i
ನಂದೀಮಠ ಶಾಸನ ಸಾಹಿತ್ಯಶ್ರೀ ಪ್ರಶಸ್ತಿಗೆ ಭಾಜನರಾದ ಡಾ. ಬಿ. ರಾಜಶೇಖರಪ್ಪ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಧಾರವಾಡದಲ್ಲಿ ಈಚೆಗೆ ಜರುಗಿದ ಕರ್ನಾಟಕ ಶಾಸನ ಸಾಹಿತ್ಯ ಪರಿಷತ್ತಿನ ಪ್ರಥಮ ಮಹಾಧಿವೇಶನದಲ್ಲಿ, ಚಿತ್ರದುರ್ಗದ ಶಾಸನ-ಸಂಶೋಧಕ ಡಾ. ಬಿ. ರಾಜಶೇಖರಪ್ಪನವರಿಗೆ ಪ್ರೊ. ಶಿ.ಚೆ. ನಂದೀಮಠ ಶಾಸನ ಸಾಹಿತ್ಯ ಶ್ರೀ ಎಂಬ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಪ್ರಾಧ್ಯಾಪಕ ಡಾ. ಬಾಳೇಶ ಚಿನಗುಡಿ ಅವರು ಸ್ಥಾಪಿಸಿರುವ ಈ ಪ್ರಶಸ್ತಿ ರೂ. ೫,೦೦೦ ನಗದು, ಅಭಿನಂದನ ಪತ್ರ, ಸ್ಮರಣಿಕೆಗಳೊಂದಿಗೆ ಸನ್ಮಾನ ಪೂರ್ವಕವಾಗಿ ನೀಡಲಾಯಿತು.
ಪರಿಷತ್ತಿನ ಅಧ್ಯಕ್ಷರೂ ಶಾಸನ – ಸಂಶೋಧಕರೂ ಆದ ಶ್ರೀಮತಿ ಹನುಮಾಕ್ಷಿ ಗೋಗಿ, ಪರಿಷತ್ತಿನ ಉಪಾಧ್ಯಕ್ಷರೂ, ಇತಿಹಾಸ ಸಂಶೋಧಕರೂ ಆದ ಡಾ. ಶರಣಗೌಡ ಪಾಟೀಲರೂ ಮತ್ತು ಜನತಾ ಶಿಕ್ಷಣ ಸಮಿಇಯ ಡಾ. ಅಜಿತ್ಪ್ರಸಾದ್ ಅವರು ಈ ಮಾಹಿತಿಯನ್ನು ತಿಳಿಸಿರುತ್ತಾರೆ.
ಈ ಪ್ರಥಮ ಮಹಾಧೀವೇಶನದ ಸರ್ವಾಧ್ಯಕ್ಷತೆ ವಹಿಸಿದ್ದವರು ಕನ್ನಡ ವಿಶ್ವ ವಿದ್ಯಾಲಯ ಹಂಪಿಯ ಕುಲಪತಿಗಳಾದ ಡಾ. ಡಿ.ವಿ. ಪರಮಶಿವಮೂರ್ತಿ ಅವರು. ಕರ್ನಾಟಕ ಶಾಸನ ಸಾಹಿತ್ಯ ಪರಿಷತ್ತು, ರಾಷ್ಟ್ರೀಯ ದೃಶ್ಯಕಲಾ ಅಕಾಡೆಮಿ ಮತ್ತು ಜನತಾ ಶಿಕ್ಷಣ ಸಮಿತಿ ಜಂಟಿಯಾಗಿ ಆಯೋಜಿಸಿದ್ದ ಈ ಮಹಾಧಿವೇಶನ ೨೦೨೪ರ ಎಪ್ರಿಲ್ ೨೯ ಮತ್ತು ೩೦ ರಂದು ಜರುಗಿತು. ಶಾಸನಗಳನ್ನು ಕುರಿತು ಆಹ್ವಾನಿತರಿಂದ ದತ್ತಿ ಉಪನ್ಯಾಸಗಳಲ್ಲದೆ, ಕೆಲವರು ಆಸಕ್ತರು ಮತ್ತು ವಿದ್ಯಾರ್ಥಿಗಳು ಕೂಡಾ ಕೆಲವು ಸಂಪ್ರಬಂಧಗಳನ್ನು ಮಂಡಿಸಿದರು.
ಪ್ರಶಸ್ತಿಯ ಹೆಸರಿನ ಪ್ರೊ. ಶಿ.ಚೆ. ನಂದೀಮಠ ಅವರು ಸಂಸ್ಕೃತ ವಿದ್ವಾಂಸರಿದ್ದರಲ್ಲದೆ, ಇಂಗ್ಲೆಂಡಿನಲ್ಲಿ ವೀರಶೈವ – ಲಿಂಗಾಯತ ಧರ್ಮದ ಬಗ್ಗೆ ಸಂಶೋಧನ ಮಹಾ ಪ್ರಬಂಧವನ್ನು ರಚಿಸಿ ಡಾಕ್ಟರೇಟ್ ಪಡೆದಿದ್ದವರು. ಅಷ್ಟೇ ಅಲ್ಲ, ಡಾ. ಡಿ.ಸಿ. ಪಾವಟೆಯವರ ಸಮಕಾಲೀನರಾಗಿದ್ದರಲ್ಲದೆ ಕರ್ನಾಟಕ ವಿಶ್ವ ವಿದ್ಯಾಲಯದ ಸ್ಥಾಪನೆಗೆ ತಳಹದಿ ಹಾಕಿದ ಮಹನೀಯರಲ್ಲೊಬ್ಬರು. ಇಂಥವರ ಹೆಸರಲ್ಲಿ ಸ್ಥಾಪಿತವಾಗಿರುವ ಈ ಪ್ರಶಸ್ತಿ (ಇದೇ ಮೊದಲನೇ ಬಾರಿಯ ಪ್ರಶಸ್ತಿ) ಡಾ. ಬಿ. ರಾಜಶೇಖರಪ್ಪ ನವರಿಗೆ ಸಲ್ಲುತ್ತಿರುವುದು, ಚಿತ್ರದುರ್ಗದವರಿಗೆ ಹೆಮ್ಮೆ ಪಡುವ ಸಂಗತಿಯಾಗಿದೆ.
ಈ ಸಂದರ್ಭದಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷ ಡಾ. ದೇವರಕೊಂಡಾರೆಡ್ಡಿ, ಪರಿಷತ್ತಿನ ಡಾ. ಮಹಾದೇವಿ ಹಿರೇಮಠ, ಡಾ. ಬಿ.ವಿ. ಶಿರೂರ, ಪ್ರೊ. ಎಸ್.ಬಿ. ಹಿರೇಮಠ, ಡಾ. ಲಕ್ಷ್ಮಣ್ ತೆಲಗಾವಿ ಮುಂತಾದವರು ಹಾಜರಿದ್ದರು.