i
ಒಂದೊತ್ತು ಊಟಕ್ಕೂ ಪರದಾಡಿದ ವ್ಯಕ್ತಿ ಈಗ ಆದರ್ಶ ಪ್ರಾಧ್ಯಾಪಕ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಶಿಕ್ಷಕರು ವಿದ್ಯಾರ್ಥಿ ಜೀವನದ ಅವಿಭಾಜ್ಯ ಅಂಗ. ತಂದೆ- ತಾಯಿ ಜೀವ ನೀಡಿದರೆ ಶಿಕ್ಷಕರು ಜೀವನ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಒಂದು ಕಲ್ಲನ್ನು ಶಿಲ್ಪಿ ಹೇಗೆ ಶಿಲೆಯನ್ನಾಗಿಸುತ್ತಾನೆಯೋ ಅಂತೆಯೇ ವಿದ್ಯಾರ್ಥಿಯ ಬದುಕನ್ನು ಶಿಕ್ಷಕರು ರೂಪಿಸುತ್ತಾರೆ.
ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಗುರು- ಶಿಷ್ಯ ಸಂಬಂಧದ ಅರ್ಥ, ವ್ಯಾಖ್ಯಾನ, ವ್ಯಾಪ್ತಿ ಬದಲಾಗಿದೆ. ಆದರೂ ಈಗಲೂ ಅನೇಕ ಶಿಕ್ಷಕರು ಪಠ್ಯದೊಂದಿಗೆ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಕಿವಿಗೊಡುವವರು, ಅವರ ಬದುಕಿಗೊಂದು ಗುರಿ ತೋರುವವರು, ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಶ್ರಮಿಸುವವರು ಅನೇಕರಿದ್ದಾರೆ. ಇಂತಹವರಲ್ಲಿ ಶಿವಮೊಗ್ಗದ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಉಮೇಶ್ ಅಂಗಡಿಯವರೂ ಸಹ ಒಬ್ಬರು.
ಕನ್ನಡವನ್ನು ವಿದ್ಯಾರ್ಥಿಗಳು ಕೇವಲ ಪಠ್ಯದ ಭಾಗವಾಗಿ ಅಧ್ಯಯನ ನಡೆಸುತ್ತಾರೆ. ಆದರೆ ಕನ್ನಡ ಭಾಷೆಯ ಸೊಗಡು, ಅಸ್ಮಿತೆ, ಭಾಷೆಯೊಂದಿಗೆ ಭಾವನಾತ್ಮಕ ನಂಟನ್ನು ಬೆಳೆಸಿ ಗ್ರಾಮೀಣ ಸೊಗಡಿನಲ್ಲಿ ಕನ್ನಡ ಬೋಧಿಸುವುದರಲ್ಲಿ ಉಮೇಶ್ ಪರಿಣಿತರು. ಇವರ ಪಾಠ ಮನ ಮುಟ್ಟುತ್ತದೆ. ಮನ ತಟ್ಟುತ್ತದೆ. ಕನ್ನಡ ವಿಷಯವನ್ನು ಕೇವಲ ಪಠ್ಯವನ್ನಾಗಿ ನೋಡದೆ ಭಾಷೆಯೊಂದಿಗಿನ ಬಾಂಧವ್ಯ ಬೆಳೆಸುತ್ತದೆ.
ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಹಿರೇಮಾದಾಪುರ ಎಂಬ ಪುಟ್ಟ ಹಳ್ಳಿಯ ಅವಿಭಕ್ತ ಕುಟುಂಬದಲ್ಲಿ ಇವರ ಜನನ. 27 ಸದಸ್ಯರಿಂದ ಕೂಡಿದ ಕೃಷಿ ಪ್ರದಾನ ಕೂಡು ಕುಟುಂಬ. ಬಾಲ್ಯದಲ್ಲಿ ಒಂದೊತ್ತು ಊಟಕ್ಕೂ ಪರದಾಡುವಂತಹ ಪರಿಸ್ಥಿತಿ. ಆದರೆ ಕಲಿಯಲೇಬೇಕೆಂಬ ಛಲ. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ. ಪ್ರತಿದಿನ ೫ ಕಿಮೀ ನಡೆದು ರಟ್ಟಿಹಳ್ಳಿಯಲ್ಲಿ ಮಾಧ್ಯಮಿಕ. ೮ ರಿಂದ ೧೨ ಕುಮಾರೇಶ್ವರ ವಿದ್ಯಾಸಂಸ್ಥೆಯಲ್ಲಿ ಶಿಕ್ಷಣ. ಹಿರೇಕೆರೂರಿನಲ್ಲಿ ಪದವಿ. ಮೈಸೂರು ವಿವಿಯಲ್ಲಿ ಬಿಇಡಿ, ಎಂಇಡಿ, ಎಂಎ ಪದವಿ. ಬಿಇಡಿಯಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದದಕ್ಕಾಗಿ ಬೆಳ್ಳಿ ಪದಕ.
ವಿದ್ಯಾರ್ಥಿ ದೆಸೆಯಿಂದಲೂ ಕನ್ನಡದ ಬಗ್ಗೆ ಆಸಕ್ತಿ. ಬಿ.ಸಿ. ತಿಮ್ಮೇನಹಳ್ಳಿ, ಸುಮಾ ಮೇಡಂ, ರಾಮಚಂದ್ರ ಸರ್ ಅವರ ಜೊತೆ ಎನ್ಎಸ್ಎಸ್ ನಂಟು. ರಾಜ್ಯ ಮಟ್ಟದ ನಾಯಕತ್ವ ಶಿಬಿರದಲ್ಲಿ ಭಾಗಿ. ೨೦೦೯ರಲ್ಲಿ ಶಿಕಾರಿಪುರದ ಕುಮದ್ವತಿ ಕಾಲೇಜಿನಲ್ಲಿ ವೃತ್ತಿ ಬದುಕು ಪ್ರಾರಂಭ. ೨೦೧೩ರಿಂದ ೨೦೧೬ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ. ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರಮಟ್ಟದ ಪೆರೇಡ್ನಲ್ಲಿ ಭಾಗಿಯಾಗಲು ಕಾರಣಕರ್ತರು. ಸತತ ೩ ವರ್ಷ ಸಾಂಸ್ಕೃತಿಕ ಯುವ ಆಚರಣೆಗೆ ಮಾರ್ಗದರ್ಶನ.
೨೦೧೬ರಿಂದ ಪ್ರತಿಷ್ಟಿತ ಡಿವಿಎಸ್ ಸಂಸ್ಥೆಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಣೆ. ೨೦೧೯ರಿಂದ ರೋವರ್ಸ್ ಘಟಕದ ಅಧಿಕಾರಿ. ಅನೇಕ ವಿದ್ಯಾರ್ಥಿಗಳು ನಿಪುಣ್ ಪರೀಕ್ಷೆ ಪಾಸಾಗುವಲ್ಲಿ ಪ್ರಮುಖ ಪಾತ್ರ. ಇವರ ವಿದ್ಯಾರ್ಥಿ ಸುಮಂತ್ ಜಿ.ಟಿ. ರಾಜ್ಯ ಪುರಸ್ಕಾರಕ್ಕೆ ಭಾಜನ. ಈ ವರ್ಷ ಕೂಡ ಕೆಲ ವಿದ್ಯಾರ್ಥಿಗಳು ಆಯ್ಕೆ.
ಇವರ ಪರಿಶ್ರಮ, ಪ್ರಯತ್ನಕ್ಕೆ ವಿವಿಧೆಡೆ ಸನ್ಮಾನದ ಪ್ರತಿಫಲ. ೨೦೧೪ರಲ್ಲಿ ಕನ್ನಡ ರತ್ನ, ೨೦೧೮ರಲ್ಲಿ ಕನ್ನಡ ಶಿಕ್ಷಣ ಪ್ರೇಮಿ ಎಂಬ ಬಿರುದು. ವಿವಿಧ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ವಿಚಾರ ಸಂಕಿರಣಗಳಲ್ಲಿ ಸಮರ್ಪಕವಾಗಿ ವಿಷಯ, ಪ್ರಬಂಧ ಮಂಡನೆ. ಸಂಪನ್ಮೂಲ ವ್ಯಕ್ತಿಯಾಗಿ ಭಾಗಿ.
ಡಾ. ಕೇಶವ ಶರ್ಮ ಅವರ ಮಾರ್ಗದರ್ಶನದಲ್ಲಿ ನವೋದಯ ಕಾವ್ಯದ ಮೇಲೆ ಗಾಂಧಿವಾದದ ಪ್ರಭಾವ ಕುರಿತು ಮಂಡಿಸಿದ್ದ ಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯವು ಪಿಹೆಚ್ಡಿ ಪದವಿ. ೩೩ನೇ ಘಟಿಕೋತ್ಸವದಲ್ಲಿ ತಿರುವನಂತಪುರಂನ ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ (ಐಐಎಸ್ಟಿ) ಕುಲಪತಿ, ಇಸ್ರೋದ ಗೌರವಾನ್ವಿತ ವಿಶಿಷ್ಟ ಪ್ರಾಧ್ಯಾಪಕ ಡಾ. ಸುರೇಶ್ ಬಿ.ಎನ್. ಅವರಿಂದ ಡಾಕ್ಟರೇಟ್ ಪದವಿ ಸ್ವೀಕಾರ.
ಡಾ. ಉಮೇಶ್ ಅವರ ತಂದೆ ದಿ.ಬಸವಣ್ಯೆಪ್ಪ ಅಂಗಡಿ. ತಾಯಿ ಪಾರಮ್ಮ ಅಂಗಡಿ. ಡಿವಿಎಸ್ ಸ್ವತಂತ್ರ ಪದವಿ ಪೂವ್ ಕಾಲೇಜಿನಲ್ಲಿ ಭೌತಶಾಸ್ತ್ರದ ಉಪನ್ಯಾಸಕಿಯಾಗಿರುವ ಸೌಮ್ಯ ವಿ. ಬಣಕಾರ ಪತ್ನಿ. ಮಗ ತಾತ್ವಿಕ್, ತನ್ವಿಕಾ ಮಗಳು. ಸಾಧನೆಯ ಸಂದರ್ಭದಲ್ಲಿ ತಂದೆ ಇಲ್ಲವಲ್ಲ ಎಂಬ ಕೊರಗು.
ಶಿಕ್ಷಣ, ಕಲೆ, ಸಂಸ್ಕೃತಿ, ಸಾಮಾಜಿಕ ಸೇವೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವ ಉಮೇಶ್ ಅಂಗಡಿ ಅವರು ಸಾಹಿತ್ಯ ಕೃಷಿಯಲ್ಲೂ ತೊಡಗಿಸಿಕೊಂಡಿದ್ದಾರೆ. ಇವರ ಎರಡು ಪುಸ್ತಕಗಳು ಪ್ರಕಟಣೆಯ ಹಂತದಲ್ಲಿವೆ. ಇವರು ನನ್ನಂತ ಅನೇಕರಿಗೆ ಸದಾ ಆದರ್ಶಪ್ರಾಯ ಗುರುವಾಗಿದ್ದಾರೆ. ಇಂತಹ ಗುರುವಿಗೊಂದು ಅಕ್ಷರದ ನಮನ.
ಲೇಖನ: ಪ್ರತಿಭಾ ಜಿ.ಎಂ., ಉಪನ್ಯಾಸಕಿ, ಜಿ.ಎಂ. ಹಾಲಮ್ಮ ಪದವಿ ಪೂರ್ವ ಕಾಲೇಜ್, ದಾವಣಗೆರೆ.