i
ನೂತನ ಸಂಸತ್ ಭವನ ಉದ್ಘಾಟಿಸಿದ ಪ್ರಧಾನಿ ಮೋದಿ…
ಚಂದ್ರವಳ್ಳಿ ನ್ಯೂಸ್, ಹೊಸದಿಲ್ಲಿ:
ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿರೋಧ ಪಕ್ಷಗಳ ಬಹಿಷ್ಕಾರದ ನಡುವೆ ಭಾನುವಾರ ನೂತನ ಸಂಸತ್ ಭವನ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಐತಿಹಾಸಿಕ ರಾಜದಂಡ(ಸೆಂಗೋಲ್) ವನ್ನು ಹೊಸ ಸಂಸತ್ ಕಟ್ಟಡದ ಸ್ಪೀಕರ್ ಆಸನದ ಸಮೀಪ ಪ್ರತಿಷ್ಠಾಪನೆ ಮಾಡುವ ಮೂಲಕ ದೇಶದ ಗಮನ ಸೆಳೆದರು.
ಸೆಂಗೋಲ್ ಪ್ರತಿಷ್ಠಾಪನೆ ಬಳಿಕ ಪೂಜೆ ಸಾಷ್ಟಾಂಗ ನಮಸ್ಕಾರವನ್ನು ಮಾಡಿದ ಪ್ರಧಾನಿ ಮೋದಿ ಅವರು ಹಾಗೂ ಓಂ ಬಿರ್ಲಾರಿಂದ ಪುಷ್ಪಾರ್ಚನೆ ಮಾಡಿದರು.
ನೂತನ ಸಂಸತ್ ಭವನದಲ್ಲಿ ವಿವಿಧ ಧರ್ಮದ ಮುಖಂಡರು ಪ್ರಾರ್ಥನೆ ಸಲ್ಲಿಸಿದ್ದು, ಪ್ರಾರ್ಥನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ಪ್ರಲ್ಹಾದ್ ಜೋಶಿ, ಎಸ್. ಜೈಶಂಕರ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿ ಹಲವರು ಭಾಗಿಯಾಗಿದ್ದರು. ಪ್ರಾರ್ಥನಾ ಸಭೆಯಲ್ಲಿ ಪಂಡಿತರು, ಸಾಧು ಸಂತರು ಪಾಲ್ಗೊಂಡಿದ್ದರು. ಸಂಸತ್ ಭವನದ ಕಟ್ಟಡ ನಿರ್ಮಿಸಿದ ಕಾರ್ಮಿಕರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸನ್ಮಾನ ಮಾಡಿದರು. ದೇಶದ ವಿವಿಧ ಭಾಗಗಳಿಂದ ಆಹ್ವಾನಿತರಾಗಿದ್ದ ಪುರೋಹಿತರು ಪೂಜಾ ಕಾರ್ಯಗಳನ್ನು ನೆರವೇರಿಸಿದರು. ಇದೇ ವೇಳೆ ಹಲವು ಧರ್ಮಗಳ ಪ್ರತಿನಿಧಿಗಳು ಬಹು- ಧಾರ್ಮಿಕ ಪ್ರಾರ್ಥನಾ ಗೀತೆಗಳನ್ನು ಹಾಡಿದರು.
ಸ್ವತಂತ್ರ ಭಾರತಕ್ಕೆ ಹೊಸ ಸಂಸತ್ ಭವನ ಬೇಕು ಅಂತಾ ಪಣ ತೊಟ್ಟಿದ್ದ ಮೋದಿ 2020ರಲ್ಲಿ ನೂತನ ಸಂಸತ್ ಭವನ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿದ್ದರುಯ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಕೂಸು. ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರಿ ಸ್ವೀಕರಿಸಿ 9 ವರ್ಷ ವಾಗ್ತಿದ್ದು, ಅದೇ ದಿನ ನೂತನ ಸಂಸತ್ ಭವನವನ್ನ ಲೋಕಾಪರ್ಣೆಗೊಳಿಸಲಿದ್ದಾರೆ.
ಭಾನುವಾರ ಬೆಳಿಗ್ಗೆ ೭.೩೦ಕ್ಕೆ ಹೊಸ ಸಂಸತ್ ಕಟ್ಟಡಕ್ಕೆ ತಲುಪಿದ ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರೊಂದಿಗೆ ಪೂಜೆಗೆ ಕುಳಿತರು. ಅದಕ್ಕೂ ಮುನ್ನ ಮಹಾತ್ಮ ಗಾಂಧಿ ಪ್ರತಿಮೆಗೆ ವಂದನೆ ಸಲ್ಲಿಸಿದರು. ತಮಿಳುನಾಡಿನ ಅಧೀನಂ ಸ್ವಾಮೀಜಿಗಳು ರಾಜದಂಡವನ್ನು ಪ್ರಧಾನಿಗೆ ಹಸ್ತಾಂತರ ಮಾಡಿದರು. ಮೋದಿ ಅವರು ಐತಿಹಾಸಿಕ ರಾಜದಂಡವನ್ನು ಲೋಕಸಭೆ ಚೇಂಬರ್ಗೆ ಹೊತ್ತಕೊಂಡು ಹೋಗಿ ಸ್ಪೀಕರ್ ಆಸನದ ಪಕ್ಕದಲ್ಲಿ ಪ್ರತಿಷ್ಠಾಪಿಸಿದರು.
ನೂತನ ಸಂಸತ್ ಭವನದಲ್ಲಿ ಲೋಕಸಭೆ ಹಾಗೂ ರಾಜ್ಯಸಭೆಯ ನೆಲಕ್ಕೆ ಹಾಸಲಾಗಿರುವ ಕಾರ್ಪೆಟ್ಗಳು ಕೂಡ ವಿಶೇಷ ಆಕರ್ಷಣೆಗಳಾಗಿವೆ. ಉತ್ತರ ಪ್ರದೇಶದ ಸುಮಾರು 900 ಮಂದಿ ಕುಶಲಕರ್ಮಿಗಳು ಕೈಯಿಂದ ಈ ಕಾರ್ಪೆಟ್ಗಳನ್ನು ನೇಯ್ದಿದ್ದಾರೆ. ಈ ಕಾರ್ಪೆಟ್ಗಳಲ್ಲಿ ರಾಷ್ಟ್ರಪಕ್ಷಿ ನವಿಲು ಮತ್ತು ರಾಷ್ಟ್ರೀಯ ಹೂವು ಕಮಲದ ಚಿತ್ರಗಳನ್ನು ಸುಂದರವಾಗಿ ಬಿಡಿಸಲಾಗಿದೆ. 2020ರ ಕೋವಿಡ್ ಸಾಂಕ್ರಾಮಿಕದ ಮಧ್ಯಭಾಗದಲ್ಲಿ ಯೋಜನೆ ಆರಂಭವಾಗಿತ್ತು. 2021ರ ಸೆಪ್ಟೆಂಬರ್ನಲ್ಲಿ ನೇಯ್ಗೆ ಕಾರ್ಯ ಆರಂಭವಾಗಿದ್ದು, 2022ರ ಮೇ ವೇಳೆಗೆ ನೇಯ್ಗೆ ಕಾರ್ಯ ಮುಗಿದಿತ್ತು. ಇದಾದ ನಂತರ ನವಿಲು ಮತ್ತು ಕಮಲದ ಚಿತ್ರಗಳನ್ನು ಏಳು ತಿಂಗಳ ಕಾಲ ಶ್ರಮಪಟ್ಟು ಕಾರ್ಪೆಟ್ಗಳಲ್ಲಿ ಚಿತ್ರಿಸಲಾಗಿದೆ. ಕಲ್ಲಿನ ಕೆತ್ತನೆಯ ಕಾರ್ಯಗಳನ್ನು ರಾಜಸ್ಥಾನದ ಶಿಲ್ಪಿಗಳು ಮಾಡಿದ್ದಾರೆ. ಬಿದಿರಿನ ಕಾರ್ಪೆಟ್ಗಳನ್ನು ತ್ರಿಪುರಾದ ಕಲಾವಿದರು ಒದಗಿಸಿದ್ದಾರೆ. ತೇಗದ ಮರಗಳನ್ನು ಮಹಾರಾಷ್ಟ್ರದ ನಾಗಪುರದಿಂದ ತರಿಸಿ ಸಂದರವಾಗಿ ಕೆತ್ತನೆ ಮಾಡಲಾಗಿದೆ.
ನೂತನ ಸಂಸತ್ ಭವನದಲ್ಲಿ 888 ಲೋಕಸಭಾ ಸದಸ್ಯರು, 300 ರಾಜ್ಯಸಭಾ ಸಂಸದರು ಕೂರಲು ಸ್ಥಳಾವಕಾಶವಿದೆ. ಲೋಕಸಭೆ ಚೇಂಬರ್ನಲ್ಲಿ ಜಂಟಿ ಅಧಿವೇನದಲ್ಲಿ ಒಟ್ಟಿಗೆ 1280 ಸಂಸದರು ಕೂರುವಷ್ಟು ಜಾಗವನ್ನು ಮೀಸಲಿಡಲಾಗಿದೆ.
ಹಲವು ವಿರೋಧ ಪಕ್ಷಗಳ ಬಹಿಷ್ಕಾರದ ನಡುವೆ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡರು ನೂತನ ಸಂಸತ್ ಭವನ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.