i
ಟೆಕ್ ಜೋನ್ – ನಾವೀನ್ಯತೆ ಜಗತ್ತನ್ನು ಮುನ್ನಡೆಸಲಿದೆ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ನಾವೀನ್ಯತೆ ಇಡೀ ಜಗತ್ತನ್ನು ಸಮರ್ಥನೀಯವಾಗಿ ಮುನ್ನಡೆಸಲಿದ್ದು ಉಜ್ವಲ ಮತ್ತು ಸಮರ್ಥನೀಯ ಭವಿಷ್ಯ ನಿರ್ಮಾಣ ಮಾಡಲಿದೆ ಎಂದು ಶಾಂತಲಾ ಸ್ಪೇರೊಕ್ಯಾಸ್ಟ್ ಸಂಸ್ಥೆಯ ಉಪಾಧ್ಯಕ್ಷರಾದ ಡಿ.ಎಸ್.ಚಂದ್ರಶೇಖರ್ ಅಭಿಪ್ರಾಯಪಟ್ಟರು.
ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಗುರುವಾರ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಅಂತರ ಇಂಜಿನಿಯರಿಂಗ್ ಕಾಲೇಜುಗಳ ವಿವಿಧ ತಾಂತ್ರಿಕ ಸ್ಪರ್ಧಾ ಕಾರ್ಯಕ್ರಮ ’ಟೆಕ್ ಜೋನ್ – ೨೦೨೪’ ಉದ್ಘಾಟಿಸಿ ಮಾತನಾಡಿದರು.
ನಾವೀನ್ಯತೆ ಎಂಬುದು ಕಾಲೇಜು ಪದವಿಗಿಂತ ಭಿನ್ನವಾಗಿದೆ. ನಮ್ಮ ಆಲೋಚನೆಗಳು ಅಂತಹ ವಿಭಿನ್ನತೆಯನ್ನು ಹೊಂದಿರಬೇಕು. ನಮ್ಮ ಸುತ್ತಲಿನ ವಾತಾವರಣದಲ್ಲಿ ನಡೆದ ನಾವೀನ್ಯಯುತ ಬದಲಾವಣೆಗಳಿಂದ ಪ್ರೇರಣೆ ಪಡೆಯಿರಿ. ಉದ್ಯೋಗ ಪಡೆಯುವ ಹೋರಾಟಕ್ಕಿಂತ ಸ್ವಂತ ಉದ್ಯಮ ನಡೆಸುವತ್ತ ಕೇಂದ್ರಿಕರಿಸಿ ಎಂದು ತಿಳಿಸಿದರು.
ಇಂದಿನ ತಲೆಮಾರಿಗೆ ವಾಸ್ತವತೆಯ ಅರಿವು ಕಡಿಮೆಯಿದೆ. ಸಮರ್ಪಣಾ ಭಾವ ಮತ್ತು ಆತ್ಮವಿಶ್ವಾಸ ನಿಮ್ಮದಾಗಲಿ. ನಿಮ್ಮ ಸಾಮರ್ಥ್ಯದ ಮೇಲೆ ಗಮನವಹಿಸಿ ನಿರ್ಣಯಗಳನ್ನು ತೆಗೆದುಕೊಳ್ಳಿ ಎಂದು ಕಿವಿಮಾತು ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ ಮಾತನಾಡಿ, ಹೊಸತನದ ಹುಡುಕಾಟದ ಜೊತೆಗೆ ಅಸ್ತಿತ್ವದಲ್ಲಿರುವ ವಿಷಯಗಳನ್ನು ಸುಧಾರಿಸುವುದು ಕೂಡ ನಾವೀನ್ಯತೆಯೆ. ಹಾಗಾಗಿಯೇ ನಮ್ಮ ಸುತ್ತಲಿನ ವಾತಾವರಣದಲ್ಲಿರುವ ವಾಸ್ತವತೆಯನ್ನು ಸೂಕ್ಷ್ಮವಾಗಿ ಗಮನಿಸಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಜೆ.ಎನ್.ಎನ್.ಸಿ.ಇ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಶೈಕ್ಷಣಿಕ ಡೀನ್ ಡಾ.ಪಿ.ಮಂಜುನಾಥ, ಸಂಶೋಧನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ, ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ.ಈ.ಬಸವರಾಜ ಸೇರಿದಂತೆ ವಿದ್ಯಾರ್ಥಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.