i
ಸೂರನಹಳ್ಳಿ ಶ್ರೀನಿವಾಸ್ ಆರೋಪ ಸುಳ್ಳು, ನನ್ನ ಗೆಲುವು ಕಸಿಯಲು ಸಾಧ್ಯವಿಲ್ಲ: ಶಾಸಕ ರಘುಮೂರ್ತಿ…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಕ್ಷೇತ್ರದ ತುರುವನೂರು ಹೋಬಳಿಯ ಬೆಳಗಟ್ಟ ಗ್ರಾಮದ ಬಳಿ ಬಿಜೆಪಿ ಮಂಡಲಾಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಮೇಲೆ ಭಾನುವಾರ ರಾತ್ರಿ ನಡೆದ ಹಲ್ಲೆಗೂ ನನಗೂ ಯಾವುದೇ ಸಂಬಂಧವಿಲ್ಲ. ಕಳೆದ ಹತ್ತು ವರ್ಷಗಳಿಂದ ಕ್ಷೇತ್ರದ ಎಲ್ಲಾ ಪಕ್ಷಗಳ ಮುಖಂಡರ ವಿಶ್ವಾಸ, ಗೌರವದೊಂದಿಗೆ ಇರುವ ನಾನು ಇಂತಹ ಕೃತ್ಯ ಮಾಡಲು ಸಾಧ್ಯವಿಲ್ಲ. ಆದರೆ, ದುರುದ್ದೇಶ ಪೂರಿತವಾಗಿ ಮಾದಿಗ ಸಮುದಾಯದ ದಿಕ್ಕು ತಪ್ಪಿಸಲು ನನ್ನ ಮೇಲೆ ಸುಳ್ಳು ಆರೋಪವನ್ನು ಮಾಡಲಾಗುತ್ತಿದೆ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.
ಅವರು, ಪತ್ರಿಕೆಯೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಆ ಸಂದರ್ಭದಲ್ಲಿ ನಾನು ಕ್ಷೇತ್ರದಲ್ಲಿ ಇರಲಿಲ್ಲ, ಬೆಳಗ್ಗೆ ಮಾಹಿತಿ ತಿಳಿಯಿತು ಇಂತಹ ಘಟನೆ ನಡೆಯಬಾರದು ಎಂದು ಬೇಸರಪಟ್ಟುಕೊಂಡೆ ಈ ಬಗ್ಗೆ ಕ್ರಮ ಕೈಗೊಳ್ಳುವ ಬಗ್ಗೆ ಮಾಹಿತಿ ಪಡೆದೆ, ಜಿಲ್ಲಾ ರಕ್ಷಣಾಧಿಕಾರಿಗಳೇ ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದ್ಧಾರೆ. ಪ್ರಜಾತಂತ್ರದ ವ್ಯವಸ್ಥೆಯಲ್ಲಿ ಚುನಾವಣೆಯಲ್ಲಿ ಮತದಾರರು ನೀಡಿದ ತೀರ್ಪನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ಕ್ಷೇತ್ರದ ಎಲ್ಲಾ ಅಭ್ಯರ್ಥಿಗಳು ಸ್ನೇಹಿತರಂತೆ ಇದ್ದೇವೆ. ಕಳೆದ ೬ರಂದು ನಗರದಲ್ಲಿ ನಡೆದ ಜಾತ್ರೆಯಲ್ಲಿ ಎಲ್ಲೂ ಸೇರಿ ಮುಕ್ತಿಬಾವುಟವನ್ನು ಹರಾಜಿನಲ್ಲಿ ಪಡೆದಿದ್ದೇವೆ. ಇಂತಹ ಸಂದರ್ಭದಲ್ಲಿ ವೈಯಕ್ತಿಕವಾಗಿ ನನಗೆ ಕೆಟ್ಟ ಹೆಸರು ತರಲು ಇಂತಹ ಆರೋಪ ಮಾಡಲಾಗಿದೆ. ಕ್ಷೇತ್ರದ ಜನರಿಗೆ ಶಾಸಕ ಟಿ.ರಘುಮೂರ್ತಿಯವರ ಬಗ್ಗೆ ಸ್ಪಷ್ಟ ಮಾಹಿತಿ ಇದೆ, ಅನಗತ್ಯವಾಗಿ ಆರೋಪ ಹೋರಿಸುವುದು ಸರಿಯಲ್ಲವೆಂದರು.
ಕಾಂಗ್ರೆಸ್ ಪ್ರತಿಭಟನೆ: ಶಾಸಕರ ಮೇಲೆ ಸೂರನಹಳ್ಳಿ ಶ್ರೀನಿವಾಸ್ ಮಾಡಿದ ಆರೋಪವನ್ನು ಬ್ಲಾಕ್ ಕಾಂಗ್ರೆಸ್ ಘಟಕ ಖಂಡಿಸಿದ್ದು, ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಹಿರಿಯ ಮುಖಂಡ ಎಸ್.ಎಚ್.ಸೈಯದ್ ಮಾತನಾಡಿ, ಶಾಸಕ ಟಿ.ರಘುಮೂರ್ತಿಯವರು ಹೃದಯ ವೈಶಾಲತೆವುಳ್ಳವರು. ಎಲ್ಲಾ ಪಕ್ಷಗಳ ಮುಖಂಡರ ಬಗ್ಗೆ ಗೌರವ ಹೊಂದಿದ್ಧಾರೆ. ಬಿಜೆಪಿ ಸೋಲಿನ ಭಯದಿಂದ ಈ ಆರೋಪ ಮಾಡಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಭದ್ರಪ್ಪ, ಬಿ.ಪಿ.ಪ್ರಕಾಶ್ಮೂರ್ತಿ, ಮಾರಣ್ಣ, ಎಚ್.ಆಂಜನೇಯ, ಬಿ.ಕೆ.ಗುಜ್ಜಾರಪ್ಪ, ಕೃಷ್ಣ, ಬಡಿಗಿಪಾಪಣ್ಣ ಮುಂತಾದವರು ಉಪಸ್ಥಿತರಿದ್ದರು.