i
ಹಿಂದೂ ಹೆಣ್ಣು ಮಕ್ಕಳು, ದಲಿತರನ್ನು ರಕ್ಷಿಸದ ಕಾಂಗ್ರೆಸ್ ಸಿಎಂ ಕೂಡಲೇ ರಾಜೀನಾಮೆ ನೀಡಿ ತೊಲಗಲಿ, ಇದು ತಾಲಿಬಾನ್ ಆಡಳಿತ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಯಾದಗಿರಿಯಲ್ಲಿ ದಲಿತ ಯುವಕ ರಾಕೇಶ್ನನ್ನು ಭಾನುವಾರ ರಾತ್ರಿ ಹತ್ಯೆಗೈದಿರುವುದನ್ನು ಖಂಡಿಸಿ ಸೋಮವಾರ ಮತ್ತು ಮಂಗಳವಾರ ಎರಡು ದಿನಗಳ ಕಾಲ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಲಾಗುವುದೆಂದು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ತಿಳಿಸಿದರು.ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹತ್ಯೆ, ಚನ್ನಗಿರಿಯ ನಲ್ಲೂರಿನಲ್ಲಿ ಯುವಕನ ಮೇಲೆ ಹಲ್ಲೆ, ರಾಮನವಮಿ ದಿನ ಹನುಮಾನ್ ಚಾಲೀಸ ಗೀತೆಗಳನ್ನು ಕೇಳುತ್ತಿದ್ದ ಹಿಂದೂ ಯುವಕರಿಗೆ ಥಳಿತ ಇದೆಲ್ಲವನ್ನು ನೋಡಿದರೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಟಿಪ್ಪುಶಾಹಿ ಆಡಳಿತ ನಡೆಸುತ್ತಿದ್ದಾರೆನ್ನುವುದರಲ್ಲಿ ಅನುಮಾನವಿಲ್ಲ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗುತ್ತಿರುವವರನ್ನು ರಕ್ಷಣೆ ಮಾಡುವುದಾದರೆ ಈ ಸರ್ಕಾರ ಇರುವುದಾದರೂ ಯಾರಿಗೆ ಎಂದು ಪ್ರಶ್ನಿಸಿದ ಎನ್.ರವಿಕುಮಾರ್ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.ಯಾದಗಿರಿಯಲ್ಲಿ ದಲಿತ ಯುವಕ ರಾಕೇಶ್ ಮನೆಗೆ ರಾತ್ರಿ ಫಯಾಜ್ ಸೇರಿ 8 ಮಂದಿ ನುಗ್ಗಿ ಪೋಷಕರ ಎದುರಲ್ಲೇ ಹತ್ಯೆ ಮಾಡಿದ್ದಾರೆ. ಮೃತ ರಾಕೇಶ್ ಅಂಗಡಿಗೆ ಹೋಗಿ ರೊಟ್ಟಿ ಕೇಳಿದ್ದಾನೆ. ರೊಟ್ಟಿ ಸಿಗಲಿಲ್ಲವೆಂದು ಮನೆಗೆ ವಾಪಸ್ ಬಂದು ಮಲಗಿದಾಗ ಫಯಾಜ್ ಗುಂಪುಕಟ್ಟಿಕೊಂಡು ಬಂದು ಬಾಗಿಲು ಬಡಿದು ಮಲಗಿದ್ದ ರಾಕೇಶ್ನನ್ನು ಎಬ್ಬಿಸಿ ಮರ್ಮಾಂಗಕ್ಕೆ ಹೊಡೆದು ಹೀನಾಯವಾಗಿ ಕೊಲೆಗೈದಿದ್ದಾನೆ. ಎಫ್.ಐ.ಆರ್ ದಾಖಲಿಸಲು ಪೊಲೀಸರು ತಡ ಮಾಡಿದ್ದಾರೆ. ಕಡುಬಡವರಿಗೆ ಶಕ್ತಿ ಇಲ್ಲದವರಿಗೆ ಅಮಾಯಕರಿಗೆ ರಕ್ಷಣೆ ನೀಡಲು ಸಂವಿಧಾನ ಇರುವುದು ಎನ್ನುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮರೆತಂತಿದೆ. ಹಾಗಾಗಿ ಕೊಲೆ ಪ್ರಕರಣ ಸಂಪೂರ್ಣವಾಗಿ ತನಿಖೆಯಾಗಬೇಕು. ಸರ್ಕಾರದ ಕುಮ್ಮಕ್ಕಿನಿಂದ ಪೊಲೀಸ್ ಇಲಾಖೆ ನಡೆಯುತ್ತಿದೆ. ರಾಕೇಶ್ ಕುಟುಂಬಕ್ಕೆ ಆಗಿರುವ ಅನ್ಯಾಯ ವಿರೋಧಿಸಿ ಬಿಜೆಪಿ ಎಸ್ಸಿ.ಎಸ್ಟಿ ಮೋರ್ಚಾದಿಂದ ಎರಡು ದಿನಗಳ ಕಾಲ ಪ್ರತಿಭಟನೆಗೆ ಕರೆ ಕೊಡಲಾಗಿದೆ ಎಂದು ಹೇಳಿದರು.ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಅಭಿವೃದ್ದಿಗಾಗಿ ಇರುವ ಹನ್ನೊಂದು ಸಾವಿರದ ೧೪೪ ಕೋಟಿ ರೂ.ಗಳನ್ನು ಯಾರ ಅನುಮತಿ ಪಡೆಯದೆ ಬೇರೆ ಇಲಾಖೆಗೆ ಮುಖ್ಯಮಂತ್ರಿ ವರ್ಗಾಯಿಸಿದ್ದಾರೆ. ದಲಿತ ವಿರೋಧಿ ಸರ್ಕಾರ ಆಡಳಿತ ನಡೆಸಲು ನಾಲಾಯಕ್. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ನೇಹ ಹಾಗೂ ರಾಕೇಶ್ ಕುಟುಂಬಕ್ಕೆ ನ್ಯಾಯ ಸಿಗಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎನ್.ರವಿಕುಮಾರ್ ಎಚ್ಚರಿಕೆ ನೀಡಿದರು.ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಮಾತನಾಡಿ ಮೂರು ದಿನಗಳಲ್ಲಿ ರಾಜ್ಯದಲ್ಲಿ ಎಂಟು ಜನರ ಬರ್ಬರ ಕೊಲೆಯಾಗಿದೆ. ಮಹಿಳೆಯನ್ನು ವಿವಸ್ತ್ರಗೊಳಿಸುವುದು, ದಲಿತರ ಮೇಲೆ ಹಲ್ಲೆಯಾಗುತ್ತಿರುವುದನ್ನು ನೋಡಿದರೆ ರಾಜ್ಯದಲ್ಲಿ ತಾಲಿಬಾನ್ ಆಡಳಿತ ಜಾರಿಗೆ ಬಂದಂತಿದೆ. ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆಗಳು ಮೊಳಗುತ್ತಿದೆ. ಕಾನೂನು ಸುವ್ಯವಸ್ಥೆ ಹಳಿ ತಪ್ಪಿದೆ. ದಲಿತರಿಗೆ ರಕ್ಷಣೆಯಿಲ್ಲ. ಯಾದಗಿರಿಯಲ್ಲಿ ಫಯಾಜ್ ಮತ್ತು ಇತರೆ ಎಂಟು ಮಂದಿ ದಲಿತ ಯುವಕ ರಾಕೇಶ್ ಮನೆಗೆ ನುಗ್ಗಿ ಪೋಷಕರ ಎದುರಿನಲ್ಲಿಯೇ ಕೊಲೆಗೈದಿದ್ದಾರೆ. ಪೊಲೀಸ್ ಇಲಾಖೆ ಪ್ರಕರಣವನ್ನು ಮುಚ್ಚಿ ಹಾಕಲು ಹೊರಟಿದೆ. ಇದರ ವಿರುದ್ದ ನಮ್ಮ ಹೋರಾಟ ಎಂದು ಹೇಳಿದರು. ಮಾನವೀಯತೆಯೆ ಇಲ್ಲದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ರಾಜಿನಾಮೆ ಕೊಡಲಿ. ಚಿತ್ರದುರ್ಗದಲ್ಲಿ ಯುವಕ ಉಮೇಶ್ನಾಯ್ಕನ ಮೇಲೆ ಮಾರಣಾಂತಿಕ ಹಲ್ಲೆಯಾಗಿದ್ದು, ಸಾವು-ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದಾನೆ. ಸಂವಿಧಾನದಡಿ ದಲಿತರಿಗೆ ರಕ್ಷಣೆಯಿಲ್ಲ ಎನ್ನುವುದಾದರೆ ಇನ್ನು ಯಾರಿಗಾಗಿ ಇರಬೇಕು ಈ ಸರ್ಕಾರ ಎನ್ನುವುದು ನಮ್ಮ ಮುಂದಿರುವ ಸವಾಲು ಎಂದರು.ಬಿಜೆಪಿ. ಎಸ್ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ್ ಕಾರಜೋಳ, ಜಿಲ್ಲಾಧ್ಯಕ್ಷ ಕರಿಕರೆ ತಿಪ್ಪೇಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಮೋಹನ್, ಎಸ್ಸಿ.ಮೋರ್ಚಾ ನಗರ ಮಂಡಲ ಉಪಾಧ್ಯಕ್ಷ ಸುರೇಶ್ನಾಯ್ಕ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ವಕ್ತಾರ ನಾಗರಾಜ್ಬೇದ್ರೆ, ಜಯಸಿಂಹ, ವೀಣಬಾಯಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.