i
ಕುವೆಂಪುರವರು ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅಪಾರ: ಶಾಸಕ ರಘುಮೂರ್ತಿ…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ನಾಡಿನ ಕನ್ನಡ ಸಾಹಿತ್ಯ ಲೋಕಕ್ಕೆ ಹಲವಾರು ಮಹಾನೀಯರು ತಮ್ಮದೇಯಾದ ವಿಶೇಷ ಸಾಧನೆಯನ್ನು ದಾಖಲಿಸುವ ಮೂಲಕ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದಾರೆ. ಇಂದು ನಮ್ಮ ಜೀವ ಭಾಷೆಯಾದ ಕನ್ನಡ ವಿಶೇಷ ಮೌಲ್ಯಪಡೆದಿದೆಯಾದರೆ ಅದರಲ್ಲಿ ರಾಷ್ಟ್ರಕವಿ ಕುವೆಂಪುರವರ ಕೊಡುಗೆ ಅಪಾರವೆಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ತಿಳಿಸಿದರು. ಅವರು, ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಮ್ಮಿಕೊಂಡಿದ್ದ ಕುವೆಂಪುರವರ ೧೧೯ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಅವರ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ನೂರಾರು ವರ್ಷಗಳ ಹಿಂದೆಯೇ ಕನ್ನಡ ಸಾಹಿತ್ಯದ ಸರ್ವತೋಮುಖ ಬೆಳವಣಿಗೆಗೆ ಬೇಕಾದ ಎಲ್ಲಾ ದೃಷ್ಠಿಕೋನವನ್ನು ಕುವೆಂಪು ಹೊಂದಿದ್ದರು. ಇಂತಹ ಮಹಾನ್ ಸಾಧಕನ ಜನ್ಮದಿನಾಚರಣೆ ಆಚರಿಸಲು ಸಂತಸವೆನ್ನಿಸುತ್ತದೆ. ಕುವೆಂಪುರವರ ಸಾಹಿತ್ಯದಲ್ಲಿ ಅಮೂಲ್ಯ ಶಕ್ತಿ ಅಡಗಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ರಾಷ್ಟ್ರೀಯ ಹಬ್ಬಹಳ ಆಚರಣಾ ಸಮಿತಿ ಅಧ್ಯಕ್ಷ, ತಹಶೀಲ್ದಾರ್ ರೇಹಾನ್ ಪಾಷ, ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿ ಕುವೆಂಪುರವರ ಹುಟ್ಟೂರು. ಅವರ ನಿಜವಾದ ಹೆಸರು ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ. ಕರ್ನಾಟಕದ ಹಸಿರಿನ ಸಿರಿ ಮಲೆನಾಡ ಸ್ವರ್ಗವೆಂದು ಖ್ಯಾತಿಯಾದ ಶಿವಮೊಗ್ಗ ಜಿಲ್ಲೆಯಲ್ಲಿ ಜನಿಸಿದವರು ಅವರು ಪ್ರಕೃತಿಕ ಆರಾಧರಾಗಿದ್ದರು. ಅವರ ಲೇಖನ, ಕಾವ್ಯ, ರಚನೆಗಳಿಗೆ ಅಲ್ಲಿನ ನೈಸರ್ಗಿಕ ಸಂಪತ್ತೇ ಪ್ರೇರಣೆ ಎಂದರು.ಕಾರ್ಯಕ್ರಮದಲ್ಲಿ ಡಿವೈಎಸ್ಪಿ ರಾಜಣ್ಣ, ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಜೆ.ರಾಘವೇಂದ್ರ, ಸದಸ್ಯ ಕೆ.ವೀರಭದ್ರಪ್ಪ, ಬಿ.ಟಿ.ರಮೇಶ್ಗೌಡ, ಕಾಂಗ್ರೆಸ್ ಮುಖಂಡರಾದ ಸಿ.ಟಿ.ಶ್ರೀನಿವಾಸ್, ಬಿ.ವಿ.ಸಿರಿಯಣ್ಣ, ಬೊಪ್ಪಣ್ಣ, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಟಿ.ಗಿರಿಯಪ್ಪ, ಡಿ.ಹನುಮಂತಪ್ಪ, ಆರ್.ಪ್ರಸನ್ನಕುಮಾರ್, ಕಂದಾಯಾಧಿಕಾರಿ ಲಿಂಗೇಗೌಡ, ಗ್ರಾಮ ಲೆಕ್ಕಾಧಿಕಾರಿ ಪ್ರಕಾಶ್, ಡಿ.ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು.