ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ನೂರಾರು ಕೋಟಿ ಹಗರಣದ ಆರೋಪಿ ಬಿ. ನಾಗೇಂದ್ರ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಂಡಿರುವುದನ್ನು ಖಂಡಿಸಿ, ಅವರ ರಾಜೀನಾಮೆ ಪಡೆಯುವವರೆಗೆ ವಿಧಾನಸಭೆ ಅಧಿವೇಶನ ನಡೆಯಲು ಬಿಡುವುದಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭಾರಿ ಎಚ್ಚರಿಕೆ ನೀಡಿದ್ದಾರೆ.
ಮಲ್ಲೇಶ್ವರಂನ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ನಾಯಕರು, ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಸಚಿವ ನಾಗೇಂದ್ರ ರಾಜೀನಾಮೆಗೆ ಪಟ್ಟು: ನಾಗೇಂದ್ರ ಅವರ ಮೇಲೆ ಸಿಬಿಐ, ಲೋಕಾಯುಕ್ತ ಹಾಗೂ ಎಸ್ಐಟಿ ಸೇರಿದಂತೆ ಒಟ್ಟು 31 ಪ್ರಕರಣಗಳು ವಿಚಾರಣೆಯಲ್ಲಿದ್ದರೂ, ಸಿಎಂ ಡಿ.ಕೆ. ಶಿವಕುಮಾರ್ ಅವರು ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿರುವುದು ಅಕ್ಷಮ್ಯ. ನಾಗೇಂದ್ರ ಅವರ ರಾಜೀನಾಮೆ ಪಡೆಯುವುದೇ ಅಧಿವೇಶನದಲ್ಲಿ ವಿಪಕ್ಷಗಳ ಮುಖ್ಯ ಅಜೆಂಡಾ ಆಗಿರಲಿದ್ದು, ಸದನದ ಒಳಗೂ-ಹೊರಗೂ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಆರ್. ಅಶೋಕ್ ಹಾಗೂ ಶಾಸಕ ಎಸ್.ಎನ್. ಚನ್ನಬಸಪ್ಪ ಸ್ಪಷ್ಟಪಡಿಸಿದರು.
ಹೈಕಮಾಂಡ್ ಬ್ಲ್ಯಾಕ್ಮೇಲ್ ಶಂಕೆ: ದಲಿತರ ಹಣವನ್ನು ಲೂಟಿ ಮಾಡಿದವರನ್ನು ಸಂಪುಟದಲ್ಲಿ ಇಟ್ಟುಕೊಂಡಿರುವುದನ್ನು ಪ್ರಶ್ನಿಸಿದ ಬಿ.ವೈ. ವಿಜಯೇಂದ್ರ, "ನಾಗೇಂದ್ರ ಅವರನ್ನು ಮತ್ತೆ ಸಚಿವರನ್ನಾಗಿ ಮಾಡುವ ಅನಿವಾರ್ಯತೆ ಸಿಎಂಗೆ ಏನಿತ್ತು? ಅವರಿಗೆ ಬ್ಲ್ಯಾಕ್ಮೇಲ್ ಮಾಡಲಾಗುತ್ತಿದೆಯೇ ಅಥವಾ ಹೈಕಮಾಂಡ್ ಒತ್ತಡವಿದೆಯೇ?" ಎಂದು ಪ್ರಶ್ನಿಸಿದರು.
ಸ್ವಚ್ಛ ಬೆಂಗಳೂರು ಹೆಸರಲ್ಲಿ ಹೊಸ ದರೋಡೆ: 'ಸ್ವಚ್ಛ ಬೆಂಗಳೂರು' ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ ಸಾರ್ವಜನಿಕರ ಮೇಲೆ ಹೊಸ ತೆರಿಗೆಯ ಹೊರೆ ಹೊರಿಸುತ್ತಿದೆ ಎಂದು ಅಶೋಕ್ ಕಿಡಿಕಾರಿದರು. ನಗರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚದೆ, ಫ್ಲ್ಯಾಟ್ಗಳ ಕಸದ ಶುಲ್ಕವನ್ನು 40 ರೂ.ನಿಂದ 400 ರೂ.ಗೆ ಏರಿಸಿ ಜನರಿಂದ ಲೂಟಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಜೆಡಿಎಸ್ ಪಾದಯಾತ್ರೆ ಬೆಂಬಲದ ಸ್ಪಷ್ಟನೆ: ಜೆಡಿಎಸ್ ಪಾದಯಾತ್ರೆಗೆ ಬಿಜೆಪಿ ಸಾಂಕೇತಿಕ ಬೆಂಬಲ ನೀಡಿದೆ. ಪೂರ್ವನಿಯೋಜಿತ ಕಾರ್ಯಕ್ರಮಗಳಿದ್ದ ಕಾರಣ ತಾವು ಭಾಗವಹಿಸಲಾಗಲಿಲ್ಲವೇ ಹೊರತು ಮೈತ್ರಿಕೂಟದಲ್ಲಿ ಯಾವುದೇ ಗೊಂದಲವಿಲ್ಲ ಎಂದು ವಿಜಯೇಂದ್ರ ಸ್ಪಷ್ಟನೆ ನೀಡಿದರು.
ಸಭಾಪತಿ ಪೀಠಕ್ಕೆ ಅಪಚಾರ: ಬಸವರಾಜ್ ಹೊರಟ್ಟಿ ಅವರಿಂದ ಬಲವಂತವಾಗಿ ರಾಜೀನಾಮೆ ಪಡೆದು ಸಭಾಪತಿ ಹುದ್ದೆಯನ್ನು ರಾಜಕೀಯಗೊಳಿಸಿರುವುದು ಕರ್ನಾಟಕದ ಸಂಪ್ರದಾಯಕ್ಕೆ ಮಾಡಿದ ಅಪಚಾರ ಎಂದು ಮಾಜಿ ಸಚಿವ ಅಲ್ಕೋಡು ಹನುಮಂತಪ್ಪ ವಾಗ್ದಾಳಿ ನಡೆಸಿದರು.



