i
ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ಮೂರು ಪಕ್ಷಗಳನ್ನು ಸೋಲಿಸಿ ಎಸ್ಯುಸಿಐ ಗೆಲ್ಲಿಸಬೇಕು-ಡಿ.ಸುಜಾತ…
ಚಂದ್ರವಳ್ಳಿ ಸಂದರ್ಶನ
ಹೆಚ್.ಸಿ.ಗಿರೀಶ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ಮೂರು ಪಕ್ಷಗಳು ಒಂದೇ ನಾಣ್ಯದ ಮೂರು ಮುಖಗಳಿದ್ದಂತೆ ಈ ಮೂರು ಪಕ್ಷಗಳು ಸೇರಿದಂತೆ ಎನ್ ಡಿಎ, ಇಂಡಿಯಾ ಒಕ್ಕೂಟದ ಎಲ್ಲ ಪಕ್ಷಗಳನ್ನು ಸೋಲಿಸಿ ಜನಪರ, ಜನಮುಖಿಯಾದ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಸಿ) (ಎಸ್ಯುಸಿಐ) ಅಭ್ಯರ್ಥಿಗಳನ್ನ ಗೆಲ್ಲಿಸಬೇಕು ಎನ್ನುವುದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಸಿ) ಪಕ್ಷದ ಅಭ್ಯರ್ಥಿ ಡಿ.ಸುಜಾತ ಅವರ ಅಭಿಪ್ರಾಯವಾಗಿದೆ.
ಚಿತ್ರದುರ್ಗ ಲೋಕಸಭಾ ಕ್ಷೇತ್ರ(ಎಸ್ಸಿ ಮೀಸಲು)ದ ಎಲ್ಲ ಕಡೆ ಪ್ರಚಾರ ಕಾರ್ಯ ಕೈಗೊಂಡಿರುವೆ. ಪ್ರಚಾರಕ್ಕೆ ಹೋದ ಕಡೆಗಳೆಲ್ಲ ಮತದಾರರು ಅತ್ಯುತ್ಸಾಹದಿಂದ ಸ್ಪಂದಿಸಿ ಮತ ನೀಡುವುದಾಗಿ ಭರವಸೆ ನೀಡಿದ್ದಾರೆ. ನಾನು ಗೆಲ್ಲುತ್ತೇನೋ ಸೋಲುತ್ತೇನೋ ಬೇರೆ ವಿಷಯ, ಆದರೆ ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ಸೇರಿದಂತೆ ಬಹುತೇಕ ಪಕ್ಷಗಳ ಅಭ್ಯರ್ಥಿಗಳು ಬಂಡವಾಳಶಾಯಿ ಪರವಾಗಿ ಕೆಲಸ ಮಾಡುತ್ತಿವೆ. ಜನ ಸಾಮಾನ್ಯರಿಗೆ ಮೂಲಭೂತ ಸೌಲಭ್ಯಗಳನ್ನು ಕೊಡಲು ಈ ಎಲ್ಲ ಪಕ್ಷಗಳು ವಿಫಲವಾಗಿವೆ. ಜನ ಸಾಮಾನ್ಯರ ಕಷ್ಟ-ಸುಃಖಗಳಿಗೆ ಬೇಕು ಬೇಡಗಳಿಗೆ ದ್ವನಿ ಎತ್ತಿ ಕೆಲಸ ಮಾಡುತ್ತಿಲ್ಲ. ಆದರೆ
ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಸಿ) ಪಕ್ಷವು ದುಡಿಯುವ ವರ್ಗಗಳ ಪರವಾಗಿ, ರೈತರ ಪರವಾಗಿ, ಶೋಷಿತ ಮಹಿಳೆಯರ ಪರವಾಗಿ, ಕಾರ್ಮಿಕರ ಪರವಾಗಿ ಬೀದಿಗಿಳಿದು ಹೋರಾಟ ಮಾಡಿದೆ. ಮುಂದೆಯು ಹೋರಾಟ ಮಾಡಲಿದೆ. ಹಾಗಾಗಿ ಕರ್ನಾಟಕ ರಾಜ್ಯದಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರ ಸೇರಿ 19 ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಇಡೀ ದೇಶಾದ್ಯಂತ 151 ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನನಗೆ ಸೋಲು-ಗೆಲುವು ಮುಖ್ಯವಲ್ಲ, ಆದರೆ ಜನ ಸಾಮಾನ್ಯರ ಪರವಾಗಿ ದ್ವನಿ ಎತ್ತುವಂತ ಅಭ್ಯರ್ಥಿಗಳು ಗೆಲ್ಲಬೇಕಿದೆ ಎಂದು ಅಭ್ಯರ್ಥಿ ಡಿ.ಸುಜಾತ ಅವರು ತಮ್ಮ ಅಭಿಪ್ರಾಯಗಳನ್ನು ಚಂದ್ರವಳ್ಳಿ ಪತ್ರಿಕೆಯೊಂದಿಗೆ ಹಂಚಿಕೊಂಡರು.
1 ಇಂಡಿಯಾ ಒಕ್ಕೂಟ ಅಥವಾ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗ್ಯಾರಂಟಿಗಳ ನಂಬಿಕೊಂಡು ಗೆಲ್ಲುವ ವಿಶ್ವಾಸ ಹೊಂದಿದ್ದು ಗ್ಯಾರಂಟಿ ಯೋಜನೆಗಳ ಫಲಾನುಭವಿಯಾದ ಹಾಗೂ ಅಭ್ಯರ್ಥಿಯಾದ ನಿಮ್ಮ ಅಭಿಪ್ರಾಯ ಏನು?
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ನೀಡಿ ಭರವಸೆಗಳು ಅಥವಾ ಗ್ಯಾರಂಟಿಗಳನ್ನು ನಂಬಿ ಜನರು ಮತ ನೀಡಿ ಗೆಲ್ಲಿಸಿದ್ದಾರೆ. ಆದರೆ ಈ ಗ್ಯಾರಂಟಿಗಳೇ ಜನರ ದುಃಖ ಮತ್ತು ನೋವುಗಳಿಗೆ ಶಾಶ್ವತ ಪರಿಹಾರವಲ್ಲ,
2 ಶ್ವಾಶತ ಪರಿಹಾರ ಎಂದರೆ ಹೇಗೆ?
ನನ್ನ ಅಭಿಪ್ರಾಯದಲ್ಲಿ ಕೇವಲ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ರೂ. ನೀಡಿದರೆ ಸಾಲದು, ಪುರುಷರಿಗೂ ಅಂತಹ ಸೌಲಭ್ಯ ನೀಡಬೇಕು. ಈ ರೀತಿಯ ಗ್ಯಾರಂಟಿಗಳ ಜೊತೆಯಲ್ಲಿ ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಸಿಗಬೇಕು, ನಿರುದ್ಯೋಗಿಗಳಿಗೆ ಉದ್ಯೋಗ ಸಿಗಬೇಕು. ಕೂಲಿ ಕಾರ್ಮಿಕರಿಗೆ ಕನಿಷ್ಠ ವೇತನ ದೊರೆಯಬೇಕು. ಹೆಚ್ಚೆಚ್ಚು ಕೈಗಾರಿಕೆಗಳು ಬರಬೇಕು. ಬಂಡವಾಳಶಾಯಿಗಳನ್ನು ನಿಯಂತ್ರಣ ಮಾಡಬೇಕು. ಆಗ ಸಂಪತ್ತು ಸಮಾನವಾಗಿ ಹಂಚಿಕೆ ಆಗಿ ಜನ ಸಾಮಾನ್ಯರಿಗೆ ಅನುಕೂಲವಾಗಲಿದೆ. ಆ ಕೆಲಸವನ್ನ ಎಸ್ಯುಸಿಐ(ಸಿ) ಪಕ್ಷವು ಮಾಡಲಿದೆ. ಆ ಪಕ್ಷದ ಅಭ್ಯರ್ಥಿಯಾದ ನನ್ನನ್ನು(ಸುಜಾತ.ಡಿ) ಮತದಾರರು ಗೆಲ್ಲಿಸಬೇಕು.
3 ಜನ ಸಾಮಾನ್ಯರ ಪರವಾಗಿರುವ ಪಕ್ಷ ಗುರುತಿಸುವಲ್ಲಿ ಜನರು ವಿಫಲರಾಗಿದ್ದಾರೇ?
ಕಾಂಗ್ರೆಸ್-ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಈ ಪಕ್ಷಗಳು ಕೂಡ ಬಂಡವಾಳಶಾಯಿಗಳ ಕೈಗೊಂಬೆಯಾಗಿವೆ. ಮುಖವಾಡ ಧರಿಸಿರುವಂತ ಇಂತಹ ಪಕ್ಷಗಳ ಷಡ್ಯಂತ್ರಗಳ ಸತ್ಯವನ್ನು ಮತದಾರರು ಅರಿಯಲು ವಿಫಲರಾಗಿದ್ದಾರೆ. ಜನರು ಅದೇ ರಾಜಕೀಯ ಪಕ್ಷಗಳಿಗೆ ಮತ ಹಾಕಿ ಗೆಲ್ಲಿಸುತ್ತಿರುವುದರಿಂದ ಸಮಾಜದಲ್ಲಿ ಯಾವುದೇ ಕ್ರಾಂತಿಯಾಗುವುದಿಲ್ಲ, ಬದಲಾವಣೆ ಆಗುವುದನ್ನೂ ನಾವು ನಿರೀಕ್ಷಿಸುವಂತಿಲ್ಲ.4 SUCI-C ಪಕ್ಷ ಹೊರೆತು ಪಡೆಸಿ ಎಲ್ಲ ರಾಜಕೀಯ ಪಕ್ಷಗಳು ಜನ ವಿರೋಧಿ ಪಕ್ಷಗಳೇ?
ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಮಾತ್ರ ಜನವಿರೋಧಿಗಳೆಂದು ಹೇಳುವುದಿಲ್ಲ, ಕಮ್ಯುನಿಸ್ಟ್ ಪಕ್ಷಗಳು ಕೂಡ ಅದೇ ಸಾಲಿನಲ್ಲಿ ನಿಂತಿವೆ. ಬಂಡವಾಳಶಾಯಿಗಳಿಗೆ ಮಣೆ ಹಾಕುತ್ತಿವೆ. ಹಾಗಾಗಿ ಎಲ್ಲ ಪಕ್ಷಗಳು ಒಂದು ರೀತಿಯಲ್ಲಿ ಜನ ವಿರೋಧಿ ನೀತಿಗಳನ್ನು ಪಾಲಿಸುತ್ತಿವೆ.5 ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷ ಹೇಗೆ ಭಿನ್ನ?
ಎಸ್ಯುಸಿಐ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸಿದ್ದೇನೆ. ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ಪಕ್ಷಗಳಿಗಿಂತ ನಮ್ಮ ಪಕ್ಷ ಭಿನ್ನವಾಗಿದೆ. ಏಕಾಏಕಿ ಚುನಾವಣೆಗೆ ಸ್ಪರ್ಧಿಸಿಲ್ಲ. ಹತ್ತಾರು ವರ್ಷಗಳಿಂದ ಜನರ ಜ್ವಲಂತ ಸಮಸ್ಯೆಗಳ ವಿರುದ್ಧ ಹೋರಾಟಗಳನ್ನು ಕಟ್ಟುತ್ತಿದ್ದೇವೆ. ಬಂಡವಾಳಶಾಹಿಗಳ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಜನ ಮುಖಿ ಜನಪರವಾಗಿ ಕೆಲಸ ಮಾಡುವ ಮೂಲಕ ಮತ ನೀಡಿ ಎಂದು ಮತದಾರರಲ್ಲಿ ಕೋರುತ್ತಿದ್ದೇವೆ.
6 ಭಾರತ ದೇಶದಲ್ಲಿ ರಾಜಕೀಯ ಪಕ್ಷಗಳು ಏಕಸ್ವಾಮ್ಯ, ಬಂಡವಾಳಶಾಹಿ ಮತ್ತು ಸಾಮ್ರಾಜ್ಯಶಾಹಿ ಪ್ರವೃತ್ತಿ ಹೊಂದಿರುವ ಬಂಡವಾಳಶಾಹಿ ಪರವಾಗಿರುವ ಪಕ್ಷಗಳೇ?
ಅನುಮಾನವೇ ಬೇಡ, ಬಹುತೇಕ ಎಲ್ಲ ರಾಜಕೀಯ ಪಕ್ಷಗಳು ಬಂಡವಾಳಶಾಹಿಗಳು, ಸಾಮ್ರಾಜ್ಯಶಾಯಿಗಳ ಪರವಾಗಿ ಕೆಲಸ ಮಾಡುತ್ತಿವೆ. ಇದಕ್ಕೆ ಕಮ್ಯುನಿಸ್ಟ್ ಪಕ್ಷಗಳು ಹೊರತಲ್ಲ. ನಮ್ಮ SUCI(C) ಪಕ್ಷವು ಹೊಸ ಪ್ರಜಾಸತ್ತಾತ್ಮಕ ಕ್ರಾಂತಿಯ ಬದಲಿಗೆ ಸಮಾಜವಾದಿ ಕ್ರಾಂತಿಯತ್ತ ಕೆಲಸ ಮಾಡುತ್ತದೆ.
7 ಮಹಿಳಾ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಿಮಗೆ ಕ್ಷೇತ್ರದ ಮಹಿಳೆಯರು ಮತ ನೀಡುತ್ತಾರಾ?
ಖಂಡಿತಾ ಕ್ಷೇತ್ರದ ಮಹಿಳೆಯರು ನನಗೆ ಹೆಚ್ಚಿನ ಮತಗಳನ್ನು ನೀಡುತ್ತಾರೆ ಎನ್ನುವ ವಿಶ್ವಾಸವಿದೆ. ಏಕೆಂದರೆ ಮೊದಲಿನಿಂದಲೂ ನಾನು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(ಎಐಎಂಎಸ್ಎಸ್)ಯಲ್ಲಿ ಸಂಪೂರ್ಣ ತೊಡಗಿಸಿಕೊಂಡು ಮಹಿಳೆಯರ ದ್ವನಿಯಾಗಿ ಕೆಲಸ ಮಾಡಿದ್ದೇನೆ. ಚಿತ್ರದುರ್ಗ ಕ್ಷೇತ್ರ ವ್ಯಾಪ್ತಿಯಲ್ಲೂ ಮಹಿಳೆಯರ ದ್ವನಿಯಾಗಿ ಕೆಲಸ ಮಾಡಿರುವೆ. ವಿದ್ಯಾರ್ಥಿನಿಯರು, ವಯಸ್ಕ ಮಹಿಳೆಯರ ಪರವಾಗಿ ಕೆಲಸ ಮಾಡಿದ್ದೇನೆ. ನೊಂದ ಸಂತ್ರಸ್ತ ಮಹಿಳೆಯರ ಪರವಾಗಿ ಬೀದಿಗಿಳಿದು ಹೋರಾಟ ಮಾಡಿದ್ದೇವೆ. ಹಲವು ಕಾರ್ಯಕ್ರಮಗಳನ್ನ ಮಹಿಳೆಯರ ಪರವಾಗಿ ಹಾಕಿಕೊಂಡಿದ್ದೇವೆ. ಚಿತ್ರದುರ್ಗ ಸಮೀಪದ ಹುಲ್ಲೂರು ಗ್ರಾಮದಲ್ಲಿ ಯುವಕನೊರ್ವ ಯುವತಿಯೊಬ್ಬಳನ್ನ ಮದುವೆ ಆಗುವಂತೆ ಕೋರಿಕೊಂಡಾಗ ಆ ಯುವತಿ ಒಪ್ಪಿಕೊಳ್ಳಲಿಲ್ಲ ಎನ್ನುವ ಕಾರಣಕ್ಕೆ ಯುವತಿಯ ತಲೆ ಹೊಡೆದು ಹಲ್ಲೆ ಮಾಡಿದ. ಆಗ ಆ ಊರಿನ ಮಹಿಳೆಯರಿಗೆ ಧೈರ್ಯ ತುಂಬಿ ಅವರ ಪರವಾಗಿ ಕೆಲಸ ಮಾಡಿ ನ್ಯಾಯ ಕೊಡಿಸಿದ್ದೇವೆ. ಇಸ್ಸಾಮುದ್ರದಲ್ಲಿ 7 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಾಗ ಬಾಲಕಿಯ ಪರವಾಗಿ ಹೋರಾಟ ಮಾಡಿ ಆರೋಪಿಗೆ ಶಿಕ್ಷೆ ಕೊಡಿಸುವ ಕೆಲಸ ಮಾಡಿದ್ದೇವೆ. ಹಾಗಾಗಿ ಮಹಿಳೆಯರ ಪರವಾಗಿ ಹೋರಾಟ ಮಾಡುತ್ತಿರುವುದರಿಂದ ನನಗೆ ಹೆಚ್ಚಿನ ಮತಗಳನ್ನ ಮಹಿಳೆಯರು ನೀಡಲಿದ್ದಾರೆ.
8 ಚಿತ್ರದುರ್ಗ ಲೋಕಸಭಾ ಕ್ಷೇತ್ರ ನಿಮಗೆಷ್ಟು ಗೊತ್ತು?
ಇಡೀ ಕ್ಷೇತ್ರ ನಮಗೆ ಪರಿಚಯ ಇದೆ. ತುಮಕೂರು ಜಿಲ್ಲೆಯ ಎರಡು ಕ್ಷೇತ್ರಗಳನ್ನ ಬಿಟ್ಟರೇ ಜಿಲ್ಲೆಯ 6 ಕ್ಷೇತ್ರಗಳಲ್ಲಿ ನಾವು ಜನಪರ, ವಿದ್ಯಾರ್ಥಿಗಳ ಪರ, ನಿರುದ್ಯೋಗಿಗಳ ಪರವಾಗಿ, ಮಹಿಳೆಯರ ಪರವಾಗಿ ಹೋರಾಟ ಮಾಡಿದ್ದೇವೆ. ಪ್ರತಿ ಹಳ್ಳಿಯು ಗೊತ್ತು.
9 ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಯಾರ ಪರ ಅಲೆ ಇದೆ? ಎಸ್ಸಿ ಮೀಸಲು ಕ್ಷೇತ್ರದಲ್ಲಿ ಯಾರ ಪರವಾಗಿ ಅಲೆ ಇಲ್ಲ. ಕಾಂಗ್ರೆಸ್-ಬಿಜೆಪಿ ಹೀಗೆ ಯಾವ ಅಭ್ಯರ್ಥಿ ಪರವಾಗಿ ಅಲೆ ಇಲ್ಲ. ಇದರಿಂದಾಗಿ ಮಹಿಳಾ ಸ್ಪರ್ಧಿ ಆಗಿರುವ ನನಗೆ ಅನುಕೂಲ ಆಗಬಹುದು ಎನ್ನುವ ವಿಶ್ವಾಸ ಇದೆ.
10 ನೇರಾ ರೈಲು, ಭದ್ರಾ ಮೇಲ್ದಂಡೆ ಯೋಜನೆಗಳು ನೆನೆಗುದಿಗೆ ಬಿದ್ದಿದ್ದು ನಿಮ್ಮ ಹೋರಾಟ ಹೇಗಿತ್ತು?
ಸೈದ್ಧಾಂತಿಕ ಹಿನ್ನೆಲೆ ಇಟ್ಟುಕೊಂಡು ದೈನಂದಿನ ಜೀವನದಲ್ಲಿ ಸಂಭವಿಸುವಂತಹ ಎಲ್ಲ ರೀತಿಯ ಹೋರಾಟಗಳನ್ನು ನಾವು ನಮ್ಮ ಪಕ್ಷ ಮಾಡಿಕೊಂಡು ಬಂದಿದೆ. ಪಕ್ಷದ ಕಾರ್ಯಕರ್ತರು, ಸಮೂಹ-ಸಂಘಟನೆಗಳ ಕಾರ್ಯಕರ್ತರು ನೇರ ರೈಲು, ರೈತ ಹೋರಾಟ, ಭದ್ರಾ ಮೇಲ್ದಂಡೆ ಹೋರಾಟಗಳಿಗೆ ಬೆಂಬಲಿಸಿ ಹೋರಾಟ ಮಾಡಿದ್ದೇವೆ. SUCI ಯಾವೊತ್ತು ಶ್ರಮಜೀವಿಗಳ ಸಾಂಸ್ಕೃತಿಕ ಮಾನದಂಡವನ್ನು ಎತ್ತಿಹಿಡಿಯುತ್ತದೆ. ಸಮಾಜವಾದಿ ನೆಲೆಗಟ್ಟಿನಲ್ಲಿ ಜನಸಾಮಾನ್ಯರ ಬದುಕಿಗೆ ಬೆನ್ನೆಲುಬಾಗಿ ಹೋರಾಟ ಮಾಡಿದ್ದೇವೆ.
11 ಚುನಾವಣೆಯಲ್ಲಿ ಗೆದ್ದರೆ ನಿಮ್ಮ ಮುಂದಿನ ಕಾರ್ಯಸೂಚಿ ಏನು?
ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಿಂತ SUCI(C) ಪಕ್ಷವು ವಿಭಿನ್ನವಾಗಿ ಚಿಂತಿಸಿ ಜನರ ಜೀವನ ಶೈಲಿಯನ್ನು ಸುಧಾರಿಸುವುದು, ಶಿಕ್ಷಣಕ್ಕೆ ಆದ್ಯತೆ ನೀಡುವುದು, ಕೋಮುವಾದಿಗಳನ್ನು ನಿಯಂತ್ರಿಸುವುದು, ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡುವ ಉದ್ದೇಶ ಹೊಂದಿದ್ದೇನೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಯುವು, ಜನವಿರೋಧಿ ರಾಷ್ಟ್ರೀಯ ಶಿಕ್ಷಣ ನೀತಿ 2020 ಹಿಂಪಡೆಯುವುದು, ನಿರುಉದ್ಯೋಗ ಸಮಸ್ಯೆ ನಿವಾರಣೆ ಮಾಡುವುದು, ಬಂಡವಾಳಶಾಹಿ ವರ್ಗದ ಅಧೀನದಲ್ಲಿರುವ ದುಡಿಯುವ ವರ್ಗ ಮತ್ತು ಬಡ ವರ್ಗಕ್ಕೆ ನ್ಯಾಯ ಕೊಡಿಸುವುದು ಸೇರಿದಂತೆ ಮತ್ತಿತರ ಮಹತ್ವ ಕಾರ್ಯಗಳನ್ನು ಮಾಡುವ ಉದ್ದೇಶ ಹೊಂದಿದ್ದೇನೆ. 12 ಕಾಂಗ್ರೆಸ್-ಬಿಜೆಪಿ ಎರಡು ಪಕ್ಷಗಳು ಒಂದೇ ಹೇಗೆ?
ಬಿಜೆಪಿ ಇಂದು ದೇಶದಲ್ಲಿ ಅನುಸರಿಸುತ್ತಿರುವ ಹೆಚ್ಚಿನ ನೀತಿಗಳು ಕಾಂಗ್ರೆಸ್ನಿಂದ ಆನುವಂಶಿಕವಾಗಿ ಬಂದಿವೆ. ಕೇಂದ್ರದಲ್ಲಿ ಆಡಳಿತ ಮಾಡಿರುವ ಎರಡು ಪಕ್ಷಗಳು ಜನ ವಿರೋಧಿ, ರೈತ ವಿರೋಧಿ, ಕಾರ್ಮಿಕ ವಿರೋಧಿ ನಿಲುವು ಹೊಂದಿವೆ. ಬಂಡವಾಳಶಾಯಿಗಳ ಏಜೆಂಟರಂತೆ ಆ ಪಕ್ಷಗಳು ಕೆಲಸ ಮಾಡಿವೆ.ಆದರೆ ನಮ್ಮ ಪಕ್ಷವು ಚುನಾವಣೆಯನ್ನು ಸಹ ಒಂದು ಹೋರಾಟದ ಭಾಗವೆಂದು ಪರಿಗಣಿಸುತ್ತದೆ. ಒಂದು ವೈಚಾರಿಕ ಸಂಘರ್ಷದ ವೇದಿಕೆಯಾಗಿ ಚುನಾವಣೆ ಎದುರಿಸುತ್ತವೆ. ಆದ್ದರಿಂದ ನಮ್ಮ ಈ ಹೋರಾಟಕ್ಕೆ ಜನಗಳ ಬೆಂಬಲ ಖಂಡಿತ ದೊರೆಯಲಿದೆ.13 ಹಣವಂತರ ಮಧ್ಯ ನಿಮ್ಮ ಸ್ಪರ್ಧೆ ಹೇಗಿದೆ?
ಮತದಾರರು ಯಾವುದೇ ಗ್ಯಾರಂಟಿಗಳಾಗಲಿ, ಆಮಿಷಗಳಿಗಾಗಲಿ ಬಲಿಯಾಗುವುದಿಲ್ಲ ಎನ್ನುವ ವಿಶ್ವಾಸವಿದೆ. ನಾವು ಚುನಾವಣಾ ಹೋರಾಟಕ್ಕೂ ಜನಗಳಿಂದಲೇ ನಿಧಿ ಸಂಗ್ರಹಿಸಿ ನಮ್ಮ ಹೋರಾಟ ನಡೆಸುತ್ತಿದ್ದೇವೆ. ನಾವು ಯಾವುದೇ ಉದ್ಯಮಪತಿಗಳಿಂದ ದೇಣಿಗೆ ಸ್ವೀಕರಿಸಿಲ್ಲ. ಬದಲಿಗೆ ನಮ್ಮ ಚುನಾವಣಾ ಹೋರಾಟದ ನಿಧಿಗೆ ಜನಸಾಮಾನ್ಯರಿಂದಲೇ ನಿಧಿ ಸಂಗ್ರಹಿಸುತ್ತಿದ್ದು, ಜನರ ನೈಜ ಸಮಸ್ಯೆಗಳ ವಿರುದ್ಧದ ನಮ್ಮ ಹೋರಾಟ ನಿರಂತರವಾಗಿ ಮಾಡುತ್ತಿದ್ದೇವೆ. ಜನರ ಸ್ಪಂದನೆ ಪ್ರತಿಕ್ರಿಯೆ ಉತ್ತಮವಾಗಿದೆ.
14 ಗೆಲ್ಲುವ ವಿಶ್ವಾಸ ಇದೆಯಾ?
ಬಂಡವಾಳಶಾಹಿಗಳ ಮಧ್ಯ ನಾನು ಗೆಲ್ಲುತ್ತೇನೆಂದು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಆದರೆ ನನಗೆ ನೀಡುವ ಒಂದೊಂದು ವೋಟು ಕೂಡ ಒಂದು ಸಾವಿರ ಜನರಿಗೆ(ವೋಟಿ) ಸಮ ಎಂದು ತಿಳಿದಿರುವೆ.15 ಕಮ್ಯುನಿಸ್ಟ್ ಪಕ್ಷಗಳು ತನ್ನ ವರ್ಚಸ್ಸು ಕೆಳೆದುಕೊಳ್ಳುತ್ತಿರುವ ದನಿಮಾನಗಳಲ್ಲಿ ನಿಮ್ಮ ಸ್ಪರ್ಧೆ ಎಷ್ಟು ಸರಿ?
ಸಿಪಿಎಂ ಇತರೆ ಕಮ್ಯುನಿಸ್ಟ್ ಪಕ್ಷಗಳು ತಮ್ಮ ನಿಲುವನ್ನ ಗಟ್ಟಿಯಾಗಿ ಹೇಳುತ್ತಿಲ್ಲ. ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುವಂತ ಪಕ್ಷಗಳ ಪರವಾಗಿ ಕಮ್ಯುನಿಸ್ಟ್ ಪಕ್ಷಗಳು ಕೈಜೋಡಿಸಿವೆ. ಆದರೆ ಬಂಡವಾಳಶಾಹಿಗಳ ಕೈ ಜೋಡಿಸುವ ಕಮ್ಯುನಿಸ್ಟ್ ಪಾರ್ಟಿಗಳಿಗಿಂತ ಭಿನ್ನವಾಗಿರುವ ಪಾರ್ಟಿ ನಮ್ಮದು. ಹಾಗಾಗಿ ನಾನು ಸ್ಪರ್ಧಿಸಿದ್ದೇನೆ.16 ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ನಿಮ್ಮ ನಿಲುವು?
ಗ್ಯಾರಂಟಿಗಳಿಂದ ರಾಜ್ಯ ಅಥವಾ ದೇಶದ ಅಭಿವೃದ್ಧಿ ಅಸಾಧ್ಯ, ಪ್ರತಿ ನಿತ್ಯ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಕಾರ್ಮಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ಇವರಿಗೂ ಬದುಕುವ ಗ್ಯಾರಂಟಿ ನೀಡಬೇಕು. ಅಂದರೆ ರೈತರಿಗೆ ಬೆಂಬಲ ಬೆಲೆ ನೀಡಬೇಕು, ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು. ರೈತರ ಸಾಲ ಮನ್ನಾ ಮಾಡಬೇಕು. ಕಾರ್ಮಿಕರಿಗೆ ಹೆಚ್ಚಿನ ಕೂಲಿ ಸಿಗುವಂತೆ ಮಾಡಬೇಕು. ಉತ್ತಮ ಶಿಕ್ಷಣ ನೀಡಬೇಕು. ಜೊತೆ ಜೊತೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕಾಗುತ್ತದೆ.