i
ಸಾರ್ವಜನಿಕರ ಅನುಕೂಲಕ್ಕೊಂದು ‘ಸೈಕಲ್ ಯಾನ‘…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಕಳೆದ ಮೂರು ದಿನಗಳಿಂದ ನನ್ನ ಬೆಳಗಿನ ದಿನಚರಿಯಲ್ಲಿ ‘ಯಾನ‘ ಸೇರಿಕೊಂಡಿದೆ. ಇಡೀ ದಿನ ಉಲ್ಲಸಿತವಾಗುವಂತೆ ಮಾಡುವ ಈ ಯಾನ ಶಿವಮೊಗ್ಗ ಸಿಟಿಯ ಸ್ಮಾರ್ಟ್ ಯೋಜನೆಯಿಂದಾಗಿದೆ.
ತಂತ್ರಜ್ಞಾನದ ಬಳಕೆಯೊಂದಿಗೆ ಹೊಸ ಸೈಕಲ್ ಲೋಕಕ್ಕೆ ಕೊಂಡೊಯ್ಯುವ ಈ ಯೋಜನೆ ಪರಿಸರ ಮಾಲಿನ್ಯ ತಡೆಗಟ್ಟಲು, ಜನರು ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ.
ನಗರದ ೩೦ ಕಡೆ ಸೈಕಲ್ ನಿಲುಗಡೆ ಸ್ಥಾಪನೆಗೊಂಡಿದ್ದು ಯಾವುದೇ ನಿಲುಗಡೆ ಸ್ಥಳದಿಂದ ತೆಗೆದುಕೊಂಡು ಇನ್ಯಾವುದೋ ನಿಲುಗಡೆ ಸ್ಥಳದಲ್ಲಿ ಪ್ರಯಾಣ ಮುಗಿಸಬಹುದಾದ ಸೌಲಭ್ಯ ಸಾರ್ವಜನಿಕರ ದೈನಂದಿನ ಕಾರ್ಯ ಚಟುವಟಿಕೆಗಳ ಬಳಕೆಗೂ ಬಳಸಿಕೊಳ್ಳಬಹುದು.
ಉತ್ತಮ ಗುಣಮಟ್ಟದ ಸೈಕಲ್ ಗಳಾಗಿದ್ದು ತುಳಿತ ಸುಲಲಿತವಾಗಿದೆ. ನಮ್ಮ ಎತ್ತರಕ್ಕೆ ಹೊಂದಿಕೊಳ್ಳುವಂತೆ ಸೈಕಲ್ ಸೀಟ್ ಹೊಂದಿಸಿಕೊಳ್ಳಬಹುದಾಗಿದೆ. ಪ್ರಯಾಣ ದರ ಒಂದು ರೀತಿಯಲ್ಲಿ ಉಚಿತವೂ ಹೌದು, ಶುಲ್ಕ ಭರಿತವೂ ಹೌದು. ಮೊದಲ ಅರ್ಧ ಗಂಟೆ ಉಚಿತವಾಗಿದ್ದು ನಂತರದ ಪ್ರತಿ ಅರ್ಧಗಂಟೆಗೆ ೧೦ ರೂಪಾಯಿ ಇರುತ್ತದೆ. ಪೆಟ್ರೋಲ್ ಗಾಡಿ ಬಳಸುವ ನಾವು ಅನೇಕ ವೇಳೆ ಅನಾವಶ್ಯಕವಾಗಿ ತಿರುಗಾಡಿ ವೆಚ್ಚ ಮಾಡುತ್ತೇವೆ. ಅದನ್ನು ಗಮನಿಸುವುದೇ ಇಲ್ಲ. ಹಾಗಾಗಿ ಸೈಕಲ್ ಗೆ ವಿಧಿಸುತ್ತಿರುವ ಶುಲ್ಕ ನಗಣ್ಯವೆಂದೇ ಹೇಳಬಹುದು. ಇದರಲ್ಲಿ ಮುಂಭಾಗದಲ್ಲಿ ಇರುವ ಗಟ್ಟಿಮುಟ್ಟಾದ ಬಾಸ್ಕೆಟ್ ತರಕಾರಿ ಇತ್ಯಾದಿ ಸಾಮನು ತರಲೂ ಬಳಸಿಕೊಳ್ಳಬಹುದು.
ಯಾನಾ ಆಪ್ ನಮಗೆ ಅನೇಕ ಮಾಹಿತಿಗಳನ್ನೂ ನೀಡುವುದು ತುಂಬಾ ಅನುಕೂಲ. ಪ್ರಯಾಣಿಸಿದ ದೂರ, ಸಮಯ, ನಮ್ಮ ದೈಹಿಕ ಶಕ್ತಿಯ ಬಳಕೆ, ಸೈಕಲ್ ಬಳಸಿದುದರಿಂದ ಪರಿಸರಕ್ಕೆ ತಡೆಗಟ್ಟಿದ ಕಾರ್ಬನ್ ಪ್ರಮಾಣ, ಹಣದ ಲೆಕ್ಕಾಚಾರ ಸೇರಿದಂತೆ ವಿವಿಧ ಮಾಹಿತಿಗಳು ಉಪಯುಕ್ತ ವಾಗಿವೆ.
ಉತ್ತಮ ಯೋಜನೆಯನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಇತರರಿಗೆ ಈ ಯೋಜನೆಯ ಮಾಹಿತಿ ನೀಡಿ ಅವರೂ ಸೈಕಲ್ ಬಳಸಿಕೊಳ್ಳುವಂತೆ ಪ್ರೇರೇಪಿಸಬೇಕು. ಸಾರ್ವಜನಿಕ ಸೊತ್ತನ್ನು ನಮ್ಮ ಸ್ವಂತ ಸ್ವತ್ತಿನಂತೆಯೆ ಜತನದಿಂದ ಬಳಸಬೇಕು.
ಈ ಸೈಕಲ್ ನಲ್ಲಿ ಭಾರದ ವಸ್ತುಗಳನ್ನು ಸಾಗಿಸುವವರಿಗೆ, ಡಬ್ಬಲ್ ರೈಡಿಂಗ್ ದುಸ್ಸಾಹಸ ಮಾಡುವವರಿಗೆ ಎಚ್ಚರಿಕೆ ನೀಡಬೇಕು.
ಕಾಲಕಾಲಕ್ಕೆ ಸೈಕಲ್ನ ಸುಸ್ಥಿತಿಯನ್ನು ಗಮನಿಸಿ ಅವಶ್ಯಕತೆ ಇದ್ದರೆ ತಕ್ಷಣ ಸರಿಪಡಿಸಬೇಕು. ಹೆಚ್ಚು ಜನರು ಬಳಸುವ ಕಡೆ ಹೆಚ್ಚು ಸೈಕಲುಗಳು ಲಭ್ಯವಿರುವಂತೆ ಹೊಂದಿಸಬೇಕು. ತಂತ್ರಜ್ಞಾನದ ಬಳಕೆಗೆ ಮಾಹಿತಿ ಕೊರತೆ ಇರುವವರಿಗೆ ವಿವಿಧೆಡೆ ಮಾಹಿತಿ ತಿಳಿಸುವ ಕಾರ್ಯ ಮಾಡಬೇಕು.
ಈಗ ನಿಲುಗಡೆ ಇರುವ ಅನೇಕ ಸ್ಥಳಗಳಲ್ಲಿ ನೆರಳಿನ, ಮೇಲ್ಚಾವಣಿ ಕೊರತೆ ಇದೆ. ಬಿರು ಬಿಸಿಲಿಗೆ ಸೈಕಲ್ ಗಳು ಹಾಳಾಗುತ್ತಿವೆ. ಅವಶ್ಯಕತೆ ಇರುವೆಡೆ ಇದಕ್ಕೆ ಪರಿಹಾರವಾಗಿ ಸ್ಟ್ಯಾಂಡ್ ಗೆ ಸ್ಮಾರ್ಟ್ ಮೇಲ್ಚಾವಣಿ ನಿರ್ಮಿಸಬೇಕು.
ಗೋಪಿ ಸರ್ಕಲ್, ಗಾಂಧಿ ಬಜಾರ್ ಮುಂತಾದ ಜನನಿಬಿಡ ಸ್ಥಳಗಳಲ್ಲಿ ಇನ್ನಷ್ಟು ಸೈಕಲ್ ನಿಲ್ದಾಣಗಳನ್ನು ನಿರ್ಮಿಸಬೇಕು. ಪರಿಸರ ಸ್ನೇಹಿ, ಜನಸ್ನೇಹಿ , ಆರೋಗ್ಯ ಸ್ನೇಹಿ, ಆರ್ಥಿಕ ಸ್ನೇಹಿ ಈ ಯೋಜನೆಯ ಉದ್ದೇಶ ಸಫಲವಾಗಲಿ.