i
ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಜಾಗೃತಗೊಳಿಸಿದ ಕಸಾಪ:ಶಿವಸ್ವಾಮಿ…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಕಳೆದ ಹಲವಾರು ದಶಕಗಳಿಂದ ಕನ್ನಡ ನಾಡಿನ ಸಮಸ್ತ ಜನರಲ್ಲಿ ಅಡಕವಾಗಿರುವ ಕನ್ನಡ ಭಾಷೆಯ ಸರ್ವತೋಮುಖ ಬೆಳವಣಿಗೆಗೆ ಕನ್ನಡ ಸಾಹಿತ್ಯ ಪರಿಷತ್ ಸಾಕಷ್ಟು ಪರಿಶ್ರಮ ವಹಿಸಿದೆ. ಕೇವಲ ವಿದ್ವಾಂಸರಿಗೆ ಮಾತ್ರ ಸೀಮಿತವಾಗಿದ್ದ ಕಸಾಪಇಂದು ಸಮಾಜದ ಕಟ್ಟಕಡೆಯ ಜನರಲ್ಲೂ ಜಾಗೃತಿಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ತಿಳಿಸಿದರು.
ಅವರು, ನಾಯಕನಹಟ್ಟಿಯ ವಿದ್ಯಾವಿಕಾಸ ಶಾಲೆಯಲ್ಲಿ ೧೧೦ನೇ ಕನ್ನಡಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚಿತ್ರದುರ್ಗ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ನಿರಂತರವಾಗಿ ಹಲವಾರು ಕಾರ್ಯಕ್ರಮಗಳ ಮೂಲಕ ಎಲ್ಲಾ ವರ್ಗದ ಜನರನ್ನು ತಲುಪಲು ಯಶಸ್ವಿಯಾಗಿದೆ. ಕನ್ನಡ ಭಾಷೆ ಬೆಳವಣಿಗೆಯ ಬಗ್ಗೆ ಎಲ್ಲರಲ್ಲೂ ಆತ್ಮವಿಶ್ವಾಸ ಮೂಡಿಸುವ ವಿಚಾರದಲ್ಲಿ ಯಶಸ್ವಿಯ ಹೆಜ್ಜೆ ಇಟ್ಟಿದೆ ಎಂದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ ಮಾತನಾಡಿ, ಕನ್ನಡ ನಾಡಿನಲ್ಲಿಯೇ ಭಾಷೆಯ ಉಳಿವಿನ ಬಗ್ಗೆ ಹೋರಾಟ ನಡೆಸುವ ಅನಿವಾರ್ಯತೆ ಉಂಟಾಗಿದೆ. ಅನ್ಯ ಭಾಷೆಗಳು ಕನ್ನಡ ಭಾಷೆಯ ಮೇಲೆ ಹೆಚ್ಚುಸವಾರಿ ಮಾಡುತ್ತಿದ್ದು, ಅವುಗಳನ್ನು ನಿಯಂತ್ರಿಸುವ ಕಾರ್ಯದಲ್ಲಿ ನಾವೆಲ್ಲರೂ ಸಂಘಟಿತರಾಗಬೇಕು. ಎಲ್ಲರಲ್ಲೂ ಕನ್ನಡದ ಆತ್ಮಾಭಿಮಾನ ಜಾಗೃತವಾಗಬೇಕು ಎಂದರು.
ಕನ್ನಡಪ್ರಾಧ್ಯಾಪಕ ಜಿ.ವಿ.ರಾಜಣ್ಣ ಉಪನ್ಯಾಸ ನೀಡಿ, ಕನ್ನಡ ಸಾಹಿತ್ಯ ಪರಿಷತ್ ಬೆಳವಣಿಗೆಗೆ ನಮ್ಮ ಮನೆಯ ಸ್ವಂತ ಕೆಲಸವಾಗಿದೆ. ಕನ್ನಡದ ನೆಲದಲ್ಲಿಯೇ ಕನ್ನಡವನ್ನು ವೈಭವೀಕರಿಸುವ ವಿಚಾರದಲ್ಲಿ ನಾವ್ಯಾರೂ ಹಿಂದೆ ಬೀಳಬಾರದು. ಕನ್ನಡ ಬೆಳವಣಿಗೆ ಇನ್ನೂ ಎತ್ತರಕ್ಕೆ ತೆಗೆದುಕೊಂಡು ಹೋಗುವ ಕಾರ್ಯವನ್ನು ನಾವೆಲ್ಲರೂ ಸೇರಿ ಮಾಡಬೇಕು. ಅನ್ಯ ಭಾಷೆಯ ಉಪಯೋಗ ನಿಯಂತ್ರಣದಲ್ಲಿರಬೇಕು ಎಂದರು.
ಕಾರ್ಯಕ್ರಮದಲ್ಲಿ ಕಸಾಪ ಹಿರಿಯ ಆಜೀವ ಸದಸ್ಯ ಪಟೇಲ್ ಜಿ.ಎಂ.ತಿಪ್ಪೇಸ್ವಾಮಿ, ಪ.ಪಂ ಸದಸ್ಯ ಸೈಯದ್ಅನ್ವರ್, ತಾಲ್ಲೂಕು ಕಾರ್ಯದರ್ಶಿ ಕೆ.ಚಿತ್ತಯ್ಯ, ಕಸಾಪ ಹೋಬಳಿ ಘಟಕ ಅಧ್ಯಕ್ಷ ಬಿ.ಕಾಟಯ್ಯ, ಬಿ.ಎಂ.ತಿಪ್ಪೇರುದ್ರಸ್ವಾಮಿ, ಪಣಿಯಪ್ಪ, ಜಿ.ವೈ.ತಿಪ್ಪೇಸ್ವಾಮಿ, ಶರವಿಮಹಾಂತೇಶ್, ಟಿ.ರೂಪ, ಎ.ಉಮಾ ಮುಂತಾದವರು ಉಪಸ್ಥಿತರಿದ್ದರು.