i
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಗೆ ಜಿಲ್ಲಾಡಳಿತ ಸಜ್ಜು : ಜಿಲ್ಲಾಧಿಕಾರಿ ವೆಂಕಟೇಶ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಏಪ್ರಿಲ್ ೨೬ರಂದು ನಡೆಯಲಿರುವ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲಾ ಚುನಾವಣಾ ಶಾಖೆಯು ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ಅವರು ಹೇಳಿದರು. ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಉಮೇದುವಾರರಿಗೆ ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಮತದಾನ ಪೂರ್ವ ಸಿದ್ಧತೆಗಳ ಮಾಹಿತಿ ನೀಡಿದರಲ್ಲದೇ ತುಮಕೂರು ಜಿಲ್ಲೆಯ ಶಿರಾ ಮತ್ತು ಪಾವಗಡ ತಾಲೂಕುಗಳು ಸೇರಿದಂತೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೊಳಪಡುವ ೦೮ವಿಧಾನಸಭಾ ಕ್ಷೇತ್ರಗಳ ಮತಗಟ್ಟೆಗಳಿಗೆ ಸರಬರಾಜಾಗಲಿರುವ ಬ್ಯಾಲೆಟ್ ಯುನಿಟ್, ಕಂಟ್ರೋಲ್ ಯುನಿಟ್ ಮತ್ತು ವಿವಿಪ್ಯಾಟ್ಗಳ ೨ನೇ ಹಂತದ ರ್ಯಾಂಡಮೈಜೇಶನ್ ಮತ್ತು ಹಂಚಿಕೆ ವಿಧಾನಗಳ ಕುರಿತು ಮಾಹಿತಿ ನೀಡಿದರು. ಈ ಮತಯಂತ್ರಗಳು ಮತಗಟ್ಟೆಗೆ ಹಂಚಿಕೆ ಮಾಡುವ ಕಾರ್ಯ ಏಪ್ರಿಲ್ ೨೫ರಂದು ನಿಯಮಾನುಸಾರ ನಡೆಯಲಿದೆ. ಈ ಎಲ್ಲಾ ಪ್ರಕ್ರಿಯೆಗಳನ್ನು ಉಮೇದುವಾರರು ಅಥವಾ ಅವರಿಂದ ನಿಯೋಜಿಸಲಾದ ಸಿಬ್ಬಂಧಿಗಳು ಖುದ್ದು ಸ್ಥಳದಲ್ಲಿ ಹಾಜರಿದ್ದು, ವೀಕ್ಷಿಸಬಹುದಾಗಿದೆ ಎಂದ ಅವರು, ಈ ಎಲ್ಲಾ ವಿದ್ಯಾಮಾನಗಳನ್ನು ಪ್ರತಿ ಮತಗಟ್ಟೆಗಳಿಗೆ ನೇಮಿಸಲಾಗುವ ರಾಜಕೀಯ ಪಕ್ಷಗಳ ಏಜೆಂಟರಿಗೆ ತಿಳಿಸುವಂತೆ ಹಾಗೂ ಯಾವುದೇ ಅಡಚಣೆಗಳಾಗದಂತೆ ನೋಡಿಕೊಳ್ಳಲು ಸೂಚಿಸಿದರು. ಕ್ಷೇತ್ರದ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗುವ ೨೧೬೮ಮತಗಟ್ಟೆಗಳಿಗೆ ಪ್ರತಿ ಕೇಂದ್ರಕ್ಕೆ ೨ಮತಯಂತ್ರದಂತೆ ಒಟ್ಟು ೪೩೩೬ ಮತಯಂತ್ರಗಳನ್ನು ಹಂಚಿಕೆ ಮಾಡಲಾಗುವುದು. ಅಲ್ಲದೇ ತಾಂತ್ರಿಕ ದೋಷ ಮತ್ತಿತರ ತುರ್ತು ಸಂದರ್ಭಗಳಲ್ಲಿ ಎದುರಾಗಬಹುದಾದ ಸಮಸ್ಯೆಗಳ ಪರಿಹಾರ ಕ್ರಮವಾಗಿ ಹೆಚ್ಚುವರಿಯಾಗಿ ೮೯೭ಮತಯಂತ್ರಗಳನ್ನು ಕಾಯ್ದಿರಿಸಲಾಗಿದೆ ಎಂದ ಅವರು, ಈ ಚುನಾವಣೆಗಾಗಿ ಒಟ್ಟು ೫೨೩೩ ಬ್ಯಾಲೆಟ್ ಯುನಿಟ್ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಪ್ರತಿ ಯುನಿಟ್ಗೂ ನಂಬರುಗಳನ್ನು ಹಾಕಲಾಗಿದೆ ಎಂದರು. ೮೫+ ವರ್ಷ ಮೇಲ್ಪಟ್ಟ ವಯಸ್ಕರ ತಮ್ಮ ಕೋರಿಕೆ ಮತದಾನಕ್ಕೆ ಇಂದು ಅಂತಿಮದಿನವಾಗಿದೆ. ಈಗಾಗಲೇ ಕೋರಿಕೆ ಸಲ್ಲಿಸಿದ ವಿಕಲಚೇತನರೂ ಕೂಡ ಮನೆಯಲ್ಲಿಯೇ ಮತ ಚಲಾಯಿಸಲು ಅನುಮತಿ ನೀಡಲಾಗಿದೆ. ಅಗತ್ಯ ಸೇವೆಗಳಿಗೆ ನಿಯೋಜಿತ ಮತದಾರರು ಮತ ಚಲಾಯಿಸಲು ಜಿಲ್ಲೆಯ ತಹಶೀಲ್ದಾರರ ಕಚೇರಿಯಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಅರ್ಹರು ಏಪ್ರಿಲ್ ೧೯, ೨೦ ಮತ್ತು ೨೧ರಂದು ಬೆಳಿಗ್ಗೆ ೧೦ರಿಂದ ಸಂಜೆ ೫ಗಂಟೆಯೊಳಗಾಗಿ ಮತಚಲಾಯಿಸಬಹುದಾಗಿದೆ ಎಂದರು.
ಪ್ರಸಕ್ತ ಚುನಾವಣೆಯಲ್ಲಿ ಮತ ಚಲಾಯಿಸುವ ಮತದಾರರ ಅನುಕೂಲಕ್ಕಾಗಿ ಮತಗಟ್ಟೆ ಗುರುತಿನ ಚೀಟಿಗಳನ್ನು ವಿತರಿಸುವ ಕಾರ್ಯ ಜಿಲ್ಲೆಯಾದ್ಯಂತ ಇಂದಿನಿಂದ ಆರಂಭಗೊಳ್ಳಲಿದೆ. ಖಾಸಗಿಯವರು ವಿತರಿಸುವ ಪಕ್ಷದ ಗುರುತು ಚಿಹ್ನೆಗಳುಳ್ಳ ಚೀಟಿಗಳನ್ನು ಮತಗಟ್ಟೆಯೊಳಗೆ ಕೊಂಡೊಯ್ಯುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ವಿಶೇಷವಾಗಿ ಜಿಲ್ಲಾ ಚುನಾವಣಾ ಶಾಖೆಯಿಂದ ವಿತರಿಸಲಾಗುವ ಗುರುತಿನ ಚೀಟಿಗಳಲ್ಲಿ ಮತಗಟ್ಟೆಯ ವಿವರವಾದ ಮಾಹಿತಿ ಒದಗಿಸುವ ಕ್ಯೂಆರ್ ಕೋಡನ್ನು ನಮೂದಿಸಲಾಗಿದೆ. ಈ ಕ್ಯೂಆರ್ ಕೋಡನ್ನು ಮತದಾರರು ಬಳಸಿಕೊಳ್ಳಬಹುದಾಗಿದೆ ಎಂದರು ಈ ಸಂದರ್ಭದಲ್ಲಿ ಚುನಾವಣಾ ವೀಕ್ಷಕ ಮನೋಹರ ಮರಾಂಡಿ, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೇರಿದಂತೆ ಪ್ರಸಕ್ತ ಚುನಾವಣೆಯಲ್ಲಿ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿರುವ ಉಮೇದುವಾರರು ಅಥವಾ ಅವರ ಪ್ರತಿನಿಧಿಗಳು ಉಪಸ್ಥಿತರಿದ್ದರು.