ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರಸ್ತುತ 60 ವರ್ಷಗಳ ವಜ್ರ ಮಹೋತ್ಸವದ ಸಂಭ್ರಮಾಚರಣೆಯಲ್ಲಿರುವ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಈ ವರ್ಷದ ಕೃಷಿಮೇಳವನ್ನು ಅತ್ಯಂತ ವಿಭಿನ್ನವಾಗಿ ಆಯೋಜಿಸಲು ಸಜ್ಜಾಗುತ್ತಿದೆ. 2026ರ ಅಕ್ಟೋಬರ್ 15 ರಿಂದ 18 ರವರೆಗೆ ನಾಲ್ಕು ದಿನಗಳ ಕಾಲ ಜಿಕೆವಿಕೆ ಆವರಣದಲ್ಲಿ ಈ ಬೃಹತ್ ಕೃಷಿಮೇಳ ನಡೆಯಲಿದೆ.
ಮುಂದಿನ ಪೀಳಿಗೆಗೆ ಈ ಬಾರಿಯ ಕೃಷಿಮೇಳವನ್ನು “ವೈವಿದ್ಯಮಯ ಕೃಷಿ: ಮುಂದಿನ ಪೀಳಿಗೆಗೆ” ಎಂಬ ವಿಶೇಷ ಶೀರ್ಷಿಕೆಯಡಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಕೃಷಿ ಕ್ಷೇತ್ರದಲ್ಲಿ ಭವಿಷ್ಯದ ಸಾಧ್ಯತೆಗಳು ಮತ್ತು ನೂತನ ತಂತ್ರಜ್ಞಾನಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ತರ ಪ್ರಯತ್ನವನ್ನು ಈ ಮೇಳದಲ್ಲಿ ಮಾಡಲಾಗುತ್ತಿದೆ.
ಕೃಷಿಮೇಳದ ಪ್ರಮುಖ ಆಕರ್ಷಣೆಗಳು:
ನಾಲ್ಕು ದಿನಗಳ ಕಾಲ ನಡೆಯುವ ಈ ಮೇಳದಲ್ಲಿ ರೈತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗಾಗಿ ಹಲವು ಉಪಯುಕ್ತ ಮಾಹಿತಿ ಮತ್ತು ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿದೆ.
ಬೃಹತ್ ವಸ್ತು ಪ್ರದರ್ಶನ ಮತ್ತು ಬೆಳೆ ಪ್ರಾತ್ಯಕ್ಷಿಕೆಗಳು, ಕೃಷಿ ತಂತ್ರಜ್ಞಾನ ಹಾಗೂ ವಿವಿಧ ತಳಿಗಳ ನೇರ ವೀಕ್ಷಣೆ, ಚರ್ಚಾಗೋಷ್ಠಿಗಳು ಮತ್ತು ಸಲಹಾ ಸೇವೆ, ಕೃಷಿ ವಿಜ್ಞಾನಿಗಳಿಂದ ರೈತರ ಸಮಸ್ಯೆಗಳಿಗೆ ನೇರ ಪರಿಹಾರ ಮತ್ತು ಮಾರ್ಗದರ್ಶನ ಪಡೆಯಬಹುದು.
ಕೃಷಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಪ್ರಗತಿಪರ ಕೃಷಿಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಆಧುನಿಕ ಮತ್ತು ಸುಸ್ಥಿರ ಕೃಷಿ ಪದ್ಧತಿ, ಹವಾಮಾನ ಚತುರ ಕೃಷಿ, ಸಾವಯವ ಮತ್ತು ನೈಸರ್ಗಿಕ ಕೃಷಿ ಹಾಗೂ ಮಣ್ಣು ರಹಿತ ಕೃಷಿ ಕುರಿತು ವಿಶೇಷ ಮಾಹಿತಿ. ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಕೃಷಿ ಪ್ರವಾಸೋದ್ಯಮ ಹಾಗೂ ಗ್ರಾಮೀಣ ಕಲೆ ಮತ್ತು ಸಂಸ್ಕøತಿಯ ಅನಾವರಣ ಪ್ರಮುಖವಾಗಿವೆ.
ಕೃಷಿ ಆಸಕ್ತರು, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಕೃಷಿಮೇಳದ ಸದುಪಯೋಗ ಪಡಿಸಿಕೊಳ್ಳಬೇಕಾಗಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಹಿರಿಯ ವಾರ್ತಾತಜ್ಞರು ಹಾಗೂ ಮುಖ್ಯಸ್ಥರಾದ ಡಾ. ಕೆ.ಪಿ. ರಘುಪ್ರಸಾದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



