i
ನಕಲಿ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಲ್ಯಾಪ್ ಟಾಪ್ ನೀಡುತ್ತಿರುವುದು ಖಂಡನೆ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು: Giving laptop to children of fake construction workers condemned…
ತಾಲೂಕಿನಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ೨೦೨೩-೨೪ನೇ ಸಾಲಿನಲ್ಲಿ ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿ ಓದುತ್ತಿರುವ ಕಟ್ಟಡ ಕಾರ್ಮಿಕರಲ್ಲದ ಮಕ್ಕಳಿಗೆ ಲ್ಯಾಪ್ ಟಾಪ್ ಯೋಜನೆಯಲ್ಲಿ ಲ್ಯಾಪ್ ಟಾಪ್ ನೀಡುತ್ತಿರುವುದು ಖಂಡನೀಯ ಎಂಬುದಾಗಿ ಸಿರಿಗನ್ನಡನಾಡು ಕಟ್ಟಡ ಕಾರ್ಮಿಕರ ಸಂಘದ ಕಾರ್ಯದರ್ಶಿ ಎಸ್.ಮುಕುಂದ ಹೇಳಿದ್ದಾರೆ.
ನಗರದ ಕಾರ್ಮಿಕ ಇಲಾಖೆಯ ಕಾರ್ಮಿಕ ನಿರೀಕ್ಷಕರಿಗೆ ಸಿರಿಗನ್ನಡನಾಡು ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಮನವಿಪತ್ರ ಸಲ್ಲಿಸಿ ನಂತರ ಅವರು ಮಾತನಾಡಿದರು.
ಈ ಯೋಜನೆಯಲ್ಲಿ ಆಯ್ಕೆಯಾಗಿರುವ ಹಿರಿಯೂರಿನ ಫಲಾನುಭವಿಗಳಲ್ಲಿ ಮಸ್ಕಲ್ ಗ್ರಾಮದ ಬಿ.ಎನ್.ರಾಜಮೂರ್ತಿ ಬಿನ್ ಈರಣ್ಣ ಅವರು ನೈಜ ಕಟ್ಟಡ ಕಾರ್ಮಿಕರಲ್ಲ ಎಂದು ಅದೇ ಗ್ರಾಮದಲ್ಲಿ ವಾಸವಾಗಿರುವ ನಮ್ಮ ಸಂಘದ ಸದಸ್ಯರು ತಿಳಿಸಿರುತ್ತಾರೆ. ಇದನ್ನು ನಮ್ಮ ಸಂಘವು ತೀವ್ರವಾಗಿ ಖಂಡಿಸುತ್ತದೆ ಹಾಗೂ ಅವರಿಗೆ ಕಾರ್ಮಿಕ ಇಲಾಖೆ ವತಿಯಿಂದ ಲ್ಯಾಪ್ ಟಾಪ್ ನೀಡಿದ್ದೆ ಆದಲ್ಲಿ ಹಿರಿಯೂರು ಕಾರ್ಮಿಕ ಕಚೇರಿ ಮುಂಭಾಗ ಉಗ್ರವಾದ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದರಲ್ಲದೆ, ಕಾರ್ಮಿಕರ ಮಕ್ಕಳಿಗೆ ಈ ಲ್ಯಾಪ್ ಟಾಪ್ ನೀಡುವ ಯೋಜನೆಯಲ್ಲಿ ಹಿರಿಯೂರು ತಾಲೂಕಿನಲ್ಲಿ ಇನ್ನೂ ಅನೇಕ ನಕಲಿ ಕಟ್ಟಡ ಕಾರ್ಮಿಕರು ಆಯ್ಕೆಯಾಗಿರುವುದು ನಮ್ಮ ಸಂಘದ ಗಮನಕ್ಕೆ ಬಂದಿರುತ್ತದೆ ಯಾವುದೇ ಕಾರಣಕ್ಕೂ ಕೂಡ ನಕಲಿ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಲ್ಯಾಪ್ ಟಾಪ್ ನೀಡಕೂಡದು, ನಿಜವಾದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಈ ಲ್ಯಾಪ್ ಟಾಪ್ ನೀಡಬೇಕೆಂದು ನಮ್ಮ ಸಂಘದ ವತಿಯಿಂದ ಒಕ್ಕೊರಲಿನಿಂದ ಒತ್ತಾಯಿಸಲಾಗುತ್ತದೆ ಎಂದರು.
ರಾಜ್ಯದಾದ್ಯಂತ ನಡೆಯುತ್ತಿರುವ ಮುಂಜಾಗ್ರತಾ ಆರೋಗ್ಯ ಸಂಚಾರಿ ಕ್ಲಿನಿಕ್ ಯೋಜನೆಯಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಟೆಂಡರ್ ನೀಡಲಾಗಿದ್ದು, ಮಂಡಳಿ ಮಾನದಂಡಗಳನ್ನು ಪಾಲಿಸದೆ ಕಾರ್ಮಿಕರ ತಪಾಸಣೆ ನಡೆಸಲಾಗುತ್ತಿದೆ, ಅಲ್ಲದೆ ಕಟ್ಟಡ ಕಾರ್ಮಿಕರಿಗೆ ತಪಾಸಣೆ ಮಾಡಿಸಿಕೊಳ್ಳದಿದ್ದರೆ ತಮ್ಮ ಲೇಬರ್ ಕಾರ್ಡುಗಳು ರದ್ದಾಗುತ್ತವೆ ಎಂಬುದಾಗಿ ಪ್ರಚಾರ ಮಾಡಲಾಗುತ್ತಿದೆ, ಇದು ಈ ಕೂಡಲೇ ನಿಲ್ಲಬೇಕು ಎಂಬುದಾಗಿ ಅವರು ಆಗ್ರಹಿಸಿದರು.
ಅಲ್ಲದೆ ಮಂಡಳಿಯಿಂದ ಬರುವ ಸೌಲಭ್ಯಗಳು ದೊರಕುವುದಿಲ್ಲ ಮತ್ತು ಕಿಟ್ಟುಗಳನ್ನು ನೀಡುತ್ತೇವೆ ಎಂದು ಬಲವಂತವಾಗಿ ಕಟ್ಟಡ ಕಾರ್ಮಿಕರ ಜೊತೆಗೆ ನಕಲಿ ಕಟ್ಟಡ ಕಾರ್ಮಿಕರಿಗೂ ತಪಾಸಣೆ ಮಾಡುತ್ತಿದ್ದಾರೆ, ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಪ್ರತಿ ತಪಾಸಣಾ ಶಿಬಿರದಲ್ಲಿ ಒಬ್ಬ ವೈದ್ಯರು ಇರುತ್ತಾರೆ ಎಂದು ತಿಳಿಸಿ ಈಗ ಶಿಬಿರದಲ್ಲಿ ಬರೆ ನಸಿಂಗ್ ತರಬೇತಿಗೆ ಬಂದಿರುವಂತಹ ವಿದ್ಯಾರ್ಥಿಗಳು ಮಾತ್ರ ತಪಾಸಣೆ ನಡೆಸುತ್ತಿದ್ದಾರೆ.
ಮಂಡಳಿಯ ಮಾನದಂಡಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿ ತಪಾಸಣೆ ನಡೆಸುತ್ತಿರುವುದು ಕಟ್ಟಡ ಕಾರ್ಮಿಕರಿಗೆ ದುರ್ದೈವದ ಸಂಗತಿ ಆಗಿದೆ, ಯಾವುದೇ ಪ್ರಯೋಜನವಿಲ್ಲದೆ ವೈಜ್ಞಾನಿಕ ಆರೋಗ್ಯ ತಪಾಸಣೆ ತಕ್ಷಣ ನಿಲ್ಲಿಸಬೇಕೆಂದು ಅವರು ಆಗ್ರಹಿಸಿದರು. ಒಂದು ವೇಳೆ ಈ ಅನ್ಯಾಯಗಳನ್ನು ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ತೀವ್ರವಾದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂಬುದಾಗಿ ಅವರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಿರಿಗನ್ನಡ ನಾಡು ಕಟ್ಟಡ ಕಾರ್ಮಿಕರ ಸಂಘದ ಗೌರವ ಅಧ್ಯಕ್ಷ ನರಸಿಂಹಮೂರ್ತಿ, ಅಧ್ಯಕ್ಷ ಸೈಯದ್ ಜಬ್ಬಾರ್, ಪ್ರಧಾನ ಕಾರ್ಯದರ್ಶಿ ಎಸ್.ಮುಕುಂದ, ಸಂಘಟನಾ ಕಾರ್ಯದರ್ಶಿ ಕೆ.ನಾಗರಾಜ, ಕಾರ್ಯಕಾರಿಣಿ ಸದಸ್ಯ ಓ.ಪ್ರಸನ್ನ, ಕಾರ್ಯಕಾರಿಣಿ ಸದಸ್ಯ ರಹಮತ್ ಉಲ್ಲಾ, ಸಂಘಟನಾ ಕಾರ್ಯದರ್ಶಿ ಆರ್.ಕರಿಯಪ್ಪ, ಸಂಘಟನಾ ಕಾರ್ಯದರ್ಶಿ ಸುಭಾನ್ ಸಾಬ್, ಆವೇದಕರು ಉಮಾಪತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.