ಚಂದ್ರವಳ್ಳಿ ನ್ಯೂಸ್, ಕಡೂರು:
ಕ್ಷೇತ್ರದ ಎಪಿಎಂಸಿ ಆವರಣದಲ್ಲಿ ಆಯೋಜಿಸಲಾಗಿದ್ದ 'ಜನರೊಂದಿಗೆ ಜನತಾದಳ' ಕಾರ್ಯಕ್ರಮ ಮತ್ತು ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಚಾಲನೆ ನೀಡಿದರು. ಪಕ್ಷದ ಹಿರಿಯ ಮುಖಂಡರೊಂದಿಗೆ ದೀಪ ಬೆಳಗುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದ ಅವರು, ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಅಧಿಕಾರ ಯಾರಿಗೂ ಶಾಶ್ವತವಲ್ಲ: ಎಚ್ಚರಿಕೆ
ಸಭೆಯಲ್ಲಿ ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ನಿಖಿಲ್ ಕುಮಾರಸ್ವಾಮಿ, "ಅಧಿಕಾರ ಎಂಬುದು ಯಾರಿಗೂ ಶಾಶ್ವತವಲ್ಲ. ಇಂದು ಅಧಿಕಾರದಲ್ಲಿದ್ದೇವೆ ಎಂಬ ಅಹಂನಿಂದ ನಮ್ಮ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ಹಾಕಿಸಲಾಗುತ್ತಿದೆ. ಇವತ್ತು ನಿಮ್ಮ ದಿನ ಇರಬಹುದು, ಆದರೆ 2028ರಲ್ಲಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ. ಆಗ ನಾವು ಏನೆಂದು ತೋರಿಸುತ್ತೇವೆ," ಎಂದು ಎಚ್ಚರಿಸಿದರು.
ಪೊಲೀಸ್ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆಯೂ ಪ್ರಸ್ತಾಪಿಸಿದ ಅವರು, "ಕಾನೂನು ಎಲ್ಲರಿಗೂ ಒಂದೇ. ಅಧಿಕಾರಿಗಳು ಯಾವುದೇ ಪಕ್ಷಪಾತ ಮಾಡದೆ ಕೆಲಸ ಮಾಡಬೇಕು. ನಮ್ಮ ಕಾರ್ಯಕರ್ತರಿಗೆ ಕಿರುಕುಳ ನೀಡಿದರೆ ನಾವು ಸುಮ್ಮನೆ ಕೂರುವುದಿಲ್ಲ, ಪ್ರತಿಯೊಬ್ಬ ಕಾರ್ಯಕರ್ತನ ಬೆನ್ನಿಗೆ ಪಕ್ಷದ ನಾಯಕತ್ವ ನಿಲ್ಲಲಿದೆ," ಎಂದು ಕಾರ್ಯಕರ್ತರಲ್ಲಿ ಧೈರ್ಯ ತುಂಬಿದರು.
ಕಡೂರು ಜೆಡಿಎಸ್ನ ಭದ್ರಕೋಟೆ:
"ಕಡೂರು ವಿಧಾನಸಭಾ ಕ್ಷೇತ್ರಕ್ಕೂ ಜನತಾದಳಕ್ಕೂ ಅವಿನಾಭಾವ ಸಂಬಂಧವಿದೆ. 1994, 1999 ಮತ್ತು 2004ರಲ್ಲಿ ಸತತವಾಗಿ ಜೆಡಿಎಸ್ ಇಲ್ಲಿ ಜಯಗಳಿಸಿದೆ. ಕಡೂರಿನ ಮಣ್ಣಿನಲ್ಲಿ ಜನತಾದಳದ ಸಿದ್ಧಾಂತ ಇಂದಿಗೂ ಜೀವಂತವಾಗಿದೆ," ಎಂದ ಅವರು, ಬೂತ್ ಮಟ್ಟದಲ್ಲಿ ತಂಡಗಳನ್ನು ರಚಿಸಿಕೊಂಡು ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಎಂ. ಕೃಷ್ಣಾರೆಡ್ಡಿ, ವಿಧಾನಪರಿಷತ್ ಸದಸ್ಯ ಎಸ್.ಎಲ್. ಬೋಜೇಗೌಡ, ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್.ವಿ ದತ್ತ, ಶಾಸಕರಾದ ಸಿ.ಎನ್. ಬಾಲಕೃಷ್ಣ, ಜಿ.ಡಿ. ಹರೀಶ್ ಗೌಡ, ಹೆಚ್.ಟಿ. ಮಂಜುನಾಥ್, ಸ್ವರೂಪ್ ಪ್ರಕಾಶ್ ಉಪಸ್ಥಿತರಿದ್ದರು.
ಇವರಲ್ಲದೆ ಯುವ ಮುಖಂಡ ಚೇತನ್ ಕೆಂಪರಾಜು, ರಂಜನ್ ಅಜಿತ್ ಕುಮಾರ್, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಆನಂದ್ ನಾಯ್ಕ್, ರಘು ಎರೇಹಳ್ಳಿ, ಛಾಯಪತಿ, ಬಿದರೆ ಜಗದೀಶ್, ನಾಗರಾಜು, ಪ್ರೇಮ್ ಕುಮಾರ್, ಗಂಗಾಧರ್ ನಾಯ್ಕ್, ಕೋಡಿಹಳ್ಳಿ ಮಹೇಶ್, ಬೀರೂರು ಹೇಮಂತ್ ಕುಮಾರ್ ಸೇರಿದಂತೆ ಹಿರಿಯ ಮುಖಂಡರು ಹಾಗೂ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡಿದ್ದರು.


