Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

'ಗುರುದಕ್ಷಿಣೆ'ಯೇ ಆರ್‌ಎಸ್‌ಎಸ್‌ಸಂಸ್ಥೆಯ ಪ್ರಮುಖ ಆರ್ಥಿಕ ಮೂಲ

Advertisement
Advertisement

ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
"ಆರ್‌ಎಸ್‌ಎಸ್‌ಸಂಸ್ಥೆಗೆ ಬರುವ ಪ್ರತಿಯೊಂದು ರೂಪಾಯಿಗೂ ಪಕ್ಕಾ ಲೆಕ್ಕವಿದೆ. ಒಂದು ವೇಳೆ ಸರ್ಕಾರ ಎಲ್ಲ ಸಂಘಟನೆಗಳ ನೋಂದಣಿಯನ್ನು ಕಡ್ಡಾಯಗೊಳಿಸಿ ಹೊಸ ಕಾನೂನು ತಂದರೆ, ನಾವು ಅದನ್ನು ಪಾಲಿಸಲು ಸಿದ್ಧರಿದ್ದೇವೆ" ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಸ್ಪಷ್ಟಪಡಿಸಿದೆ.

ಆರ್‌ಎಸ್‌ಎಸ್‌ನ ನೋಂದಣಿ ಹಾಗೂ ಹಣಕಾಸಿನ ಪಾರದರ್ಶಕತೆ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಇತ್ತೀಚೆಗೆ ಎತ್ತಿದ್ದ ಪ್ರಶ್ನೆಗಳಿಗೆ ಸಂಘದ ವತಿಯಿಂದ ತೀಕ್ಷ್ಣ ತಿರುಗೇಟು ನೀಡಲಾಗಿದೆ.

ಬೆಳಗಾವಿಯಲ್ಲಿ ನಡೆದ ಆರ್‌ಎಸ್‌ಎಸ್ ಚಿಂತನ-ಮಂಥನ ಸಭೆಯಲ್ಲಿ ಮಾತನಾಡಿದ ದಕ್ಷಿಣ-ಮಧ್ಯ ಕ್ಷೇತ್ರ (ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶ) ಪ್ರಚಾರಕ ಭರತ್‌ಕುಮಾರ್ ಅವರು ಈ ಕುರಿತು ವಿಸ್ತೃತ ವಿವರಣೆ ನೀಡಿದರು.

ಆರ್‌ಎಸ್‌ಎಸ್ ಆರ್ಥಿಕತೆ ಮತ್ತು ನೋಂದಣಿ ಕುರಿತು ಪ್ರಮುಖಾಂಶಗಳು:
ನೋಂದಣಿ ಅಗತ್ಯವಿಲ್ಲ: ಪ್ರಸ್ತುತ ದೇಶದಲ್ಲಿ ಜಾರಿಯಲ್ಲಿರುವ ಕಾನೂನು ವ್ಯವಸ್ಥೆಯ ಪ್ರಕಾರ ಆರ್‌ಎಸ್‌ಎಸ್ ಪ್ರತ್ಯೇಕವಾಗಿ ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲ. ಒಂದು ಕುಟುಂಬವನ್ನು ಸಂಸ್ಥೆಯಾಗಿ ನೋಂದಾಯಿಸದೇ ಸದಸ್ಯರೆಲ್ಲರೂ ಸೇರಿ ಹೇಗೆ ಖರ್ಚು-ವೆಚ್ಚ ನಿಭಾಯಿಸುತ್ತಾರೋ, ಹಾಗೆಯೇ ಸಂಘ ಕೂಡ ಈಗಿನ ಕಾನೂನು ವ್ಯಾಪ್ತಿಯಲ್ಲೇ ಕಾರ್ಯನಿರ್ವಹಿಸುತ್ತಿದೆ.

ದೇಣಿಗೆ ಪಡೆಯುವುದಿಲ್ಲ: ಆರ್‌ಎಸ್‌ಎಸ್ ಯಾವುದೇ ಕೈಗಾರಿಕೋದ್ಯಮಿಗಳು, ರಾಜಕಾರಣಿಗಳು ಅಥವಾ ಸಾರ್ವಜನಿಕರಿಂದ ಯಾವುದೇ ರೀತಿಯ ದೇಣಿಗೆಯನ್ನು ಸಂಗ್ರಹಿಸುವುದಿಲ್ಲ.

ಗುರುದಕ್ಷಿಣೆಯೇ ಮೂಲ: ಸಂಘದ ಸ್ವಯಂಸೇವಕರು ವರ್ಷಕ್ಕೊಮ್ಮೆ 'ಗುರುದಕ್ಷಿಣೆ' ರೂಪದಲ್ಲಿ ಸ್ವಯಂಪ್ರೇರಿತವಾಗಿ ಸಮರ್ಪಿಸುವ ಕೊಡುಗೆಯೇ ಸಂಘದ ಪ್ರಮುಖ ಆರ್ಥಿಕ ಮೂಲವಾಗಿದೆ.

ಬ್ಯಾಂಕ್ ಖಾತೆಗೆ ಜಮೆ: ಸಂಘಕ್ಕೆ ಬರುವ ಪ್ರತಿಯೊಂದು ರೂಪಾಯಿಗೂ ಸರಿಯಾದ ಲೆಕ್ಕ ಇರುತ್ತದೆ. ಸಂಗ್ರಹವಾದ ಹಣವನ್ನು ಮರುದಿನವೇ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ಒಂದು ರೂಪಾಯಿಯನ್ನೂ ನಗದು ರೂಪದಲ್ಲಿ ಉಳಿಸಿಕೊಳ್ಳುವುದಿಲ್ಲ. ಪ್ರತಿಯೊಂದು ಕಾರ್ಯಕ್ರಮದ ಖರ್ಚು-ವೆಚ್ಚದ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸಲಾಗುತ್ತದೆ.

ಬೆಳಗಾವಿಯಲ್ಲಿ ಜುಲೈ 10 ರಿಂದ 'ಪ್ರಾಂತ ಪ್ರಚಾರಕ ಬೈಠಕ್':
ಇದೇ ವೇಳೆ, ಬೆಳಗಾವಿಯಲ್ಲಿ ಜುಲೈ 10ರಿಂದ 12ರವರೆಗೆ ಆರ್‌ಎಸ್‌ಎಸ್‌ನ ವಾರ್ಷಿಕ ಮಹತ್ವದ 'ಅಖಿಲ ಭಾರತೀಯ ಪ್ರಾಂತ ಪ್ರಚಾರಕ ಬೈಠಕ್' ನಡೆಯಲಿದೆ ಎಂದು ಭರತ್‌ಕುಮಾರ್ ಮಾಹಿತಿ ನೀಡಿದರು. ಈ ಸಭೆಯಲ್ಲಿ ದೇಶದ ವಿವಿಧ ರಾಜ್ಯಗಳ ಹಿರಿಯ ಪ್ರಚಾರಕರು ಹಾಗೂ ಸಂಘದ ಉನ್ನತ ಪದಾಧಿಕಾರಿಗಳು ಭಾಗವಹಿಸಿ ಸಂಘಟನಾತ್ಮಕ ಚರ್ಚೆ ನಡೆಸಲಿದ್ದಾರೆ.

ಮೋಹನ್ ಭಾಗವತ್ ಭೇಟಿ: ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರು ಜುಲೈ 6ರಂದೇ ಬೆಳಗಾವಿಗೆ ಆಗಮಿಸಲಿದ್ದು, ಸುಮಾರು 8 ದಿನಗಳ ಕಾಲ ನಗರದಲ್ಲೇ ಮೊಕ್ಕಾಂ ಹೂಡಲಿದ್ದಾರೆ ಎಂದು ಸಂಘದ ಮೂಲಗಳು ತಿಳಿಸಿವೆ.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.