ಚಂದ್ರವಳ್ಳಿ ನ್ಯೂಸ್, ಧರ್ಮಪುರ:
ಹಿರಿಯೂರು ತಾಲ್ಲೂಕಿನ ಧರ್ಮಪುರ ಹೋಬಳಿಯ ಕಣಜನಹಳ್ಳಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತೋತ್ಸವವನ್ನು ಅತ್ಯಂತ ಸಡಗರದಿಂದ ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಗ್ರಾಮದ ಹೆಮ್ಮೆಯ ಪುತ್ರ, ನಿವೃತ್ತ ಸೈನಿಕ ಡಿ.ಎಂ. ಯೋಗೇಶ್ ಅವರನ್ನು ಗ್ರಾಮಸ್ಥರು ಗೌರವಪೂರ್ವಕವಾಗಿ ಸನ್ಮಾನಿಸಿ ಅಭಿನಂದಿಸಿದರು.
ಅಲ್ಲದೆ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾಗಿ ಜನಪರ ಸೇವೆ ಸಲ್ಲಿಸಿದ ಇಂದ್ರಮ್ಮ ಮಂಜಣ್ಣ ಅವರಿಗೂ ಕೂಡ ಗ್ರಾಮಸ್ಥರ ಪರವಾಗಿ ಗೌರವ ವಂದನೆ ಸಲ್ಲಿಸಲಾಯಿತು.
ಸಂವಿಧಾನದ ಮೌಲ್ಯಗಳ ಪಾಲನೆಯೇ ಶ್ರೇಷ್ಠ ಗೌರವ-
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಸೈನಿಕ ಡಿ.ಎಂ. ಯೋಗೇಶ್ ಅವರು ಮಾರ್ಮಿಕ ನುಡಿಗಳನ್ನಾಡಿದರು.
"ನಾವು ಬಾಬಾಸಾಹೇಬರಿಗೆ ಸಲ್ಲಿಸುವ ನಿಜವಾದ ಗೌರವವೆಂದರೆ ಕೇವಲ ಅವರ ಜಯಂತಿಯನ್ನು ಆಚರಿಸುವುದಲ್ಲ, ಬದಲಾಗಿ ಅವರು ನೀಡಿದ ಸಂವಿಧಾನದ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು. ದೇಶದ ರಕ್ಷಣೆ ಎಂದರೆ ಕೇವಲ ಮಣ್ಣಿನ ರಕ್ಷಣೆಯಲ್ಲ, ಬದಲಾಗಿ ಈ ದೇಶದ ಜನರ ಮತ್ತು ಅವರ ಹಕ್ಕುಗಳ ರಕ್ಷಣೆಯೂ ಹೌದು."
ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ರಂಗಸ್ವಾಮಿ, ಶಿವರಾಜ್, ಕೃಷ್ಣಮೂರ್ತಿ, ನರಸಿಂಹಪ್ಪ, ತಿಪ್ಪೇಸ್ವಾಮಿ, ಸಿದ್ದಯ್ಯ, ಶಿವಣ್ಣ, ಶ್ರೀನಿವಾಸ್, ರಾಘವೇಂದ್ರ, ನವೀನ್, ಹರೀಶ್, ಅಜಯ್, ದೇವೇಂದ್ರ, ಸಿದ್ದೇಶ್ ಹಾಗೂ ಅಂಬೇಡ್ಕರ್ ಯುವಕ ಸಂಘದ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಗ್ರಾಮದಲ್ಲಿ ಅಂಬೇಡ್ಕರ್ ವಿಚಾರಧಾರೆಗಳನ್ನು ಮೆಲುಕು ಹಾಕುವ ಮೂಲಕ ಅರ್ಥಪೂರ್ಣವಾಗಿ ಜಯಂತೋತ್ಸವವನ್ನು ಆಚರಿಸಲಾಯಿತು.


