i
ಹಣದಿಂದಲ್ಲ. ಅರಿವು ಗಳಿಸಿದವರಿಗೆ ಜಗತ್ತು ಎಲ್ಲ ಕಾಲಕ್ಕೂ ಮನ್ನಣೆ ನೀಡಿದೆ: ಡಾ. ಲೋಕೇಶ್ ಅಗಸನಕಟ್ಟೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಭಾರತದ ಅತ್ಯುತ್ತಮವಾದ ವ್ಯಕ್ತಿಗಳು ಅರಿವಿನಿಂದಲೇ ಎತ್ತರಕ್ಕೆ ಹೋಗಿದ್ದಾರೆ ವಿನಃ ಹಣದಿಂದಲ್ಲ. ಅರಿವು ಗಳಿಸಿದವರಿಗೆ ಜಗತ್ತು ಎಲ್ಲ ಕಾಲಕ್ಕೂ ಮನ್ನಣೆ ನೀಡಿದೆ ಎಂದು ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಉಪಾಧ್ಯಕ್ಷರೂ ಹಾಗೂ ವಿಮರ್ಶಕ, ಲೇಖಕ ಡಾ. ಲೋಕೇಶ್ ಅಗಸನಕಟ್ಟೆ ಹೇಳಿದರು.
ನಗರದ ಶ್ರೀ ಕೃಷ್ಣ ರಾಜೇಂದ್ರ ನಗರ ಕೇಂದ್ರ ಗ್ರಂಥಾಲಯದಲ್ಲಿ ಸೋಮವಾರ ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾ ಮತ್ತು ನಗರ ಕೇಂದ್ರ ಗ್ರಂಥಾಲಯ ಇವರ ಸಹಯೋಗದೊಂದಿಗೆ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಅರಿವು ನಮ್ಮನ್ನು ಗುರುವಾಗಿಸುತ್ತದೆ. ಜ್ಞಾನದ ಅರಿವಿನ ವಿಸ್ತಾರಕ್ಕೆ ಓದು ಅವಶ್ಯಕವಾಗಿದೆ. ಉತ್ತಮ ಪುಸ್ತಕಗಳು ಆತ್ಮಸುಖಕ್ಕೆ ಅನುವುಮಾಡಿಕೊಡುತ್ತವೆ. ನಮ್ಮೊಳಗಿನ ತಿಳುವಳಿಕೆಯೇ ನಮ್ಮ ಬದುಕು ರೂಪಿಸುತ್ತದೆ ಎಂದರು.
ನಮ್ಮದೇಯಾದ ಅಲೋಚನಾ ಕ್ರಮ, ಜ್ಞಾನ ಮತ್ತು ಜೀವನ ದೃಷ್ಠಿ ಇಲ್ಲದೇ ಹೋದರೆ ಸಮರ್ಪಕವಾದ ಬದುಕು ನಡೆಸಲು ಸಾಧ್ಯವಿಲ್ಲ. ಸ್ವಯಂ ತಿಳಿಯದೇ, ಸ್ವಯಂ ಜ್ಞಾನಿಯಾಗದೇ ಹೊಸ ಆಲೋಚನೆ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಓದಿನ ಜೊತೆಗೆ ಓದಿನ ಕ್ರಮಗಳಾದ ಮಥನ, ಮನನ ಮಾಡಿ ನನ್ನದಾಗಿಸುವ ಪ್ರಯತ್ನ ಮಾಡಬೇಕು. ಅರಿವು ಮತ್ತು ಜ್ಞಾನ ಅರಿತು, ಸಮಾಜ, ಸಮುದಾಯಕ್ಕೆ ಬೆಳಕಾಗಬೇಕು ಎಂದು ಸಲಹೆ ನೀಡಿದರು.
ಜವಾಹರ್ಲಾಲ್ ನೆಹರೂ ಅವರ ಅಲೋಚನಾ ಹಾಗೂ ಚಿಂತನಾ ಕ್ರಮ, ಬರವಣೆಗೆಯ “ಡಿಸ್ಕವರಿ ಆಫ್ ಇಂಡಿಯಾ” ಕೃತಿಯು ಭಾರತೀಯ ಇತಿಹಾಸದಲ್ಲಿ ಎಲ್ಲ ಕಾಲಕ್ಕೂ ಉಳಿಯಬಹುದಾದ ಮಹೋನ್ನತವಾದ ಕೃತಿಯೂ ಹೌದು. ಅದೇ ರೀತಿಯಲ್ಲಿ ಮಹಾತ್ಮ ಗಾಂಧಿ ಅವರ ಆತ್ಮಚರಿತ್ರೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಅಲೋಚನಾ ಕ್ರಮ, ಪ್ರತಿಯೊಂದು ಸಂಗತಿಗಳನ್ನು ವಿಭಿನ್ನವಾಗಿ ವಿಶ್ಲೇಷಣೆ ಮಾಡಿರುವ ವಿಚಕ್ಷಣ ದೃಷ್ಠಿಯೂ ನಿರಂತರ ಓದಿನಿಂದ ಲಭಿಸಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬದುಕನ್ನು ಗಂಭೀರವಾಗಿ ಪರಿಗಣಿಸದೇ ತುಂಬಾ ಸರಳವಾಗಿ ಲೌಕಿಕ ಬದುಕೇ ಬಹಳ ಮುಖ್ಯ ಎಂದು ಭಾವಿಸಿರುವುದರಿಂದ ಹೊನ್ನು, ಹಣ, ಹೆಣ್ಣು ಇವುಗಳ ಹಿಂದೆ ಹೋಗುತ್ತಿದ್ದೇವೆ ಹೊರತು ಜ್ಞಾನದ ಹಿಂದೆ ಹೋಗುತ್ತಿಲ್ಲ. “ಜ್ಞಾನವೇ ಶಕ್ತಿ, ಅರಿವೇ ಗುರು, ಜ್ಞಾನದ ಬಲದಿಂದ ಅಜ್ಞಾನದ ಕೇಡು” ಹೀಗೆ ಭಾರತೀಯ ಎಲ್ಲ ವಿಶ್ವವಿದ್ಯಾಲಯಗಳ ಘೋಷವಾಕ್ಯಗಳು ಅರಿವಿನ ಮಹತ್ವ ಸಾರುತ್ತವೆ. ನಮ್ಮನ್ನು ನಿರಂತರವಾಗಿ ನಾವು ಮನುಷ್ಯರಾಗುವ ಹಾದಿಯಲ್ಲಿ ನಮ್ಮನ್ನು ಅರಿತುಕೊಳ್ಳಲು ಗ್ರಂಥಗಳು, ಕೃತಿಗಳು ಸಹಕಾರಿಯಾಗಿದ್ದು, ಗ್ರಂಥಾಲಯಗಳ ಕೊಡುಗೆ ಬಹಳ ದೊಡ್ಡದು ಎಂದು ಹೇಳಿದ ಅವರು, “ಓದು” ಎನ್ನುವುದು ಅಂತರಂಗದ ನಮ್ಮೊಳಗೆ ನಿರಂತರವಾಗಿ ನಡೆಯುವ ಧ್ಯಾನದಂತೆ. ಓದುನ್ನು ಧ್ಯಾನದ ರೀತಿ ಸ್ವೀಕಾರ ಮಾಡಿದಾಗ ಓದು ನಮ್ಮನ್ನು ತುಂಬಾ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಟಿ.ಸುರೇಶ್ ಮಾತನಾಡಿ, ಒಂದು ಪುಸ್ತಕ ನೂರು ಒಳ್ಳೆಯ ಸ್ನೇಹಿತರಿಗೆ ಸಮಾನ. ಸಾಮಾಜಿಕ ಮಾಧ್ಯಮಗಳಲ್ಲಿ ಕಾಲ ವ್ಯಯ ಮಾಡದೇ, ಗ್ರಂಥಾಲಯಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾದ ಒಳ್ಳೆಯ ಪುಸ್ತಕಗಳಿವೆ. ಇವುಗಳ ಸದುಪಯೋಗ ಪಡೆದುಕೊಂಡು ಯುಪಿಎಸ್ಸಿ ಹಾಗೂ ಕೆಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಎಂದು ಸಲಹೆ ನೀಡಿದರು.
ನಗರಸಭೆ ಸದಸ್ಯೆ ಪಿ.ಕೆ.ಮೀನಾಕ್ಷಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮಕ್ಕಳಲ್ಲಿ ಓದುವ ಹವ್ಯಾಸ ಕಡಿಮೆ ಆಗಿದೆ. ದಿನಪತ್ರಿಕೆಗಳನ್ನೂ ಓದುತ್ತಿಲ್ಲ. ಕನ್ನಡ ಭಾಷೆಯನ್ನು ಸ್ಪಷ್ಟವಾಗಿ ಬಳಸುವವರು ವಿರಳವಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಸಾಹಿತ್ಯದ ಓದು ಭಾಷೆ ಬಳಕೆ ಬಗ್ಗೆ ಪ್ರೌಢಿಮೆ ಮೂಡಿಸುತ್ತದೆ ಎಂದು ಹೇಳಿದರು.
ಲೇಖಕ ಆನಂದ ಕುಮಾರ್ ಮಾತನಾಡಿ, ನಗರ ಕೇಂದ್ರ ಗ್ರಂಥಾಲಯದಲ್ಲಿ ಮನೆಯ ವಾತಾವರಣವಿದೆ. ವಿದ್ಯಾರ್ಥಿಗಳು ಓದಿನ ಜೊತೆಗೆ ಸಂಪ್ರದಾಯ, ಸಂಸ್ಕøತಿಗಳನ್ನು ಅರಿಯಬೇಕು. ಗ್ರಂಥಾಲಯಕ್ಕೆ ಓದುಗರ ಸಂಖ್ಯೆ ಹೆಚ್ಚಾಗಲಿ ಎಂದು ಹೇಳಿದ ಅವರು, ಸರ್ಕಾರವು ಓದುಗರಿಗಾಗಿ ಅರಮನೆ ನಿರ್ಮಿಸಿದೆ. ಇದರ ಸದುಪಯೋಗ ಪಡೆದುಕೊಂಡು ದೇಶದ ಉತ್ತಮ ನಾಗರಿಕರಾಗಬೇಕು ಎಂದರು.
ಜಿಲ್ಲಾ ಗ್ರಂಥಾಲಯ ಮುಖ್ಯ ಗ್ರಂಥಾಲಯಾಧಿಕಾರಿ ಹಾಗೂ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಪಿ.ಆರ್.ತಿಪ್ಪೇಸ್ವಾಮಿ ಮಾತನಾಡಿ, ದೇಶಾದ್ಯಂತ ನವೆಂಬರ್ 14 ರಿಂದ 20 ರವರೆಗೆ ರಾಷ್ಟ್ರೀಯ ಗ್ರಂಥಾಲಯ ಸಪ್ತಹಾ ಆಯೋಜಿಸಲಾಗಿದೆ. ಗ್ರಂಥಾಲಯ ಸಪ್ತಾಹದ ಅಂಗವಾಗಿ ಚಿತ್ರಕಲಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಸೇರಿದಂತೆ ವಿವಿಧ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಮಕ್ಕಳಿಂದ ವೃದ್ಧರವರೆಗೂ ಗ್ರಂಥಾಲಯದೆಡೆಗೆ ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್ ಅವರು ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ, ಮಕ್ಕಳ ಗ್ರಂಥಾಲಯ, ಪುಸ್ತಕ ಪ್ರದರ್ಶನ ಹಾಗೂ ಓದುವ ಹೊರಾಂಗಣ ವಿಭಾಗ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ನಗರ ಗ್ರಂಥಾಲಯ ಮುಖ್ಯ ಗ್ರಂಥಾಲಯಾಧಿಕಾರಿ ಹಾಗೂ ನಗರ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೊಳ್ಳಿ ಬಸವರಾಜ, ನಿವೃತ್ತ ಗ್ರಂಥಪಾಲಕ ಕೃಷ್ಣಮೂರ್ತಿ ಸೇರಿದಂತೆ ಗ್ರಂಥಾಲಯ ಇಲಾಖೆ ಸಿಬ್ಬಂದಿ ಹಾಗೂ ಓದುಗರು ಇದ್ದರು.