i
ಎಸ್ಐ ಅಮಾನತಿಗೆ ವಕೀಲರ ಆಗ್ರಹ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ರಾಮನಗರ ಜಿಲ್ಲಾ ಐಜೂರು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮತ್ತು ಇತರ ಸಿಬ್ಬಂದಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಜಿಲ್ಲಾ ವಕೀಲರ ಸಂಘ ಸರಕಾರವನ್ನು ಆಗ್ರಹಿಸಿದೆ.
ಈ ಬಗ್ಗೆ ಸೋಮವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಜಿಲ್ಲಾ ವಕೀಲರ ಸಂಘ, ರಾಮನಗರ ಜಿಲ್ಲಾ ವಕೀಲರ ಸಂಘದ ೪೦ ಜನ ಸದಸ್ಯರ ಮೇಲೆ ಸುಳ್ಳು ದೂರಿನ ಅಡಿ ಯಾವುದೇ ವಿಚಾರಣೆ ಮಾಡದೆ ಕಾನೂನು ಉಲ್ಲಂಘಿಸಿ ಪ್ರಥಮ ವರ್ತಮಾನ ವರದಿಯನ್ನು ಅಲ್ಲಿನ ಸಬ್ ಇನ್ಸ್ಪೆಕ್ಟರ್ ದಾಖಲಿಸಿದ್ದಾರೆ. ಇವರ ಮೇಲೆ ಮತ್ತು ಇದಕ್ಕೆ ಸಹಕರಿಸಿದ ಇತರರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.
ಫೆ. ೧೯-೦೨-೨೦೨೪ರಂದು ಈ ವಿಚಾರವಾಗಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ ರಾಮನಗರ ಜಿಲ್ಲಾ ಕಚೇರಿಗೆ ಮುತ್ತಿಗೆ ಹಾಕಲು ಕರೆ ನೀಡಿದೆ. ಆ ನಿರ್ಧಾರದ ಪರವಾಗಿ ಶಿವಮೊಗ್ಗ ವಕೀಲರ ಸಂಘವು ಸಹ ನಿರ್ಧಾರವನ್ನು ಬೆಂಬಲಿಸಿ ತಪುö್ಪ ಮಾಡಿದ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಿ ವೃತ್ತಿಯಿಂದ ವಜಾಗೊಳಿಸಿ ಕ್ರಮ ಕೈಗೊಳ್ಳಬೇಕೆಂದು ಈ ಮನವಿ ಮಾಡಿದೆ ಎಂದರು.
ಒಂದು ವೇಳೆ ಕ್ರಮ ಜರುಗಿಸದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಸಂಘವು ಉಗ್ರವಾಗಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ. ಜಿಲ್ಲಾಧಿಕಾರಿಗಳು ಈ ಮನವಿಯನ್ನು ಸರಕಾರಕ್ಕೆ ಕಳುಹಿಸಿ ಸೂಕ್ತ ಕ್ರಮ ಜರುಗಿಸಬೇಕೆಂದು ಕೋರಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಬಿ ಜಿ ಶಿವಮೂರ್ತಿ, ಉಪಾಧ್ಯಕ್ಷ ಅಶೋಕ್, ಪ್ರ. ಕಾರ್ಯದರ್ಶಿ ಅಣ್ಣಪ್ಪ, ಖಜಾಂಚಿ ಗಿರೀಶ್ ಜಾಧವ್, ಸಹಕಾರ್ಯದರ್ಶಿ ಮಹೇಂದ್ರಕುಮಾರ್, ಮಂಜು, ಚಂದ್ರಕುಮಾರ್, ಟೇಕೋಜಿರಾವ್ ಮೊದಲಾದವರಿದ್ದರು