i
ಕನ್ನಡ ಮಾಧ್ಯಮದಲ್ಲಿ ಓದಿದರೂ ಇಸ್ರೋ ವಿಜ್ಞಾನಿ ಆಗಬಹುದು:ಡಾ.ಶಿವಾನಿ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಕನ್ನಡ ಮಾಧ್ಯಮದಲ್ಲಿ ಓದಿದರೂ ಸಾಧನೆ ಮಾಡಿ ವಿಜ್ಞಾನಿ ಆಗಲು ತೊಂದರೆಯಿಲ್ಲ ಎಂದು ಇಸ್ರೋ ವಿಜ್ಞಾನಿ ಡಾ.ಕೆ.ಎಲ್.ಶಿವಾನಿ ಹೇಳಿದರು.ಅವರು ಬಹುಮುಖಿ ವತಿಯಿಂದ ಕಮಲಾ ನೆಹರು ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆದ ಚಂದ್ರಯಾನ-3ರ ಅನುಭವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಶಿವಮೊಗ್ಗದ ಮಕ್ಕಳ ವಿದ್ಯಾಸಂಸ್ಥೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ನ್ಯಾಷನಲ್ ಗರ್ಲ್ಸ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಮುಗಿಸಿ ಡಿವಿಎಸ್ ಕಾಲೇಜಿನಲ್ಲಿ ಪಿಯುಸಿ ಮತ್ತು ಜೆ.ಎನ್.ಎನ್.ಸಿ ಯಲ್ಲಿ ಎಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಶನ್ ವಿಭಾಗದಲ್ಲಿ ಬಿ.ಇ.ಪದವಿ ಪಡೆದು ಇಸ್ರೋ ಸೇರಿಕೊಂಡೆ ಎಂದರು.
ಚಂದ್ರಯಾನ-3ರಲ್ಲಿ ಭಾಗವಹಿಸಿದಾಗ 20 ವರ್ಷ ಕೆಲಸದ ಅನುಭವ ಆಗಿತ್ತು. 15ಜನ ಇಂಜಿನಿಯರ್ ಗಳು ನನ್ನ ಕೈಕೆಳಗೆ ಸೇವೆ ಸಲ್ಲಿಸುತ್ತಿದ್ದರು. ಈ ಮದ್ಯೆ ನಾನು ಎಂಟೆಕ್ ಪದವಿ 42ನೇ ವಯಸ್ಸಿನಲ್ಲಿ ಪಡೆದುಕೊಂಡೆ. 1993ರಿಂದ ಇಸ್ರೋ ದ ಹಿರಿಯ ವಿಜ್ಞಾನಿಯಾಗಿ ಉಪನಿರ್ದೇಶಕಿ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಚಂದ್ರಯಾನ-2 ವಿಫಲ ಆಗಿದ್ದರಿಂದ ತುಂಬಾ ದುಃಖವಾಯಿತು ಅದನ್ನು ಮರೆಯುವ ಸಲುವಾಗಿ ಚಂದ್ರಯಾನ-3 ಪ್ರಾರಂಭಿಸಿ ದೇಹದ ನರದಂತೆ ಇರುವ ವೈಯರ್ ಗಳನ್ನು ನೋಡುತ್ತಾ ಪ್ರತಿ ಸೆಕೆಂಡಿಗೆ ಸಂದೇಶ ಕೊಡುತ್ತಾ ಕೊನೆಗೆ ಭೂಮಿ ದಾಟಿ ಸಂದೇಶ ಕೊಡುವಾಗ 12 ಗಂಟೆಗಳ ಕಾಲ ಆಗುತ್ತಿತ್ತು. ಅಲ್ಲಿಂದ ಸಂದೇಶ ಬರುವಾಗ ಪುನಃ 12ಗಂಟೆ ಆಗುತ್ತಿತ್ತು. ಕೊನೆ ಹಂತದಲ್ಲಿ ಆಟೋಮ್ಯಾಟಿಕ್ ಆಗಿತ್ತು. ನಾವು ಇತರರ ಹಾಗೇ ಸುಮ್ಮನೆ ನೋಡುತ್ತಿದ್ದೆವು. ಕೊನೆಗೆ ಸಕ್ಸಸ್ ಆಯಿತು ಎಂದು ಅವರು ಸ್ಮರಿಸಿದರು.
ಅತ್ಯಂತ ಚಿಕ್ಕ ಚಿಕ್ಕ ಕೆಲಸಗಾರರು ಕೂಡ ತಮ್ಮ ತಮ್ಮ ಕಾರ್ಯವನ್ನು ಉತ್ತಮವಾಗಿ ನಿರ್ವಹಿಸಿದರು. ಇದು ಸಂಪೂರ್ಣ ತಂಡದ ಕಾರ್ಯ ಎಂದರು.
ಈಗ ಪ್ರತಿ ಎರಡು ತಿಂಗಳಿಗೆ ಒಂದೊಂದು ಸೆಟ್ ಲೈಟ್ ಕಳುಹಿಸುತ್ತಿದ್ದೇವೆ. ನಮ್ಮ ಮನೆಯ ಕೆಲಸ ಎಂದು ತಿಳಿದು ಎಲ್ಲರೂ ಕೆಲಸ ಮಾಡಿದ್ದೇವೆ. ಚಂದ್ರ 4 ಲಕ್ಷ ಕಿ.ಮೀ.ದೂರದಲ್ಲಿದ್ದಾನೆ. ಎಷ್ಟೋ ವೇಳೆ ನಾವು ಬೆಳಿಗ್ಗೆ 6ಗಂಟೆಗೆ ಎದ್ದು ಕೆಲಸಕ್ಕೆ ಹೋದರೆ ರಾತ್ರಿ 12ಗಂಟೆಗೆ ಬಂದಿದ್ದು ಇದೆ. ಇಸ್ರೋ ಮತ್ತು ಅಮೆರಿಕದ ನ್ಯಾಸಾದ ಉತ್ತಮ ಬಾಂಧವ್ಯ ಇದೆ. ನಾವು ಅವರಿಗೆ ಅವರು ನಮಗೆ ಸಹಾಯ ಮಾಡುತ್ತಿದ್ದಾರೆ ಎಂದರು.
ಭಾರತದಲ್ಲಿ ಹೆಣ್ಣು ಮಕ್ಕಳು ವಿಜ್ಞಾನ ಕ್ಷೇತ್ರಕ್ಕೆ ಹೆಚ್ಚು ಬರಬೇಕು. ಇಸ್ರೋದಲ್ಲಿ ಎಲ್ಲಾ ರೀತಿಯ ವಿಜ್ಞಾನ ಓದಿದ ಮತ್ತು ಗಣಿತ ಓದಿದ ವ್ಯಕ್ತಿಗಳಿಗೂ ಅವಕಾಶವಿದೆ. ಈಗ 20,000 ಜನ ಇಸ್ರೋದಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರತಿಯೊಬ್ಬರು ಸಮರ್ಪಣ ಭಾವದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಬಹುಮುಖಿಯ ಡಾ.ನಾಗಭೂಷಣ್ ಸ್ವಾಗತಿಸಿ ವಂದಿಸಿದರು.