ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿಲಿಕಾನ್ ಸಿಟಿಯಲ್ಲಿ ನಡೆದ ಎರಡು ಪ್ರತ್ಯೇಕ ಚಾಣಾಕ್ಷ ಕಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ನಗರದ ಪೊಲೀಸರು ಯಶಸ್ವಿಯಾಗಿದ್ದಾರೆ. ನಂಬಿಕಸ್ಥ ಕೆಲಸಗಾರರೇ ಲಕ್ಷಾಂತರ ರೂಪಾಯಿ ಹಣ ದೋಚಿದ ಒಂದು ಪ್ರಕರಣವಾದರೆ, ಬಾಡಿಗೆ ಆ್ಯಪ್ ಮೂಲಕ ಕಾರು ಬುಕ್ ಮಾಡಿ ಎಸ್ಕೇಪ್ ಆಗಿದ್ದ ಅಂತರರಾಜ್ಯ ಕಳ್ಳ ಸಿಕ್ಕಿಬಿದ್ದಿರುವುದು ಮತ್ತೊಂದು ಪ್ರಕರಣ.
ಪ್ರಕರಣ ೧: ಯಜಮಾನನ ಮನೆಯಲ್ಲೇ ಕೈಚಳಕ ತೋರಿದ ನೇಪಾಳಿ ದಂಪತಿ ಅರೆಸ್ಟ್!
ಕೆಲಸಕ್ಕಿದ್ದ ಮನೆಯಲ್ಲೇ ಭಾರಿ ಪ್ರಮಾಣದ ನಗದು ಕಳ್ಳತನ ಮಾಡಿ ಪರಾರಿಯಾಗಿದ್ದ ನೇಪಾಳ ಮೂಲದ ದಂಪತಿಯನ್ನು ಅಮೃತಹಳ್ಳಿ ಠಾಣೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಪವನ್ ಬಿಸ್ತಾ ಹಾಗೂ ಈತನ ಪತ್ನಿ ಸೀತಾ ಬಿಸ್ತಾ ಬಂಧಿತ ಆರೋಪಿಗಳು.
ಘಟನೆಯ ವಿವರ: ನಗರದ ಅರ್ಕಾವತಿ ಲೇಔಟ್ನಲ್ಲಿರುವ ಗುತ್ತಿಗೆದಾರರೊಬ್ಬರ ಮನೆಯಲ್ಲಿ ಪವನ್ ಬಿಸ್ತಾ ಒಂದು ತಿಂಗಳಿನಿಂದ ಸೆಕ್ಯುರಿಟಿ ಗಾರ್ಡ್ ಆಗಿದ್ದ, ಆತನ ಪತ್ನಿ ಸೀತಾ ಮನೆಗೆಲಸ ಮಾಡುತ್ತಿದ್ದಳು. ಕೆಲಸಗಾರರಿಗೆ ಸಂಬಳ ನೀಡಲು ಉದ್ಯಮಿ ಮನೆಯ ಕಬೋರ್ಡ್ನಲ್ಲಿ 25 ಲಕ್ಷ ರೂ. ನಗದು ಇಟ್ಟಿದ್ದರು.
ಪ್ಲಾನ್ ನಡೆಸಿ ಎಸ್ಕೇಪ್: ಮೇ 27ರಂದು ಮಾಲೀಕರು ಕೆಲಸದ ನಿಮಿತ್ತ ಹೊರಹೋಗಿದ್ದನ್ನು ಗಮನಿಸಿದ ದಂಪತಿ, ಕಬೋರ್ಡ್ನಲ್ಲಿದ್ದ ಇಡೀ ಹಣವನ್ನು ದೋಚಿ ಪರಾರಿಯಾಗಿದ್ದರು. ಮಾಲೀಕರು ಮನೆಗೆ ಬಂದು ನೋಡಿದಾಗ ಕಳ್ಳತನ ಬೆಳಕಿಗೆ ಬಂದಿದ್ದು, ತಕ್ಷಣ ಅಮೃತಹಳ್ಳಿ ಠಾಣೆಗೆ ದೂರು ನೀಡಿದ್ದರು.
ಪೊಲೀಸ್ ಕಾರ್ಯಾಚರಣೆ:
ತನಿಖೆ ಕೈಗೆತ್ತಿಕೊಂಡ ಪೊಲೀಸರು ಕೆಂಗೇರಿಯ ಶಿರ್ಕೆ ಬಳಿ ಅವಿತಿದ್ದ ದಂಪತಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಕಳುವಾಗಿದ್ದ ಪೂರ್ತಿ 25 ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣ ೨: ಜೂಮ್ ಕಾರ್ ಮೂಲಕ ಬಾಡಿಗೆಗೆ ಪಡೆದು ಕಾರು ಕಳ್ಳತನ; ಕೇರಳದ ಖದೀಮ ವಶಕ್ಕೆ
ಬಾಡಿಗೆ ಆಧಾರಿತ ಸೇವೆ ಒದಗಿಸುವ 'ಜೂಮ್ ಆ್ಯಪ್' ಮೂಲಕ ಕಾರು ಬುಕ್ ಮಾಡಿ, ಬಳಿಕ ಅದನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ ಅಂತರರಾಜ್ಯ ಕಳ್ಳನನ್ನು ಮಲ್ಲೇಶ್ವರಂ ಠಾಣೆ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಕೇರಳದ ಕಣ್ಣೂರು ಮೂಲದ ಮಿಶೆಲ್ ಶಫೀಕ್ ಬಂಧಿತ ಆರೋಪಿ.
ಕಾರು ಪಾರ್ಕಿಂಗ್ ವಿವಾದ: ಪಾದರಾಯನಪುರ ನಿವಾಸಿ ಸೈಯದ್ ಕದೀರ್ ಪಾಷಾ ಎಂಬುವರು 2023ರಲ್ಲಿ ಸ್ವಿಫ್ಟ್ ಕಾರು ಖರೀದಿಸಿದ್ದರು. ಮನೆ ಮುಂದೆ ಜಾಗವಿಲ್ಲದ ಕಾರಣ ಮಲ್ಲೇಶ್ವರದ MES ಕಾಲೇಜು ರಸ್ತೆ ಬದಿಯಲ್ಲಿ ಪಾರ್ಕ್ ಮಾಡುತ್ತಿದ್ದರು. ಆದಾಯಕ್ಕಾಗಿ ಈ ಕಾರನ್ನು ಅವರ ಸಹೋದರನ ಹೆಸರಿನಲ್ಲಿ ಜೂಮ್ ಆ್ಯಪ್ನಲ್ಲಿ ನೋಂದಣಿ ಮಾಡಿಸಿದ್ದರು.
ಬಾಡಿಗೆ ನೆಪದಲ್ಲಿ ವಂಚನೆ: ಏಪ್ರಿಲ್ 22ರಂದು ಆರೋಪಿ ಮಿಶೆಲ್ ಶಫೀಕ್ ಒಂದು ದಿನದ ಮಟ್ಟಿಗೆ ಈ ಕಾರನ್ನು ಬುಕ್ ಮಾಡಿದ್ದ. ನಿಯಮದಂತೆ ಆತನಿಂದ ಆಧಾರ್ ಹಾಗೂ ಡಿಎಲ್ ಪಡೆದು ಕಾರು ಹಸ್ತಾಂತರಿಸಲಾಗಿತ್ತು. ಆದರೆ, ಮರುದಿನವಾದರೂ ಆತ ಕಾರು ಬುಕಿಂಗ್ ವಿಸ್ತರಿಸದೆ, ಕಾರನ್ನೂ ವಾಪಸ್ ನೀಡದೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದ.
ಖೆಡ್ಡಾಕ್ಕೆ ಬಿದ್ದ ಆರೋಪಿ: ಕಾರನ್ನು ಕಳ್ಳತನ ಮಾಡುವ ಉದ್ದೇಶದಿಂದಲೇ ಆತ ನಕಲಿ ಆಟ ಆಡಿದ್ದಾನೆ ಎಂದು ಸೈಯದ್ ಮಲ್ಲೇಶ್ವರಂ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಕೇರಳ ಮೂಲದ ಆರೋಪಿಯನ್ನು ಹೆಡೆಮುರಿ ಕಟ್ಟಿದ್ದಾರೆ.



