i
ಸೂರನಹಳ್ಳಿ ಶ್ರೀನಿವಾಸ್ ಮೇಲೆ ಹಲ್ಲೆ, ಶಾಸಕರ ದೌರ್ಜನ್ಯಕ್ಕೆ ಸಮುದಾಯ ಉತ್ತರ…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದ ಬಿಜೆಪಿ ಮಂಡಲಾಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ರವರ ಮೇಲೆ ತುರುವನೂರು ಹೋಬಳಿಯ ಬೆಳಗಟ್ಟ ಬಳಿ ಭಾನುವಾರ ತಡರಾತ್ರಿ ಹಲ್ಲೆ ನಡೆದಿದ್ದು, ಇದರಲ್ಲಿ ಶಾಸಕ ಕೈವಾಡವಿದೆ ಎಂದು ಬಿಜೆಪಿ ಮಂಡಲಾಧ್ಯಕ್ಷ, ಗಾಯಾಳು ಸೂರನಹಳ್ಳಿ ಶ್ರೀನಿವಾಸ್ ಗಂಭೀರ ಆರೋಪ ಮಾಡಿದರು.
ಅವರು, ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ಗೆ ಮಾಲಾರ್ಪಣೆ ಮಾಡಿದ ನಂತರ ಪಕ್ಷದ ಕಾರ್ಯಕರ್ತರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ಶಾಸಕ ಟಿ.ರಘುಮೂರ್ತಿ ದುರುದ್ದೇಶದಿಂದಲೇ ನನ್ನ ಮೇಲೆ ಹಲ್ಲೆ ನಡೆಸಿರುತ್ತಾರೆ. ನನ್ನ ಪ್ರಾಣ ಇರುವ ತನಕ ನಾನು ಬಿಜೆಪಿಯ ಗೆಲುವಿಗಾಗಿ ಹೋರಾಟ ಮಾಡುತ್ತೇನೆ. ಶಾಸಕರು ಹಲ್ಲೆ, ಧಮ್ಮಿಕಿ ಮೂಲಕ ನನ್ನನ್ನು ಕಟ್ಟಿಹಾಕಲು ಸಾಧ್ಯವಿಲ್ಲ. ಈ ಬಗ್ಗೆ ಕ್ಷೇತ್ರದ ಮಾದಿಗ ಸಮುದಾಯ ಗಂಭೀರ ಚಿಂತನೆ ನಡೆಸಬೇಕು, ಬಿಜೆಪಿ ಅಭ್ಯರ್ಥಿ ಅನಿಲ್ಕುಮಾರ್ ಗೆಲುವಿಗೆ ಎಲ್ಲರೂ ಕೈಜೋಡಿಸಬೇಕು ಎಂದರು.
ಜಿಲ್ಲಾ ಮಾದಿಗ ಮಹಸಭಾ ಅಧ್ಯಕ್ಷ ಎಂ.ಶಿವಮೂರ್ತಿ ಮಾತನಾಡಿ, ಶಾಸಕ ಟಿ.ರಘುಮೂರ್ತಿಯವರು ಕೇವಲ ಸೂರನಹಳ್ಳಿ ಶ್ರೀನಿವಾಸ್ ಮೇಲೆ ಹಲ್ಲೆ ಮಾಡಿಲ್ಲ, ಈ ಹಲ್ಲೆ ಇಡೀ ಸಮುದಾಯದ ಮೇಲೆ ಮಾಡಿದ ಹಲ್ಲೆಯಾಗಿದೆ. ಶಾಂತಿಯುತ ವಾತಾವರಣಕ್ಕೆ ಕಾರಣಕರ್ತರಾಗಬೇಕಾದ ಶಾಸಕರೇ ಈ ರೀತಿ ಮಾದಿಗ ಸಮುದಾಯದ ಮುಖಂಡರ ಮೇಲೆ ಮಾರಣಾಂತಿಕ ಹಲ್ಲೆ ನಡೆಸುವುದು ಸರಿಯಲ್ಲ. ಈ ಬಾರಿಯ ಚುನಾವಣೆಯಲ್ಲಿ ಇಡೀ ಸಮುದಾಯ ಶಾಸಕರಿಗೆ ಬುದ್ದಿ ಕಲಿಸಬೇಕು ಎಂದರು.
ಅಭ್ಯರ್ಥಿ ಆರ್.ಅನಿಲ್ಕುಮಾರ್ ಮಾತನಾಡಿ, ಇದು ಮಾನವಸಮಾಜ ತಲೆತಗ್ಗಿಸಬೇಕಾದ ವಿಚಾರವಾಗಿದೆ. ಚುನಾವಣೆಯಲ್ಲಿ ಮತದಾರರು ನೀಡುವ ತೀರ್ಪನ್ನು ಗೌರವದಿಂದ ಸ್ವೀಕರಿಸಬೇಕು, ಇಂತಹ ದುರ್ಘಟನೆಗಳಿಂದ ಬಿಜೆಪಿಯನ್ನು ಹತ್ತಿಕ್ಕಲಾಗದು. ಕ್ಷೇತ್ರದ ಮತದಾರರು ಈಗಾಗಲೇ ಬಿಜೆಪಿಗೆ ಮತ ನೀಡುವ ಬಗ್ಗೆ ನಿರ್ಧಾರ ಮಾಡಿದ್ದಾರೆ, ಶಾಸಕರು ಗಂಭೀರ ಚಿಂತನೆ ನಡೆಸಿ ಹೆಜ್ಜೆ ಇಡಬೇಕು ಎಂದರು.
ಜಿಲ್ಲಾ ಉಪಾಧ್ಯಕ್ಷ ಬಾಳೆಮಂಡಿರಾಮದಾಸ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ವೆಂಕಟೇಶ್ಯಾದವ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪಾಲಯ್ಯ, ತಲ್ಲಂಸೀತಾರಾಮರೆಡ್ಡಿ, ತಾಲ್ಲೂಕು ರೈತ ಮೋರ್ಚಾ ಅಧ್ಯಕ್ಷ ನವೀನ್, ಕಾರ್ಯದರ್ಶಿ ಬಸವರಾಜು, ಮನೋಜ್, ಆರ್.ಡಿ.ಮಂಜುನಾಥ, ಟಿ.ವಿಜಯಕುಮಾರ್, ಜಾಜೂರುರಮೇಶ್ ಮುಂತಾದವರು ಉಪಸ್ಥಿತರಿದ್ದರು.