i
ಭದ್ರಾ ಮೇಲ್ದಂಡೆ ಯೋಜನೆ ವಿರೋಧಿಸಿದ್ದ ದಾಖಲೆ ಬಿಡುಗಡೆ ಮಾಡಿದರೆ ರಾಜಕೀಯ ನಿವೃತ್ತಿ…
ಬಿಜೆಪಿ ಮಹಾನ್ ಸುಳ್ಳಿನ ಪಕ್ಷ, ಕಾಂಗ್ರೆಸ್ ಪಕ್ಷದ ಪರ ಅಲೆ, ಗೆಲುವು ನನ್ನದೆ-ಅಭ್ಯರ್ಥಿ ಬಿ.ಎನ್.ಚಂದ್ರಪ್ಪ…
ಸಂದರ್ಶನ-ಹೆಚ್.ಸಿ.ಗಿರೀಶ್, ಹರಿಯಬ್ಬೆ
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪರಿಶಿಷ್ಟ ಜಾತಿಗೆ ಮೀಸಲಾದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅವರು 2014-2019ರ ಅವಧಿಯಲ್ಲಿ ಸಂಸದರಾಗಿ ಮಾಡಿದ ಸಾಧನೆ, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಹಾಗೂ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ ಪ್ರತಿ ವರ್ಷ ರಾಹುಲ್ ಗಾಂಧಿ ನೀಡಿರುವ ಒಂದು ಲಕ್ಷ ರೂ.ಗಳ ಗ್ಯಾರಂಟಿ ಯೋಜನೆ ಚುನಾವಣೆಯಲ್ಲಿ ದಡ ಸೇರಿಸಲಿದೆ, ಕ್ಷೇತ್ರ ವ್ಯಾಪ್ತಿಯ 7 ಜನ ಶಾಸಕರು, ಪಕ್ಷದ ಮುಖಂಡರು, ಕಾರ್ಯಕ್ರತರು ನನ್ನ ಗೆಲುವಿಗೆ ಟೊಂಕ ಕಟ್ಟಿ ಹಗಲು ರಾತ್ರಿ ದುಡಿಯುತ್ತಿರುವ ಸತ್ಯಾಸತ್ಯತೆಯನ್ನು, ಚುನಾವಣಾ ಕಣ, ಕಾಂಗ್ರೆಸ್ ಪಕ್ಷದ ಶಾಸಕರು, ಮುಖಂಡರುಗಳ ಮನಸ್ಥಿತಿ-ವಸ್ತುಸ್ಥಿತಿ ಕುರಿತ ಸತ್ಯವನ್ನು ಚಂದ್ರವಳ್ಳಿ ಕನ್ನಡ ಪ್ರಾದೇಶಿಕ ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ.
ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ನಾನು ಹೊರಗಿನವನಲ್ಲ, ನನ್ನ ಪತ್ನಿಯ ತವರು ಮನೆ ಹೊಳಲ್ಕೆರೆ. ನಾನು ಜಿಲ್ಲೆಯ ಗಡಿ ಭಾಗದ ಸಾಣೇಹಳ್ಳಿ ಸಮೀಪದ ತರೀಕೆರೆಯವನು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸಾವಿರಾರು ಸಂಖ್ಯೆಯ ಜನರನ್ನ ಹೆಸರಿಡಿದು ಆತ್ಮೀಯವಾಗಿ ಮಾತನಾಡಿಸುತ್ತೇನೆ. ನನ್ನ ಅಧಿಕಾರಾವಧಿಯಲ್ಲಿ ಎಂದೂ ಸುಳ್ಳು ಹೇಳಿಲ್ಲ, ಭ್ರಷ್ಟಾಚಾರ ಮಾಡಿಲ್ಲ, ಯಾರಿಗೂ ಅನ್ಯಾಯ ಬಗೆದಿಲ್ಲ, ನಾನು ಸಂಸದನಾಗಿದ್ದರೂ ಕೂಡ ಎಂದು ಅಹಂಕಾರ ತೋರಿಸಿಲ್ಲ, ಸರಳರಲ್ಲಿ ಸರಳನಾಗಿ ಸರಳತೆಯಿಂದ ನಡೆದುಕೊಂಡಿದ್ದೇನೆ. ಎಂದೂ ಸುಳ್ಳು ಭರವಸೆಗಳನ್ನ ನೀಡಿಲ್ಲ, ರಾಜಕೀಯ ಜೀವನದಲ್ಲಿ ಅಧಿಕಾರಕ್ಕಾಗಿ ನಾನೆಂದೂ ಹಿಂದೆ ಬಿದ್ದಿಲ್ಲ. ನನ್ನ ಎದುರಾಳಿ ಅಥವಾ ನನ್ನ ವಿರೋಧಿಗಳ ಕುತಂತ್ರ ಬಹಳ ದಿನ ನಡೆಯೋಲ್ಲ, ಮತದಾರರು ಸದಾ ನನ್ನ ಬೆಂಬಲಕ್ಕಿದ್ದು ನೂರಷ್ಟು ಗೆಲ್ಲಿಸಲಿದ್ದಾರೆ ಎನ್ನುವ ಆತ್ಮ ವಿಶ್ವಾಸ ಅಭ್ಯರ್ಥಿ ಚಂದ್ರಪ್ಪನವರದು.
ನನ್ನ ಇರುವಿಕೆಯನ್ನ ತೋರಿಸಿ ಬದ್ಧತೆಯಿಂದ ಕ್ಷೇತ್ರದ ಕೆಲಸ ಮಾಡಿರುವೆ. ಹಳ್ಳಿಯಿಂದ ದೆಲ್ಲಿ ವರೆಗೂ ಕೆಲಸ ಮಾಡಿದ್ದೇನೆ. 2014-2019ರ ಲೋಕಸಭೆಯ ಸದಸ್ಯನಾಗಿ ಕ್ಷೇತ್ರದ ಸಮಸ್ಯೆಗಳು, ನಾಡಿನ ಮತ್ತು ದೇಶದ ಜನರ ಸಮಸ್ಯೆಗಳ ಕುರಿತು 580 ಪ್ರಶ್ನೆಗಳನ್ನ ಕೇಳಿದ್ದೇನೆ. ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳ ಕುರಿತು 63 ಸಲ ಲೋಕಸಭೆಯಲ್ಲಿ ಮಾತನಾಡಿದ್ದೇನೆ. ಲೋಕಸಭೆಯಲ್ಲಿನ ನನ್ನ ಹಾಜರಾತಿ ಶೇ.87 ರಷ್ಟು ಇದೆ. ಈ ದಾಖಲೆ ನಾನು ಮಾಡಿದ್ದೇನೆ. ಇದೇ ಕ್ಷೇತ್ರದಲ್ಲಿ ಗೆದ್ದು ಹೋಗಿರುವವರಲ್ಲಿ ಇಷ್ಟೊಂದು ಕಳಜಿಯ ಹಾಜರಾತಿಯಾಗಲಿ, ಪ್ರಶ್ನೆಗಳನ್ನ ಕೇಳಿರುವುದಾಗಲಿ ಇಲ್ಲ. ಸಾಕಷ್ಟು ಸಂಸದರ ಹಾಜರಾತಿ ಶೇ.30 ರಿಂದ 40 ಇರುತ್ತದೆ. ಕೆಲ ಸಂಸದರು ಲೋಕಸಭೆಯಲ್ಲಿ ಬಾಯಿ ಬಿಚ್ಚಿರುವುದಿಲ್ಲ. ಆದರೆ ನನ್ನ ಇರುವಿಕೆಯೊಂದಿಗೆ ಬದ್ಧತೆ ತೋರಿಸಿ ಕ್ಷೇತ್ರದ ಅಭಿವೃದ್ಧಿಗೆ ಹೋರಾಟ ಮಾಡಿರುವೆ. ಇಡೀ ನನ್ನ ಸಂಸದನಾಗಿದ್ದ ಅವಧಿಯಲ್ಲಿ ಅತ್ಯಂತ ಪಾರದರ್ಶಕವಾಗಿ ನಡೆದುಕೊಂಡಿದ್ದೇನೆ. ನಾನು ಸಂಸದ ಅಥವಾ ಎಂಪಿ ಎಂದುಕೊಂಡು ಕೆಲಸ ಮಾಡಲಿಲ್ಲ, ಅಂತಹ ಅಹಂಕಾರ ಕೂಡ ನನ್ನ ಬಳಿ ಸುಳಿಯಲಿಲ್ಲ.
2019-2024ರ ಅವಧಿಯಲ್ಲಿ ನಾನು ಸೋತಾಗ ಗೆದ್ದ ಮತಗಳಿಗಿಂತ ಒಂದು ಲಕ್ಷ ಮತಗಳು ಹೆಚ್ಚಿಗೆ ಬಂದಿತ್ತು. ನನಗೆ ಎಂದೂ ಆಡಳಿತ ವಿರೋಧಿ ಅಲೆ ಕಾಡಲಿಲ್ಲ. ನಾನು 4.50 ಲಕ್ಷ ಮತಗಳನ್ನು ಪಡೆದು ಗೆದ್ದಿದ್ದೆ. ಆದರೆ 5.50 ಲಕ್ಷಕ್ಕಿಂತ ಹೆಚ್ಚಿನ ಮತಗಳನ್ನ ಪಡೆದು ಸೋಲು ಕಂಡಿದ್ದೆ. ಇದರಿಂದ ತಿಳಿಯುತ್ತೆ ಜನ ನನ್ನನ್ನ ತಿರಸ್ಕಾರ ಮಾಡಿಲ್ಲ ಎಂದು. ಅನಿವಾರ್ಯ ಕಾರಣಕ್ಕೆ ಸೋಲು ಕಂಡಿದ್ದೇನೆ. ಆದರೆ ನನ್ನ ವೋಟಿನ ಪ್ರಮಾಣ ಕಡಿಮೆ ಆಗಿಲ್ಲ. ಎಂಪಿ ಆಗಿ ಗೆದ್ದವರೇ ಕೈಗೆ ಸಿಗುವುದಿಲ್ಲ, ಆದರೆ ನಾನೂ ಸೋತ ನಂತರವೂ ಇಡೀ ಕ್ಷೇತ್ರದ ಜನರ ಸಂಪರ್ಕ ಇಟ್ಟುಕೊಂಡು ಸುತ್ತಾಡಿದ್ದೇನೆ. ನನ್ನ ಇರುವಿಕೆಯನ್ನು ತೋರಿಸಿದ್ದೇನೆ. ನನ್ನ ಬದ್ಧತೆ ಕಂಡ ಹೈ ಕಮಾಂಡ್ ಮತ್ತು ರಾಜ್ಯ ನಾಯಕರು ಟಿಕೆಟ್ ನೀಡಿ ಆಶೀರ್ವಾದ ಮಾಡಿ ಗೆದ್ದು ಬಾ ಎಂದು ಆರೈಸಿದ್ದಾರೆ.
1 ಚಿತ್ರದುರ್ಗ ಕ್ಷೇತ್ರಕ್ಕೆ ಚಂದಪ್ಪನವರ ಕೊಡುಗೆ ಶೂನ್ಯನಾ?
ಇಡೀ ಕ್ಷೇತ್ರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು, ಬಸ್ ನಿಲ್ದಾಣಗಳು, ನೀರಿನ ಟ್ಯಾಂಕರ್ ಗಳು, ವಿಕಲಚೇತನರಿಗೆ ನೀಡಿರುವ ವಾಹನಗಳು, ಶಾಲಾ ಕಾಲೇಜ್ ಗಳಿಗೆ ಅಳವಡಿಸಲಾಗಿರುವ ನೀರಿನ ಘಟಕಗಳು ಎಲ್ಲ ಕಡೆ ಸಾಕ್ಷಿ ಗುಡ್ಡೆಗಳಂತೆ ಕಾಣುತ್ತಿವೆ. ಚಂದ್ರಪ್ಪ ಯಾವುದೆ ತಾಲೂಕಿಗೆ ಹೋದರೂ ಒಂದು ಸಾವಿರ ಜನರ ಹೆಸರನ್ನ ಹೇಳತ್ತಾನೆ, ನನ್ನ ಎದುರಾಳಿಗಳ ಸಾಧನೆ ಶೂನ್ಯ, ಕೇಂದ್ರ ಸರ್ಕಾರದ ಮಂತ್ರಿಯಾಗಿ ಸಾಧನೆಯ ಸಾಕ್ಷಿ ಗುಡ್ಡೆ ಎಲ್ಲಿದೆ ಎಂದು ಹೇಳಲಿ.2 ಕಾಂಗ್ರೆಸ್ ಪಕ್ಷದಲ್ಲಿ ಒಳ ಹೊಡೆತಗಳು, ಅಸಮಾಧಾನ ಇದೆಯಲ್ಲ?
ಪಕ್ಷದ ಮುಖಂಡರು, ಕಾರ್ಯಕರ್ತರು ಹೃದಯ ವೈಶಾಲಿಗಳು, ಒಳ ಹೊಡೆತ ನೀಡುವಂತ ತಾಯಿಗಂಡ ಕೆಲಸವನ್ನ ಯಾರೂ ಮಾಡುವುದಿಲ್ಲ. ನಮ್ಮಲ್ಲಿ ಯಾವುದೇ ಅಸಮಾಧಾನವಿಲ್ಲ. 3 ಬಿಜೆಪಿ ಅಭ್ಯರ್ಥಿ ಮತ್ತು ನೀವು(ಕಾಂಗ್ರೆಸ್ ಅಭ್ಯರ್ಥಿ) ಇಬ್ಬರು ಹೊರಗಿನವರು ಸ್ಥಳೀಯರ ಬೇಡಿಕೆಗೆ ಮಾನ್ಯತೆ?
ನಾನು ಹೊರಗಿನವನಲ್ಲ, ಸಾಣೇಹಳ್ಳಿ ಬಿಟ್ಟರೆ ಅಜ್ಜಂಪುರ, ಅಜ್ಜಂಪುರ ಬಿಟ್ಟರೆ ನನ್ನೂರು, ಅಪ್ಪರ್ ಭದ್ರೆಯ ಕೆಳಗಡೆ ನನ್ನೂರು.
4 ಅಪ್ಪರ್ ಭದ್ರೆ ಯೋಜನೆಗೆ ನೀವು ವಿರೋಧ ಮಾಡಿದ್ರು ಚಂದ್ರಪ್ಪ ಎನ್ನುತ್ತಾರೆ ನಿಜನಾ?
ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಂದ ದಿನದಿಂದಲೂ ಅದನ್ನೇ ಚಾಲೆಂಜ್ ಮಾಡಿದ್ದೇನೆ. ಭದ್ರಾ ಯೋಜನೆಗೆ ಒಂದೇ ಒಂದು ವರ್ಡ್ ವಿರೋಧ ಮಾಡಿರುವ ದಾಖಲೆ ಪ್ರದರ್ಶಿಸಿದರೆ ಕೂಡಲೇ ರಾಜಕೀಯ ನಿವೃತ್ತಿ ಹೊಂದುತ್ತೇನೆ. ಅಪ್ಪರ್ ಭದ್ರಾ ವಿರೋಧಿಸುವಂತಾ ಸಣ್ಣ ಮನುಷ್ಯ ನಾನಲ್ಲ.
5 ಗೋವಿಂದ್ ಕಾರಜೋಳ ಚಿತ್ರದುರ್ಗ ಕ್ಷೇತ್ರಕ್ಕೆ ಬರಬಾರದೆ?
ಏಕಾಏಕಿ ಇಲ್ಲಿಗೆ ಬಂದರೆ ಹೇಗೆ?, ಗೋವಿಂದ್ ಕಾರಜೋಳ ಅವರ ನಡೆ, ನುಡಿ, ಭಾಷೆಯೇ ಬೇರೆ, ಊಟೋಪಚಾರ ವಿಧಾನವೇ ಬೇರೆ, ಇಲ್ಲಿಯ ಊಟನೇ ಬೇರೆ, ಇಲ್ಲಿಯ ಊಟನೇ ಬೇರೆ, ಏಕಾಏಕಿ ಬಂದರೆ ಹೇಗೆ, ನನ್ನದೂ ಪಕ್ಕದ ಊರು ಸರ್.
6 ಇಂದಿರಾ ಗಾಂಧಿ ಚಿಕ್ಕಮಗಳೂರು, ಸೋನಿಯಾ ಗಾಂಧಿ ಬಳ್ಳಾರಿ, ರಾಹುಲ್ ಗಾಂಧಿ ಕೇರಳದಿಂದ ಸ್ಪರ್ಧಿಸಬಹುದಾ, ಅಲ್ಲಿಯ ಭಾಷೆ, ಊಟ ಬೇರೆ ಬೇರೆ ಅಲ್ವಾ? ಇವರುಗಳಿಗೆ ಇಲ್ಲದ ಭಾಷೆ, ಊಟದ ತೊಡಕು ಕಾರಜೋಳ ಅವರಿಗೇಕೆ?
ಭಾಷೆ, ಪ್ರಾಂತ್ಯ, ಒಳಗಿನವರು, ಹೊರಗಿನವರು ಕುರಿತು ನಾನು ಮಾತನಾಡಿಲ್ಲ. ಸ್ಷಷ್ಟವಾಗಿ ಹೇಳುತ್ತೇನೆ, ಆ ರೀತಿಯ ಟೀಕೆ ಮಾಡುವುದಿಲ್ಲ, ಆದರೆ ಏಕಾಏಕಿ ಬಂದು ನನಗೆ ವೋಟು ಕೊಡಿ ಗೆದ್ದರೆ ಮೋದಿ ಜೊತೆಗಿರುತ್ತೇನೆ, ಚಂದ್ರಪ್ಪ ಗೆದ್ದರೆ 30 ಜನರಲ್ಲಿರುತ್ತಾರೆ ಎಂದು ಅಹಂಕಾರದ ಮಾತುಗಳನ್ನಾಡಿರುವುದಕ್ಕೆ ನಾನು ಈಗ ಉತ್ತರ ಹೇಳುತ್ತೇನೆ, ನನಗೆ ಭಾಷೆ ಬಗ್ಗೆ ವಿಶ್ವಾಸವಿಲ್ಲ, ಪ್ರಾಂತ್ಯದ ಬಗ್ಗೆ ವಿಶ್ವಾಸವಿಲ್ಲ, ಭಾರತೀಯರು ಎಂದರೆ ಎಲ್ಲರೂ ಒಂದೇ, ಯಾರು ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಲಿ ಅಭ್ಯಂತರವಿಲ್ಲ. ಆದರೆ ಅವರ ಇರುವಿಕೆ ಏನಿದೆ?, ನಾನು ಒಂದು ತಾಲೂಕಿಗೆ ಹೋದರೆ ಸಾವಿರ ಜನ ಸೇರುತ್ತಾರೆ, ಸಾವಿರ ಜನರ ಹೆಸರು ಹೇಳುತ್ತೇನೆ ಎಂದು ಸಮರ್ಥಿಸಿಕೊಂಡರು.
7 ನೀವು 2014ರಲ್ಲಿ ಚಿತ್ರದುರ್ಗಕ್ಕೆ ಬಂದಾಗ ಇಲ್ಲಿಯ ಚಿತ್ರಣ ಗೊತ್ತಿರಲಿಲ್ಲ, ನಿಮಗೆ ಯಾರೂ ಪರಿಚಯ ಇರಲಿಲ್ಲ ಅಲ್ವೆ?
ನಾನು ಇಡೀ ಕ್ಷೇತ್ರದ ಜನರಿಗೆ ಗೊತ್ತಿತ್ತು. ನನ್ನ ಹೆಂಡ್ತಿ ಊರು ಹೊಳಲ್ಕೆರೆ, ನನ್ನ ಅತ್ತೆ, ಮಾವ ಇದೇ ಊರಿನವರು. ನಾನು ಪಕ್ಕೆ ಕ್ಷೇತ್ರದವನು, ನನಗೂ ಕಾರಜೋಳ ಅವರಿಗೂ ಹೊಲಿಕೆ ಮಾಡಬೇಡಿ ದಯವಿಟ್ಟು.
8 ಚಂದ್ರಪ್ಪನವರು ಮಾದಿಗ ಜಾತಿಗೆ ಸೇರಿಲ್ಲ, ಮಶಾಳರು ಎಂದು ಮಾದಿಗ ಹಟ್ಟಿಗಳಲ್ಲಿ ಜಾಗೃತಿ ಮೂಡಿಸಿದ್ದರು, ಅದು ನಿಮಗೆ ತೊಡಕಾಗುತ್ತಾ?
ಯಾರೋ ಹೊಟ್ಟೆ ಕಿಚ್ಚಿಗೆ ಮಾಡಿದ ಕೃತ್ಯ, ಅದೆಲ್ಲ ಟುಠ್ ಪಟಾಕಿ ಆಯ್ತು. ನಾನು ಹತ್ತು ವರ್ಷಗಳ ಕಾಲ ಜಾತಿ ಗೊಂದಲ ಕುರಿತು ಮೌನ ವಹಿಸಿದ್ದೆ. ಜಾತಿ ಮುಂದಿಟ್ಟುಕೊಂಡು ರಾಜಕಾರಣ ಮಾಡುವುದರಲ್ಲಿ ನನಗೆ ವಿಶ್ವಾಸವಿಲ್ಲ. ನಾನು ಬಸವಣ್ಣ, ಕುವೆಂಪು, ಕನಕದಾಸರ ಅನುಯಾಯಿ, ದಾರ್ಶನಿಕರ ಸಾಹಿತ್ಯ ಓದುಕೊಂಡು ಜೀವನ ಕಟ್ಟಿಕೊಂಡಿದ್ದೇನೆ. ಜಾತಿ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ. ನಾನು ಮಾದಿಗ ಜಾತಿಯಲ್ಲಿ ಹುಟ್ಟಿದ್ದೇನೆ, ಬೆಳೆಯುತ್ತಾ ಬೆಳೆಯುತ್ತಾ ಕುವೆಂಪು ಅವರ ಆದರ್ಶದಂತೆ ವಿಶ್ವ ಮಾನವನಾಗಿ ಬೆಳೆದಿದ್ದೇನೆ. ಅದಕ್ಕಾಗಿ ಯಾರು ಏನೇ ಕಿತಾಪತಿ ಮಾಡಿದರೂ ಹತ್ತು ವರ್ಷಗಳ ಕಾಲ ಜಾತಿ ವಿಚಾರವಾಗಿ ನಾನು ಮಾತನಾಡಲಿಲ್ಲ, ಮನುಷ್ಯ ಎಲ್ಲ ಕಳೆದುಕೊಂಡ ಮೇಲೆ ಜಾತಿ ಹೆಸರೇಳಿಕೊಂಡು ಬದುಕುತ್ತಾನೆ. ನನಗೆ ಆ ಸ್ಥಿತಿ ಬಂದಿಲ್ಲ, ನಾನು ಎಲ್ಲದನ್ನೂ ಕಳೆದುಕೊಂಡಿಲ್ಲ, ನನಗೆ ಎಲ್ಲ ರೀತಿಯ ಬದ್ಧತೆ ಇದೆ, ಜಾತಿ ಹೆಸರೇಳಿಕೊಂಡು ಬದುಕುವ ಅಗತ್ಯವಿಲ್ಲ. ಆದರೆ ಜಾತಿ ವಿಷಯ ವಿಕೋಪಕ್ಕೆ ಹೋದ ನಂತರೆ ನಮ್ಮ ಶಾಸಕರೇ ನನಗೆ ಸೂಚನೆ ನೀಡಿದಾಗ ತಕ್ಷಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ. ಆ ಕ್ಷಣ ಎಲ್ಲರೂ ತರತರ ನಡುಗಿ ಹೋಗಿ ಬಿಟ್ಟರು. ಸುಳ್ಳಿಗೆ ಬಹುಬೇಗ ಸಾವು ಬರುತ್ತೇ, ಜಾತಿ ವಿಚಾರದಲ್ಲಿ ನನಗೆ ಸ್ಪಷ್ಟತೆ ಇದೆ. ನಾನು ಪಕ್ಕಾ ಮಾದಿಗ ಜಾತಿಯಲ್ಲಿ ಹುಟ್ಟಿದ್ದೇನೆ, ಬೆಳೀತಾ ಬೆಳೀತಾ ವಿಶ್ವ ಮಾನುವ ಸಂದೇಶದ ಅನ್ವಯ ಶಾಂತಿ ತೋಟದಲ್ಲಿ ಬೆಳೆದಿದ್ದೇನೆ.
9 ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ನಿಮಗೆ ಲಾಭನೋ ನಷ್ಟನೋ?
ಜೆಡಿಎಸ್ ನವರಿಗೆ ಬದ್ಧತೆ, ಸಿದ್ಧಾಂತ ಇಲ್ಲ. ಕಳೆದ ಸಾರಿ ಇದೇ ಜೆಡಿಎಸ್ ನವರು ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಂಡಿದ್ದರು. ಜಾತ್ಯತೀತ ಜಾತ್ಯತೀತ ಜಾತ್ಯತೀತ ಎಂದು ಹೇಳಿ ಆ ಜ್ಯಾತ್ಯತೀತ ತೆಗೆದು ಹಾಕಿ ಇಂದು ಜಾತಿವಾದಿಗಳ ಜೊತೆ ಕೈ ಜೋಡಿಸಿದ್ದಾರೆ. ಅದು ಎಷ್ಟರ ಮಟ್ಟಿಗೆ ಸರಿ, ಆ ವಿಚಾರವಾಗಿ ಜನರು ಜೆಡಿಎಸ್ ನಲ್ಲಿರುವ ಜಾತ್ಯತೀತ ಮನೋಭಾವದವರು ಶೇ.50ರಷ್ಟು ಮಂದಿ ಪಕ್ಷ ತೊರೆದಿದ್ದಾರೆ. ಅಷ್ಟೇ ಅಲ್ಲ ಜೆಡಿಎಸ್ ನವರು ಸಮಯ ಸಾಧಕತನದ ರಾಜಕಾರಣ ಮಾಡುತ್ತಿದ್ದಾರೆ. ಜೆಡಿಎಸ್ ನವರು ಐದು ವರ್ಷಕ್ಕೊಂದು ಬಣ್ಣ ಬದಲಾಯಿಸುತ್ತಾರೆ. ಅವರಿಗೆ ಮೈತ್ರಿ ಅಗತ್ಯ ಇರಲಿಲ್ಲ, ಮೂರು ಎಂಪಿ ಕ್ಷೇತ್ರವನ್ನು ಯಾವುದೇ ಮೈತ್ರಿ ಇಲ್ಲದೆ ಗೆಲ್ಲುವ ಸಾಮರ್ಥ್ಯ ಜೆಡಿಎಸ್ ಇತ್ತು. ಆದರೆ ಜೆಡಿಎಸ್ ನಲ್ಲಿ ಈಗ ಮೊದಲಿನ ಶಕ್ತಿ ಉಳಿದಿಲ್ಲ. ಮುಸ್ಲಿಂರು, ಕ್ರೈಸ್ತರು, ಬುದ್ದಿ ಜೀವಿಗಳು, ಮನುವಾದಿ ವಿರೋಧಿಗಳು ಕಾಂಗ್ರೆಸ್ ಜೊತೆಗಿದ್ದಾರೆ. ಹಾಗಾಗಿ ಮೈತ್ರಿ ಅಥವಾ ಒಡಂಬಡಿಕೆಗೆ ಸೋಲು ಖಚಿತ.
10 ಕಾಂಗ್ರೆಸ್ ಅಥವಾ ಇಂಡಿಯಾ ಒಕ್ಕೂಟದ ಪ್ರಧಾನ ಮಂತ್ರಿ ಯಾರು, ಏಕೆ ಘೋಷಣೆ ಮಾಡಿಲ್ಲ, ಪ್ರಧಾನಮಂತ್ರಿ ಆಗುವ ಸಾಮರ್ಥ್ಯ ಒಕ್ಕೂಟದ ನಾಯಕರಿಗಿಲ್ಲವೇ?
ರಾಷ್ಟ್ರ ಮಟ್ಟದಲ್ಲಿ ಪ್ರಧಾನಮಂತ್ರಿ ಅಭ್ಯರ್ಥಿಯ ತೀರ್ಮಾನ ಮಾಡುತ್ತಾರೆ. ನನಗೆ ಪಿಎಂ ಅಭ್ಯರ್ಥಿ ತೀರ್ಮಾನ ಮಾಡುವ ಶಕ್ತಿ ಇಲ್ಲ. ನಾನೊಬ್ಬ ಲೋಕಸಭಾ ಸದಸ್ಯ ಅಭ್ಯರ್ಥಿ ಮಾತ್ರ, ನಾನು ದೊಡ್ಡ ದೊಡ್ಡ ವಿಚಾರ ಮಾತನಾಡುವುದಿಲ್ಲ, ದೇಶದಲ್ಲಿನ ದೊಡ್ಡವರು ತೀರ್ಮಾನ ಮಾಡುತ್ತಾರೆ.11 ಯಾವ ಸಾಧನೆ ಅಥವಾ ವಿಚಾರಗಳನ್ನ ಮುಂದಿಟ್ಟುಕೊಂಡು ಚುನಾವಣೆಗೆ ಹೋಗುತ್ತೀರಾ?
ಬಿಜೆಪಿ ಅಥವಾ ಜೆಡಿಎಸ್ ಪಕ್ಷಗಳಿಂದ ಯಾವ ಮನೆಗೆ ವೈಯಕ್ತಿಕವಾಗಿ ಆರ್ಥಿಕ ಸಹಾಯವಾಗಿದೆ.? ಎದುರಾಳಿ ಎರಡು ಪಕ್ಷಗಳಿಂದ ಒಂದೇ ಒಂದು ರೂಪಾಯಿ ಜನ ಸಾಮಾನ್ಯರಿಗೆ ಅನುಕೂಲವಾಗಿಲ್ಲ. ದೇಶದ ಜನ ಮೋದಿ ಮೋದಿ ಮೋದಿ ಎನ್ನುತ್ತಾರೆ, ಮೋದಿ ಅವರಿಂದ ಒಂದು ರೂಪಾಯಿ ಸಹಾಯ ಆಗಿಲ್ಲ. ಆದರೆ ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿ ಯೋಜನೆಗಳಾದ ಕರೆಂಟ್, ಬಸ್, ಪ್ರತಿ ತಿಂಗಳು 2 ಸಾವಿರ, ನಿರುದ್ಯೋಗಿಗಳಿಗೆ 3 ಸಾವಿರ ಹೀಗೆ ಪ್ರತಿ ಕುಟುಂಬಕ್ಕೆ 5 ರಿಂದ 6 ಸಾವಿರ ರೂಪಾಯಿ ಪ್ರತಿ ತಿಂಗಳು ಸಿಗಲಿದೆ. ಇದಲ್ಲದೆ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಮತ್ತೊಂದು ಗ್ಯಾರಂಟಿ ನೀಡಿದ್ದು ಆ ಗ್ಯಾರಂಟಿಯಿಂದ ಪ್ರತಿ ಕುಟುಂಬಕ್ಕೆ ಪ್ರತಿ ವರ್ಷಕ್ಕೆ ಒಂದು ಲಕ್ಷ ರೂಪಾಯಿ ಸಿಗಲಿದೆ. ಅಂದರೆ ಪ್ರತಿ ತಿಂಗಳು 8 ಸಾವಿರ ರೂ. ಸಗಲಿದೆ, ಕಾಂಗ್ರೆಸ್ ಸರ್ಕಾರದಿಂದ ಪ್ರತಿ ತಿಂಗಳು 14 ಸಾವಿರ ರೂ. ಪ್ರತಿ ಕುಟುಂಬಕ್ಕೆ ಸಿಗಲಿದೆ. ಬಿಜೆಪಿ ಅಥವಾ ಜೆಡಿಎಸ್ ಪಕ್ಷದಿಂದ ಈ ರೀತಿ ಆರ್ಥಿಕ ಸಹಾಯ ಸಿಗುತ್ತಾ? ಎಂದು ಪ್ರಶ್ನಿಸಿದ ಚಂದ್ರಪ್ಪ, ಈ ವಿಷಯಗಳನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗುತ್ತೇವೆ.
12 ಭದ್ರಾ ಯೋಜನೆ, ದಾವಣಗೆರೆ ಚಿತ್ರದುರ್ಗ ತುಮಕೂರು ನೇರ ರೈಲು, ಕೇಂದ್ರೀಯ ವಿದ್ಯಾಲಯ ಹೀಗೆ ಎಲ್ಲವೂ ನೆನೆಗುದಿಗೆ ಬಿದ್ದಿವೆ, ಅಭಿವೃದ್ಧಿ ವಿಚಾರ ಏಕೆ ಚರ್ಚಿಸುತ್ತಿಲ್ಲ? ಸಂಸದನಾಗಿ ನಾನು ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದೇನೆ. ನಮ್ಮ ಎದುರಾಳಿಗಳು ಮಾಡಿದ್ದರೆ ತೋರಿಸಲಿ, ಸದಾ ಜನರ ಕೈಗೆ ಸಿಗಬೇಕು, ಎದುರಾಳಿ ಪಕ್ಷದವರು ಜನರ ಕೈಗೆ ಸಿಕ್ಕಿಲ್ಲ, ನಾನು ಸದಾ ಜನರ ಮಧ್ಯ ಇದ್ದೇನೆ. ಒಂದೇ ಒಂದು ಸಾಧನೆಯ ಸಾಕ್ಷಿ ಗುಡ್ಡೆಗಳಿಲ್ಲ. ಆದರೆ ನಾನು ನೂರಾರು ಅಭಿವೃದ್ಧಿ ಸಾಕ್ಷಿ ಗುಡ್ಡೆಗಳನ್ನ ನೀಡಬಲ್ಲೆ.13 ಕೇಂದ್ರ ಸರ್ಕಾರ ಭದ್ರಾ ಯೋಜನೆಯ 5300 ಕೋಟಿ ರೂ.ಬಿಡುಗಡೆಗೆ ಸಿದ್ಧ ಇದ್ದರೂ ರಾಜ್ಯ ಸರ್ಕಾರ ಪ್ರತ್ಯೇಕ ಖಾತೆ ಏಕೆ ತೆರೆಯುತ್ತಿಲ್ಲ? ಕೇಂದ್ರ ಸರ್ಕಾರ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬರೀ ಸುಳ್ಳು ಹೇಳುತ್ತಾರೆ, ಅರ್ಥವಿಲ್ಲದ ಹೇಳಿಕೆ ನೀಡುತ್ತಾರೆ. ಏಕೆ ಕೇಂದ್ರ ಸರ್ಕಾರದವರೇ ಪ್ರತ್ಯೇಕ ಖಾತೆ ತೆರೆದು ಹಣ ಬಿಡುಗಡೆ ಮಾಡಬಹುದಿತ್ತಲ್ಲವೇ?, ಕುಣಿಲಾರದವಳಿಗೆ ನೆಲ ಡೊಂಕು ಎನ್ನುವ ಹಾಗೆ ಕೇಂದ್ರ ಸರ್ಕಾರ, ಕೇಂದ್ರ ಸಚಿವರು ಹಣ ಬಿಡುಗಡೆ ಮಾಡದೆ ಕ್ಷಣಕ್ಕೊಂದು ಸುಳ್ಳು ಹೇಳುತ್ತಿದ್ದಾರೆ. 5300 ಕೋಟಿ ರೂ.ಬಳಸಿಕೊಳ್ಳಲು ನಾವು ತುದಿಗಾಲ ಮೇಲೆ ನಿಂತಿದ್ದೇವೆ. ಕೇಂದ್ರ ಸರ್ಕಾರ ಹೇಳುವ ಮಾತಲ್ಲ ಇದು.14 ಸಂಸದರಾಗಿ ಗೆದ್ದರೆ ನಿಮ್ಮ ಅಭಿವೃದ್ಧಿಯ ಕಾರ್ಯ ಯೋಜನೆ ಏನು?
ನನಗೆ ನಾನೇ ಗ್ಯಾರಂಟಿ ಕಾರ್ಡ್, ಗೆದ್ದು ಸೋತು ಸಂತೆ ಮಾಡಿಕೊಂಡು ಹೋಗುವವರ ಸಾಲಿಗೆ ನಾನು ನಿಲ್ಲುವುದಿಲ್ಲ. ನಾನು ಕೇಂದ್ರ ಸರ್ಕಾರದ ಮಂತ್ರಿಯಲ್ಲ. ರಾಜ್ಯ ಸರ್ಕಾರದ ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಅಲ್ಲ. ನನ್ನ ಇತಿಮಿತಿಯಲ್ಲಿ ನಾನು ಹಿಂದುಳಿದ ಜಿಲ್ಲೆಯ ಅಭಿವೃದ್ಧಿ ಮಾಡುತ್ತೇನೆ. ಒಬ್ಬ ಸಂಸದನಾಗಿ ಏನು ಮಾಡಬೇಕೋ ಅದನ್ನ ಮಾಡಿದ್ದೇನೆ. ಇನ್ನೂ ಹೆಚ್ಚಿನ ಕೆಲಸ ಮಾಡಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ. ಸುಳ್ಳು ಸುಳ್ಳು ಭರವಸೆ, ಆಶ್ವಾಸನೆ ನೀಡುವುದಿಲ್ಲ. ಸುಳ್ಳು ಭರವಸೆ ನೀಡಿ ಬೆನ್ನು ತೋರಿಸಿ ಓಡಿ ಹೋಗುವವನು ನಾನಲ್ಲ.
15 ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಯಾವ ಪಕ್ಷದ ಪರವಾಗಿ ಅಲೆ ಇದೆ?
ಅನುಮಾನವೇ ಬೇಡ, ಕಾಂಗ್ರೆಸ್ ಪಕ್ಷದ ಪರವಾಗಿ ಅಲೆ ಇದೆ. ಇಲ್ಲಿ ಕಾಂಗ್ರೆಸ್ ನೂರಷ್ಟು ಗೆಲ್ಲುವುದು ಗ್ಯಾರಂಟಿ. ಜನರು 5 ಗ್ಯಾರಂಟಿಗಳ ಪರವಾಗಿ ಮತ ನೀಡಲಿದ್ದಾರೆ. ಕೇಂದ್ರದ ಮತ್ತೊಂದು ಗ್ಯಾರಂಟಿಯನ್ನು ಜನ ಆಸೆಗಣ್ಣಿನಿಂದ ನೋಡುತ್ತಿದ್ದು ಕಾಂಗ್ರೆಸ್ ಗೆಲುವು ನಿಶ್ಚಿತ.
ದೇವರು, ದೇವಸ್ಥಾನ ಎಂದು ಬಿಜೆಪಿ ಅವರು ಹೇಳುತ್ತರಲ್ಲ ಅವರೇಕೆ ರಾಷ್ಟ್ರಪತಿ ಅವರನ್ನ ಶ್ರೀರಾಮ ದೇಗುಲ ಉದ್ಘಾಟನೆಗೆ ಕರೆಯಲಿಲ್ಲ, ಅವರೇಕೆ ನೂತನ ಸಂಸತ್ ಭವನ ಉದ್ಘಾಟನೆ ರಾಷ್ಟ್ರಪತಿಗಳನ್ನ ಆಹ್ವಾನ ಮಾಡಲಿಲ್ಲ, ಇದೊಂದಕ್ಕೆ ಕೇಂದ್ರ ಸರ್ಕಾರ ಉತ್ತರ ನೀಡಲಿ, ದೇಶದ ಪ್ರಥಮ ಪ್ರಜೆ, ಓರ್ವ ಬುಡಕಟ್ಟು ಮಹಿಳೆಗೆ ಮಾಡಿದ ಅವಮಾನವಲ್ಲವೇ, ಬರೀ ಬೂಟಾಟಿಕೆ ಮಾಡುತ್ತಿರುವ ಮೋದಿ ಮತ್ತು ಕೇಂದ್ರ ಸರ್ಕಾರದ ಚಿಂತನೆಗಳು ಜನರಿಗೆ ಸಂಪೂರ್ಣ ಅರ್ಥವಾಗಿದೆ. ಹಾಗಾಗಿ ದೇಶದಲ್ಲಿ ಕಾಂಗ್ರೆಸ್ ಒಕ್ಕೂಟ ಅಧಿಕಾರಕ್ಕೆ ಬರಲಿದೆ. ಹಿಂದೆ ಮೋದಿ ಟ್ರಂಡ್ ಇತ್ತು ಈಗ ಆ ಟ್ರಂಡ್ ಇಲ್ಲ.
16 ನಿಗಮ ಮಂಡಳಿ ಅಧ್ಯಕ್ಷ ನೇಮಕ ಸೇರಿದಂತೆ ರಾಜಕೀಯ ಮತ್ತು ಅಧಿಕಾರದ ಸ್ಥಾನ ಮಾನ ನೀಡುವಲ್ಲಿ ಕಾಡುಗೊಲ್ಲ, ಕುಂಚಿಟಿಗ, ವೀರಶೈವ, ಲಂಬಾಣಿ, ದೇವಾಂಗ, ಉಪ್ಪಾರ ಜಾತಿ ಸೇರಿದಂತೆ ಇತರೆ ಜಾತಿಗಳಿಗೆ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡಿಲ್ಲವೇ?
ಖಂಡಿತಾ ಕಾಡುಗೊಲ್ಲ, ಕುಂಚಿಟಿಗ, ವೀರಶೈವ ಸೇರಿದಂತೆ ಇತರೆ ಜಾತಿಗಳಿಗೆ ನಿಗಮ ಮಂಡಳಿಗೆ ನೇಮಕ ಮಾಡುವಾಗ ಅನ್ಯಾಯ ಆಗಿದೆ. ಚುನಾವಣೆ ಮುಗಿದ ನಂತರ ಈ ಜಾತಿಗಳಿಗೆ ಖಂಡಿತಾ ಅಧಿಕಾರ ಸಿಗುವಂತೆ ನಾನು ಮಾಡುತ್ತೇನೆ. ಈ ಹಿಂದೆಯೇ ಕೆಪಿಸಿಸಿ ಅಧ್ಯಕ್ಷರಲ್ಲಿ ನಾನು ಕಠಿಣವಾಗಿ ಪ್ರಶ್ನೆ ಮಾಡಿ ಜಗಳ ಮಾಡಿದ್ದೇನೆ. ಒಂದೇ ಜಾತಿಗೆ 2-3 ಅಧಿಕಾರ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದೆ. ಆಗ ಅಧ್ಯಕ್ಷರು ನಿಮ್ಮ ಜಾತಿ ವಿರುದ್ಧ ಮಾತನಾಡುತ್ತೀಯಾ ಎಂದರು. ಆಗ ನಮ್ಮ ಜಾತಿಗೆ ಎಷ್ಟಾದರೂ ಕೊಡಿ ನಾನು ವಿರೋಧ ಮಾಡಲ್ಲ, ಆದರೆ ಹೆಚ್ಚಿನ ಸಂಖ್ಯೆಯಲ್ಲಿರುವ ಗೊಲ್ಲರು, ವೀರಶೈವರು, ಕುಂಚಿಟಿಗ ಒಕ್ಕಲಿಗರಿಗೆ ನಾನು ಏನು ಉತ್ತರ ಹೇಳಿಲಿ ಎಂದು ಕೆಪಿಸಿಸಿ ಅಧ್ಯಕ್ಷರಲ್ಲಿ ಗಲಾಟೆ ಮಾಡಿದ್ದೇನೆ. ಮುಂದೆ ಈ ಜಾತಿಗಳಿಗೆ ಅನ್ಯಾಯ ಆಗಲು ಬಿಡುವುದಿಲ್ಲ.
17 ಮೊಳಕಾಲ್ಮರು ಶಾಸಕ ಎನ್.ವೈ.ಗೋಪಾಲಕೃಷ್ಣ ಅವರಿಗೆ ಟಿಕೆಟ್ ತಪ್ಪಿಸಿದರು?, ಪಾವಗಡ ಕ್ಷೇತ್ರಕ್ಕೆ ಚಂದ್ರಪ್ಪ ಟಿಕೆಟ್ ಕೇಳಿದರೆಂದು ವೆಂಕಟರಮಣಪ್ಪ ವಿರೋಧಿಸುತ್ತಾರೆ?, ಹಿರಿಯೂರು ಕ್ಷೇತ್ರದಲ್ಲಿ ಸೋಮಶೇಖರ್ ತರಲು ಪ್ರಯತ್ನಿಸಿದರು ಚಂದ್ರಪ್ಪ ಎಂದು ಸುದಾಕರ್ ವಿರೋಧಿಸುತ್ತಾರೆ?, ಶಿರಾ ಕ್ಷೇತ್ರಕ್ಕೆ ಸಾಸಲು ಸತೀಶ್ ಅವರಿಗೆ ಟಿಕೆಟ್ ಕೊಡಿಸಲು ಪ್ರಯತ್ನಿಸಿದರು ಎಂದು ಶಾಸಕ ಜಯಚಂದ್ರ ವಿರೋಧ ಮಾಡುತ್ತಾರೆ ಎನ್ನುವ ಮಾತುಗಳು ಹರಿದಾಡುತ್ತಿವೆ, ನೀವೇನು ಹೇಳುತ್ತೀರಿ?
ಅದು ಎಲ್ಲ ಬರೀ ಊಹಾಪೋಹ. ಇಂತಹ ಸುಳ್ಳು ಕಪೋಲಕಲ್ಪಿತ ಸುದ್ದಿಗಳಿಗೆ ರೆಕ್ಕೆ ಪುಕ್ಕ ಇರುವುದಿಲ್ಲ. ಇದೆಲ್ಲ ಕಾಂಗ್ರೆಸ್ ಪಕ್ಷದವರ ಮಾತುಗಳಲ್ಲ, ಬೇರೆಯವರು, ಬೇರೆ ಪಕ್ಷದವರ ಕುತಂತ್ರದೊಂದಿಗೆ ಕಿತಾಪತಿ ಮಾಡಿ ಹುಟ್ಟು ಹಾಕಿದ್ದಾರೆ.
ಮೊಳಕಾಲ್ಮೂರಿನ ಗೋಪಾಲಕೃಷ್ಣ ಅವರಿಗೆ ಚಂದ್ರಪ್ಪ ಏನೆಂದು ಗೊತ್ತು. ಒಮ್ಮೆ ಬಳ್ಳಾರಿ ಕ್ಷೇತ್ರಕ್ಕೆ ಮತ್ತೊಂದು ಸಲ ಮೊಳಕಾಲ್ಮೂರಿಗೆ ಟಿಕೆಟ್ ಕೇಳಿದರು. ಆಗ ವರಿಷ್ಠರು ಬಳ್ಳಾರಿಗೆ ಕಳುಹಿಸಲು ಚಿಂತನೆ ಮಾಡಿದರು. ಆಗ ನಾನು ಯೋಗೇಶ್ ಬಾಬು ಅವರ ಹೆಸರನ್ನ ಬರೆದುಕೊಟ್ಟೆ. ಅಲ್ಲಿಯ ತನಕ ಗೋಪಾಲಕೃಷ್ಣ ಅವರ ಪರವಾಗಿಯೇ ಇದ್ದೆ. ಈ ಸಲ ನಾನು ಅವರನ್ನ ಕರೆದುಕೊಂಡು ಬಂದು ಗೆಲ್ಲಿಸಿದ್ದೇವೆ. ಇದು ಅನ್ಯ ಪಕ್ಷದವರ ಕಿತಾಪತಿ. ನನ್ನ ಪರವಾಗಿ ಗೋಪಾಲಕೃಷ್ಣ ರಾತ್ರಿ ಹಗಲು ಕೆಲಸ ಮಾಡುತ್ತಿದ್ದಾರೆ.
ಪಾವಗಡ ವೆಂಕಟರಮಣಪ್ಪನವರ ವಿಚಾರದಲ್ಲೂ ಅಷ್ಟೇ, ನೆನ್ನೆ ನಾನು ಪಾವಗಡ ಪ್ರವಾಸ ಹೋಗಿದ್ದ ಸಂದರ್ಭದಲ್ಲಿ ಅಪ್ಪ-ಮಗ ಇಬ್ಬರು ಸುಡು ಬಿಸಿಲಲ್ಲ ರಾತ್ರಿ ತನಕ ಕೆಲಸ ಮಾಡಿದ್ದಾರೆ. ಭೋವಿ ಸಮಾಜಕ್ಕೆ ಒಂದೂ ಟಿಕೆಟ್ ಕೊಟ್ಟಿಲ್ಲ ಎನ್ನುವ ಅಸಮಾಧಾನ ಅವರಲ್ಲಿದೆ. ಆದನ್ನ ನನ್ನ ಮೇಲೆ ಹಾಕಿ ಕೆಲವರು ರುಬ್ಬುತ್ತಿದ್ದಾರೆ. ಅದೂ ಸುಳ್ಳು ಅವರಿಗೆ ನನ್ನ ಮೇಲೆ ಯಾವುದೇ ಅಸಮಾಧಾನ ಇಲ್ಲ.
ಇನ್ನೂ ಶಿರಾ ಕ್ಷೇತ್ರದ ಶಾಸಕರಾದ ಟಿ.ಬಿ.ಜಯಚಂದ್ರ ಅವರ ಮತ್ತು ನನ್ನ ಸ್ನೇಹ ವಿಶ್ವಾಸ ಬಹಳ ಚೆನ್ನಾಗಿದೆ. ಜಯಚಂದ್ರ ಅವರನ್ನ ಮಂತ್ರಿ ಮಾಡುವಂತೆ ನಾನು ಹೋರಾಟ ಮಾಡಿದ್ದೇನೆ. ಜಯಚಂದ್ರ ಅವರಿಗೆ ಟಿಕೆಟ್ ಇಲ್ಲ ಅಂದಾಗ ಮಾತ್ರ ಸಾಸಲು ಸತೀಶ್ ಅವರಿಗೆ ಟಿಕೆಟ್ ಕೊಡಿ ಹೇಳುತ್ತೇನೆ. ಗೋಪಾಲಕೃಷ್ಣ ಅವರಿಗೆ ಟಿಕೆಟ್ ಇಲ್ಲ ಅಂದಾಗ ಮಾತ್ರ ಯೋಗೇಶ ಬಾಬು ಹೆಸರೇಳುತ್ತೇನೆ. ನಾನು ಎಂದೂ ತಾಯಿಗಂಡ ಕೆಲಸ ಮಾಡುವವನಲ್ಲ. ಈ ಎಲ್ಲ ವಿಚಾರ ನನ್ನಪಕ್ಷಕ್ಕೆ ಗೊತ್ತಿದ್ದರಿಂದ ನನಗೆ ಅವಿರೋಧವಾಗಿ ಟಿಕೆಟ್ ನೀಡಿದರು. ಅದೆಲ್ಲ ಊಹಾಪೋಹ, ಅದರಲ್ಲಿ ಉರುಳಿಲ್ಲ.
ಸುಧಾಕರ್ ವಿರುದ್ಧ ಸೋಮಶೇಖರ್ ಬಂದಿದ್ದು ನನಗೆ ಸಂಬಂಧನೆ ಇಲ್ಲ, ಇದೆಲ್ಲ ಹೊಸ ಹೊಸ ಸೃಷ್ಠಿ, ಟಿಕೆಟ್ ಕೇಳೋರು ಕೇಳ್ತಾರೆ, ಮಾಡೋರು ಮಾಡ್ತಾರೆ. ಚಂದ್ರಪ್ಪ ಅಭ್ಯರ್ಥಿ ಅಲ್ಲ, ಸುಧಾಕರ್ರೇ ಅಭ್ಯರ್ಥಿ ಎಂದು ಪ್ರಚಾರ ಮಾಡುತ್ತಿದ್ದಾರೆ. ರಾತ್ರಿ ಹಗಲು ಎನ್ನದೆ ಕೆಲಸ ಮಾಡುತ್ತಿದ್ದಾರೆ. ಸುಧಾಕರ್ ಮುಖ ಎಲ್ಲ ಕಪ್ಪಾಗಿದೆ. 18 ಸವಿತಾ ರಘು, ಟಿಕೆಟ್ ಆಕಾಂಕ್ಷಿ ಜೆಜೆ ಹಟ್ಟಿ ಡಾ.ತಿಪ್ಪೇಸ್ವಾಮಿ ಅವರು ಇಂದಿಗೂ ಏಕೆ ಪ್ರಚಾರ ಬಂದಿಲ್ಲ.?
ಮಾಜಿ ಶಾಸಕ ಎ.ವಿ.ಉಮಾಪತಿ ಸೇರಿದಂತೆ ಮತ್ತಿತರರು ಸವಿತಾ ರಘು ಅವರನ್ನ ಸರಿ ಮಾಡಿದ್ದಾರೆ. ಅವರು ಅದ್ಧೂರಿಯಾಗಿ ಕೆಲಸ ಮಾಡುತ್ತಿದ್ದಾರೆ. ಚಂದ್ರಪ್ಪ ಗೆಲ್ಲಲಿ ಎಂದು 101 ತೆಂಗಿನ ಕಾಯಿ ಹೊಡೆದಿದ್ದಾರೆ. ಬೈಕ್ ರ್ಯಾಲಿ ಮಾಡಿದ್ದಾರೆ. ಎಲ್ಲವೂ ಸರಿ ಹೋಗಿದೆ. ಕೆಲವರು ಆಂಜನೇಯ ಸಾಬೇಬರೊಂದಿಗೆ ಮುನಿಸಿಕೊಂಡಿದ್ರು, ಈಗ ಎಲ್ಲ ಸರಿ ಹೋಗಿದ್ದು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಅತಿ ಹೆಚ್ಚು ಲೀಡ್ ಕೊಡಿಸಲಿದ್ದಾರೆ.
ಇನ್ನೂ ಜೆಜೆ ಹಟ್ಟಿ ತಿಪ್ಪೇಸ್ವಾಮಿ ವಿಷಯಕ್ಕೆ ಸಂಬಂಧಿಸಿದಂತೆ ಪಕ್ಕದಲ್ಲಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ ಪೀರ್ ಅದೂ ಸರಿ ಹೋಗಿದ್ದು ಅವರು ಪ್ರಚಾರ ಕಾರ್ಯಕ್ಕೆ ಬರಲಿದ್ದಾರೆ ಎಂದು ಸ್ಪಷ್ಟ ಪಡಿಸಿದರು.