i
ಹೊರಗಿನವರಿಗೆ ಕಾಂಗ್ರೆಸ್ ಟಿಕೆಟ್, ಮರು ಪರಿಶೀಲನೆ ಮಾಡಲಿ-ಆಕಾಂಕ್ಷಿ ಜೆಜೆಹಟ್ಟಿ ತಿಪ್ಪೇಸ್ವಾಮಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಸ್ಥಳೀಯರಿಗೆ ಟಿಕೆಟ್ ನೀಡಬೇಕೆಂದು ಜಿಲ್ಲೆಯ ಮತದಾರರು ಸಾಕಷ್ಟು ಹೋರಾಟ ಮಾಡಿದರೂ ಕಾಂಗ್ರೆಸ್ ವರಿಷ್ಠರು ಹೊರಗಿನವರಿಗೆ ಟಿಕೆಟ್ ನೀಡಿದ್ದು ಕೂಡಲೇ ಮರು ಪರಿಶೀಲನೆ ಮಾಡಿ ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಜೆ.ಜೆ ಹಟ್ಟಿ ತಿಪ್ಪೇಸ್ವಾಮಿ ಮನವಿ ಮಾಡಿದರು.ಚಿತ್ರದುರ್ಗ ನಗರದ ಹೋಟೆಲ್ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈಗಲೂ ಕಾಂಗ್ರೆಸ್ ಸ್ಥಳೀಯರಿಗೆ ಟಿಕೆಟ್ ನೀಡಲಿದೆ. ಈಗ ಕೇವಲ ಹೆಸರು ಘೋಷಣೆ ಮಾಡಲಾಗಿದೆ. ಬಿ ಫಾರಂ ನನಗೆ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಲೇಟರ್ಗಳನ್ನು ನಕಲಿ(ಪೋರ್ಜರಿ) ಮಾಡಿದ್ದಾರೆ ಎಂದು ಅಯೋಗ್ಯ ಹೇಳುತ್ತಾನೆ ಎಂದು ಅಭ್ಯರ್ಥಿ ಬಿ.ಎನ್.ಚಂದ್ರಪ್ಪನವರ ಹೆಸರೇಳದೆ ವಾಗ್ದಾಳಿ ಮಾಡಿದ ಅವರು ಲೇಟರ್ಗಳ ಬಗ್ಗೆ ಅನುಮಾನ ಇದ್ದರೆ ವಿಧಿ ವಿಜ್ಞಾನ ಕೇಂದ್ರದ ಪ್ರಾಯೋಗಾಲಯಕ್ಕೆ ಕಳುಹಿಸಿ ವರದಿ ಪಡೆದುಕೊಳ್ಳಲಿ ಎಂದು ಆಗ್ರಹ ಮಾಡಿದರು.
ಹಲವಾರು ವರ್ಷಗಳಿಂದ ಚಿತ್ರದುರ್ಗ ಜಿಲ್ಲೆಗೆ ಅನ್ಯಾಯವಾಗುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಎನ್ಎಸ್ ಯುಐ ಕಾರ್ಯಕರ್ತನಾಗಿ ಪ್ರಧಾನ ಕಾರ್ಯದರ್ಶಿಯಾಗಿ ಹಲವಾರು ವಿಭಾಗಗಳಲ್ಲಿ ಕೆಲಸ ಮಾಡಿ ಪಕ್ಷ ಸಂಘಟನೆ ಮಾಡಿದ್ದೇನೆ. ಲೋಕಸಭಾ ಚುನಾವಣೆಗೆ ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹ ಮಾಡಿದರು.
ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ.ಮಹಾದೇವಪ್ಪ ಅವರು ಜಿಲ್ಲೆಗೆ ವೀಕ್ಷಕರಾಗಿ ಬಂದಾಗ ಲೋಕಸಭಾ ಕ್ಷೇತ್ರದ ೦೮ ವಿಧಾನಸಭಾ ಕ್ಷೇತ್ರದ ಜನರು ನನಗೆ ಟಿಕೆಟ್ ನೀಡುವಂತೆ ಹೇಳಿದ್ದರು ಆದರೂ ಸಹ ಟಿಕೆಟ್ ನೀಡಿಲ್ಲ. ಜಿಲ್ಲೆಯ ಶಾಸಕರುಗಳಾದ ಬಿ.ಜಿ ಗೋವಿಂದಪ್ಪ, ಡಿ. ಸುಧಾಕರ್, ಎನ್.ವೈ ಗೋಪಾಲಕೃಷ್ಣ, ಕೆ. ಸಿ ವೀರೇಂದ್ರ ಪಪ್ಪಿ ರವರುಗಳು ಸಹ ಸ್ಥಳೀಯರಿಗೆ ಟಿಕೆಟ್ ನೀಡಬೇಕೆಂದು ಶಿಫಾರಸು ಮಾಡಿದ್ದರು ಎಲ್ಲದೆ ಲೋಕಸಭಾ ಚುನಾವಣೆಗೆ ನನಗೆ ಟಿಕೆಟ್ ನೀಡಬೇಕು ಎಂದು ಒಪ್ಪಿಗೆ ಪತ್ರಗಳನ್ನು ಹೈ ಕಮಾಂಡ್ ನೀಡಿದ್ದಾರೆ. ಆದರೆ ಈ ಪತ್ರಗಳು ಸುಳ್ಳು, ನಕಲು ಮಾಡಿಕೊಂಡು ತಂದಿದ್ದಾರೆ ಎಂದು ಪಕ್ಷದ ಹೈಕಮಾಂಡ್ ಗೆ ಹೇಳಿ ಎಡಗೈ ಸಮಾಜಕ್ಕೆ ಟಿಕೆಟ್ ತಪ್ಪಿಸಿದ್ದಾರೆ. ಈ ಬಗ್ಗೆ ನಾನು ಪೊಲೀಸ್ ಠಾಣೆಗೆ ದೂರು ಕೊಡುತ್ತೇನೆ. ಬೇಕಾದರೆ ಯಾವ ಪತ್ರಗಳು ನಕಲು ಎಂಬುದನ್ನು ಪರಿಶೀಲನೆ ಮಾಡುಕೊಳ್ಳಲಿ ಎಂದು ಸವಾಲು ಹಾಕಿದರು.ಸುಳ್ಳು ಮಾಹಿತಿ ಕೊಡುವ ಅವಶ್ಯಕತೆ ಇಲ್ಲ. ಕ್ಷೇತ್ರದ ೦೫ ಜನ ಶಾಸಕರುಗಳು ನನ್ನ ಪರವಾಗಿದ್ದಾರೆ. ೦೩ ಜನ ಶಾಸಕರುಗಳು ಬೇರೆಯವರ ಪರವಾಗಿದ್ದಾರೆ. ಈ ವಿಚಾರದಲ್ಲಿ ಹೈಕಮಾಂಡ್ಗೆ ಗೊಂದಲ ಮಾಡಿದ್ದಾರೆ. ರಘುಮೂರ್ತಿರವರು ಮಾತ್ರ ಲೇಟರ್ ಗೆ ಸಹಿ ಹಾಕಲಿಲ್ಲ. ಏಕೆಂದರೆ ನಾವು ಭೋವಿ ಸಮುದಾಯಕ್ಕೆ ಸಹಾಯ ಮಾಡಬೇಕಾಗುತ್ತದೆ ಎಂದಿದ್ದಾರೆ. ಲಿಸ್ಟ್ನಲ್ಲಿ ಅವರ ಹೆಸರೇ ಇರಲಿ. ’ಬಿ’ ಫಾರಂ ನನಗೆ ಕೊಡಲಿ ಎಂದ ಅವರು, ನನಗೆ ಟಿಕೆಟ್ ನೀಡಲಿಲ್ಲ ಅಂದರೆ ನಮ್ಮ ಕಾರ್ಯಕರ್ತರು, ಬೆಂಬಲಿಗರು ಹಾಗೂ ಸಮುದಾಯದವರ ಸಭೆ ಕರೆದು ಮುಂದಿನ ನಡೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ತಿಪ್ಪೇಸ್ವಾಮಿ ಪಕ್ಷದ ಮುಖಂಡರಿಗೆ ಎಚ್ಚರಿಕೆ ನೀಡಿದರು. ಲಿಡ್ಕರ್ ಸಂಸ್ಥೆ ಮಾಜಿ ಅಧ್ಯಕ್ಷ ಓ.ಶಂಕರ್ ಮಾತನಾಡಿ, ಹಿಂದುಳಿದ ಚಿತ್ರದುರ್ಗ ಜಿಲ್ಲೆಗೆ ಹೊರಗಿನವರು ಬಂದು ಆಳಬೇಕು. ಮಾಜಿ ಸಂಸದ ಬಿ.ಎನ್ ಚಂದ್ರಪ್ಪ ರವರ ವರ್ಗಾವಣೆ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ಅಮಾಯಕರ ಮೇಲೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಜಿಲ್ಲೆಯ ಯಾವುದೇ ಸಮುದಾಯಕ್ಕೆ ಅಂದರೆ ಮಾದಿಗ, ಲಂಬಾಣಿ, ಭೋವಿ, ಕೊರಮ, ಯಾರಿಗೆ ಬೇಕಾದರೂ ಕೊಡಲಿ ಸ್ಥಳೀಯರಿಗೆ ಟಿಕೆಟ್ ನೀಡಬೇಕು. ಸ್ಥಳೀಯರಿಗೆ ಟಿಕೆಟ್ ಕೊಟ್ಟರೆ ೨ ಲಕ್ಷ ಅಂತರದಲ್ಲಿ ಗೆಲ್ಲುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಚೌಳೂರು ಪ್ರಕಾಶ್, ಮಂಜುನಾಥ್, ಗ್ರಾಪಂ ಸದಸ್ಯ ಆನಂದ್, ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಮಂಜಪ್ಪ ಹಾಜರಿದ್ದರು.