i
ಶೈಕ್ಷಣಿಕವಾಗಿ ಮಠಗಳು ಮಹತ್ವದ ಸೇವೆ ಮಾಡುತ್ತಿವೆ- ಎಂ.ಜಿ.ಸಿದ್ಧರಾಮಯ್ಯ…
ಚಂದ್ರವಳ್ಳಿ ನ್ಯೂಸ್, ತುಮಕೂರು: Maths are doing important service in terms of education – MG Siddaramaiah…
ಕರ್ನಾಟಕದಲ್ಲಿ ಎರಡು ಶತಮಾನಗಳಿಂದಲೂ ಮಠಮಾನ್ಯಗಳು ಶೈಕ್ಷಣಿಕವಾಗಿ ಧಾರ್ಮಿಕವಾಗಿ, ಸಾಮಾಜಿಕವಾಗಿ ತುಂಬಾ ಸೇವೆ ಮಾಡುತ್ತಿವೆ” ಎಂದು ಗಮಕ ಕಲಾಶ್ರೀ ವಿದ್ವಾನ್ ಎಂ.ಜಿ.ಸಿದ್ಧರಾಮಯ್ಯ ಅಭಿಪ್ರಾಯಪಟ್ಟರು. ಅವರು ತುಮಕೂರು ಜಿಲ್ಲಾ ಹಾಗೂ ಗುಬ್ಬಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ಬೆಟ್ಟದಹಳ್ಳಿ ಗವಿಮಠದ ಶ್ರೀ ಮಲ್ಲಿಕಾರ್ಜುನಸ್ವಾಮಿ ಪ್ರೌಢಶಾಲೆಯಲ್ಲಿ ನಡೆದ ಮಾದೇನಹಳ್ಳಿ ಎಂ. ಮಲ್ಲಿಕಾರ್ಜುನಯ್ಯ ದತ್ತಿಯಲ್ಲಿ ಉಪನ್ಯಾಸ ನೀಡುತ್ತಿದ್ದರು.
ಮುಂದುವರಿದು ಮಾತನಾಡುತ್ತಾ ಸರ್ಕಾರ ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗಳನ್ನು ತೆರೆಯದೇ ಇದ್ದಾಗ ಮಠಗಳು, ಅನ್ನ, ಅಕ್ಷರ, ಜ್ಞಾನ ದಾಸೋಹ ಮಾಡುತ್ತಾ ವಿದ್ಯೆ ನೀಡುವುದರ ಜೊತೆಗೆ ಸ್ವಾವಲಂಬಿಗಳಾಗಿ, ಸತ್ಪ್ರಜೆಗಳಾಗಿ ಬದುಕುವ ಮಾರ್ಗಗಳನ್ನು ಕಲ್ಪಿಸಿವೆ ಎಂದರು.
ಮುಖ್ಯ ಅತಿಥಿಯಾಗಿ ನಿವೃತ್ತ ಶಿಕ್ಷಕರಾದ ಸಂಗಪ್ಪ ಬೆಣಚಿಗೆರೆರವರು ಮಾತನಾಡುತ್ತಾ ಚಿಕ್ಕಂದಿನಲ್ಲಿ ಸಂಸ್ಕಾರ ನೀಡದೇಹೋದರೆ ಆ ಮಕ್ಕಳೇ ಮುಂದೆ ಹೆತ್ತವರಿಗೂ, ಸಮಾಜಕ್ಕೂ ಕಂಟಕವಾಗುತ್ತಾರೆ ಎಂದರು.
ಸ್ವಾಗತದೊಂದಿಗೆ ಅತಿಥಿ ಪರಿಚಯ ನೀಡಿದ ಮುಖ್ಯ ಶಿಕ್ಷಕರಾದ ಹೆಚ್.ಎಂ.ಸೋಮಶೇಖರಯ್ಯರವರು ಗವಿಮಠದ ಶ್ರೀಗಳ ವ್ಯಕ್ತಿತ್ವದಿಂದಾಗಿ ಗ್ರಾಮೀಣ ಭಾಗದಲ್ಲಿ ಶರಣ ಸಂಸ್ಕೃತಿ ಪಸರಿಸಿದೆ ಎಂದರು.
ಪ್ರಾಸ್ತಾವಿಕವಾಗಿ ಹಂ.ಸಿ.ಕುಮಾರಸ್ವಾಮಿ ಶರಣ ಸಾಹಿತ್ಯ ಪರಿಷತ್ತಿನ ಧ್ಯೇಯ ಹಾಗೂ ಉದ್ದೇಶಗಳನ್ನು ತಿಳಿಸಿ ವಚನ ಗಾಯನ ಮಾಡಿದರು.
ತಾಲ್ಲೂಕು ಕಾರ್ಯದರ್ಶಿ ನಂ.ಫಾಲನೇತ್ರರವರು ವಚನ ಗಾಯನ ಮಾಡಿದ ಪ್ರೌಢಶಾಲಾ ಮಕ್ಕಳಿಗೆ ಶರಣರ ವಚನಗಳ ಕಿರುಹೊತ್ತಿಗೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಶ.ಸಾ.ಪ. ಅಧ್ಯಕ್ಷರಾದ ಆರ್.ಬಿ.ಜಯಣ್ಣನವರು ಮಾತನಾಡಿ ಗುಬ್ಬಿ ತಾಲ್ಲೂಕಿನಲ್ಲಿ ಐದು ದತ್ತಿಗಳಿವೆ. ದತ್ತಿನಿಧಿ ಯೋಜನೆಯಡಿ ಶರಣ ಶರಣೆಯರ ತತ್ವಗಳನ್ನು ಪ್ರಚಾರ ಮಾಡಲು ಸಹಾಯಕ ಎಂದರು.
ಪ್ರಾರಂಭದಲ್ಲಿ ಶಾಲಾ ಮಕ್ಕಳು ವಚನಗಾಯನ ಮಾಡಿದರು. ಸಂಸ್ಕೃತ ಪಾಠಶಾಲಾ ಮುಖ್ಯ ಶಿಕ್ಷಕರಾದ ಡಿ.ಎಸ್.ಶರತ್ರವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಶಾಂತಪ್ಪ ವಂದಿಸಿದರು. ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನ ಪಡೆದರು.