i
ಜಾತಿಗಣತಿ ಬಿಡುಗಡೆಯಾದರೆ ಕಾಂಗ್ರೆಸ್ ಪಕ್ಷಕ್ಕೆ ಎಂಪಿ ಚುನಾವಣೆಯಲ್ಲಿ ಹಿನ್ನಡೆ-ಎಸ್ಎಸ್…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಸರ್ಕಾರ ಪಟ್ಟು ಹಿಡಿದು ಜಾತಿ ಜನಗಣತಿ ವರದಿಯನ್ನು ಸ್ವೀಕಾರ ಮಾಡಿ ಬಿಡುಗಡೆ ಮಾಡಿದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಎಚ್ಚರಿಸಿದರು.
ಅವರು ಮಾಧ್ಯಮಗಳೊಂದಿಗೆ ಮಾತನಾಡಿ, 2013-2018ರ ಕಾಂಗ್ರೆಸ್ ಆಡಳಿತ ಇದ್ದ ಸಂದರ್ಭದಲ್ಲಿ ವೀರಶೈವ- ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಾದಂತೆಯೇ ಬರುವ 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಹಿನ್ನಡೆಯಾಗುವುದು ಶತಃಸಿದ್ಧ ಎಂದು ಶಿವಶಂಕರಪ್ಪ ರಾಜ್ಯ ಸರ್ಕಾರವನ್ನು ಎಚ್ಚರಿಸಿದರು.
ಜಾತಿ ಗಣತಿ ವರದಿಯಲ್ಲಿ ಏನಿದೆ ಎಂಬುದು ಈಗಾಗಲೇ ಸೋರಿಕೆಯಾಗಿದೆ. ಜಾತಿ ಗಣತಿ ವರದಿ ಲೋಪದಿಂದ ಕೂಡಿದೆ ಎಂಬ ಕಾರಣಕ್ಕಾಗಿಯೇ ನಾವು ವಿರೋಧ ಮಾಡುತ್ತಿದ್ದೇವೆ. ಬಹುತೇಕರು ಲಿಂಗಾಯತ- ವೀರಶೈವ ಅಂತ ಬರೆದುಕೊಂಡಿಲ್ಲ. ಇಂತಹ ಅನೇಕ ಲೋಪದೋಷಗಳು ಎದ್ದು ಕಾಣುತ್ತಿವೆ. ಹಾಗಾಗಿ, ಸಮೀಕ್ಷೆಯ ವರದಿಗೆ ಎಲ್ಲರ ವಿರೋಧವಿದೆ. ವಿರೋಧದ ನಡುವೆಯೂ ಮುಂದುವರಿದರೆ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆಯಾಗುವುದು ಖಚಿತ ಎಂದು ಎಚ್ಚರಿಸಿದರು.ಈಗಾಗಲೇ ರಾಜ್ಯದ ಮತ್ತೊಂದು ಒಕ್ಕಲಿಗರ ಸಮುದಾಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ವಿರೋಧ ವ್ಯಕ್ತಪಡಿಸಿದೆ. ಬಿಜೆಪಿ, ಜೆಡಿಎಸ್ಕೂಡ ವಿರೋಧಿಸುತ್ತಿವೆ. ಈಗಾಗಲೇ ಮೌಖೀಕವಾಗಿ ಮುಖ್ಯಮಂತ್ರಿ ಬಳಿ ಚರ್ಚಿಸಲಾಗಿದೆ. ನೋಡೋಣ ತಡಿಯಪ್ಪ ಅಂತ ಮುಖ್ಯಮಂತ್ರಿ ತಿಳಿಸಿದ್ದಾರೆ ಎಂದು ಅವರು ಹೇಳಿದರು.ಜಾತಿ ಗಣತಿಯ ಮೂಲ ವರದಿ ನಾಪತ್ತೆ ಆಗಿದೆ. ನಾನು ಕೊಟ್ಟಿದ್ದೇನೆ ಅಂತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜು ಹೇಳುತ್ತಿದ್ದಾರೆ. ಅಷ್ಟಕ್ಕೂ ಜಾತಿ ಜನಗಣತಿ ವರದಿ ಅವೈಜ್ಞಾನಿಕವಾಗಿದೆ, ಅದು ಸರಿ ಇಲ್ಲ. ವೈಜ್ಞಾನಿಕವಾಗಿ ಸಮೀಕ್ಷೆ ಆಗಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದು ಶಾಮನೂರು ಶಿವಶಂಕರಪ್ಪ ತಿಳಿಸಿದರು.
ಹಾಲಿ ಆಯೋಗದ ಅಧ್ಯಕ್ಷರ ಅವಧಿ ವಿಸ್ತರಣೆ ಆಗಿದೆ. ಇದು ನೋಡೋಕೆ ಮಜಾ ಇದೆ. ಇಷ್ಟೆಲ್ಲ ಗೊಂದಲಗಳ ನಡುವೆ ಸರ್ಕಾರ ಏನು ಮಾಡುತ್ತದೆ ಎಂಬುದನ್ನು ಕಾದುನೋಡಬೇಕಿದೆ. ಅವರು ತೆಗೆದುಕೊಂಡ ಬಳಿಕ ಏನು ಮಾಡುವುದು ಅಂತ ತೀರ್ಮಾನ ಮಾಡುತ್ತೇವೆ. ಗಣತಿ ಮಾಡಿ, ಮನೆ ಮನೆಗೆ ಹೋಗಿ ಸಮಿಕ್ಷೆ ಮಾಡಲಿ. ಎಲ್ಲೋ ಕುಳಿತು ಗಣತಿ ಮಾಡುವುದಲ್ಲ ಎಂದು ತೀಕ್ಷ್ಣವಾಗಿ ಹೇಳಿದ ಅವರು, ಒಕ್ಕಲಿಗ ಸಮುದಾಯದ ಮುಖಂಡರು ಮುಖ್ಯಮಂತ್ರಿಯನ್ನು ಭೇಟಿಯಾದಂತೆ ನಾವೂ ಭೇಟಿ ಮಾಡಿ ವರದಿ ಸ್ವೀಕರಿಸದಂತೆ ಮನವಿ ಸಲ್ಲಿಸುತ್ತೇವೆ. ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರು ಸಂಪುಟದಿಂದ ಹೊರಗಿರುವ ಕಾರಣಕ್ಕೆ ಏನೇನೊ ಮಾತನಾಡುತ್ತಿದ್ದಾರೆ. ಪ್ರತ್ಯೇಕ ಲಿಂಗಾಯತ ಧರ್ಮ ಅಂತ ಹೋದವರೆಲ್ಲ ಸೋತರು. ಬರೀ ಲಿಂಗಾಯತ ಅಂತ ಹೋದವರೆಲ್ಲ ಮಣ್ಣು ಮುಕ್ಕಿದರು ಎಂದು ಶಿವಶಂಕರಪ್ಪ ತರಾಟೆಗೆ ತೆಗೆದುಕೊಂಡರು.