ಚಂದ್ರವಳ್ಳಿ ನ್ಯೂಸ್, ತುಮಕೂರು:
"ನನಗೂ ಮತ್ತು ಮಾಜಿ ಸಚಿವ ರಾಜಣ್ಣ ಅವರಿಗೂ 50 ವರ್ಷಗಳ ಸುದೀರ್ಘ ಸ್ನೇಹವಿದೆ. ನಾವೆಲ್ಲರೂ ಒಟ್ಟಾಗಿಯೇ ಇದ್ದೇವೆ ಎಂಬ ಸಂದೇಶ ಸಾರುವ ಉದ್ದೇಶದಿಂದಲೇ ಅವರ ಮನೆಗೆ ಭೇಟಿ ನೀಡಿ ಸಭೆ ನಡೆಸಿದ್ದೇನೆ," ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ಮಾಜಿ ಸಚಿವ ರಾಜಣ್ಣ ಅವರ ನಿವಾಸದಲ್ಲಿ ನಡೆದ ಪ್ರಮುಖ ಸಭೆಯ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಹಕಾರಿ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿರುವ ರಾಜಣ್ಣ ಅವರನ್ನು ಮುಂದಿನ ದಿನಗಳಲ್ಲಿ ಸಚಿವ ಸಂಪುಟಕ್ಕೆ ಸೇರ್ಪಡಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಸಿದ್ದರಾಮಯ್ಯ ಮತ್ತು ಡಿಕೆಶಿಗೆ ಅಭಿನಂದನೆ: ತುಮಕೂರು ಜಿಲ್ಲೆಗೆ ಸಿಎಂ ಸ್ಥಾನ ಸಿಗಬಹುದು ಎಂಬ ನಿರೀಕ್ಷೆಯ ಕುರಿತು ಮಾತನಾಡಿದ ಅವರು, "ಅದು ಸಂಪೂರ್ಣವಾಗಿ ಹೈಕಮಾಂಡ್ ತೀರ್ಮಾನ. ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿದ್ದ ಡಿ.ಕೆ. ಶಿವಕುಮಾರ್ ಅವರ ಶ್ರಮವನ್ನು ಪರಿಗಣಿಸಿ ಹೈಕಮಾಂಡ್ ಈ ನಿರ್ಧಾರ ಕೈಗೊಂಡಿದೆ. ನಾವು ಅವರೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತೇವೆ. ಹಿರಿಯ ನಾಯಕ ಸಿದ್ದರಾಮಯ್ಯ ಅವರು ಈ ಹಿಂದೆ ಹಣಕಾಸಿನ ಶಿಸ್ತಿನೊಂದಿಗೆ ಅತ್ಯುತ್ತಮ ಆಡಳಿತ ನೀಡಿದ್ದಾರೆ. ಅವರ ಮಾರ್ಗದರ್ಶನ ಸರ್ಕಾರಕ್ಕೆ ಸದಾ ಇರಲಿದ್ದು, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ," ಎಂದರು.
ನಾನು ಸದಾ ತೃಪ್ತ: ಉಪಮುಖ್ಯಮಂತ್ರಿ ಸ್ಥಾನದ ಬಗ್ಗೆ ನಿಮಗೆ ಅತೃಪ್ತಿ ಇದೆಯೇ ಎಂಬ ಪ್ರಶ್ನೆಗೆ ನೇರವಾಗಿ ಉತ್ತರಿಸಿದ ಡಾ. ಪರಮೇಶ್ವರ್, "ನಾನು ರಾಜಕಾರಣದಲ್ಲಿ ಎಂದಿಗೂ ಅತೃಪ್ತನಾಗಿಲ್ಲ, ಸದ್ಯದ ಜವಾಬ್ದಾರಿಯಿಂದ ಸಂಪೂರ್ಣ ತೃಪ್ತನಾಗಿದ್ದೇನೆ," ಎಂದು ಮಾರ್ಮಿಕವಾಗಿ ಉತ್ತರಿಸಿದರು.
ರಾಮಲಿಂಗಾರೆಡ್ಡಿ ಬಿಕ್ಕಟ್ಟು ಶಮನ:
ಸಚಿವ ರಾಮಲಿಂಗಾರೆಡ್ಡಿ ಅವರ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿ, "ಈಗಾಗಲೇ ಮುಖ್ಯಮಂತ್ರಿಗಳು ರಾಮಲಿಂಗಾರೆಡ್ಡಿ ಅವರೊಂದಿಗೆ ಮಾತನಾಡಿ ಮನವೊಲಿಸಿದ್ದಾರೆ. ಇಬ್ಬರ ನಡುವೆ ಏನು ಚರ್ಚೆಯಾಗಿದೆ ಎಂಬುದು ನನಗೆ ತಿಳಿದಿಲ್ಲ. ಒಂದು ವೇಳೆ ಅಗತ್ಯ ಬಿದ್ದರೆ ನಾನೂ ಕೂಡ ರಾಮಲಿಂಗಾರೆಡ್ಡಿ ಅವರೊಂದಿಗೆ ವೈಯಕ್ತಿಕವಾಗಿ ಮಾತನಾಡುತ್ತೇನೆ," ಎಂದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ಭರವಸೆ ಇರಲಿಲ್ಲ:
ಕೆಪಿಸಿಸಿ ಅಧ್ಯಕ್ಷ ಸ್ಥಾನ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, "ಅಧ್ಯಕ್ಷ ಸ್ಥಾನವನ್ನು ಯಾರಿಗೆ ನೀಡಬೇಕು ಅಥವಾ ನೀಡಲಿದ್ದೇವೆ ಎಂಬ ಯಾವುದೇ ಅಧಿಕೃತ ಭರವಸೆಯನ್ನು ಹೈಕಮಾಂಡ್ ಯಾರಿಗೂ ಕೊಟ್ಟಿರಲಿಲ್ಲ. ಪಕ್ಷದಲ್ಲಿ ನಾಯಕತ್ವ ಬದಲಾವಣೆಯ ಪ್ರಕ್ರಿಯೆಗಳು ನಡೆಯುವಾಗ ಹತ್ತಾರು ನಾಯಕರ ಹೆಸರುಗಳು ಮುಂಚೂಣಿಗೆ ಬರುವುದು ಸಹಜ," ಎಂದು ಪರಮೇಶ್ವರ್ ಅಭಿಪ್ರಾಯಪಟ್ಟರು.
"ರಾಜಣ್ಣ ಮತ್ತು ನನ್ನ ಒಡನಾಟ ಇಂದಿನದಲ್ಲ. ಸಚಿವ ಸಂಪುಟ ವಿಸ್ತರಣೆಯಾಗುವ ಸಂದರ್ಭದಲ್ಲಿ ರಾಜಣ್ಣ ಅವರಿಗೆ ಮಂತ್ರಿ ಸ್ಥಾನ ಕೊಡಿಸಲು ನಾವು ಗಂಭೀರ ಪ್ರಯತ್ನ ನಡೆಸಲಿದ್ದೇವೆ."
ಡಾ. ಜಿ. ಪರಮೇಶ್ವರ್, ಉಪಮುಖ್ಯಮಂತ್ರಿ.



