i
ಮಹಿಳೆ ಮೇಲೆ ದಾಳಿ ಮಾಡಿದ ಕರಡಿ, ಮಹಿಳೆಗೆ ಗಂಭೀರ ಗಾಯ…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಚಳ್ಳಕೆರೆ ತಾಲ್ಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದಲ್ಲಿ ತೋಟಕ್ಕೆ ಹೋಗುತ್ತಿದ್ದ ರೈತ ಮಹಿಳೆ ಮೇಲೆ ಮೂರು ಕರಡಿಗಳು ದಾಳಿ ನಡೆಸಿ ಗಾಯಗೊಳಿಸಿದ ಘಟನೆ ಭಾನುವಾರ ಮುಂಜಾನೆ ೬ರ ಸಮಯದಲ್ಲಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಮಂಜಮ್ಮ(೬೫) ಕರಡಿ ದಾಳಿಯಿಂದ ಗಾಯಗೊಂಡು ಚಿತ್ರದುರ್ಗ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆ. ದೊಡ್ಡ ಉಳ್ಳಾರ್ತಿ ಗ್ರಾಮದ ಕರೆಯಿಂದ ಕರೀಕೆರೆಗೆ ಸಂಪರ್ಕ ನೀಡುವ ರಸ್ತೆ ಮೂಲಕ ಅವರ ತೋಟಕ್ಕೆ ಭಾನುವಾರ ಮುಂಜಾನೆ ಮಂಜಮ್ಮ ಹೋಗುವ ಸಂದರ್ಭಗಳಲ್ಲಿ ಒಂದು ದೊಡ್ಡ ಮತ್ತು ಎರಡು ಮರಿ ಕರಡಿಗಳು ದಾಳಿ ನಡೆಸಿವೆ ಮಂಜಮ್ಮ ತಲೆ ಹಾಗೂ ಎಡಗೈಗೆ ಪರಚಿ ಗಾಯಗೊಳಿಸಿದೆ ತೀವ್ರ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ತಮ್ಮ ತೋಟದಿಂದ ಹಾಲು ತರಲು ಪ್ರತಿನಿತ್ಯವೂ ಗ್ರಾಮದಿಂದ ಆದೇ ರಸ್ತೆ ಮೂಲಕ ತೆರಳುತ್ತಿದ್ದರು. ಭಾನುವಾರವೂ ಎಂದಿನಂತೆ ತೆರಳಿದಾಗ ಕರಡಿ ದಾಳಿ ನಡೆಸಿದೆ. ತೋಟದಲ್ಲಿ ಮಲಗಿದ್ದ ಮಂಜಮ್ಮಳ ಪತಿ, ಸುತ್ತಮುತ್ತಲ ಜನ ಹಾಗೂ ನಾಯಿಗಳು ಬೊಗಳುವುದನ್ನು ಕೇಳಿದ ಕರಡಿ ಅಲ್ಲಿಂದ ಓಡಿಹೋಗಿದೆ.ಸುದ್ದಿ ತಿಳಿದ ಕೂಡಲೇ ತಹಶಿಲ್ದಾರರ್ ರೇಹಾನ್ ಪಾಷ, ತಳಕು ಪಿಎಸ್ಐ ಲೋಕೇಶ್, ಪ್ರಾದೇಶಿಕ ಅರಣ್ಯ ಅಧಿಕಾರಿ ಬಹುಗುಣ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿದ್ದಾರೆ. ಗ್ರಾಮ ಮತ್ತು ಸುತ್ತಮುತ್ತಲಿನಲ್ಲಿ ಅರಣ್ಯ ರಕ್ಷಕರನ್ನು ಗಸ್ತಿಗಾಗಿ ನೇಮಿಸಿದೆ. ಸದರಿ ಕರಡಿ ಎರಡು ಮರಿ ಹಾಕಿದ್ದು ಮರಿಗೆ ಅಪಾಯ ಮಾಡಲು ಮಹಿಳೆ ಬಂದಿದ್ದಾಳೆಂದು ಭಾವಿಸಿ ಈ ದಾಳಿ ನಡೆಸಿರ ಬಹುದು ಎಂದು ಸಾರ್ವಜನಿಕರು ಅಧಿಕಾರಿಗಳ ಬಳಿ ಹೇಳಿದರು. ಪ್ರಾದೇಶಿಕ ಅರಣ್ಯ ಅಧಿಕಾರಿ ಬಹುಗುಣ ಮಾಹಿತಿ ನೀಡಿ, ಗಾಯಗೊಂಡ ಮಹಿಳೆಗೆ ಇಲಾಖೆಯಿಂದಲೇ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗ್ರಾಮಸ್ಥರು ಜಾಗೃತಿಯಿಂದ ಇರುವಂತೆ ಮನವಿ ಮಾಡಿದ್ಧಾರೆ. ಪೊಲೀಸ್, ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರೂ ಸಹ ಈ ಭಾಗದಲ್ಲಿ ಸಂಚಾರ ನಡೆಸಿ ಕರಡಿಯ ಚಲನವಲದ ನಿಗಾವಹಿಸಿದೆ ಅಗತ್ಯವಿದ್ದಲ್ಲಿ ಬೋನ್ ಇರಿಸುವುದಾಗಿ ತಿಳಿಸಿದ್ದಾರೆ.