ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
"ಗೃಹ ಲಕ್ಷ್ಮಿ ಹಾಗೂ ಗೃಹ ಜ್ಯೋತಿ ಯೋಜನೆಗಳ ಪರಿಷ್ಕರಣೆಯ ಹೆಸರಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವು ಮುಂದಿನ 2028ರ ವಿಧಾನಸಭಾ ಚುನಾವಣೆಗೆ ರಹಸ್ಯವಾಗಿ ಮಾಹಿತಿ (ಡೇಟಾ) ಕಲೆಹಾಕುತ್ತಿದೆ" ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಜೆ.ಪಿ. ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಜಾತ ಥಿಯೇಟರ್ ಎದುರಿನ ಕಟ್ಟಡವೊಂದರ ಟಾಪ್ ಫ್ಲೋರ್ನಲ್ಲಿ ಕುಳಿತು ಮುಂದಿನ ಚುನಾವಣೆಯ ತಂತ್ರಗಾರಿಕೆ ರೂಪಿಸಲಾಗುತ್ತಿದೆ ಎಂದು ದೂರಿದರು.
ಎಚ್ಡಿಕೆ ಎತ್ತಿರುವ ಪ್ರಮುಖ ಆಕ್ಷೇಪಗಳು:
ಮನೆ ಮನೆಯಲ್ಲಿ ಜಾತಿ ಸಮೀಕ್ಷೆ: ಡೇಟಾ ಕಲೆಹಾಕಲು ಗೃಹ ಲಕ್ಷ್ಮಿಯನ್ನು ಬಳಸಿಕೊಂಡ ಸರ್ಕಾರ, ಈಗ ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ ಮನೆ ಮನೆಗೆ ಹೋಗಿ ಜನರ ಜಾತಿಯನ್ನು ಕೇಳುತ್ತಿದೆ.
ಫೋಟೋ ಕಡ್ಡಾಯಕ್ಕೆ ಆಕ್ರೋಶ: ಗೃಹಜ್ಯೋತಿ, ಗೃಹಲಕ್ಷ್ಮಿ ಹಾಗೂ ಶಕ್ತಿ ಯೋಜನೆಗೆ ಫಲಾನುಭವಿಗಳ ಫೋಟೋ ಕಡ್ಡಾಯಗೊಳಿಸಲಾಗಿದೆ. ಈ ಫೋಟೋ ಅಪ್ಲೋಡ್ ಮಾಡಲು ಬಡ ಜನಸಾಮಾನ್ಯರು ಎಷ್ಟು ಹಣ ಖರ್ಚು ಮಾಡಬೇಕು? ಮೂರು ವರ್ಷಗಳ ಬಳಿಕ ಸರ್ಕಾರಕ್ಕೆ ಈಗ ಅನರ್ಹರನ್ನು ತೆಗೆಯುವ ಜ್ಞಾನೋದಯವಾಗಿದೆ ಎಂದು ಕುಟುಕಿದರು.
ಬೆಂಗಳೂರಿನ ಸ್ಥಿತಿ: ನಗರದ ರಸ್ತೆಗಳಲ್ಲಿ ಕಸದ ರಾಶಿ ಬಿದ್ದಿರುವುದನ್ನು ಮಾಧ್ಯಮಗಳು ತೋರಿಸುತ್ತಿವೆ. ಸರ್ಕಾರ ಮೊದಲು ಅದರತ್ತ ಗಮನ ಹರಿಸಲಿ ಎಂದು ಆಕ್ರೋಶ ಹೊರಹಾಕಿದರು.
'ಅವರು ಕೇವಲ ನಾಲ್ಕು ತಾಲೂಕಿಗೆ ಸಿಎಂ?':
ಮುಖ್ಯಮಂತ್ರಿಗಳ ವಿರುದ್ಧ ವಾಗ್ದಾಳಿ ಮುಂದುವರಿಸಿದ ಕುಮಾರಸ್ವಾಮಿ, "ಅವರು ತಮಗೆ ಕೇವಲ ನಾಲ್ಕು ತಾಲೂಕುಗಳು ಮಾತ್ರ ಮುಖ್ಯ ಎನ್ನುತ್ತಾರೆ. ಹಾಗಾದರೆ ಇವರು ಇಡೀ ಕರ್ನಾಟಕಕ್ಕೆ ಸಿಎಂ? ಬೆಂಗಳೂರು ದಕ್ಷಿಣಕ್ಕಾ? ಅಥವಾ ಕೇವಲ ನಾಲ್ಕು ತಾಲೂಕಿಗಾ? ನಾನು ರಾಮನಗರಕ್ಕೆ ಕಾಲಿಟ್ಟಾಗ ಅಲ್ಲಿ ಒಂದು ಹಳ್ಳಿ ರಸ್ತೆಯೂ ನೆಟ್ಟಗಿರಲಿಲ್ಲ. ಕನಕಪುರದಲ್ಲಿ ಈ ಹಿಂದೆ ಕರೆಂಟ್, ಕುಡಿಯುವ ನೀರು ಇತ್ತಾ? ಇದೆಲ್ಲ ಯಾರ ಕಾಲದಲ್ಲಿ ಅಭಿವೃದ್ಧಿಯಾಗಿದೆ ಎಂಬುದು ಜನರಿಗೆ ತಿಳಿದಿದೆ. ನಾನೇನು ಬಂಡೆ ಒಡೆದು ವಿದೇಶಕ್ಕೆ ಸಾಗಿಸಿಲ್ಲ" ಎಂದು ಪರೋಕ್ಷವಾಗಿ ತೀಕ್ಷ್ಣವಾಗಿ ಟೀಕಿಸಿದರು.
ಅರ್ಕಾವತಿ ಲೇಔಟ್ ಹಗರಣ ಹಾಗೂ ಬಿಡದಿ ಟೌನ್ಶಿಪ್ ವಿಚಾರವನ್ನು ಪ್ರಸ್ತಾಪಿಸಿದ ಅವರು, ರೈತರನ್ನು ಒಕ್ಕಲೆಬ್ಬಿಸಿ ಪಾತ್ರೆ ತೊಳೆಯುವ ಸ್ಥಿತಿಗೆ ತಂದವರು ಯಾರು ಎಂದು ಪ್ರಶ್ನಿಸಿದರು. 20 ವರ್ಷಗಳಾದರೂ ಕೆ.ಪಿ. ಕರಂತ ಹಾಗೂ ವಿಶ್ವೇಶ್ವರಯ್ಯ ಬಡಾವಣೆಗಳಲ್ಲಿ ಜನರಿಗೆ ಸರಿಯಾಗಿ ಸೈಟ್ ಹಂಚಿಲ್ಲ ಎಂದು ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.
ಕಲ್ಲು ಕ್ವಾರಿ ದುರಂತ: ಸರ್ಕಾರ ಮತ್ತು ಮಾಲೀಕರ ವಿರುದ್ಧ ಆಕ್ರೋಶ:
ಬೆಂಗಳೂರು ದಕ್ಷಿಣ ತಾಲೂಕಿನ ಮಾದಾಪಟ್ಟಣ ಕಲ್ಲು ಕ್ವಾರಿಯಲ್ಲಿ ನಡೆದ ಭೀಕರ ದುರಂತದಲ್ಲಿ ಬಿಹಾರ ಮೂಲದ ಕಾರ್ಮಿಕರು ಮೃತಪಟ್ಟಿರುವುದಕ್ಕೆ ಕುಮಾರಸ್ವಾಮಿ ತೀವ್ರ ಸಂತಾಪ ಸೂಚಿಸಿದರು.
ಬರೀ ದುಡ್ಡು ಮಾಡುವ ದಂದೆ: ಕ್ವಾರಿ ಮಾಲೀಕರಿಗೆ ಬರೀ ಹಣ ಮಾಡುವುದೇ ಕೆಲಸವಾಗಿದೆ. ಯಾವುದೇ ಮುಂಜಾಗ್ರತಾ ಅಥವಾ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ವೈಫಲ್ಯ: ಹಿಂದೆ ಶಿವಮೊಗ್ಗ, ಚಿಕ್ಕಬಳ್ಳಾಪುರಗಳಲ್ಲಿ ಇಂತಹ ದುರಂತ ನಡೆದಾಗಲೂ ಚರ್ಚೆಯಾಗಿತ್ತು. ಆದರೆ ಸರ್ಕಾರ ಪಾಠ ಕಲಿಯದೇ ಮೌನವಹಿಸಿದ್ದರಿಂದ ಈ ಘಟನೆ ಮರುಕಳಿಸಿದೆ. ಅಧಿಕಾರಿಗಳೊಂದಿಗೆ ಸಭೆ ನಡೆಸುವ ಸಿಎಂ, ಅಕ್ರಮ ಗಣಿಗಾರಿಕೆಯ ದೊಡ್ಡ ದಂದೆಕೋರರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.



