i
ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡ ಗೋವಿನ ಓ ಮುದ್ದಿನ ಕರು…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
–ಯುವಜನತೆಯಲ್ಲಿ ಕನ್ನಡ-
ಇನ್ನೇನು ನವೆಂಬರ್ ಬಂತೆಂದರೆ ಎಲ್ಲೆಲ್ಲಿಯೂ ಕನ್ನಡದ ಇಂಪು ಕೇಳಿಸುವುದು, ಸುಮಧುರ ಗೀತೆಗಳ ಕಲರವ, ಕನ್ನಡ ….ಕನ್ನಡ ……. ಎಂದು ಘೋಷಣೆ ಕೂಗುತ್ತಾ ಎಲ್ಲೆಡೆಯಲ್ಲಿಯೂ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ.
ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡ ಗೋವಿನ ಓ ಮುದ್ದಿನ ಕರು ಕನ್ನಡ ತನವೊಂದಿದ್ದರೆ ನೀ ನಮಗೆ ಕಲ್ಪತರು.
ಆಹಾ ಎಷ್ಟು ಸೊಗಸಾಗಿ ಬರದಿದ್ದಾರೆ ನಮ್ಮ ಕವಿಗಳು! ನಿಜಕ್ಕೂ ಹೆಮ್ಮೆಯ ವಿಷಯವೇ ಆಗಿದೆ . ಕನ್ನಡ ರಾಜ್ಯೋತ್ಸವ ಆಚರಣೆ ಕೇವಲ ನವೆಂಬರ್ ಗೆ ಸೀಮಿತವಾಗದೆ ಪ್ರತಿನಿತ್ಯವು ನಾವು ಕನ್ನಡ ಭಾಷೆಯನ್ನು ಬಳಸಬೇಕು. ನಾವು ಸಾಮಾನ್ಯವಾಗಿ ಸರ್ಕಾರಿ ಶಾಲೆಗಳಲ್ಲಿ ,ಕಛೇರಿಗಳಲ್ಲಿ ಕನ್ನಡವನ್ನು ಬಳಸುತ್ತೇವೆ.ಆ ಮಕ್ಕಳಿಗೆ ಕನ್ನಡ ಭಾಷೆ ಸುಲಲಿತ . ಅದೇ ನಾವು ಖಾಸಗಿ ಶಾಲಾ ಮಕ್ಕಳಿಗೆ ಕೇಳಿದರೆ ಕನ್ನಡ ಭಾಷೆಯು ಕಬ್ಬಿಣದ ಕಡಲೆಯಾಗಿರುತ್ತದೆ.ಅದಕ್ಕಾಗಿಯೇ ಇಂಟರ್ನ್ಯಾಷನಲ್ ಸ್ಕೂಲ್ ಹಾಗೂ ಕಾಲೇಜ್ಗಳಲ್ಲಿ ಹಲವಾರು ಐಚ್ಛಿಕ ವಿಷಯಗಳು ಇರುವುದರಿಂದ ಅವರಿಗೆ ಕನ್ನಡ ಕಡ್ಡಾಯವಾಗಿರುವುದಿಲ್ಲ .ಅಲ್ಲದೆ ಮನೆಯಲ್ಲಿ ಬೇರೆ ಭಾಷೆಗಳನ್ನೇ ಮಾತನಾಡುವುದರಿಂದ ವಿದ್ಯಾರ್ಥಿಗಳಲ್ಲಿ , ಯುವಕರಲ್ಲಿ ಕನ್ನಡ ಬಳಕೆ ಸಾಧ್ಯವೇ ? ಸರ್ಕಾರಿ ಹುದ್ದೆಯಲ್ಲಿರುವ ಎಲ್ಲಾ ನೌಕರರು ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದಲ್ಲಿನ ಖಾಸಗಿ ಶಾಲೆಗಳಲ್ಲಿ ಓದಿಸುತ್ತಿದ್ದಾರೆ. ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಮಾತನಾಡಿದರೆ ನೀನು ಇಂಗ್ಲಿಷ್ ಮೀಡಿಯಂನಲ್ಲಿ ಓದುತ್ತಿರುವುದು , ಕನ್ನಡದಲ್ಲಿ ಮಾತನಾಡಿದರೆ ಫೈನ್ ಹಾಕಲಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಬೇಲಿ ಹಾಕಿದರೆ ಹೇಗೆ ತಾನೇ ಸಾಧ್ಯ ಕನ್ನಡ ಬೆಳೆಯಲು ? ಹೇಳಿ . ನಮ್ಮ ಕರ್ನಾಟಕದಲ್ಲಿನ ಬೆಂಗಳೂರಿನಲ್ಲಿ ಕನ್ನಡ ಮಾತನಾಡಲು ಬಂದರು ಸರಿಯಾಗಿ ಬಳಸುವುದಿಲ್ಲ ಇನ್ನು ಪ್ರಚಾರದ ಫಲಕಗಳ ಬಗ್ಗೆ ಹೇಳುತ್ತಿರದು? ಇನ್ನು ಅಂಗಡಿಗಳಲಂತೂ ಕನ್ನಡ ಕಾಣುವುದು ಅಪರೂಪವಾಗಿದೆ.
ಭಾಷೆ ಒಂದು ಮಾಧ್ಯಮ. ನಮ್ಮ ಮನಸ್ಸಿನಲ್ಲಿರುವುದನ್ನು ಇನ್ನೊಬ್ಬರಿಗೆ ವ್ಯಕ್ತಪಡಿಸುವ ಸಾಧನ.ಯಾರನ್ನಾದರೂ ಅಂದರೆ ಅಪರಿಚಿತರನ್ನೂ ಸಹ ಈ ಭಾಷೆಯ ಮೂಲಕ ಮಾತನಾಡಿಸಬಹುದು. ಪರಿಚಯ ಸ್ನೇಹವಾಗಬಹುದು. ಸ್ನೇಹ ಸಂಬಂಧವಾಗಬಹುದು. ಪ್ರಪಂಚದಲ್ಲಿ ಅನೇಕ ಭಾಷೆಗಳಿವೆ. ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ.ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ. ೨೦೧೧ರ ಜನಗಣತಿಯ ಪ್ರಕಾರ ಜಗತ್ತಿನಲ್ಲಿ ೬.೪ ಕೋಟಿ ಜನರು ಕನ್ನಡ ಮಾತನಾಡುತ್ತಾರೆ ಎಂದು ತಿಳಿದುಬಂದಿದೆ. ಇವರಲ್ಲಿ ೫.೫ ಕೋಟಿ ಜನರ ಮಾತೃಭಾಷೆ ಕನ್ನಡವಾಗಿದೆ. ಬ್ರಾಹ್ಮಿ ಲಿಪಿಯಿಂದ ರೂಪುಗೊಂಡ ಕನ್ನಡ ಲಿಪಿಯನ್ನು ಉಪಯೋಗಿಸಿ ಕನ್ನಡ ಭಾಷೆಯನ್ನು ಬರೆಯಲಾಗುತ್ತದೆ. ಕನ್ನಡ ಬರಹದ ಮಾದರಿಗಳಿಗೆ ಸಾವಿರದ ಐನೂರು ವರುಷಗಳ ಚರಿತ್ರೆಯಿದೆ. ಕ್ರಿ.ಶ. ಆರನೆಯ ಶತಮಾನದ ಪಶ್ಚಿಮ ಗಂಗ ಸಾಮ್ರಾಜ್ಯದ ಕಾಲದಲ್ಲಿ ಮತ್ತು ಒಂಬತ್ತನೆಯ ಶತಮಾನದ ರಾಷ್ಟ್ರಕೂಟ ಸಾಮ್ರಾಜ್ಯದ ಕಾಲದಲ್ಲಿ ಹಳಗನ್ನಡ ಸಾಹಿತ್ಯ ಅತ್ಯಂತ ಹೆಚ್ಚಿನ ರಾಜಾಶ್ರಯ ಪಡೆಯಿತು. ಅದಲ್ಲದೆ ಸಾವಿರ ವರ್ಷಗಳ ಸಾಹಿತ್ಯ ಪರಂಪರೆ ಕನ್ನಡಕ್ಕಿದೆ. ವಿನೋಬಾ ಭಾವೆ ರವರು ಕನ್ನಡ ಲಿಪಿಯನ್ನು ಲಿಪಿಗಳ ರಾಣಿಯೆಂದು ಹೊಗಳಿದ್ದಾರೆ.
ಆಂಗ್ಲಭಾಷೆಯನ್ನು ಪ್ರಪಂಚದ ಶೆ. 75ರಷ್ಟು ಜನ ತಿಳಿದಿದ್ದಾರೆ. ಆದ್ದರಿಂದ ಅದರ ಪ್ರಭಾವ, ಉಪಯೋಗ, ಬಳಕೆ ಹೆಚ್ಚಿದೆ. ಆದರೆ ಮಾತೃಭಾಷೆ ಅಂದರೆ ತಾಯಿಗೆ ಸಮನಾದ ನಾವು ಹುಟ್ಟಿದ ಭೂಮಿ, ಮಾತೃಭೂಮಿಯಲ್ಲಿ ಆಡುವ ಭಾಷೆ. ಅದಕ್ಕೆ ತಾಯಿಯಷ್ಟೇ ಮಹತ್ವ. ಅದಕ್ಕೆ ಆ ಭಾಷೆಗೆ, ತಾಯಿಗೆ ಸಲ್ಲುವಷ್ಟೇ ಗೌರವ,ಮರ್ಯಾದೆ ಪ್ರೀತಿ ದೊರಕಬೇಕು. ನಮ್ಮ ಮಾತೃಭಾಷೆ ಕನ್ನಡ. ನಾವು ಹಲವು ಭಾಷೆಗಳನ್ನು ತಿಳಿದಿದ್ದರೂ, ಅದರಲ್ಲಿ ಪ್ರಾವೀಣ್ಯತೆ ಇದ್ದರೂ ನಮ್ಮ ಭಾವನೆಗಳನ್ನು ಅಂದರೆ ದುಃ ಖವಾಗಲೀ, ಸುಖವಾಗಲೀ, ಸಂತೋಷವಾಗಲಿ, ವಿಶ್ವಾಸವನ್ನಾಗಲಿ, ಪ್ರೀತಿಯನ್ನಾಗಲಿ, ದುಗುಡವನ್ನಾಗಲಿ ಕೋಪವನ್ನಾಗಲಿ, ಆಸೆಯನ್ನಾಗಲಿ, ನಿರ್ಲಿಪ್ತತೆಯನ್ನಾಗಲಿ ತನ್ನ ತಾಯಿ ಭಾಷೆ ಕನ್ನಡದಲ್ಲಿ ವ್ಯಕ್ತಪಡಿಸುವಷ್ಟು ಸುಖ, ತೃಪ್ತಿ ಬೇರೆ ಭಾಷೆಯಲ್ಲಿ ಸಿಗುವುದಿಲ್ಲ..ಇಂಗ್ಲಿಷ್ ಭಾಷೆಯಲ್ಲಿ 26 ಅಕ್ಷರಗಳಿವೆ. ನಾನು ಕನ್ನಡತಿ ಆದ್ದರಿಂದ ನನ್ನ ಮಾತೃಭಾಷೆ ಕನ್ನಡದ ಬಗ್ಗೆ ಅತಿ ಹೆಚ್ಚು ಹೆಮ್ಮೆ. 48 ಅಕ್ಷರಗಳು, ಒತ್ತಕ್ಷರಗಳು, ಹ್ರಸ್ವ, ದೀರ್ಘಗಳು, ಕಾಗುಣಿತಗಳನ್ನು ಹೊಂದಿರುವ ನಮ್ಮ ಭಾಷೆಯ ಮಹತ್ವ ಎಷ್ಟಿರಬೇಕು? ನಾವು ಕನ್ನಡಿಗರು ಎಂದು ಹೇಳಲು ಎಷ್ಟು ಹೆಮ್ಮೆ ಇರಬೇಕು? ಕರ್ನಾಟಕ ಒಂದೇ ರಾಜ್ಯವಾದರೂ ಉತ್ತರ ಕರ್ನಾಟಕದವರು ಮಾತನಾಡುವ ಶೈಲಿ ಬೇರೆ. ದಕ್ಷಿಣ ಕರ್ನಾಟಕದವರ ಭಾಷೆ ಸೊಗಡು ಬೇರೆ. ಮೈಸೂರು, ಬೆಂಗಳೂರಿನ ಜನ ಮಾತನಾಡುವ ದಾಟಿ ಬೇರೆ. ಸುಮಧುರ, ಸುಲಲಿತ, ಮನೋಹರ ಕನ್ನಡ ಭಾಷೆಯ ಶೈಲಿ ಬೇರೆಯಾದರೂ ಉಚ್ಚಾರಣೆ ತಪ್ಪಾಗಬಾರದು. ಆಡು ಹಾಡಾಗಬಾರದು. ಹಾಡು ಆಡಾಗಲು ಸಾಧ್ಯವಿಲ್ಲ. ದುಃಖದ ಸಂಗತಿ ಎಂದರೆ ಇತ್ತೀಚಿನ ಚಲನಚಿತ್ರಗಳಲ್ಲಿ ಈ ಭಾಷಾ ಪ್ರಯೋಗಗಳು ಸಾಮಾನ್ಯವಾಗುತ್ತಿವೆ. ಇದೆಲ್ಲದರ ಪರಿಣಾಮ ನಮ್ಮ ಯುವಕರು ಕನ್ನಡ ಬಳಸುವುದರಲ್ಲಿ ಪರಿಣಾಮ ಬೀರುತ್ತಿದೆ. ಕನ್ನಡ ಬಳಸುವವರ ಸಂಖ್ಯೆ ಕ್ಷೀಣಿಸುತ್ತಿರುವ ಹಾಗೆಯೇ ಬಳಸುವವರ ಉಚ್ಛಾರಣೆಯ ದೋಷವನ್ನು ಗಮನಿಸಬಹುದಾಗಿದೆ.
ನಮ್ಮ ನೆಲದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಬ್ಯಾಂಕ್, ಹೋಟೆಲ್, ವಿಮಾನ ನಿಲ್ದಾಣ, ರೈಲು ನಿಲ್ದಾಣ… ಇಂತಹ ಕಡೆ ಕನ್ನಡದ ಬಳಕೆ ಕಡಿಮೆಯಾದಂತೆ ಭಾಸವಾಗುತ್ತದೆ. ಇದಕ್ಕೆ ಹಲವು ಕಾರಣಗಳಿವೆ. ಹೊರರಾಜ್ಯದವರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಕೆಲಸ ಮಾಡುತ್ತಿರುವುದು ಒಂದು ಕಾರಣವಾದರೆ, ಅವರು ಕನ್ನಡ ಕಲಿಯದಿದ್ದರೂ ವ್ಯವಹಾರಕ್ಕೆ ತೊಂದರೆಯಾಗದು ಎಂಬ ಸನ್ನಿವೇಶ ಸೃಷ್ಟಿಸಿರುವುದು ಇನ್ನೊಂದು ಕಾರಣ. ಇಂಗ್ಲಿಷ್ ಅಥವಾ ಹಿಂದಿ ಭಾಷೆ ನಮಗೆ ಬಾರದಿದ್ದರೂ ಹೇಗೋ ಅದೇ ಭಾಷೆಯಲ್ಲಿ ವ್ಯವಹರಿಸಲು ಯತ್ನಿಸುವ ಮೂಲಕ ಕನ್ನಡೇತರರಿಗೆ ಸಹಕರಿಸುವ ನಮ್ಮ ಮನೋಭಾವ, ಬಳಕೆ ವಿಚಾರದಲ್ಲಿ ಕನ್ನಡಕ್ಕೆ ಹಿನ್ನಡೆ ಉಂಟುಮಾಡುತ್ತಿದೆ. ನಮ್ಮ ನೆಲದಲ್ಲಿ, ನಮ್ಮ ಭಾಷೆಯಲ್ಲಿ ಮಾತನಾಡಲು ನಮಗೇಕೆ ಹಿಂಜರಿಕೆ, ಮುಜುಗರ?! ಇದರಿಂದ, ನಮ್ಮ ನುಡಿಯ ಬೆಳವಣಿಗೆಗೆ ತೊಡಕಾಗುತ್ತಿದೆ ಎಂಬ ತಿಳಿವಳಿಕೆ ನಮಗೆ ಮೂಡುವುದು ಯಾವಾಗ? ಬೇರೆ ಭಾಷೆಗಳಿಗೆ ಮಣೆ ಹಾಕುವ ನಮ್ಮ ಔದಾರ್ಯವೇ ನಮ್ಮ ಭಾಷೆಯನ್ನು ಅಂಚಿಗೆ ಸರಿಸುತ್ತಿದೆ. ಬ್ಯಾಂಕುಗಳಲ್ಲಿ ರಾಜ್ಯದ ಆಡಳಿತ ಭಾಷೆಗೆ ಕಿಮ್ಮತ್ತು ಸಿಗುತ್ತಿಲ್ಲ. ಸ್ಥಳೀಯ ಗ್ರಾಹಕರಿಗೆ ಅವರು ಚೆನ್ನಾಗಿ ಬಲ್ಲ ಭಾಷೆಯಲ್ಲಿ ಮಾಹಿತಿ ಸಿಗುತ್ತಿಲ್ಲ. ಅವರಿಗೆ ಸರಾಗವಾಗಿ ವ್ಯವಹರಿಸಲು ಸಾಧ್ಯವಾಗುತ್ತಿಲ್ಲ. ನಮ್ಮ ನೆಲದಲ್ಲಿ ನಾವೇ ಕೀಳರಿಮೆಯಿಂದ ಬಳಲುವಂತಹ ಸ್ಥಿತಿ ಒದಗಿದೆ.ಬ್ಯಾಂಕಿನೊಳಗೆ ಕಾಲಿಡುತ್ತಿದ್ದಂತೆಯೇ ಸಾಮಾನ್ಯವಾಗಿ ಅಲ್ಲಿ ಕೇಳಿಬರುವುದು ಇಂಗ್ಲಿಷ್ ಅಥವಾ ಹಿಂದಿ ಭಾಷೆ. ಈ ಎರಡೂ ಭಾಷೆ ಅರ್ಥವಾಗದಿದ್ದರೆ ಅಂಥವರ ಸ್ಥಿತಿಯನ್ನು ಕೇಳುವುದೇ ಬೇಡ. ಕನಿಷ್ಠ ಅರ್ಜಿಗಳಾದರೂ ಕನ್ನಡದಲ್ಲಿ ಸಿಗಬಹುದೆಂದು ತಡಕಾಡಿದರೆ, ಹೆಚ್ಚೆಂದರೆ ಹಣ ಪಾವತಿಸುವ ಚಲನ್ ಮಾತ್ರ ಕನ್ನಡದಲ್ಲಿ ಸಿಗಬಹುದು. ಇನ್ನಿತರ ಅರ್ಜಿಗಳು ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಇರುತ್ತವೆ. ಇವುಗಳನ್ನು ಗಮನಿಸಿದರೆ, ನಾವು ನಿಜಕ್ಕೂ ಕರ್ನಾಟಕದಲ್ಲಿ ಇದ್ದೇವೆಯೇ ಎಂಬ ಅನುಮಾನ ಮೂಡುತ್ತದೆ.
ನಗರಗಳಲ್ಲಿ ಇಂದು ಕನ್ನಡ ತಕ್ಕಮಟ್ಟಿಗೆ ಉಳಿದಿದ್ದರೆ, ಅದರಲ್ಲಿ ಆಟೊ ಮತ್ತು ಟ್ಯಾಕ್ಸಿ ಚಾಲಕರ ಕೊಡುಗೆ ದೊಡ್ಡದು. ವಾಹನದ ಮೇಲೆ ಕನ್ನಡದ ನುಡಿಮುತ್ತುಗಳನ್ನು ಬರೆಸಿರುವುದರ ಜೊತೆಗೆ ತಾವು ಕೂಡ ಕನ್ನಡದಲ್ಲೇ ವ್ಯವಹರಿಸುತ್ತಾರೆ. ಭಾಷೆಯ ಬಳಕೆಯನ್ನು ವಿಸ್ತರಿಸುವ ವಿಚಾರದಲ್ಲಿ ಅವರ ಪಾತ್ರ ಕಡಿಮೆಯೇನಲ್ಲ.
ಕನ್ನಡ ನಾಡಿನಲ್ಲಿ ಕನ್ನಡ ಉಳಿಸಬೇಕಾದ ಅನಿವಾರ್ಯತೆ ಉಂಟಾಗಿದ್ದು ,ಯುವಕರಲ್ಲಿ ಕನ್ನಡ ಭಾಷೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ.ಯುವಕರಿಗೆ ಆಂಗ್ಲ ಭಾಷೆಯ ವ್ಯಾಮೋಹ ಹೆಚ್ಚಾಗುತ್ತಿದೆ. ನಮ್ಮ ಕನ್ನಡ ಭಾಷೆಯ ಮಹತ್ವವನ್ನು ತಿಳಿಸಿಕೊಡಬೇಕಾಗಿದೆ.ಕನ್ನಡ ಮಾಧ್ಯಮದಲ್ಲಿ ಕಲಿಯಲು ಯಾವುದೇ ಕೀಳರಿಮೆ ಬೇಡ. ಆಂಗ್ಲ ಮಾಧ್ಯಮದಲ್ಲಿ ಕಲಿಯುವುದೇ ದೊಡ್ಡ ಸಾಧನೆ ಎಂಬ ಭ್ರಮೆಯೂ ಬೇಡ. ಕನ್ನಡ ಮಾಧ್ಯಮದಲ್ಲಿ ಕಲಿತವರೇ ಅಗಾಧ ಸಾಧನೆ ಮಾಡಿದ್ದಾರೆ ಎಂಬದಕ್ಕೆ ಸಾಕಷ್ಟು ನಿದರ್ಶನಗಳಿವೆ.ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಭಾಷಿಕರು ಅಲ್ಪಸಂಖ್ಯಾತರಾಗಿದ್ದಾರೆ. ಕನ್ನಡ ಶ್ರೀಮಂತ ಭಾಷೆಯಾಗಿದ್ದು, ಕನ್ನಡ ಭಾಷೆಯನ್ನು ಹೆಚ್ಚು ಅಧ್ಯಯನ ಮಾಡಬೇಕಾದದ್ದು ಅನಿವಾರ್ಯವಾಗಿದೆ. ಕನ್ನಡ ಸಾಹಿತ್ಯ ಅಧ್ಯಯನ ಮಾಡುವುದರಿಂದ ವಿದ್ಯೆ ಮತ್ತು ಜ್ಞಾನಾರ್ಜನೆ ಹೆಚ್ಚಾಗಲಿದೆ.ಇಂದಿನ ವಿದ್ಯಾರ್ಥಿಗಳು ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸಾಹಿತ್ಯವನ್ನು ಪ್ರೀತಿಸುವಂತಾಗಬೇಕು, ಇದರಿಂದ ಜನಮಾನಸದಲ್ಲಿ ಕನ್ನಡ ಉಳಿಯಲು ಸಾಧ್ಯವಾಗುತ್ತದೆ. ಮತ್ತು ಕನ್ನಡ ಭಾಷಾ ಬೆಳವಣಿಗೆಗೆ ಅನುಕೂಲವಾಗಲಿದೆ.
ನಮ್ಮ ಕನ್ನಡಿಗರು ಯಾವುದೇ ದೇಶದಲ್ಲಿರಲಿ ಕನ್ನಡಿಗರಾಗಿ ನಾವು ಒಳ್ಳೆಯ ಕನ್ನಡವನ್ನು ಮಾತಾಡೋಣ. ಸೊಗಡನ್ನು ಪಸರಿಸೋಣ. ಕನ್ನಡ ತಾಯಿಯ ಹೆಮ್ಮೆ ಬೆಳಗೋಣ. ಭಾಷೆಯನ್ನು ಶುದ್ಧವಾಗಿ ಮಾತನಾಡಿ, ಭಾಷೆಯನ್ನು ಗೌರವಿಸೋಣ. ಮೊದಲು ಮಾತೃದೇವೋ ಭವ, ನಂತರ ಅತಿಥಿ ದೇವೋ ಭವ. ಇದೀಗ ಇನ್ಮುಂದೆ ರಾಜ್ಯದಲ್ಲಿ ನಡೆಯುವ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಎಲ್ಲ ಕಾರ್ಯಕ್ರಮಗಳಲ್ಲೂ ಕನ್ನಡ ಕಡ್ಡಾಯ ಬಳಕೆಗೆ ಸೂಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹೀಗಾದರೂ ಕನ್ನಡ ಬಳಕೆ ಹೆಚ್ಚಳವಾಗಲಿ. ಕರ್ನಾಟಕ ರಾಜ್ಯದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕನ್ನಡವನ್ನು ಕಡ್ಡಾಯಗೊಳಿಸಲಾಗಿದೆ. ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದು ಜ್ಞಾನವಂತ ಯುವಕರು ಹಲವಾರು ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕನ್ನಡ ಬಳಕೆ ಕನ್ನಡಿಗರಿಂದ ಹೆಚ್ಚಳವಾಗಲಿ. ಆಡಳಿತದಲ್ಲಿ ಕನ್ನಡ ರಾರಾಜಿಸಲಿ. ಇಂಜಿನಿಯರಿಂಗ್ ಕೋರ್ಸ್ನಲ್ಲೂ ಕನ್ನಡವನ್ನು ಸೇರಿಸಲಾಗಿದೆ. ಇಂಜಿನಿಯರಿಂಗ್ ಓದುವ ವಿದ್ಯಾರ್ಥಿಗಳಲ್ಲಿ ಕನ್ನಡ ಬಳಕೆಯಾಗುವಂತಾಗಲಿ ಎಂಬುದೇ ಇದರ ಆಶಯವಾಗಿದೆ.
ಹೊಸ ಶಿಕ್ಷಣ ನೀತಿಯಲ್ಲಿ ಕನ್ನಡಕ್ಕೆ ಒತ್ತನ್ನು ನೀಡಲಾಗುತ್ತಿದೆ. ವೃತ್ತಿ ಪರ ಕಾಲೇಜುಗಳಲ್ಲಿ ಕನ್ನಡದಲ್ಲೇ ಕಲಿಕೆ ಮತ್ತು ಪರೀಕ್ಷೆಯನ್ನು ಬರೆಯಲು ಅವಕಾಶವನ್ನು ನೀಡಲಾಗುತ್ತಿದೆ. . ಪ್ರಥಮ ಬಾರಿಗೆ ನಮ್ಮ ಸರ್ಕಾರ ಇಂಜಿನಿಯರಿಂಗ್ ನಲ್ಲಿ ಕನ್ನಡ ಬೋಧನೆ , ಪರೀಕ್ಷೆ ಬರೆಯಲು ಅವಕಾಶವನ್ನು ಮಾಡಿಕೊಟ್ಟಿದೆ. ಕನ್ನಡದಲ್ಲೇ ಪಠ್ಯ ಕ್ರಮವನ್ನು ರೂಪಿಸಲಾಗಿದೆ.ಹೀಗೆ ಇಂಜಿನಿಯರಿಂಗ್ ಇನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ . ಪಿಯುಸಿ ಅಲ್ಲಿನ ವಿಜ್ಞಾನ ವಿಭಾಗವನ್ನು ಸಹ ಕನ್ನಡದಲ್ಲಿ ಬೋಧಿಸಲು ಚಿಂತನೆಗಳು ನಡೆಯುತ್ತಿದೆ. ಉನ್ನತ ಶಿಕ್ಷಣದಲ್ಲಿ ಕನ್ನಡದ ಬಳಕೆ ಹೆಚ್ಚಾಳವಾದಂತೆ ಯುವಕರು ಸಹ ಕನ್ನಡ ಬಳಸುವುದು ಹೆಚ್ಚಳವಾಗುತ್ತದೆ.
ಕನ್ನಡ ಭಾಷಾ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ಆಧುನಿಕ ವ್ಯವಸ್ಥೆಗೆ ಪೂರಕ ತಂತ್ರಜ್ಞಾನವನ್ನು ಮೊಬೈಲ್ನಲ್ಲಿ ಅಳವಡಿಸಲಾಗಿದೆ.ಕನ್ನಡ ಭಾಷೆಯ ಬಳಕೆಯನ್ನು ಮತ್ತಷ್ಟು ಹೆಚ್ಚಿಸುವ ಅನಿವಾರ್ಯತೆ ಈ ದಿನಗಳಲ್ಲಿದೆ. ಮೊಬೈಲ್ ಬಳಕೆ ಸರ್ವವ್ಯಾಪಿಯಾಗುತ್ತಿರುವುದರಿಂದ ಮೊಬೈಲ್ನಲ್ಲಿಯೇ ಕನ್ನಡ ಲಿಪಿಯ ಪರಿಣಾಮಕಾರಿ ಬಳಕೆಗೆ ಸರಕಾರ ಒತ್ತು ನೀಡಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಬೇಕು.
ಹೆತ್ತ ತಾಯಿಯನ್ನು ಹೇಗೆ ಸದಾ ಸ್ಮರಿಸುತ್ತೇವೆಯೋ ಅಂತೆಯೇ ಕನ್ನಡ ಭಾಷೆಯನ್ನೂ ಮನದಲ್ಲಿ, ಬಳಕೆ ಮಾಡುವ ಮೂಲಕ ಸ್ಮರಿಸುವಂತಾದರೆ ಭಾಷೆಗೆ ಖಂಡಿತ ಅಳಿವಿಲ್ಲ.
ಲೇಖನ:ಹೇಮಲತ, (ಸೌಜನ್ಯ ಆಕಾಶವಾಣಿ)
ಕನ್ನಡ ಶಿಕ್ಷಕರು.