i
ಸಾಧನೆ, ಪರಿಶ್ರಮದ ಪ್ರತೀಕವೇ ಹೆಣ್ಣು-ನೂರುನ್ನೀಸಾ…
ಚಂದ್ರವಳ್ಳಿ ನ್ಯೂಸ್, ತುಮಕೂರು:
ಸಾಧನೆ, ಪರಿಶ್ರಮ, ತಾಳ್ಮೆ, ಸಹನೆಯ ಪ್ರತೀಕವೇ ಹೆಣ್ಣು. ಪ್ರತಿಯೊಬ್ಬ ಮಹಿಳೆಯೂ ದೇವತೆಯ ಸ್ವರೂಪವೆಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಅಭಿಪ್ರಾಯಪಟ್ಟರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ನಗರದ ಬಾಲಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಲೋಕಸಭಾ ಸಾರ್ವತ್ರಿಕ ಚುನಾವಣೆ-೨೦೨೪ ಮತದಾರರ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯೊಬ್ಬಳು ಸಬಲಳಾಗಿದ್ದರೆ ಇಡೀ ಕುಟುಂಬವೇ ಸಬಲೀಕರಣಗೊಳ್ಳುತ್ತದೆ. ಲಿಂಗತಾರತಮ್ಯ ಹೋಗಲಾಡಿಸಿ ಲಿಂಗ ಸಮಾನತೆಯನ್ನು ಕಾಪಾಡಿದಲ್ಲಿ ಮಹಿಳೆಯರು ಇನ್ನಷ್ಟು ಸಾಧನೆ ಮಾಡುತ್ತಾರೆ ಎಂದು ತಿಳಿಸಿದರು. ಮಹಾನಗರಪಾಲಿಕೆ ಆಯುಕ್ತ ಅಶ್ವಿಜ.ಬಿ.ವಿ. ಮಾತನಾಡಿ, ಮನೆ ಮತ್ತು ಕಛೇರಿ ಎರಡೂ ಕಡೆ ಜವಾಬ್ದಾರಿಯಿಂದ ಕೆಲಸ ನಿರ್ವಹಿಸುವ ಮಹಿಳೆ ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಧನೆಯ ಹೆಜ್ಜೆಯನ್ನಿಟ್ಟು ಸೈ ಎನಿಸಿಕೊಂಡಿದ್ದಾಳೆ. ಬರುವ ಏಪ್ರಿಲ್ ೨೬ರಂದು ನಡೆಯಲಿರುವ ಲೋಕಸಭಾ ಚುನಾವಣೆ ಮತದಾನ ದಿನದಂದು ಕಡ್ಡಾಯವಾಗಿ ಎಲ್ಲಾ ಮಹಿಳೆಯರು ಮತದಾನ ಮಾಡಿ ಇತರರಿಗೂ ಮತದಾನ ಮಾಡಲು ಪ್ರೇರೇಪಿಸಬೇಕೆಂದರು.ಅರಣ್ಯ ಉಪಸಂರಕ್ಷಣಾಧಿಕಾರಿ ಅನುಪಮ ಮಾತನಾಡಿ ಯಾವುದೇ ಮಹಿಳೆಯು ಯಾವುದೇ ನಕಾರಾತ್ಮಕ ಚಿಂತನೆಗೆ ಒಳಗಾಗದೆ ಮುಖ್ಯ ವಾಹಿನಿಗೆ ಬಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆ ಸಾಧನೆ ಮಾಡಬೇಕು. ಪುರುಷ ಪ್ರಧಾನ ಕುಟುಂಬಕ್ಕಿಂತ ಮಾತೃ ಪ್ರಧಾನ ಕುಟುಂಬಗಳಲ್ಲಿ ಸದೃಢವಾದ ನಿರ್ಧಾರಗಳು ರೂಪುಗೊಳ್ಳುತ್ತವೆ. ಎಲ್ಲಾ ಕುಟುಂಬಗಳಲ್ಲಿಯೂ ಹೆಣ್ಣು ಮಕ್ಕಳಿಗೆ ಸಾಧನೆಯ ಹೆಜ್ಜೆ ಇಡಲು ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷ ಮಲ್ಲಿಕಾ ಬಸವರಾಜು ಮಾತನಾಡಿದರು. ಕಾರ್ಯಕ್ರಮದ ಅಂಗವಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಿಂದ ಜಿಲ್ಲಾ ಬಾಲಭವನದವರೆಗೆ ಮತದಾರರ ಜಾಗೃತಿ ಜಾಥಾ ಕಾರ್ಯಕ್ರಮ ಮತ್ತು ಬಾಲಭವನ ಆವರಣದಲ್ಲಿ ಮಹಿಳೆಯರಿಂದ ಮತದಾನ ಕುರಿತು ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀಧರ.ಎಂ.ಎಸ್. ಸ್ವಾಗತಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಪವಿತ್ರ.ಆರ್.ಜಿ. ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಸ್ವೀಪ್ ನೋಡಲ್ ಅಧಿಕಾರಿ ಹಾಗೂ ಕೃಷಿ ಉಪನಿರ್ದೇಶಕ ಅಶೋಕ ಟಿ.ಎನ್., ತೋಟಗಾರಿಕೆ ಉಪನಿರ್ದೇಶಕ ಶಾರದಮ್ಮ, ರೇಷ್ಮೆ ಉಪನಿರ್ದೇಶಕ ಬಾಲಕೃಷ್ಣಪ್ಪ, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಜಿಲ್ಲಾ ನೋಂದಣಾಧಿಕಾರಿ ಶಶಿಕಲಾ, ಜಿಲ್ಲಾ ಕಾರ್ಮಿಕ ಅಧಿಕಾರಿ ತೇಜಾವತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸೋನಿಯಾ ವರ್ಣೇಕರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಂಬಿಕಾ ಕೆ.ಹೆಚ್. ಸೇರಿದಂತೆ ಮತ್ತಿತರರು ಹಾಜರಿದ್ದರು.