ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಪುರಾತನ ಸ್ಮಾರಕಗಳನ್ನು ಗುರುತಿಸಿ ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕೆಂದು ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕ ಪ್ರಹ್ಲಾದ್ ಜಿ. ಮನವಿ ಮಾಡಿದರು.
ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಸರ್ಕಾರಿ ವಸ್ತು ಸಂಗ್ರಹಾಲಯ ಚಿತ್ರದುರ್ಗ, ಇತಿಹಾಸ ಪರಂಪರೆ ಕೂಟ ಹಾಗೂ ಎನ್.ಎಸ್.ಎಸ್.ಘಟಕ ಸರ್ಕಾರಿ ಕಲಾ ಕಾಲೇಜು ಸ್ವಾಯತ್ತ ಇವುಗಳ ಸಹಯೋಗದೊಂದಿಗೆ ವಿಶ್ವ ಪರಂಪರೆ ದಿನಾಚರಣೆ-೨೦೨೬ ಪ್ರಯುಕ್ತ ಜಾನುಕೊಂಡ ಗಂಜಿಗಟ್ಟೆ ಗ್ರಾಮದ ಬೆಟ್ಟದ ತಪ್ಪಲಿನಲ್ಲಿರುವ ಹೊಯ್ಸಳ ಅರಸರ ಕಾಲಘಟ್ಟದ ಜನ್ನೇಶ್ವರ ದೇವಾಲಯದ ಬಳಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಸ್ಮಾರಕ ಸ್ವಚ್ಚತೆಯಲ್ಲಿ ವಿಪತ್ತುಗಳು ಮತ್ತು ಸಂಘರ್ಷಗಳಲ್ಲಿ ಜೀವಂತ ಪರಂಪರೆಗಾಗಿ ತುರ್ತು ಪ್ರತಿಕ್ರಿಯೆ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.
ಸ್ಮಾರಕಗಳ ಮೇಲೆ ಬೆಳೆದಿರುವ ಗಿಡ ಗಂಟೆಗಳನ್ನು ತೆಗೆದು ಸ್ವಚ್ಚಗೊಳಿಸುವುದರಿಂದ ಸ್ಮಾರಕಗಳು ಹಾಳಾಗುವುದನ್ನು ತಪ್ಪಿಸಬಹುದು. ಜಿಲ್ಲೆಯಲ್ಲಿ ಸಾವಿರಾರು ಅರಕ್ಷಿತ ಸ್ಮಾರಕಗಳಿವೆ. ಐತಿಹಾಸಿಕ ಮಹತ್ವವಿರುವ ವಿಶೇಷ ವಾಸ್ತು ವಿನ್ಯಾಸವಿರುವ ಪುರಾತನ ಸ್ಮಾರಕಗಳನ್ನು ಗುರುತಿಸಿ ಸಂರಕ್ಷಿತ ಸ್ಮಾರಕಗಳನ್ನಾಗಿ ಘೋಷಿಸಲು ಮೈಸೂರು ಆಯುಕ್ತರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ತಿಳಿಸಿದರು.
ಜಿಲ್ಲಾ ಮದಕರಿನಾಯಕ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಡಿ.ಗೋಪಾಲಸ್ವಾಮಿ ನಾಯಕ ಮಾತನಾಡಿ ರಾಷ್ಟ್ರೀಯ ಮಹತ್ವವುಳ್ಳ ಬಹು ಪ್ರಾಮುಖ್ಯವಿರುವ ಸ್ಮಾರಕಗಳು ಜಿಲ್ಲೆಯಲ್ಲಿವೆ. ಇವುಗಳನ್ನು ರಾಷ್ಟ್ರೀಯ ಸಂರಕ್ಷಿತ ಸ್ಮಾರಕಗಳನ್ನಾಗಿ ಘೋಷಿಸಿ ವಿಶ್ವವಿದ್ಯಾನಿಲಯ ಪರಂಪರೆ ಪಟ್ಟಿಗೆ ಸೇರಿಸಿ ಸ್ಮಾರಕಗಳ ಸಂರಕ್ಷಣೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕಿದೆ. ಸಾರ್ವಜನಿಕರು ಸ್ಮಾರಕಗಳ ಸಂರಕ್ಷಣೆಗಾಗಿ ಪುರಾತತ್ವ ಇಲಾಖೆಯೊಡನೆ ಕೈಜೋಡಿಸುವಂತೆ ಹೇಳಿದರು.
ಹೊಸದುರ್ಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಉಪನ್ಯಾಸಕ ಶರತ್ಬಾಬು ದೇವಾಲಯದ ಕಲೆ, ವಾಸ್ತುಶಿಲ್ಪ ರಚನೆ ಮತ್ತು ದೇವಾಲಯದಲ್ಲಿರುವ ಶಾಸನಗಳ ಮಹತ್ವ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.
ಎನ್.ಎಸ್.ಎಸ್. ಅಧಿಕಾರಿ ವಿ.ಪ್ರಸಾದ್ ಮಾತನಾಡಿ ಕಾಲೇಜಿನ ಎನ್.ಎಸ್.ಎಸ್. ಘಟಕದ ವತಿಯಿಂದ ಜಿಲ್ಲೆಯಲ್ಲಿ ಹಲವಾರು ಸ್ಮಾರಕಗಳನ್ನು ಸ್ವಚ್ಚಗೊಳಿಸಲಾಗಿದೆ. ಇನ್ನು ಹೆಚ್ಚಿನ ಸ್ಮಾರಕಗಳನ್ನು ಗುರುತಿಸಿ ಸ್ವಚ್ಚಗೊಳಿಸುವ ಮೂಲಕ ಸಂರಕ್ಷಿಸಿ ಹಾಳಾಗದಂತೆ ವಿದ್ಯಾರ್ಥಿಗಳಲ್ಲಿ ಹಾಗೂ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು, ಉಪನ್ಯಾಸಕರು, ಪ್ರವಾಸಿ ಮಿತ್ರರು, ದೇವಾಲಯದ ಪೂಜಾರಿಗಳು, ಇಲಾಖೆ ಸಿಬ್ಬಂದಿಯವರು ಶಿಬಿರದಲ್ಲಿ ಭಾಗವಹಿಸಿದ್ದರು.
ಸ್ವಚ್ಚತೆ ಸಂದರ್ಭದಲ್ಲಿ ಸಿಕ್ಕ ೧೧-೧೨ ನೇ ಶತಮಾನದ ಕಾಲಕ್ಕೆ ಸೇರಿದ ಭೈರವ ಶಿಲ್ಪವನ್ನು ದೇವಾಲಯದ ಒಳ ಭಾಗದಲ್ಲಿರಿಸಲಾಯಿತು.


