i
ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ ಪತಿ…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಹೆಂಡತಿಯ ಅನುಚಿತ ವರ್ತನೆಯ ಮೇಲೆ ಅನುಮಾನಗೊಂಡ ಪತಿ ಇಲ್ಲಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಹೆಂಡತಿ ನಡೆದುಕೊಂಡು ಹೋಗುವ ಸಂದರ್ಭದಲ್ಲಿ ಮಚ್ಚಿನಿಂದ ಹತ್ಯೆ ಮಾಡಲು ಯತ್ನಿಸಿದಾಗ ಸುತ್ತಮುತ್ತಲ ಜನರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಅರಮನೆ ಹೋಟಲ್ ಸಮೀಪದಲ್ಲಿ ನಡೆದಿದೆ. ಚಳ್ಳಕೆರೆ ತಾಲೂಕಿನ ಚನ್ನಮ್ಮನಾಗತಿಹಳ್ಳಿ ಗ್ರಾಮದ ಕುಮಾರಸ್ವಾಮಿ(30), ತಾಲೂಕಿನ ಹೆಗ್ಗೆರೆ ಗ್ರಾಮದ ಆಶಾ(23)ಳನ್ನು ವಿವಾಹವಾಗಿದ್ದು, ವಿವಾಹದ ನಂತರ ಗಂಡ ಹೆಂಡತಿಯಲ್ಲಿ ಅನ್ಯೂನ್ಯತೆ ಕಾಣಿಸದ ಹಿನ್ನೆಲೆಯಲ್ಲಿ ಹೆಂಡತಿ ಆಶಾ ಹೆಗ್ಗೆರೆ ಗ್ರಾಮದ ತವರಿನಲ್ಲಿ ವಾಸವಿದ್ದು, ಗಂಡನ ವಿರುದ್ದ ವಿಚ್ಚೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಬೆಂಗಳೂರಿನಲ್ಲಿ ಖಾಸಗಿಯಾಗಿ ಕೆಲಸ ನಿರ್ವಹಿಸುತ್ತಿದ್ದಳು. ಬುಧವಾರ ನ್ಯಾಯಾಲಯಕ್ಕೆ ಭೇಟಿ ನೀಡಲು ಆಗಮಿಸಿದ್ದು ಇದನ್ನು ಗ್ರಹಿಸಿದ್ದ ಪಾಪಿ ಗಂಡ ಕುಮಾರಸ್ವಾಮಿ ಏಕಾಏಕಿ ಆಕೆಯ ಮೇಲೆ ಮೆಚ್ಚಿನಿಂದ ಹಲ್ಲೆ ನಡೆಸಿದ್ದು, ಹಲ್ಲೆಯಿಂದ ತಲೆ, ಕೈ, ಕಾಲುಗಳಿಗೆ ಹೆಚ್ಚಿನ ಗಾಯವಾಗಿ ರಕ್ತದ ಮಡುವಿನಲ್ಲಿ ಬಿದಿದ್ದಾಳೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಾರ್ವಜನಿಕರ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು ಆಕೆ ಚೇತರಿಸಿಕೊಳ್ಳುತ್ತಿದ್ದಾಳೆ. ಹೆಂಡತಿ ಕೊಲೆಗೆ ಯತ್ನಿಸಿದ ಹಿನ್ನೆಲೆಯಲ್ಲಿ ಆತನ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಡಿವೈಎಸ್ಪಿ ಟಿ.ಬಿ.ರಾಜಣ್ಣ, ಠಾಣಾ ಇನ್ಸ್ಪೆಕ್ಟರ್ ರಾಜ ಫಕೃದ್ದೀನ್ ದೇಸಾಯಿ ಆರೋಪಿಯ ವಿಚಾರಣೆ ನಡೆಸಿದ್ಧಾರೆ.