ರೈತರಿಗೆ ಸಿಂಗಲ್ ಪೇಸ್ ವಿದ್ಯುತ್ ಸಪ್ಲೈ ಮಾಡುವುದನ್ನು ನಿಲ್ಲಿಸುವುದಾಗಿ ಕೆಪಿಟಿಸಿಎಲ್ ಸೂಚನೆ ನೀಡಿದೆ ಈ ನಿಯಮವನ್ನ ಬದಲಾಯಿಸಿ ಯಥಾಸ್ಥಿತಿ ಕಾಪಾಡಬೇಕು ಎಂದು ಅವರು ಆಗ್ರಹಿಸಿದರು.
ತಾಲೂಕಿನಲ್ಲಿ ಅನೇಕ ರೈತರು ತೋಟದ ಮನೆಗಳಲ್ಲಿ ಪಶು ಸಂಗೋಪನೆ ಕೋಳಿ ಸಾಕಾಣಿಕೆ ಕುರಿ ಮತ್ತು ಮೇಕೆ ಸಾಕಾಣಿಕೆ ಮಾಡುತ್ತಿದ್ದಾರೆ. ಇಂದು ಅನೇಕ ರೀತಿಯ ಹೈನುಗಾರಿಕೆಯನ್ನು ಹೊಂದಿದ್ದು ಮತ್ತು ತೋಟದಲ್ಲಿ ವಾಸ ಮಾಡುತ್ತಾ ಇದ್ದಾರೆ ಅವರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತದೆ. ಆದ್ದರಿಂದ ತೋಟದ ಮನೆಗಳಿಗೆ ನಿರಂತರ ಜ್ಯೋತಿ ಒದಗಿಸಬೇಕು ಇಲ್ಲವಾದರೆ ಯಥಾಸ್ಥಿತಿ ಕಾಪಾಡಬೇಕು ಎಂದರು.
ರೈತರ ಪಂಪ್ಸೆಟ್ಟುಗಳ ಆಧಾರ್ ಲಿಂಕ್ ಮಾಡಿ ಮೋಟರ್ ಗೆ ಮೀಟರ್ ಹಾಕಬೇಕೆಂಬ ಕಾನೂನು ರೂಪಿಸಲು ಸರ್ಕಾರ ಸಿದ್ಧವಾಗಿರುವುದರಿಂದ ಕೂಡಲೇ ಇದನ್ನು ವಾಪಸ್ ಪಡೆಯಬೇಕು. ಗಾಳಿ ಮಳೆಗೆ ಕಂಬಗಳು ಬಿದ್ದು 20 30 ದಿನಗಳಾದರೂ ಅವುಗಳನ್ನು ಬದಲಾಯಿಸದೆ ರೈತರಿಗೆ ಸಮರ್ಪಕ ವಿದ್ಯುತ್ ನೀಡುತ್ತಿಲ್ಲ ಈ ಎಲ್ಲಾ ವಿಷಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ರೈತರ ಹಿತ ಕಾಯಬೇಕು. ಒಂದು ವಾರದೊಳಗಾಗಿ ಈ ನಮ್ಮ ಎಲ್ಲಾ ಬೇಡಿಕೆಗಳ ಬಗ್ಗೆ ಸ್ಪಂದಿಸದೆ ಓದಲ್ಲಿ ಬೆಸ್ಕಾಂ ಇಲಾಖೆ ಮುಂಬಾಗದಲ್ಲಿ ಅಹೋ ರಾತ್ರಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ರೈತಮುಖಂಡರಾದ ಸಿದ್ದರಾಮಣ್ಣ, ತಿಮ್ಮಾರೆಡ್ಡಿ, ಅರಳಿಕೆರೆ ತಿಪ್ಪೇಸ್ವಾಮಿ, ಶಿವಣ್ಣ, ಜಗನ್ನಾಥ್, ಹೊಸಕೆರೆ ಜಯಣ್ಣ, ನಾರಾಯಣಪ್ಪ, ಗಿರೀಶ್, ಕಾಂತರಾಜ್, ಜಯಣ್ಣ, ರಾಮಕೃಷ್ಣ , ವಿರೂಪಾಕ್ಷಪ್ಪ, ಕೆಂಚಪ್ಪ, ರಾಮಣ್ಣ, ಸುರೇಶ್, ಉಮೇಶ್, ರಂಗಸ್ವಾಮಿ, ಮಹೇಶ್, ಮೂರ್ಕಣ್ಣಪ್ಪ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.