i
ಪ್ರಾಕೃತಿಕ ಸಂಪತ್ತಿನಲ್ಲಿ ಅತ್ಯಂತ ಉತ್ತಮ ರಾಜ್ಯ ಕರ್ನಾಟಕ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನವ ಕರ್ನಾಟಕದಲ್ಲಿ ಯಾರ ಪಾತ್ರ ಮುಖ್ಯವಾಗಿದೆ. ಯಾರಿಗಾಗಿ ನವ ಕರ್ನಾಟಕ ನಿರ್ಮಾಣ ಮಾಡಲಾಗುತ್ತಿದೆ ಎನ್ನುವ ಸ್ಪಷ್ಟತೆ ಇದ್ದರೆ, ಸಮೃದ್ಧ ನವ ಕರ್ನಾಟಕ ನಿರ್ಮಾಣ ಮಾಡಬಹುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ಡೆಕ್ಕನ್ ಹೆರಾಲ್ಡ್ ಮತ್ತು ಪ್ರಜಾವಾಣಿ ದಿನಪತ್ರಿಕೆ ವತಿಯಿಂದ ಅರಮನೆ ಮೈದಾನದ ಗಾಯತ್ರಿ ವಿಹಾರ ಸಾಗರದಲ್ಲಿ ಆಯೋಜಿಸಿರುವ ನವ ಕರ್ನಾಟಕ ಶೃಂಗ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ಪ್ರಾಕೃತಿಕ ಸಂಪತ್ತಿನಲ್ಲಿ ಅತ್ಯಂತ ಉತ್ತಮ ರಾಜ್ಯ. ಬೇರೆ ರಾಜ್ಯಗಳಲ್ಲಿ ಎಲ್ಲ ರೀತಿಯ ಸವಲತ್ತುಗಳು ದೊರೆಯುವುದಿಲ್ಲ.
ನಮ್ಮಲ್ಲಿ ಅರಣ್ಯ ಸಂಪತ್ತು ಇದೆ. ಮುಂದಿನ ಜನಾಂಗಕ್ಕೆ ಹೊಸ ವಿಚಾರ ನೀಡುವುದು ಪ್ರಜಾವಣಿಯ ಕಮಿಟ್ ಮೆಂಟ್ ತೋರಿಸುತ್ತದೆ. ಎಪ್ಪತ್ತು ಎಂಬತ್ತರ ದಶಕದಲ್ಲಿ ಒಂದು ಚರ್ಚೆ ನಡೆಯುತ್ತಿತ್ತು. ಕೆಲವು ರಾಜ್ಯ ಗಟ್ಟಿಯಾಗಿರಬೇಕು. ಕೆಲವರು ದೆಶದ ಅಖಂಡತೆ ದೃಷ್ಟಿಯಿಂದ ಕೇಂದ್ರ ಗಟ್ಟಿಯಾಗಿರಬೇಕು ಅಂತ ಚರ್ಚೆ ನಡೆಯುತ್ತಿತ್ತು. ಈ ಚರ್ಚೆಯಿಂದ ನಮ್ಮ ಜವಾಬ್ದಾರಿಗಿಂತ ಅಧಿಕಾರದ ಬಗ್ಗೆ ಹೆಚ್ಚು ಚರ್ಚೆ ಮಾಡಿದ್ದೇವೆ.
ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ನೀತಿ ಆಯೋಗ ರಚನೆ ಮಾಡಿ ಕೊ ಆಪರೇಟಿವ್ ಫೆಡರಲಿಸಂ ಜಾರಿಗೆ ತಂದು ರಾಜ್ಯಗಳ ಅಭಿವೃದ್ಧಿಯೂ ಆಗಿದೆ. ದೇಶವೂ ಬಲಿಷ್ಟವಾಗಿದೆ. ಇದರಿಂದ ಕೇಂದ್ರ ಹಾಗೂ ರಾಜ್ಯ ಎರಡೂ ಬಲಿಷ್ಟ ಆಗಬೇಕು ಎನ್ನುವ ವಾದ ಶುರುವಾಗಿದೆ ಎಂದರು.
ನಮ್ಮ ರಾಜ್ಯವನ್ನು ಬಲಿಷ್ಠ ಮಾಡಲು ನಮಗೆ ಯಾವುದೇ ಅಡ್ಡಿಯಿಲ್ಲ. ಮೂಲ ಸೌಕರ್ಯ ಕಲ್ಪಿಸಲು ಯಾವುದೇ ತೊಂದರೆಯಿಲ್ಲ. ಕೇಂದ್ರದ ಯೋಜನೆಗಳ ಹೊರತಾಗಿ ನಾವು ಯೋಜನೆಗಳನ್ನು ರೂಪಿಸಬಹುದು. ಅದಕ್ಕೆ ಸ್ಪಷ್ಟವಾಗಿರುವ ದೃಷ್ಟಿ ಹಾಗೂ ಬದ್ದತೆಯ ಕೊರತೆಯಿಂದ ಬಂದಿರುವ ಅವಕಾಶಗಳನ್ನು ನಾವು ಕಳೆದುಕೊಂಡಿದ್ದೇವೆ.
ನವ ಕರ್ನಾಟಕ ಅಂದರೆ ಏನು?ಇಲ್ಲಿನ ನೈಸರ್ಗಿಕ ಸಂಪತ್ತು ಮಾನವ ಸಂಪತ್ತು ಇವೆರಡನ್ನು ಹೇಗೆ ಬಳಕೆಮಾಡಿಕೊಳ್ಳುತ್ತೇವೆ ಎನ್ನುವುದು ಮುಖ್ಯ ಎಂದರು.
ಎಲ್ಲ ನದಿಗಳು ಪಶ್ಚಿಮದಲ್ಲಿ ಹುಟ್ಟಿ ಪೂರ್ವಕ್ಕೆ ಹರಿಯುವುದರಿಂದ ಅದರ ಸುತ್ತಲೂ ಸಾಕಷ್ಡು ಚಟುವಟಿಕೆಗಳು ನಡೆಯುತ್ತವೆ.
ನಾವು ಕೃಷ್ಣಾ ಯೋಜನೆಯನ್ನು ಸರಿಯಾಗಿ ಅನುಷ್ಟಾನ ಮಾಡುವಲ್ಲಿ ವಿಳಂಬ ಮಾಡಿದ್ದೇವೆ. ಕೃಷ್ಣಾ ನದಿಯಿಂದ ರಾಜ್ಯದಲ್ಲಿ ಅತಿ ಹೆಚ್ಚು ಅನುಕೂಲ ಇದೆ. ಆದರೆ ಅದನ್ನು ಬಳಕೆ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದೇವೆ.
ನಮ್ಮ ಹೊಸ ಜನಾಂಗವನ್ನು ಬಳಕೆ ಮಾಡಿಕೊಂಡು ಹೊಸ ಸಂಪತ್ತು ಸೃಷ್ಟಿ ಮಾಡಬಹುದು. ನಾನು ನಮ್ಮ ಜನರ ದಕ್ಷತೆ, ಅರ್ಹತೆ, ಸಾಧಿಸುವ ಕ್ರಮಗಳ ಬಗ್ಗೆ ನನಗೆ ವಿಶ್ವಾಸ ಇದೆ. ಜನರಿಲ್ಲದೇ ನವ ಕರ್ನಾಟಕ ನಿರ್ಮಾಣ ಸಾಧ್ಯವಿಲ್ಲ. ಜನರನ್ನು ಎಷ್ಟು ಬಳಕೆ ಮಾಡಿಕೊಳ್ಳುತ್ತೇವೆ ಅಷ್ಟು ಅಭಿವೃದ್ಧಿ ಸಾಧಿಸಲು ಸಾಧ್ಯ.
ನಾವು ಇಲ್ಲಿ ನವ ಕರ್ನಾಟಕದ ಬಗ್ಗೆ ಚಿಂತನೆ ಮಾಡುತ್ತಿದ್ದೇವೆ. ಆದರೆ, ಹಳ್ಳಿಯಲ್ಲಿರುವವನಿಗೆ ಯಾವ ಕರ್ನಾಟಕ ಇದ್ದರೆ ಏನು. ಅವನಿಗೆ ಏನು ಆಗಬೇಕಿದೆ ಎಂಬ ಆಲೊಚನೆ ಮೂಡುತ್ತದೆ. ಪ್ರತಿಯೊಬ್ಬರನ್ನು ಮೊಟಿವೇಟ್ ಮಾಡುವ ಕೆಲಸ ಮಾಡಬೇಕು ಎಂದರು.
ಕೆಳ ಹಂತದ ಮಾನವ ಸಂಪನ್ಮೂಲವನ್ನು ಅವನಿಗೆ ಉಚಿತ ಕೊಡುಗೆಗಳ ಮೂಲಕ ಅವರ ದುಡಿಯುವ ಆಸಕ್ತಿಯನ್ನು ಕಡಿಮೆ ಮಾಡಿದೆ. ಇದು ನನ್ನ ಭಾವನೆ.
ನಾನು ಸಿಎಂ ಆದ ಕೂಡಲೇ ನಾಲ್ಕು ಗಂಟೆಯಲ್ಲಿ ರೈತ ವಿದ್ಯಾನಿಧಿ ಯೋಜನೆ ಜಾರಿಗೆ ತಂದೆ. ಜಮೀನು ಅಷ್ಟೇ ಇದೆ. ಆದರೆ, ಜನರು ಹೆಚ್ಚಾಗಿದ್ದಾರೆ. ಹಳ್ಳಿಗಳಲ್ಲಿ ಕೆಲವು ಮನೆಗಳು ಮಾತ್ರ ಆರ್ ಸಿಸಿ ಇರುತ್ತವೆ. ಕಾರಣ ಅವರ ಮನೆಯಲ್ಲಿ ನೌಕರಿ ಮಾಡುವವರಿರುತ್ತಾರೆ. ಅದಕ್ಕೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದರೆ ಅವರ ಮಕ್ಕಳು ಶಿಕ್ಷಿತರಾದರೆ ಅವರು ಉದ್ಯೋಗ ಮಾಡಿ ಅವರ ಆರ್ಥಿಕ ಶಕ್ತಿ ಹೆಚ್ಚಾಗುತ್ತದೆ ಎಂದರು.
ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ಕಾರಣಕ್ಕಾಗಿ ನಾವು ಉನ್ನತ ಶಿಕ್ಷಣವನ್ನು ಉಚಿತವಾಗಿ ನೀಡಲು ತೀರ್ಮಾನಿಸಿದ್ದೇವೆ. ಆ ನಂತರ ತರಬೇತಿ ನೀಡುವ ಕೆಲಸ ಮಾಡಲಾಗುತ್ತಿದೆ. ಅದಕ್ಕೆ ಐಟಿಐ, ಡಿಪ್ಲೊಮಾ, ಇಂಜನಿಯರಿಂಗ್ ಕಾಲೇಜುಗಳ ಮೂಲಕ ತರಬೇತಿ ನೀಡುತ್ತೇವೆ. ನಾವು ಜಾಬ್ ರಿಪೋರ್ಟ್ ತಯಾರಿಸಿದ್ದೇವೆ. ಬೇರೆ ಯಾವ ರಾಜ್ಯವೂ ಜಾಬ್ ರಿಪೊರ್ಟ್ ತಯಾರಿ ಮಾಡಿಲ್ಲ.
ನಾವು ಅಸಂಘಟಿತ ಕಾರ್ಮಿಕರನ್ನೂ ಸಂಘಟಿತರನ್ನಾಗಿ ಮಾಡುವ ಕೆಲಸ ಮಾಡುತ್ತಿದ್ದೇವೆ ಎಂದರು.
ಕೃಷಿ ಮಹಿಳಾ ಕಾರ್ಮಿಕರು ಆರೋಗ್ಯ ಸಮಸ್ಯೆ ಹೆಚ್ಚಿದೆ. ಅವರ ಆರೋಗ್ಯದ ದೃಷ್ಟಿಯಿಂದ ಪ್ರತಿ ತಿಂಗಳು ಒಂದು ಸಾವಿರ ರೂ ಕೊಡುವ ಯೋಜನೆ ಮಾಡಿದ್ದೇವೆ.
ರೈತ ಕಾರ್ಮಿಕ ಈ ದೇಶದ ಗೇಮ್ ಚೇಂಜರ್, ಅದರ ಜೊತೆಗೆ ಮಹಿಳೆಯರು, ಯುವಕರು ನವ ಕರ್ನಾಟಕದ ಅಭಿವೃದ್ದಿ ಕೇಂದ್ರ ಬಿಂದುಗಳು. ಮೊದಲು ದುಡ್ಡೆ ದೊಡ್ಡಪ್ಪ ಅಂತ ಇತ್ತು. ಈಗ ದುಡಿಮೆಯೇ ದೊಡ್ಡಪ್ಪ, ಇನ್ನೊಂದು ಸರ್ಕಾರ ಶ್ರೀಮಂತ ಇರಬೇಕಾ ?ಜನರು ಶ್ರೀಮಂತ ಇರಬೇಕಾ ?ಎನ್ನುವುದು. ಜನರು ಆರ್ಥಿಕವಾಗಿ ಸಬಲರಾದರೆ ಅವರು ತೆರಿಗೆ ಕಟ್ಟುವ
ಮೂಲಕ ಸರ್ಕಾರದ ಆದಾಯ ಹೆಚ್ಚಿಸುತ್ತಾರೆ. ಆ ಮೂಲಕ ನಾವು ಮತ್ತೆ ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದು ಎಂದರು.
ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇವೆ. ಅಪೌಷ್ಟಿಕತೆಗೆ ಬೇರೆ ಬೇರೆ ರೀತಿಯಲ್ಲಿ ಆಹಾರ ನೀಡಲಾಗುತ್ತಿತ್ತು. ನಾನು ಎಲ್ಲರಿಗೂ ಒಂದೇ ಮಾದರಿ ಆಹಾರ ನೀಡಲು ಸೂಚನೆ ನೀಡಿದ್ದೇನೆ.
ನವ ಕರ್ನಾಟಕದಲ್ಲಿ ಎಲ್ಲರಿಗೂ ಅವಕಾಶ ಇದೆ. ಎಲ್ಲರನ್ನು ಜೊತೆಗೆ ತೆಗೆದುಕೊಂಡು ಹೋಗುವ ಕೆಲಸ ಮಾಡಲಾಗುವುದು. ಕರ್ನಾಟಕದ ಸಂಸ್ಕೃತಿ ಇದೆ. ಎಲ್ಲರು ಬೆಳೆಯಬೇಕು ಎನ್ನುವ ಕಲ್ಪನೆ ಆದಾರದಲ್ಲಿ ರಾಜ್ಯ ಕಟ್ಟುವ ಕೆಲಸ ಮಾಡುತ್ತಿದ್ದೇನೆ ಎಂದರು.