i
ಕುಡಿಯುವ ನೀರಿನ ಶಾಶ್ವತ ಯೋಜನೆ ಕಲ್ಪಿಸಿ-ಪತ್ರಕರ್ತರ ಸಂಘದ ಮನವಿ…
ಚಂದ್ರವಳ್ಳಿ ನ್ಯೂಸ್, ಹರಿಹರ :
ಹರಿಹರ ನಗರಕ್ಕೆ ಕುಡಿಯುವ ನೀರಿನ ಯೋಜನೆಗೆ ತುಂಗಭದ್ರ ನದಿಯ ಹೊರತಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಒತ್ತಾಯಿಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ತಹಸೀಲ್ದಾರ್ ಕೆ.ಎಂ.ಗುರು ಬಸವರಾಜ್ ಹಾಗೂ ಪೌರಾಯುಕ್ತ ಐಗೂರು ಬಸವರಾಜ್ರವರಿಗೆ ಮನವಿ ಸಲ್ಲಿಸಲಾಯಿತು.
ಹರಿಹರ ನಗರವು ದಕ್ಷಿಣ ಕಾಶಿ, ಮಾಜಿ ಕೈಗಾರಿಕಾ ನಗರ, ಭೌಗೋಳಿಕವಾಗಿ ರಾಜ್ಯದ ಕೇಂದ್ರ ಬಿಂದು, ದಾವಣಗೆರೆ ಜಿಲ್ಲೆಯ 2ನೇ ದೊಡ್ಡ ನಗರವೆಂಬ ಖ್ಯಾತಿ ಪಡೆದಿದೆ. ಇಷ್ಟೆಲ್ಲಾ ಐತಿಹಾಸಿಕ ಹಿನ್ನೆಲೆ, ಹೆಚ್ಚುಗಾರಿಕೆ ಹೊಂದಿರುವ ಹರಿಹರ ನಗರದ ಜನತೆಗೆ ಅನಾವೃಷ್ಟಿಯ ಸಂದರ್ಭದಲ್ಲಿ ಕುಡಿಯುವ ನೀರಿಗಾಗಿ ಹಪಾಹಪಿಸುವ ದುಸ್ಥಿತಿಗೆ ಬಂದಿರುವುದು ಬೇಸರದ ಸಂಗತಿಯಾಗಿದೆ.
ಗoಗಾ ಸ್ನಾನ, ತುಂಗಾ ಪಾನ ಎಂಬ ಗಾದೆ ಮಾತು ಜಿಲ್ಲೆಯ ಜೀವ ನದಿ ತುಂಗಭದ್ರ ನದಿಯ ಮಹತ್ವವನ್ನು ಸಾರುತ್ತದೆ. ಇಂತಹ ಪವಿತ್ರ ನದಿಯ ದಡದಲ್ಲಿರುವ ನಗರದ ಒಂದು ಲಕ್ಷಕ್ಕೂ ಹೆಚ್ಚಿನ ಜನತೆ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಹಪಾಹಪಿಸುತ್ತಾರೆ.
ಈ ಹಿಂದೆ ನಾಡಿನಾದ್ಯಂತ ಮಳೆ ಉತ್ತಮವಾಗಿರುತ್ತಿತ್ತು, ಬೇಸಿಗೆ ಯಲ್ಲಿ ನದಿ ಒಣಗಿದರೂ ಸಾಕಷ್ಟು ನೀರು ಸಂಗ್ರಹವಿರುತ್ತಿದ್ದ ಭದ್ರಾ ಜಲಾಶಯದಿಂದ ನದಿಗೆ ನೀರು ಸರಬರಾಜು ಮಾಡುತ್ತಿದ್ದರಿಂದ ನಗರದ ಜನತೆಗೆ ಅನಾವೃಷ್ಟಿಯ ಬೇಸಿಗೆ ಅವಧಿಯಲ್ಲೂ ಕುಡಿಯುವ ನೀರು ಸಿಗುತ್ತಿತ್ತು ಅಷ್ಟೋಂದು ಆಹಾಕಾರ ಕಾಣುತ್ತಿರಲಿಲ್ಲ.
ಆದರೆ ಇತ್ತಿಚಿನ ಕೇಲವು ವರ್ಷಗಳಿಂದ ಮಳೆಯ ಕೊರತೆ ಯಿಂದಾಗಿ ಬೇಸಿಗೆಯಲ್ಲಿ ನದಿಯಲ್ಲಿ ನೀರಿನ ಹರಿವು ಸ್ಥಗಿತ ವಾಗುತ್ತಿದೆ. ಇದರ ಪರಿಣಾಮ ಪ್ರತಿವರ್ಷ ಮರ್ನಾಲ್ಕು ತಿಂಗಳ ಕಾಲ ನಗರದ ಜನತೆ ಹನಿ ನೀರಿಗೂ ಪರದಾಡುವ ದುಸ್ಥಿತಿ ಉಂಟಾಗಿದೆ.
ಇದೇ ತುಂಗಭದ್ರ ನದಿಯಿಂದ ವಿವಿಧ ಜಿಲ್ಲೆ, ತಾಲ್ಲೂಕುಗಳ 50 ರಿಂದ 60 ಕಿ.ಮೀ. ದೂರದ 40ಕ್ಕೂ ಹೆಚ್ಚು ಕೆರೆಗಳ ಒಡಲಿಗೆ ನೀರು ಹರಿಸಲಾಗುತ್ತಿದೆ.
ಆ ಮೂಲಕ ಸಾವಿರಾರು ಹೆಕ್ಟರ್ ಪ್ರದೇಶದ ಜಮೀನುಗಳಿಗೆ ನೀರುಣಿಸಲು, ಅಂತರ್ಜಲ ವೃದ್ಧಿಸಲಾಗುತ್ತಿದೆ.ಪಕ್ಕದ ದಾವಣಗೆರೆ ನಗರದ ಜನತೆಯೆ ಕುಡಿಯುವ ನೀರಿಗಾಗಿ ತುಂಗಭದ್ರ ನದಿಯ ಹೊರತಾಗಿ ಟಿ.ವಿ.ಸ್ಟೇಷನ್ ಕೆರೆ, ಕುಂದವಾಡ ಕೆರೆ ಅಭಿವೃದ್ಧಿ ಪಡಿಸಲಾಗಿದೆ. ನದಿಯಲ್ಲಿ ನೀರು ಸರಬರಾಜು ಸ್ಥಗಿತಗೊಂಡರೂ ಕೂಡ ದಾವಣಗೆರೆ ನಗರದ 3 ಲಕ್ಷಕ್ಕೂ ಹೆಚ್ಚು ನಾಗರೀಕರಿಗೆ ಹಲವು ತಿಂಗಳುಗಳ ಕಾಲ ಈ ಕೆರೆಗಳಲ್ಲಿ ಸಂಗ್ರಹವಾಗುವ ನೀರಿನಿಂದ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತದೆ.
ಆದರೆ, ಸಮುದ್ರದ ನೆಂಟಸ್ತನ, ಉಪ್ಪಿಗೆ ಬಡತನ ಎಂಬ ಗಾದೆ ಮಾತಿನಂತೆ ನದಿ ದಡದಲ್ಲಿದ್ದರೂ ಹರಿಹರದ ಒಂದು ಲಕ್ಷಕ್ಕೂ ಹೆಚ್ಚು ಜನತೆ ಇತ್ತೀಚಿನ ಬಹುತೇಕ ಪ್ರತಿ ವರ್ಷ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಹಪಾಹಪಿಸುವ ದುಸ್ಥಿತಿ ಎದುರಾಗುತ್ತಿದೆ. ಈ ಹಿಂದೆ ನಗರಕ್ಕೆ ಸಮೀಪದ ದಾವಣಗೆರೆ ತಾಲ್ಲೂಕಿನ ಸಹರದ್ದಿಗೆ ಒಳಪಟ್ಟ ಅಗಸನಕಟ್ಟೆ ಕೆರೆಯನ್ನು ಹರಿಹರ ನಗರಕ್ಕೆ ಪರ್ಯಾಯ ಕುಡಿಯುವ ನೀರಿನ ಮೂಲವಾಗಿ ಅಭಿವೃದ್ಧಿ ಪಡಿಸಲು ವಿವಿಧ ಸಂಘಟನೆಗಳು, ಪ್ರಜ್ಞಾವಂತರು ಜಿಲ್ಲಾಡಳಿತ, ರಾಜ್ಯ ಸರ್ಕಾರ, ಜನಪ್ರತಿನಿಧಿಗಳ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.
ಆ ಪ್ರಯತ್ನದ ಫಲವಾಗಿ ಅಗಸನಕಟ್ಟೆ ಕೆರೆಯನ್ನು ಈ ದಿಸೆಯಲ್ಲಿ ಅಭಿವೃದ್ಧಿಪಡಿಸಲು ಹರಿಹರ ನಗರಸಭೆಯಿಂದ ಸಂಬoಧಿತರಿಗೆ ಪ್ರಸ್ತಾವನೆಯನ್ನು ಮೂರು ವರ್ಷಗಳ ಹಿಂದೆ ರವಾನಿಸಲಾಗಿದೆ. ಆದರೆ ಆ ಅಧಿಕಾರಿಗಳಿಗಾಗಲಿ, ಜನಪ್ರತಿನಿಧಿಗಳಿಗಾಗಲಿ ಇಚ್ಚಾಶಕ್ತಿ ಇಲ್ಲದ ಕಾರಣ ಪ್ರಸ್ತಾವನೆಯು ಧೂಳು ಹಿಡಿದಿದೆ.
ಹರಿಹರ ನಗರಕ್ಕೆ ನದಿಯ ಹೊರತಾಗಿ ಪರ್ಯಾಯ ನೀರಿನ ಮೂಲಗಳನ್ನು ಸೃಷ್ಟಿಸುವ ಸಲುವಾಗಿ ತಾಲ್ಲೂಕು ಆಡಳಿತ ಶೀಘ್ರವೇ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಲಾಯಿತು.
ಈ ಹಿಂದಿನoತೆಯೆ ನಿರ್ಲಕ್ಷ್ಯ ತೋರಿದರೆ ನಗರದ ವಿವಿಧ ಸಂಘ ಸoಸ್ಥೆಗಳು, ಪ್ರಜ್ಞಾವಂತರದ ಸಹಕಾರದೊಂದಿಗೆ ಜನಾಂದೋಲನ ವನ್ನು ಆರಂಭಿಸುವುದು ಅನಿವಾರ್ಯವಾಗುತ್ತದೆ ಎಂಬುದನ್ನು ಅಧಿಕಾರಿಗಳು ಗಮನಿಸಬೇಕು ಎಂದು ಒತ್ತಾಯಿಸಲಾಯಿತು.
ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಮತ್ತು ಪೌರಾಯುಕ್ತರು ಹರಿಹರ ನಗರಕ್ಕೆ ಪರ್ಯಾಯ ಕುಡಿಯುವ ನೀರನ ವ್ಯವಸ್ಥೆ ಅವಶ್ಯಕತೆ ಎನ್ನುವುದು ನಮ್ಮ ಗಮನಕ್ಕೆ ಬಂದಿದೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಶೀಘ್ರದಲ್ಲಿಯೇ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಸಂಘದ ಉಪಾಧ್ಯಕ್ಷ ಎಚ್.ಸುದಾಕರ್, ಪ್ರಧಾನ ಕಾರ್ಯದರ್ಶಿ ಹೆಚ್.ಸಿ.ಕೀರ್ತಿಕುಮಾರ್, ಟಿ.ಇನಾಯತ್ ವುಲ್ಲ, ನಿಕಟ ಪೂರ್ವ ಅಧ್ಯಕ್ಷ ಶೇಖರ್ ಗೌಡ, ಖಜಾಂಚಿ ಬಿ.ಎಂ.ಚoದ್ರ ಶೇಖರ್, ಕಾರ್ಯದರ್ಶಿ ಆರ್.ಮಂಜುನಾಥ್, ನಿರ್ದೇಶಕರುಗಳಾದ ವೈ.ನಾಗರಾಜ್, ಮಹಬೂಬ್ ಅದ್ವಾನಿ, ಹೆಚ್.ಶಿವಪ್ಪ ಮತ್ತು ಸದಸ್ಯರುಗಳಾದ ಆರ್.ಬಿ.ಪ್ರವೀಣ್, ಎಚ್. ಮಂಜಾನಾಯ್ಕ್, ಚಂದ್ರಶೇಖರ್ ಕುಂಬಾರ್, ಇರ್ಪಾನ್, ಜಿ.ಕುಮಾರ್, ವಿಶ್ವನಾಥ ಮೈಲಾಳ್, ಚಿದಾನಂದ ಕಂಚೀಕೇರಿ,ಜಿ.ಎo.ಮoಜುನಾಥ್,ಶಕೀಲ್ ಆಹಮ್ಮದ್,ಎಂ.ಎಸ್. ಆನಂದ್ ಕುಮಾರ್ ಹಾಗೂ ಇತರರಿದ್ದರು.