i
ಮುರುಘಾಮಠ ಸದಾ ಜನಪರ ಸಮಾಜಮುಖಿಯಾಗಿ ಕೆಲಸ ಮಾಡಲಿದೆ-ಡಾ.ಬಸವ ಕುಮಾರ ಸ್ವಾಮಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಐತಿಹಾಸಿಕ ಚಿತ್ರದುರ್ಗ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಹಿಂದಿನ ಪೀಠಾಧಿಪತಿಗಳೆಲ್ಲರೂ ಸಹ ನಿರ್ಮೋಹ, ನಿರಹಂಕಾರ, ನಿಸ್ವಾರ್ಥತೆಯ ಮಹಾಸದ್ಗುಣಗಳನ್ನು ಹೊಂದಿದವರು. ಸರಳತೆ, ಸಮಾನತೆ ಎಂಬ ಮಹಾತತ್ವದ ಮಣಿಹವನ್ನು ಹೊತ್ತು ನಡೆದು ಸಮಾಜ್ಕಕೆ ತಮ್ಮದೇ ಆದರ್ಶದ ಪಥವನ್ನು ಬಿಟ್ಟು ಹೋಗಿದ್ದಾರೆ. ಅಂತಹ ದಾರಿಯನ್ನು ಈಗಲೂ ಸಹ ಬೃಹನ್ಮಠ ಆಧರಿಸಿ, ಅನುಸರಿಸಿ ನಡೆದಿರುವುದಕ್ಕೆ ಈ ಸರಳ ಸಾಮೂಹಿಕ ಕಲ್ಯಾಣ ಮಹೋತ್ಸವವೇ ಸಾಕ್ಷಿ ಎಂದು ಚಿತ್ರದುರ್ಗ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಮತ್ತು ಎಸ್.ಜೆ.ಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವ ಕುಮಾರ ಸ್ವಾಮಿಗಳು ನುಡಿದರು.
ಬೃಹನ್ಮಠದ ಆವರಣದಲ್ಲಿನ ಅನುಭವ ಮಂಟಪದಲ್ಲಿ ಆಯೋಜಿಸಲಾಗಿದ್ದ ಸಾಮೂಹಿಕ ಕಲ್ಯಾಣ ಮಹೋತ್ಸವದ ಅಧ್ಯಧ್ಯತೆ ವಹಿಸಿ, ೧೬ ಜೋಡಿಗಳ ವಿವಾಹಗಳನ್ನು ನೆರವೇರಿಸಿ ಮಾತನಾಡಿದ ಶ್ರೀಗಳು, ಸದಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡ ಶ್ರೀ ಬೃಹನ್ಮಠದ ಸಾಮಾಜಿಕ ಕಾರ್ಯಗಳಲ್ಲಿ ಈ ಸರಳ ಸಾಮೂಹಿಕ ವಿವಾಹವೂ ಒಂದು. ಇದು ಎಷ್ಟೋ ಬಡಜನರ ಪಾಲಿಗೆ ಆಶಾಕಿರಣವಾಗಿದೆ ಎಂದರೆ ತಪ್ಪಲ್ಲ. ಶ್ರೀಮಠದೊಂದಿಗೆ ಸಾರ್ವಜನಿಕರು ಇಂತಹ ಜನಪರ ಕಾರ್ಯಗಳಲ್ಲಿ ಪಾಲ್ಗೊಂಡು ಈ ಪದ್ಧತಿಯನ್ನು ಅನುಸರಿಸುವ ಮೂಲಕ ದುಂದುವೆಚ್ಚ್ಕಕೆ ಕಡಿವಾಣ ಹಾಕುವ ಕ್ರಮವೂ ನಿಮ್ಮಿಂದ ನಡೆದಿರುವುದು ಶ್ಲಾಘನೀಯ ಎಂದರು.
ಸರಳ ಮತ್ತು ಸರ್ವಸಮಾನತೆಯ ತತ್ವದಡಿಯಲ್ಲಿ ಸಾಗುತ್ತಿರುವ ಈ ಕಾರ್ಯಕ್ರಮವು ಜಾತಿ, ಮತ ಭೇದವಿಲ್ಲದ ಎಲ್ಲರೂ ಒಂದು ವೇದಿಕೆ ಅಡಿಯಲ್ಲಿ ತಮ್ಮ ಬಾಳ ಬದುಕಿಗೆ ಮುಂದಡಿ ಇಡುತ್ತಿರುವುದು ಸಂತಸದ ಸಂಗತಿ ಎಂದ ಸ್ವಾಮೀಜಿ, ದಂಪತಿಗಳ ಬದುಕಿನಲ್ಲಿ ಸಾಮರಸ್ಯವೇ ಪ್ರಧಾನವಾಗಬೇಕು. ನಾನೆಚ್ಚು, ನೀನು ಕಡಿಮೆ ಎಂದರೆ ಅದು ಸಾರವತ್ತಾದ ಸಂಸಾರವಾಗಲು ಸಾಧ್ಯವಿಲ್ಲ. ಅನ್ಯೂನತೆಯೇ ಇಲ್ಲಿ ಪ್ರಧಾನ ಅಂಶವಾಗಬೇಕೆಂದರು.
ಹಾಗೆಯೇ ಇದೇ ತಿಂಗಳ ೮, ೯ ಮತ್ತು ೧೦ನೇ ತಾರೀಖಿನಂದು ಶ್ರೀಮಠದ ವತಿಯಿಂದ ಇದೇ ವೇದಿಕೆಯಲ್ಲಿ ವಿಶ್ವಕ್ಕೆ ಮಾದರಿಯ ಅನುಭವ ಮಂಟಪ ನಿರ್ಮಿಸಿ ಆದರ್ಶ ತತ್ವಗಳನ್ನು, ಬಿಟ್ಟು ಹೋಗಿರುವ ನಮ್ಮ ಸಾಂಸ್ಕೃತಿಕ ನಾಯಕರಾದ ಬಸವಣ್ಣನವರ ಜಯಂತಿಯನ್ನು ಏರ್ಪಡಿಸಲಾಗಿದೆ. ಇಲ್ಲಿ ಮ್ಕಕಳಿಗೆ, ದೊಡ್ಡವರಿಗೆ ವಚನ ಕಂಠಪಾಠ ಹಾಗೂ ಬಸವಾದಿ ಶಿವಶರಣರ ವೇಷ ಭೂಷಣ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಪ್ರತಿದಿನ ಸಂಜೆ ಚಿಂತನಗೋಷ್ಠಿಗಳು ನಡೆಯಲಿವೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಸಮಾರಂಭದ ಸಾನಿಧ್ಯ ವಹಿಸಿದ್ಧ ದಾವಣಗೆರೆ ವಿರಕ್ತಮಠದ ಡಾ. ಬಸವ ಪ್ರಭುಸ್ವಾಮೀಜಿ ಮಾತನಾಡಿ, ಜೀವನ ಸುಖವಾಗಿ ನಡೆಯಲು ಎಲ್ಲರಲ್ಲೂ ನಂಬಿಕೆ ಅಗತ್ಯ. ಅದು ಇರದೇ ಹೋದರೆ ಸಂಸಾರ ವಿಘಟನೆಯ ಹಾದಿ ಹಿಡಿಯುತ್ತದೆ. ಕುಟುಂಬ ಅಂದರೆ ತೊಂದರೆ, ತಾಪತ್ರಯ, ಸಮಸ್ಯೆ ಇರುವುದು ಸಹಜ. ಅವುಗಳನ್ನು ತಾಳ್ಮೆ, ಸಹನೆಯಿಂದ ಪರಿಹರಿಸಿಕೊಂಡು ಸಾಗಬೇಕು. ಈ ವೇದಿಕೆಯಲ್ಲಿ ಬಡವರು ಮಾತ್ರ ಮದುವೆ ಮಾಡಿಕೊಂಡಿಲ್ಲ. ಸಿರಿವಂತರೂ ಇಲ್ಲಿ ತಮ್ಮ ಕಲ್ಯಾಣ ಮಹೋತ್ಸವ ನೆರವೇರಿಸಿಕೊಂಡು ಹೋಗಿರುವ ಉದಾಹರಣೆ ಇದೆ. ಅಂತಹ ಸಾಮಾಜಿಕ ಹೊಣೆಗಾರಿಕೆ ಶ್ರೀಮಠದ್ದಾಗಿದೆ. ಎಂತಹ ಸಂದರ್ಭದಲ್ಲಿಯೂ ಸಾಮೂಹಿಕ ಕಲ್ಯಾಣ ಮಹೋತ್ಸವಗಳು ನಿಂತಿರುವ ಉದಾಹರಣೆ ಇಲ್ಲ ಎಂದು ನುಡಿದರು.
ಸಮಾರಂಭದ ಸಾನಿಧ್ಯ ವಹಿಸಿದ್ದ ಚಿತ್ರದುರ್ಗ ಬೃಹನ್ಮಠದ ಖಾಸಾಮಠ ಗುರುಮಠಕಲನ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಜೀವನದಲ್ಲಿ ಯಾವುದಕ್ಕೆ ಕೊರತೆಯಾದರೂ ಸಹ ವಿಶ್ವಾಸಕ್ಕೆ ಭಂಗ ಬರಬಾರದು. ಪರಸ್ಪರ ಪ್ರೀತಿ-ವಿಶ್ವಾಸ ಸಹ ಬಾಳ್ವೆಯಿಂದ ಬದುಕು ಹಸನಾಗಲು ಸಾಧ್ಯವಿದೆ. ಅಂತಹ ದಾರಿಯಲ್ಲಿ ನೂತನ ದಂಪತಿಗಳು ಹಾಗೂ ಸೇರಿದ ನೀವುಗಳು ಸಾಗಿರಿ ಎಂದು ಸಲಹೆ ನೀಡಿದರು.
ಜಮುರಾ ಕಲಾವಿದರಾದ ಉಮೇಶ ಪತ್ತಾರ ಮತ್ತು ಸಂಗಡಿಗರು ವಚನ ಗಾಯನ ಮತ್ತು ಗಂಜಿಗಟ್ಟೆ ಕೃಷ್ಣಮೂರ್ತಿ ಲಾವಣಿ ಪದಗಳನ್ನು ಹಾಡಿದರು.