i
ಚಿತ್ರದುರ್ಗಃ
ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯಾದ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಎಸ್ ಯುಸಿಐ ಕಮ್ಯುನಿಸ್ಟ್ ಪಕ್ಷದ ಚಿತ್ರದುರ್ಗ ಜಿಲ್ಲಾ ಸಮಿತಿ ವತಿಯಿಂದ ನಗರದ ಡಿ.ಸಿ ವೃತ್ತದಲ್ಲಿ ಪ್ರತಿಭಟಸಿ, ಜಿಲ್ಲಾಧಿಕಾರಿಗಳ ಮುಖೇನ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಎಸ್ ಯುಸಿಐ ಕಮ್ಯುನಿಸ್ಟ್ ಪಕ್ಷದ ನಿಂಗರಾಜು ಮಾತನಾಡಿ, ಭೂಸುಧಾರಣಾ ಕಾಯ್ದೆಯ ತಿದ್ದುಪಡಿ ತಂದಿರುವ ಮುಖ್ಯಮಂತ್ರಿ ಬಿ ಎಸ್ ಯೆಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಕ್ರಮವನ್ನು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಎಸ್ಯುಸಿಐ (ಕಮ್ಯೂನಿಸ್ಟ್))ದ ಚಿತ್ರದುರ್ಗ ಜಿಲ್ಲಾ ಸಮಿತಿಯು ತೀವ್ರವಾಗಿ ವಿರೋಧಿಸುತ್ತದೆ.
ವ್ಯವಸಾಯ ಮಾಡಲು ಆಸಕ್ತಿ ಇರುವವರು ಭೂಮಿ ಖರೀದಿ ಮಾಡಲು ಅನುಕೂಲವಾಗುವಂತೆ ತಿದ್ದುಪಡಿ ತರಲಾಗಿದೆಯೆಂದು ಸರ್ಕಾರ ಹೇಳಿಕೊಂಡಿದೆ. ಈಗಾಗಲೇ ಕೃಷಿ ಮಾಡುತ್ತಿರುವ ರೈತರು ಕೃಷಿ ತ್ಯಜಿಸುತ್ತಿರುವುದೇಕೆ ಮತ್ತು ಆತ್ಮಹತ್ಯೆಗಳಿಗೆ ಶರಣಾಗುತ್ತಿರುವುದೇಕೆ ಎನ್ನುವ ಪ್ರಶ್ನೆಗಳಿಗೆ ಸರ್ಕಾರ ಉತ್ತರ ಹುಡುಕಿ ಪರಿಹಾರ ಒದಗಿಸುವ ಗೋಜಿಗೆ ಹೋಗಿಲ್ಲ.
ಬದಲಾಗಿ ಕಾರ್ಪೋರೇಟ್ ಕಂಪನಿಗಳು, ಬಂಡವಾಳಗಾರರು, ಅಕ್ರಮ ಹಣ ಗಳಿಸಿದವರಿಗೆ ಕೃಷಿ ಕ್ಷೇತ್ರದಲ್ಲಿ ಪ್ರವೇಶ ಮಾಡಲು ಹಾದಿ ಸುಗಮಗೊಳಿಸಲು ಈ ತಿದ್ದುಪಡಿಯನ್ನು ತರಲಾಗಿದೆ ಎನ್ನುವ ವಾಸ್ತವವನ್ನು ಸರ್ಕಾರ ಮರೆಮಾಚಿ ಜನರಿಗೆ ಮಂಕುಬೂದಿ ಎರಚುವ ಪ್ರಯತ್ನ ಮಾಡುತ್ತಿದೆ, ಎಂದು ಹೇಳಿದರು.
ಎಸ್ ಯುಸಿಐ ಕಮ್ಯುನಿಸ್ಟ್ ಪಕ್ಷದ ಸದಸ್ಯ ರವಿಕುಮಾರ್ ಮಾತನಾಡಿ, ವಾಸ್ತವವಾಗಿ ೧೯೬೦ರ ದಶಕದ ಮೂಲ ಭೂಸುಧಾರಣಾ ಕಾಯ್ದೆಯಲ್ಲಿ ರೈತರು, ಸಣ್ಣ ರೈತರು ತಮ್ಮ ಭೂಮಿಯನ್ನು ರಕ್ಷಿಸಿಕೊಳ್ಳಲು ಬೇಕಿದ್ದ ಅಗತ್ಯ ಕಾನೂನಿನ ಬೆಂಬಲವಿತ್ತು. ಕುಟುಂಬಗಳು ವಿಘಟನೆಗೊಂಡು ಭೂಮಿಯು ಎಷ್ಟೇ ಸಣ್ಣ ಪ್ರಮಾಣದಲ್ಲಿ ವಿಘಟನೆಗೊಂಡರೂ ಸರ್ಕಾರ ಅಂತಹವರ ನೆರವಿಗೆ ಬಂದು ಅವರು ತಮ್ಮ ಸಣ್ಣ ಹಿಡುವಳಿಗಳಲ್ಲಿಯೇ ಕೃಷಿ ಮಾಡಲು ಪ್ರೋತ್ಸಾಹಿಸುವ ಅನೇಕ ಅಂಶಗಳು ಆ ಕಾಯ್ದೆಯಲ್ಲಿದ್ದವು. ಜೊತೆಗೆ ಭೂಮಿ ಇಲ್ಲದ ಹಿಂದುಳಿದ ವರ್ಗದ ಜನಗಳಿಗೆ ಸರ್ಕಾರ ಭೂಮಿ ಖರೀದಿಸಿಕೊಡುವ ಅಂಶಗಳು ಜಾರಿಯಲ್ಲಿದ್ದವು. ಇನ್ನು ಮುಂದೆ ಈ ಎಲ್ಲಾ ಆಶಯಗಳನ್ನು ಗಾಳಿಗೆ ತೂರಲಾಗುತ್ತದೆ. ಸಂಕಷ್ಟದಲ್ಲಿರುವ ಸಣ್ಣ ಅತಿಸಣ್ಣ ಮತ್ತು ಮಧ್ಯಮ ರೈತರು ತಮ್ಮ ಭೂಮಿಯನ್ನು ಮಾರಾಟ ಮಾಡಿ ಬೀದಿಗೆ ಬರುವ ಸನ್ನಿವೇಶವನ್ನು ಈ ಸರ್ಕಾರ ತನ್ನ ಈ ತಿದ್ದುಪಡಿಯ ಮೂಲಕ ಸೃಷ್ಟಿಸಿದೆ.
ಬಿಜೆಪಿ ಸರ್ಕಾರದ ಈ ನಿಲುವನ್ನು ವಿರೋಧಿಸುವುದಾಗಿ ಎಲ್ಲಾ ಸಂಘಟನೆಗಳು ಮತ್ತು ವಿರೋಧ ಪಕ್ಷಗಳನ್ನು ಸೇರಿಸಿ ಹೋರಾಟ ಬೆಳೆಸುವುದಾಗಿ ಹೇಳಿಕೊಂಡಿದ್ದಾರೆ. ದುರಂತವೆಂದರೆ ೧೯೯೨ರಲ್ಲಿ ಕೈಗಾರಿಕಾಪತಿಗಳಿಗೆ ಅನುಕೂಲವಾಗುವಂತೆ ಈ ಕಾಯ್ದೆಗೆ ಮೊದಲ ಬಾರಿಗೆ ತಿದ್ದುಪಡಿ ತಂದದ್ದು ಇದೇ ಕಾಂಗ್ರೆಸ್ ನಾಯಕತ್ವದ ಸರ್ಕಾರ. ನಂತರ ಈಗ ವಿರೋಧ ಪಕ್ಷದ ನಾಯಕರಾಗಿ ಈ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಜಮೀನು ಖರೀದಿಸುವವರ ಆದಾಯದ ಮಿತಿಯನ್ನು ೨ ಲಕ್ಷದಿಂದ ೨೫ ಲಕ್ಷದವರೆಗೆ ವಿಸ್ತರಿಸುವ ಮೂಲಕ ಇತರ ಅನುಕೂಲಗಳನ್ನು ಒದಗಿಸಿ ಈ ಕಾಯ್ದೆಯನ್ನು ಮತ್ತಷ್ಟು ಸಡಿಲಗೊಳಿಸಿತು.
ಕೇಂದ್ರದಲ್ಲಿ ಮನಮೋಹನಸಿಂಗ್ ನೇತೃತ್ವದ ಸರ್ಕಾರ ಇಂತಹ ರೈತ ವಿರೋಧಿ ಭೂಸುಧಾರಣಾ ಕಾಯ್ದೆಯ ತಿದ್ದುಪಡಿಗಳನ್ನು ತಂದಾಗ ರೈತರ ಭಾರಿ ಪ್ರತಿರೋಧದಿಂದಾಗಿ ಆ ತಿದ್ದುಪಡಿಗಳನ್ನು ಹಿಂದಕ್ಕೆ ಪಡೆಯಬೇಕಾಗಿ ಬಂದದ್ದನ್ನು ಜನ ಇನ್ನೂ ಮರೆತಿಲ್ಲ. ಈಗಲೂ ಕಾಂಗ್ರೆಸ್ನ ಹಲವಾರು ನಾಯಕರು ತೆರೆಯ ಹಿಂದೆ ಇದನ್ನು ’ಐತಿಹಾಸಿಕ’ ಎಂದು ಬಣ್ಣಿಸಿದ್ದಾರೆ. ಆದರೂ ’ರೈತರ ಪರ’ ಎಂದು ಬಿಂಬಿಸಿಕೊಳ್ಳಲು ಯತ್ನಿಸುತ್ತಿರುವ ಕಾಂಗ್ರೆಸ್ನ ಮುಖವಾಡವನ್ನು ಕಿತ್ತು ಜನ ಅದರ ನಿಜ ಮುಖವನ್ನು ಬಯಲಿಗೆಳೆಯಬೇಕಾಗಿದೆ. ಅವಕಾಶವಾದಿ ಜೆಡಿಎಸ್ ಪಕ್ಷದ ನಿಲುವು-ನಡೆಗಳು ಕಾಂಗ್ರೆಸ್ ನದಕ್ಕಿಂತ ಭಿನ್ನವಾಗೇನೂ ಇಲ್ಲ, ಎಂದು ತಿಳಿಸಿದರು.
ಕೊರೋನಾ ಲಾಕ್ ಡೌನ್ ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡು ಈ ತಿದ್ದುಪಡಿಗಳ ಬಗ್ಗೆ ಸದನದಲ್ಲಿ ಚರ್ಚೆ ನಡೆಸದೆ ಸುಗ್ರೀವಾಜ್ಞೆಗಳ ಮೂಲಕ ಇಂತಹ ಮಹತ್ವದ ಭೂಸುಧಾರಣಾ ಕಾಯ್ದೆಗಳ ತಿದ್ದುಪಡಿಯನ್ನು ತಂದಿರುವುದು ಅತ್ಯಂತ ಅಪ್ರಜಾತಾಂತ್ರಿಕ ಮತ್ತು ಸರ್ಕಾರದ ಲಜ್ಜೆಗೆಟ್ಟ ಕ್ರಮವಾಗಿದೆ. ಇದೇ ಸಂದರ್ಭದಲ್ಲಿ ಸರ್ಕಾರ ಜಾರಿಗೊಳಿಸಲು ಹೊರಟಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ಇತರ ಜನವಿರೋಧಿ ಕ್ರಮಗಳು ಖಂಡನಾರ್ಹವಾದವು. ಆದ್ದರಿಂದ ಚುನಾವಣಾಸಕ್ತ ಈ ಪಕ್ಷಗಳ ಮೇಲೆ ಅವಲಂಬಿತರಾಗದೆ ಜನ, ಅದರಲ್ಲೂ ಪ್ರಮುಖವಾಗಿ ರೈತ ಸಮುದಾಯ ಈ ಕಾಯ್ದೆಯ ತಿದ್ದುಪಡಿಯನ್ನು ವಿರೋಧಿಸಿ ದೊಡ್ಡ ಹೋರಾಟ ಬೆಳೆಸಲು ಮುಂದೆ ಬರಬೇಕೆಂದು ಈ ಮೂಲಕ ಎಸ್ಯುಸಿಐ (ಸಿ) ಕರೆ ನೀಡುತ್ತದೆ.
ಈ ಸಂದರ್ಭದಲ್ಲಿ ಪಕ್ಷದ ಸ್ಥಳೀಯ ಸಮಿತಿಯ ಸದಸ್ಯರಾದ ರವಿಕುಮಾರ್, ವಿನಯ್, ಕುಮುದ, ತ್ರಿವೇಣಿ, ಮೇಘನಾ, ಕಾರ್ಮಿಕ ಸದಸ್ಯರಾದ ಸೈಫುದ್ದೀನ್, ತಿಮ್ಮಣ್ಣ ಮತ್ತಿತರರು ಪಾಲ್ಗೊಂಡಿದ್ದರು.