i
4.20 ಲಕ್ಷ ಮೌಲ್ಯದ ಮೊಬೈಲ್ ಗಳೊಂದಿಗೆ ಕಳ್ಳರ ಬಂಧನ…
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಮಿಂಚಿನ ಕಾರ್ಯಾಚರಣೆ ಮಾಡಿ ಮೊಬೈಲ್ ಗಳನ್ನ ಕದ್ದ ಆರೋಪಿಗಳಾದ ಆಕಾಶ್, ಪ್ರವೀಣ್, ಹನುಮಂತರನ್ನು ದಸ್ತಗಿರಿ ಮಾಡಿಕೊಂಡು ಆರೋಪಿಗಳನ್ನು ಹೆಚ್ಚಿನ ವಿಚಾರಣೆ ಒಳಪಡಿಸಿ ಅವರ ಕಡೆಯಿಂದ 4.20.000/- ರೂ ಬೆಲೆ ಬಾಳುವ ವಿವಿಧ ಕಂಪನಿಯ 20 ಅಂಡ್ರೈಡ್ ಮೊಬೈಲ್ ಫೋನ್ ಗಳನ್ನು ಹಾಗೂ ಒಂದು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಸಾದೀಕ್ ಪಾಷ ತಿಳಿಸಿದರು.
ಈ ಕುರಿತು ಮಾಹಿತಿ ನೀಡಿದ ಅವರು ದಿನಾಂಕ ಏಪ್ರಿಲ್ 14ರಂದು ರಾತ್ರಿ 11.30 ಗಂಟೆ ಸಮಯದಲ್ಲಿ ಆಲೂರು-ದುದ್ದನಹಳ್ಳಿ ಗ್ರಾಮದ ನಿವಾಸಿ ಅಮರ್ ಹಾಗೂ ಅವರ ಸ್ನೇಹಿತ ಕೋಡಿಹಳ್ಳಿ ನಿವಾಸಿ ಅನಿಲ್ ಕುಮಾರ್ ರವರು ತಮ್ಮ ದ್ವಿಚಕ್ರ ವಾಹನದಲ್ಲಿ ಸೊಣ್ಣಪ್ಪನಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಕೋಳಿಫಾರಂ ಬಳಿ 3 ಜನ ಅಪರಿಚಿತರು ಅಮರ್ ಹಾಗೂ ಅನಿಲ್ ಕುಮಾರ ರವರು ಬರುತ್ತಿದ್ದ ದ್ವಿಚಕ್ರ ವಾಹನವನ್ನು ನಿಲ್ಲಿಸಿ ತಮ್ಮ ಬಳಿ ಇದ್ದ ಮಾರಕಾಸ್ತ್ರ( ಲಾಂಗ್ ) ತೋರಿಸಿ ಹೆದರಿಸಿದ್ದು ಅಮರ್ ಹಾಗೂ ಅನಿಲ್ ಕುಮಾರ್ ರವರು ತಮ್ಮ ಬಳಿ ಇದ್ದ ಮೋಬೈಲ್ ಮತ್ತು ಹಣವನ್ನು ಆಸಾಮಿಗಳಿಗೆ ನೀಡಲು ಹೋದಾಗ ಅಕ್ಕಪಕ್ಕ ಗ್ರಾಮದ ಸಾರ್ವಜನಿಕರು ಬಂದು ಆಸಾಮಿಗಳನ್ನು ಹಿಡಿದುಕೊಂಡು ಬಂದು ಠಾಣೆಗೆ ಒಪ್ಪಿಸಿದ್ದರು. ಈ ಬಗ್ಗೆ ಅಮರ್ ದೂರು ನೀಡಿದ್ದು ಅದರಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊ.ಸಂ. 126/2024 ಕಲಂ 384 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೇವೆ ಎಂದರು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ಅಧೀಕ್ಷಕರ ಮಲ್ಲಿಕಾರ್ಜುನ ಬಾಲದಂಡಿ ಮತ್ತು ಅಪರ ಪೊಲೀಸ್ ಅಧೀಕ್ಷಕ ನಾಗೇಶ್ ಕುಮಾರ್, 2 ನೇ ಅಪರ ಪೊಲೀಸ್ ಅಧೀಕ್ಷಕರಾದ ಕೆ.ಎಸ್. ನಾಗರಾಜ ಹಾಗೂ ದೊಡ್ಡಬಳ್ಳಾಪುರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ರವಿ ಪಿ. ರವರ ಮಾರ್ಗದರ್ಶನದಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಸಾದೀಕ್ ಪಾಷ ರವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸುವ ಮೂಲಕ ಈ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ್ದಾರೆ.
ವಿಶೇಷ ತಂಡ ರಚನೆ-ವಿಶೇಷ ತಂಡದ ಅಧಿಕಾರಿ ಸಾದೀಕ್ ಪಾಷ, ಪೊಲೀಸ್ ಸಬ್ ಇನ್ಸ್ಪೆಕ್ಟರ್ ರವಿ ಟಿ.ಎನ್. ಹಾಗೂ ಸಿಬ್ಬಂದಿಯವರಾದ ಅರ್ಜುನ್ ಲಮಾಣಿ, ಪ್ರವೀಣ್, ಸಚಿನ್ ಉಪ್ಪಾರ್ ಇವರುಗಳ ತಂಡ ರಚಿಸಲಾಗಿತ್ತು. ಆಕಾಶ ಬಿನ್ ಸಿದ್ದಪ್ಪ (19), ಪ್ರವೀಣ ಬಿನ್ ಅಂಜೀನಪ್ಪ(18), ಹನುಮಂತ ಎಸ್.ಡಿ ಬಿನ್ ಶರಣಪ್ಪ(22) ಬಂಧಿತ ಆರೋಪಿಗಳಾಗಿದ್ದಾರೆ.