ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಮನೆಗೆಲಸದಲ್ಲಿ ತಲ್ಲಿನಾಳಾಗಿ ಲಲಿತೆ ಒಬ್ಬಳೇ. ವೇಣು ಬರುವುದೂ ಸ್ವಲ್ಪ ತಡವೇ, ಆದ್ರೇ ವೀರೇಶ್ ಒಳ ಬಂದದ್ದು ಅವಳ ಗಮನಕ್ಕೇ ಇರಲಿಲ್ಲ. ತಂಗಾಳಿಯ ಜೊತೆ ನಿಶ್ಯಬ್ಧದಲ್ಲಿ ಮಧುರವಾಗಿ ತೇಲಿ ಬಂದಂತೆ ಲಲಿತ.. ಲಲಿತಾ...
ಪರಿಚಯದ ದ್ವನಿಯೇ ಆದ್ರೂ ವೇಣು ಅವರದ್ದಲ್ಲ ಯಾರದ್ದೂ? ಎಂದು ತಿರುಗಿದಾಗ, ಬಾಗಿಲಲ್ಲಿ ವೀರೇಶ್ ನಿಂತಿದ್ದ.
ಪರಮಾಶ್ಚರ್ಯ!!......
ಹೆಸರಿಡಿದು ಈ ದಿನಕ್ಕೂ ತುಟಿ ಬಿಚ್ಚದ ಧ್ವನಿ ಅದು, ಲಲಿತೆಯ ಕಣ್ಣುಗಳು ವೀರೇಶನ ಮುಖವನ್ನೇ ಗಮನಿಸಿದವು.
ಹೂವಿಗಾಗಿ ಬಂದ ಝೇಂಕಾರದ ದುಂಬಿಯಂತೆ ಮಧು ಚೆಲ್ಲಿದ ಮಂದಹಾಸ ರತಿಗಾಗಿ ಕಾದು ಕಾದು ಮನ್ಮಥನೇ ಬಂದಂತಹ ಉಲ್ಲಾಸ! ಪುಳಕಿತ ಪಾತರಗಿತ್ತಿಯಂತೇ ಕನಸಿನ ಕಟ್ಟೆಯೊಡೆದು ನುಗ್ಗಿದ ತೆರೆಯಂತೆ, ಸಾಗರದಾಳಕ್ಕೆ ನೆಗೆದ ಮೀನಂತೆ, ಮಾತುಗಳು ಮೌನವಾಗಿ ಮನಸ್ಸುಗಳು ಮಾತಾಡತೊಡಗಿ,ಇಬ್ಬರಲ್ಲೂ ಆನಂದ ಭಾಷ್ಪ ತುಳುಕಿದವು.
ಲಲಿತಾ ನಿನ್ನ ಅರ್ಥಮಾಡ್ಕೊಳ್ಳದೆ ನನ್ನ ಬದುಕನ್ನೇ ನರಕ ಮಾಡ್ಕೊಳ್ಳುತ್ತಿದ್ದೆ. ಅವಳು ಅಷ್ಟೇ ಮೆದು ಧ್ವನಿಯಲ್ಲಿ ವೀರು ಅಂದಳು, ತನ್ನದೇ ಕೈಗಳಿಂದ ಕೆನ್ನೆಯ ಮೇಲಿದ್ದ ಹನಿಗಳನ್ನ ಒರೆಸಿದ ವೀರೇಶ್, ಜಗತ್ತು ವಿಶಾಲವಾಗಿದೆ ಎಲ್ಲಿಯಾದ್ರೂ ದೂರ ಹೋಗಿ ನೆಮ್ಮದಿಯಿಂದ ಬದುಕೋಣ.
ವೀರೇಶನ ಮಾತುಗಳು ಮುಗಿಯುತ್ತಿದ್ದಂತೆ ಲಲಿತೆ ಅವನ ಕಾಲ ಬಳಿ ಕುಸಿದು ಕೈಯಿಂದ ಪಾದವನ್ನು ಒತ್ತಿಕೊಂಡಳು.
ವೀರೇಶ್ ಎರಡು ಕೈ ಬಳಸಿ ಮೇಲಕ್ಕೇಳಿಸುತ್ತಲೇ ಒಬ್ಬರನ್ನೊಬ್ಬರು ದಿಟ್ಟಿಸಿ, ಕಣ್ಗಳು ಬೆಸೆದು ನಿಂತವು ಕ್ಷಣಕಾಲ ಬಿಸಿ ಅಪ್ಪುಗೆಯಲ್ಲೇ. ಬಾ ಹೋಗೋಣ ಯಾರ ಹಂಗು ಬೇಡ ನಮ್ಮ ದಾರಿ ನಮಗೆ ಮಾತಾಡುತ್ತಲೇ ಲಲಿತೆಯ ಕೈ ಹಿಡಿದು ಸರಸರನೇ ಹೊರ ನಡೆಯತೊಡಗಿದ.
ರಾತ್ರಿಯಾಗಿದ್ದರೂ ಬಸ್ಸ್ ನಿಲ್ದಾಣದಲ್ಲಿ ಜನದಟ್ಟಣೆ ವಿಪರೀತ. ಆ ದೂರದ ಊರಿನ ಬಸ್ಸು ಸಹ ಹೊರಟು ನಿಂತಿತ್ತು, ಅದನ್ನು ಹಿಡಿಯುವ ಧಾವಂತ ಪಂಜರದಿಂದ ಬಿಟ್ಟ ಹಕ್ಕಿಗಳಂತೇ ಇಬ್ಬರ ಹೆಜ್ಜೆಗಳು ಬಿರುಸಾಗಿದ್ದವು ಬಸ್ಸಿನ ಬಾಗಿಲಿಗೆ. ಇನ್ನೇನು ಹತ್ತಬೇಕು ಅಷ್ಟರಲ್ಲಿಯೇ ಹಿಂಬದಿಯಿಂದ ಯಾರೋ? ಅಲುಗಾಡಿಸುತ್ತಾ ಬುಜ ತಟ್ಟಿ ಎಳೆದಂತಾಯಿತು, ಬೆದರಿಕೆಯ ಹೆಜ್ಜೆಗಳಲ್ಲಿ
ತಿರುಗಿ ನೋಡಿದ್ರೆ....ಅವರೇ.... ಡ್ಯಾಡಿ!!......ಇವರೇಕೇ ಇಲ್ಲಿಗೆ ಬಂದ್ರು, ನನ್ನ ಜೊತೆಯಲ್ಲಿ ಲಲಿತೆ ಬೇರೆ, ಏನಾಯ್ತು...ಅಯ್ಯೋ ದೇವ್ರೇ..
ನಾವಿಬ್ಬರೀಗ ಎಲ್ಲಿಗೇ.......??
ಗಾಬರಿಯಿಂದ ಬೆಚ್ಚಿದ !! ಚಡಪಡಿಸಿದ, ಲಲಿತೆ ಬಸ್ ಹತ್ತಿದವಳೇ ವೀರೇಶ್ ನ ಕೈಹಿಡಿದು ಎಳೆಯತೊಡಗಿದ್ದಳು ವೇಣು ಆವೇಶಭರಿತರಾಗಿ ಮಗನನ್ನ ಹಿಂದಕ್ಕೆಳೆಯತ್ತಿದ್ದರು ಇಲ್ಲ ಡ್ಯಾಡಿ.. ಕ್ಷಮಿಸಿಬಿಡಿ..
ತಪ್ಪು.. ನನ್ನದಲ್ಲ.....ಡ್ಯಾಡಿ.. ನಾನ್..ತಪ್ಪು.. ಮಾಡಿಲ್ಲ??? ವೇಣು ಅವ್ರು ಭುಜ ಹಿಡಿದು ಅಲ್ಲಾಡಿಸುತ್ತಲೇ ಇದ್ರು. ಲೇ ವೀರೂ ಏನೋ ಅದು, ತಪ್ಮಾಡಿಲ್ಲ.. ತಪ್ಮಾಡಿಲ್ಲಾ ಅಂತ ನಿದ್ದೇಲಿ ಕನವರಸ್ತಿದಿಯಾ ಏನ್ ಕಂಡ್ಯೋ ಅಂತದ್ದೂ.. ಟೈಮ್ ಎಷ್ಟಾಗಿದೆ ಗೊತ್ತೇನೋ ಏಳೊ ಎದ್ದೇಳೋ ಬೇಗ ಮನೆಯಲ್ಲಾ ಕೇಳುವಂತೆ ವೇಣು ಅವ್ರ ಧ್ವನಿ ಮಾತ್ರ ಸಣ್ಣಗೆ ಕೂಗಿಕೊಂಡು ನಿದ್ದೆಯಲ್ಲಿದ್ದ ವೀರೇಶನಿಗೆ ಬಡಿದು ಎಚ್ಚರಿಸಿದಂತಿತ್ತು.
ಥಟ್ಟನೆ ಎಚ್ಚರಗೊಂಡವನೇ ಹಾಸಿಗೆಯ ಬಲ ಮಗ್ಗುಲಿಗೆ ತಿರುಗಿದ, ಏನಾಶ್ಚರ್ಯ....!! ಇಲ್ಲಿಯವರೆಗೇ... ನಾನು ಕಂಡಿದ್ದೆಲ್ಲವೂ....ಕನಸೇ!!!
ಇಂತಹ ಕನಸುಗಳು ನನ್ನಂತವರನ್ನ ಬಿಡದೆ ಬೆನ್ನಟ್ಟಿರುತ್ತವೇನೋ ಅನ್ನುವ ಭ್ರಾಂತಿಯಾಯ್ತು ವೀರೇಶ್ ಗೆ. ಸೂರ್ಯ ಉದಯಿಸಿ ಆಗಲೇ ಮಾರೆತ್ತರಕ್ಕೆ ಸರಿದಿದ್ದ, ಡ್ಯಾಡಿ ಸ್ನಾನ ತಿಂಡಿ ಮುಗಿಸಿ ಬೇಗನೆ ಎಲ್ಲಿಗೋ ಹೊರಟಂತಿದೆ.
ಬ್ರೋಕರ್ ಶ್ರೀನಿವಾಸ್ ಬೇರೆ ಜೊತೆಗೇ ಇದ್ದಾರೆ. ಚಿಕ್ಕಮ್ಮ ಬೆಡ್ ಕಾಫಿ ಹಿಡಿದು ಒಳ ಬಂದವಳೇ ತಗೋ ವೀರು ಕಾಫೀ ಕಾಫಿಯ ಘಮ,ರೂಮ್ ತುಂಬೆಲ್ಲಾ ಘಮಿಸುತ್ತಿತ್ತು.
ಕಪ್ಪನ್ನ ಕೈಗಿಡುತ್ತಾ, ಯಾಕೆ ಈ ದಿನ ತುಂಬಾ ಹೊತ್ತು ನಿದ್ದೆ ಮಾಡ್ದೆ ಅಂತ ಕಾಣುತ್ತೆ ಕನಸುಗಳ ಸಂತೆಯೊಳಗಿದ್ರೋ ಹೇಗೆ ಬಿಸಿ ಕಾಫಿಯ ಜೊತೆ ಚಿಕ್ಕಮ್ಮನ ಮಾತುಗಳು ಹುಸಿನಗೆಯೊಂದಿಗೆ ಬೆರೆತಂತಿದ್ದವು.
ಕಾಫಿ ಹೀರುತ್ತಲೇ ವೀರೇಶ್ ಕಂಡ ಕನಸಿನ ಭಯವನ್ನ ತೋರ್ಪಡಿಸದೆ ಹುಸಿ ನಗೆಯಾದ. ಶ್ರೀನಿವಾಸ್ ಜೊತೆಗೂಡಿ ಬಂದ ವೇಣು ಒಂದು ಫೋಟೋವನ್ನು ವೀರೇಶ್ ಕೈಗೆತ್ತು ಇದು ಹಿರಿಯೂರಿನ ಸಂಬಂಧ ಒಬ್ಬಳೇ ಮಗಳು ಸುಂದರವಾಗಿದ್ದಾಳೆ ಶ್ರೀನಿವಾಸ್ ನಿನಗೋಸ್ಕರ ಹುಡುಕಿ ತಂದಿದ್ದಾರೆ, ನಾನು ನೋಡ್ಕೊಂಡು ಬರ್ತೀನಿ, ನೀನು ಮುಂದಿನ ಭಾನುವಾರ ಹೋಗಿ ನೋಡ್ಕೊಂಡು ಬರುವಂತೆ, ಈಗ ನಾನು ಹೋಗಿ ಬರ್ಲಾ ಅಂದ್ರು ವೀರೇಶ ಸಮ್ಮತಿಯಂತೆ ತಲೆಯಾಡಿಸಿದ ಲಲಿತೆಯೂ ಸಹ ಮುಗುಳ್ನಗೆಯಿಂದ ನೋಡುತ್ತಲೇ,ನನಗೂ ತೋರಿಸು ವಿರೂ, ನಮ್ಮನೆಗೆ ಬರೋ ಸೊಸೆ, ಹೇಗಿದ್ದಾಳೆ ಅಂತ ನಾನೂ ನೋಡಬೇಕಲ್ವಾ.
ವೀರೇಶ್ ಚಿಕ್ಕಮ್ಮನಿಗೆ ಆ ಫೋಟೋ ಸುಂದರಿಯನ್ನ ತೋರಿಸುತ್ತಲೇ ಮುಗುಳ್ನಗೆಯಿಂದ ಡ್ಯಾಡಿ ಹೋದ ದಾರಿಯನ್ನೇ ಗಮನಿಸಿದ್ದ ಅವರಿಬ್ರೂ ಮರೆಯಾಗುವ ತನಕ.
ಲೇಖನ- ಕುಮಾರ್ ಬಡಪ್ಪ, ಚಿತ್ರದುರ್ಗ.


