i
ವಿದ್ಯುತ್ ಗ್ರೌಂಡಿಂಗ್ ಇಡೀ ಮನೆ ಭಸ್ಮ, 6 ಜೀವ ಉಳಿಸಿದ ಬೇಸಿಗೆ ದಗೆ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ವಿದ್ಯುತ್ ಗ್ರೌಂಡಿಂಗ್ ನಿಂದಾಗಿ ಇಡೀ ಮನೆಗೆ ಬೆಂಕಿ ಹೊತ್ತಿಕೊಂಡು ಲಕ್ಷಾಂತರ ರೂ.ಗಳಷ್ಟು ನಷ್ಟವಾಗಿದೆ.
ಹಿರಿಯೂರು ತಾಲೂಕಿನ ಹರಿಯಬ್ಬೆ ಗ್ರಾಮದ ಕಾಟಪ್ಪನವರ ರಂಗಸ್ವಾಮಿ ತಂದೆ ರಂಗಪ್ಪ ಇವರ ಮನೆಯಲ್ಲಿ ಮಧ್ಯ ರಾತ್ರಿ ವಿದ್ಯುತ್ ಗ್ರೌಂಡಿಂಗ್ ಆಗಿದ್ದು ಮನೆಯಲ್ಲಿದ್ದ ಟಿವಿ, ಸೋಪಾಸೆಟ್, ಬೀರು, 6 ಲಕ್ಷ ರೂ.ಮೌಲ್ಯದ ಚಿನ್ನಾಭರಣ, ಶಾಲಾ ಮಕ್ಕಳ ಸಮವಸ್ತ್ರ, ಕುಟುಂಬದ ಇತರೆ ಆರು ಮಂದಿಯ ಉಡುಪುಗಳು, ಬೀರುವಿನಲ್ಲಿದ್ದ 50 ಸಾವಿರ ನಗದು, ಆಹಾರ ಧಾನ್ಯಗಳು, ಅಡುಗೆಯ ಪಾತ್ರೆ ಸಾಮಾನು, ಸರಂಜಾಮುಗಳು, ಶಾಲಾ ಮಕ್ಕಳ ಸಮವಸ್ತ್ರಗಳು, ಬಿತ್ತನೆ ಬೀಜಕ್ಕಾಗಿ ಶೇಖರಣೆ ಮಾಡಿಟ್ಟಿದ್ದ 10 ಚೀಲ ಶೇಂಗಾ ಕಾಯಿ, ಕುಟುಂಬದ ಸದಸ್ಯರಿಗಾಗಿ ಶೇಖರಣೆ ಮಾಡಿಟ್ಟಿದ್ದ ಮೂರು ಚೀಲ ರಾಗಿ, ಒಂದು ಚೀಲ ಅಕ್ಕಿ, ಹುರುಳಿ ಕಾಳು, ಹೆಸರು ಕಾಳು, ಒಂದು ಟಿನ್ ಎಣ್ಣೆ, ಕೃಷಿ ಪರಿಕರಗಳು ಸೇರಿದಂತೆ ಮನೆಯಲ್ಲಿದ್ದ ಎಲ್ಲ ರೀತಿಯ ಸಾಮಗ್ರಿಗಳು ಬೆಂಕಿಯಲ್ಲಿ ಸುಟ್ಟು ಹೋಗಿದೆ. ಅಲ್ಲದೆ ಮನೆ, ನಿವೇಶನ, ಜಮೀನಿನ ಎಲ್ಲ ದಾಖಲಾತಿಗಳು, ಕಿಟಕಿ, ಬಾಗಿಲುಗಳು, ಮಕ್ಕಳ ಶಾಲಾ ಪುಸ್ತಕಗಳು ಬೆಂಕಿಯಲ್ಲಿ ಭಸ್ಮವಾಗಿವೆ. ಮನೆಯ ಒಳ ಮತ್ತು ಹೊರ ಭಾಗದ ಗೋಡೆಗಳು, ಮನೆಯ ಮುಂಭಾಗದಲ್ಲಿ ಗುಡಿಸಲು ಸೇರಿದಂತೆ ಇಡೀ ಮನೆ ಬೆಂಕಿಯಲ್ಲಿ ಭಸ್ಮವಾಗಿದೆ.
ಕುಟುಂಬ ಸದಸ್ಯರಲ್ಲಿಗ ಹುಟ್ಟು ಬಟ್ಟೆ ಬಿಟ್ಟರೆ ಬೇರೆ ಯಾವುದೇ ವಸ್ತುಗಳು ಇಲ್ಲದೆ ಬರಿಗೈ ದಾಸರಾಗಿದ್ದಾರೆ.
ಕಂದಾಯ ಮತ್ತು ಗ್ರಾಪಂ ಪಿಡಿಒ ಭೇಟಿ- ಪೊಲೀಸ್, ಕಂದಾಯ ಮತ್ತು ಗ್ರಾಪಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಅಬ್ಬಿನಹೊಳೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಗ್ರಾಪಂ ಪಿಡಿಒ, ಅಧ್ಯಕ್ಷರು, ಸದಸ್ಯರು ಭೇಟಿ ನೀಡಿ ತಾತ್ಕಾಲಿಕವಾಗಿ 5 ಸಾವಿರ ರೂ.ಗಳ ಪರಿಹಾರದ ಚೆಕ್ ವಿತರಣೆ ಮಾಡಿದ್ದಾರೆ.
ತಾಲೂಕು ತಹಶೀಲ್ದಾರರಾಗಲಿ, ಸ್ಥಳೀಯ ಶಾಸಕರಾಗಲಿ ಸಂತ್ರಸ್ತ ರಂಗಸ್ವಾಮಿ ಮನೆಯತ್ತ ತಿರುಗಿಯೂ ನೋಡಿಲ್ಲ, ನೆರವಿನ ಹಸ್ತಕ್ಕಾಗಿ ಸಂತ್ರಸ್ತ ರಂಗಸ್ವಾಮಿ ಕುಟಂಬದವರು ಕಾಯುತ್ತಿದ್ದಾರೆ. ತಾಲೂಕು ಮತ್ತು ಜಿಲ್ಲಾಡಳಿತ, ಕ್ಷೇತ್ರದ ಶಾಸಕರು ರೈತ ಕುಟುಂಬದವರಿಗೆ ಆಗಿರುವ ನಷ್ಟವನ್ನು ಸರ್ಕಾರದಿಂದ ಕೂಡಲೇ ಭರಿಸುವಂತೆ ಮನವಿ ಮಾಡಿದ್ದಾರೆ.
ಜೀವ ಉಳಿಸಿದ ಬೇಸಿಗೆ ದಗೆ-
ಬೇಸಿಗೆ ದಗೆ ತೀವ್ರವಾಗಿ ಏರಿಕೆಯಾಗಿದ್ದು ಕುಟುಂಬ ಸದಸ್ಯರೆಲ್ಲರೂ ರಾತ್ರಿ ಊಟ ಮಾಡಿ ಮನೆಯ ಮುಂಭಾಗದ ಅಂಗಳಲ್ಲಿ ಮಲಗಿದ್ದರಿಂದಾಗಿ ಆರು ಮಂದಿಯ ಜೀವಗಳು ಉಳಿದಿವೆ. ಒಂದು ವೇಳೆ ಅವರೆಲ್ಲ ಮನೆ ಒಳಗಡೆ ಮಲಗಿದ್ದರೆ ಬಹುತೇಕ ಎಲ್ಲರ ಜೀವಕ್ಕೂ ಸಂಚಕಾರ ಬರುತ್ತಿತ್ತು ಎಂದು ಅಕ್ಕ ಪಕ್ಕದವರು ನಿಟ್ಟುಸಿರು ಬಿಟ್ಟಿದ್ದಾರೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್- ಪ್ರತಿ ದಿನ ರಾತ್ರಿ 12 ಗಂಟೆ ಸಮಯದಲ್ಲಿ ವಿದ್ಯುತ್ ಲೈನ್ ಟ್ರಿಪ್ ಆಗುತ್ತದೆ. ವಿದ್ಯುತ್ ಟ್ರಿಪ್ ಆಗಿ ಮತ್ತೆ ವಿದ್ಯುತ್ ಪೂರೈಕೆ ಮಾಡುವ ಸಂದರ್ಭದಲ್ಲಿ ಹೆಚ್ಚಿನ ವಿದ್ಯುತ್ ಪಸರಿಸಿ ದಿಢೀರ್ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಬೆಸ್ಕಾಂ ಕಂಪನಿಯವರು ಗ್ರಾಹಕರಿಗೆ ಆಗಿರುವ ನಷ್ಟವನ್ನು ಭರಿಸುವಂತೆ ಗ್ರಾಮಸ್ಥರು ಆಗ್ರಹ ಮಾಡಿದ್ದಾರೆ.