i
ಸರಣಿ ಗೆದ್ದ ಟೀಂ ಇಂಡಿಯಾ, 4ನೇ ಪಂದ್ಯದಲ್ಲಿ ಆಂಗ್ಲರಿಗೆ ಸೋಲು…
ಚಂದ್ರವಳ್ಳಿ ನ್ಯೂಸ್, ರಾಂಚಿಃ
ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ 5 ವಿಕೆಟ್ಗಳ ಗೆಲುವು ಸಾಧಿಸಿದ ಟೀಂ ಇಂಡಿಯಾ, ಈ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ 3-1 ಅಂತರದಲ್ಲಿ ಸರಣಿಯನ್ನು ಕೈವಶಮಾಡಿಕೊಂಡಿದೆ. ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿ ಯುವ ಆಟಗಾರರು ತಮ್ಮ ಚೊಚ್ಚಲ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಅಭಿಮಾನಿಗಳ ಮನಸ್ಸು ಗೆದ್ದಿದ್ದಲ್ಲದೆ, ಟೀಂ ಇಂಡಿಯಾದ ಗೆಲುವಿಗೂ ಕೊಡುಗೆ ನೀಡಿದ್ದಾರೆ.
ಯುವ ಪಡೆಯ ಘರ್ಜನೆಗೆ ಬಲಿಷ್ಠ ಇಂಗ್ಲೆಂಡ್ ತಂಡ ಮಂಕಾಗಿದ್ದು, ಆಂಗ್ಲರ ವಿರುದ್ಧ ರೋಹಿತ್ ಶರ್ಮಾ ಪಡೆ ಐತಿಹಾಸಿಕ ಸರಣಿ ಗೆಲುವಿನ ನಂತರ ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.
ಸೋಮವಾರ ರಾಂಚಿಯಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಐದು ವಿಕೆಟ್ಅಂತರದಲ್ಲಿ ಜಯಗಳಿಸಿದೆ. ವೈಯಕ್ತಿಕ ಕಾರಣಗಳಿಂದ ಸದ್ಯ ಟೆಸ್ಟ್ ಸರಣಿಯಿಂದ ಹೊರಗುಳಿದಿರುವ ಕೊಹ್ಲಿ, ಸರಣಿ ಗೆದ್ದ ಕೆಲವೇ ನಿಮಿಷಗಳಲ್ಲಿ ತಂಡಕ್ಕೆ ವಿಶೇಷ ಸಂದೇಶವೊಂದನ್ನು ನೀಡಿದ್ದಾರೆ.
‘ಹೌದು!!! ನಮ್ಮ ಯುವ ತಂಡದ ಶ್ರಮದಿಂದ ಅದ್ಭುತ ಸರಣಿ ಗೆಲುವು ನಮ್ಮದಾಗಿದೆ. ಇದು ಸ್ಥೈರ್ಯ, ಧೈರ್ಯ ಮತ್ತು ದೃಢತೆಯನ್ನು ತೋರಿಸಿದೆ‘ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.