ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಆಶ್ರಯ ನಿವೇಶನ ಹಾಗೂ ವಸತಿ ಯೋಜನೆಯಡಿ ಮಂಜೂರಾಗಿರುವ ಜಮೀನಿನಲ್ಲಿ ನಿವೇಶನ ರಹಿತರಿಗೆ ಹಕ್ಕುಪತ್ರ ವಿತರಿಸುವಲ್ಲಿ ಕೆಲವು ಗ್ರಾಮ ಪಂಚಾಯಿತಿಗಳು ನಿರ್ಲಕ್ಷ್ಯ ತೋರುತ್ತಿವೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಕುಮಾರ್ ಶೆಟ್ಟಿ ಬಣ ) ತಾಲ್ಲೂಕು ಘಟಕದ ವತಿಯಿಂದ ತಾಲ್ಲೂಕು ಪಂಚಾಯತಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ತಾಲ್ಲೂಕು ಅಧ್ಯಕ್ಷ ಹಮಾಮ್ ವೆಂಕಟೇಶ್ ಮಾತನಾಡಿ ಗ್ರಾಮೀಣ ಪ್ರದೇಶದ ನಿವೇಶನ ರಹಿತ ಬಡತನ ಜನರಿಗೆ ಆದ್ಯತೆಯ ಮೇರೆಗೆ ಶೀಘ್ರವಾಗಿ ಆಶ್ರಯ ಯೋಜನೆಯಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಿ ಸೂರನ್ನು ಕಲ್ಪಿಸಲು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ ಸಂಸ್ಥೆ ಇದೆ.ಆದರೆ ಸರ್ಕಾರಿ ಜಾಗವನ್ನು ಗುರುತಿಸಿ ಬಡಾವಣೆಯಾಗಿ ಅಭಿವೃದ್ಧಿಪಡಿಸಿ ನಿವೇಶನ ರಹಿತ ಫಲಾನುಭವಿಗಳನ್ನು ಆಯ್ಕೆ ಮಾಡಿ ಹಕ್ಕುಪತ್ರ ಹಂಚಿಕೆ ಮಾಡಲು ಕೆಲವು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮೀನಾ ಮೇಷ ಎಣಿಸುತ್ತಿದ್ದಾರೆ ಎಂದು ಆರೋಪಿಸಿದರು.
ಜಮೀನು ಮಂಜರಾಗದೇ ಇದ್ದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಲಭ್ಯವಿರುವ ಸರ್ಕಾರಿ ಜಾಗವನ್ನು ಗುರುತಿಸಿ ಮಂಜೂರಾತಿಗಾಗಿ ಪ್ರಸ್ತಾವನೆಯನ್ನು ಸಲ್ಲಿಸಲು ಕ್ರಮವಹಿಸಬೇಕು, ಆದರೆ ಕೆಲವು ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದುಕಾಣುತ್ತಿದೆ ಈ ಬಗ್ಗೆ ತಾಲ್ಲೂಕಿನ ಶಾಸಕರು ಹಾಗೂ ತಾಲ್ಲೂಕುದಂಡಾಧಿಕಾರಿಗಳು ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ತಾಲ್ಲೂಕಿನಲ್ಲಿ ಕನಸವಾಡಿ ಗ್ರಾಮ ಪಂಚಾಯಿತಿ,ವ್ಯಾಪ್ತಿಗೆ ಸೇರಿದ ರಾಮದೇವನಹಳ್ಳಿ ಗ್ರಾಮದ ಸರ್ವೆ ನಂ. 100 ರಲ್ಲಿ 9-20ಎ/ಗುಂಟೆ, ದೊಡ್ಡಬೆಳವಂಗಲ ಹೋಬಳಿಯ ಭಕ್ತರಹಳ್ಳಿ ಸರ್ವೆ ನಂಬರ್ 39, ಹೊಸಹಳ್ಳಿ ಗ್ರಾಮದ ಸರ್ವೆ ನಂ. 55, ನಾಗಸಂದ್ರ ಗ್ರಾಮದ ಸರ್ವೆ ನಂ. 24/2, ಬಚ್ಚಹಳ್ಳಿ ಗ್ರಾಮದ ಸರ್ವೆ ನಂ. 10, ಶಿವಪುರ ಗ್ರಾಮದ ಸರ್ವೆ ನಂ. 133, 134, ಸೊಣ್ಣಪ್ಪನಹಳ್ಳಿ ಗ್ರಾಮದ ಸರ್ವೆ ನಂ. 53, ಚಿಕ್ಕಬೆಳವಂಗಲ ಗ್ರಾಮದ ಸರ್ವೆ ನಂ. 108, ದೊಡ್ಡಹೆಜ್ಜಾಜಿ ಗ್ರಾಮದ ಸರ್ವೆ ನಂ. 148, ಚುಂಚೇಗೌಡನ ಹೊಸಹಳ್ಳಿ ಗ್ರಾಮದ ಸರ್ವೆ ನಂ. 58/1, ಮಧುರನಹೊಸಹಳ್ಳಿ ಗ್ರಾಮದ ಸರ್ವೆ ನಂ. 10, ಕೂಗೋನಹಳ್ಳಿ ಗ್ರಾಮದ ಸರ್ವೆ ನಂ. 64, ಪಿಂಡಕೂರತಿಮ್ಮನಹಳ್ಳಿ ಗ್ರಾಮದ ಸರ್ವೆ ನಂ. 13, ಸರ್ಕಾರಿ ಜಾಗ ಇದ್ದು ಪಹಣಿಯಲ್ಲಿ ಆಶ್ರಯ ನಿವೇಶನ ಯೋಜನೆ ಹಾಗೂ
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ವರ್ಗಾಯಿಸಿದ್ದಾರೆ ಆದರೆ ಸಂಬಂಧಪಟ್ಟ ಅಧಿಕಾರಿಗಳು ಈ ಜಗವನ್ಜ್ ಅಭಿವೃದ್ಧಿ ಪಡಿಸದೇ ನಕ್ಷೆಯಿಲ್ಲ, ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇದೆ. ಫಲಾನುಭವಿಗಳ ಆಯ್ಕೆ ಬಾಕಿ ಇದೆ, ಈ ಜಾಗದಲ್ಲಿ ತಕರಾರು ಇದೆ, ಹದ್ದುಬಸ್ತು ಆಗಿರುವುದಿಲ್ಲವೆಂಬ ಕುಂಟು ನೆಪವನ್ನು ಅಧಿಕಾರಿಗಳು ಹೇಳುತ್ತಿದ್ದು ಇದನ್ನು ಕರವೇ ಖಂಡಿಸುತ್ತದೆ ಎಂದರು.
ಈ ಕೂಡಲೇ ತಾಲ್ಲೂಕು ಪಂಚಾಯಿತಿ, ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಭೂಮಾಪನ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಫಲಾನುಭವಿಗಳಿಗೆ ನಿವೇಶನ ಹಂಚಿಕೆಯನ್ನು ಮಾಡಿಕೊಡಬೇಕಾಗಿ ಒತ್ತಾಯಿಸುತ್ತೇವೆ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತಾಲೂಕು ಕಚೇರಿ ಹಾಗೂ ತಾಲೂಕು ಪಂಚಾಯಿತಿಗಳ ಮುಂದೆ ಉಗ್ರ ಹೋರಾಟ ರೂಪಿಸಲಾಗುವುದು ಎಂದರು.
ಈ ವೇಳೆ ಜಿಲ್ಲಾಧ್ಯಕ್ಷ ಮುನಿರಾಜು, ಜಿಲ್ಲಾ ಉಪಾಧ್ಯಕ್ಷ ಎಸ್ ಎಲ್ ವೇಣು , ತಾಲೂಕು ಅಧ್ಯಕ್ಷ ಹಮಾಮ್ ವೆಂಕಟೇಶ್, ತಾಲೂಕು ಕಾರ್ಯಾಧ್ಯಕ್ಷ ಜೋಗಹಳ್ಳಿ ಅಮ್ಮು, ಯುವ ಘಟಕ ಅಧ್ಯಕ್ಷ ಹೇಮಂತ್, ಉಪಾಧ್ಯಕ್ಷ ಕೆ.ಆರ್. ಮಂಜುನಾಥ್, ಎಸ್ ಎಂ ಆನಂದ್ ಕುಮಾರ್, ಖಜಾಂಚಿ ರವಿ ಮುಕ್ಕೇನಹಳ್ಳಿ, ತಾಲೂಕು ಪ್ರಧಾನ ಕಾರ್ಯದರ್ಶಿ ಬಶೀರ್ ಶ್ರೀ ನಗರ, ಮುಖಂಡರಾದ ಶ್ರೀನಿವಾಸ್,ಸೂರ್ಯ ನಾರಾಯಣ, ದಾದಾಫಿರ್, ಡಿ ಕೆ ಬಾಬಾ, ಆರ್ ಮುನಿಕೃಷ್ಣ, ಮಹೇಶ್ ಕುಮಾರ್, ಆನಂದ್ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.



