i
ಹಲವು ವಿದ್ವಾಂಸರುಗಳ ನಡುವೆ ಎದ್ದು ನಿಲ್ಲುವ ವ್ಯಕ್ತಿತ್ವ ಡಾ.ಮೈಲಹಳ್ಳಿ ರೇವಣ್ಣನವರದು…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಾನಪದ ಕ್ಷೇತ್ರದಲ್ಲಿ ಕೆಲಸ ಮಾಡಿದ ಮೊದಲನೆ ತಲೆಮಾರಿನ ವಿದ್ವಾಂಸರುಗಳ ನಡುವೆ ತಮ್ಮದೆ ಆದ ಅಸ್ತಿತ್ವದಿಂದ ಎದ್ದು ನಿಲ್ಲುವ ವ್ಯಕ್ತಿತ್ವ ಡಾ.ಮೈಲಹಳ್ಳಿ ರೇವಣ್ಣ ಅವರದು ಎಂದು ಖ್ಯಾತ ಸಾಹಿತಿ ಮೈಸೂರಿನ ಪ್ರೊ.ಅರವಿಂದ ಮಾಲಗತ್ತಿ ಹೇಳಿದರು.
ಬಯಲುಸೀಮೆ ಕಲಾ ಬಳಗದಿಂದ ಐ.ಎಂ.ಎ.ಹಾಲ್ನಲ್ಲಿ ಭಾನುವಾರ ನಡೆದ ಡಾ.ಮೈಲಹಳ್ಳಿ ರೇವಣ್ಣರವರ ಸಂಶೋಧನೆಗಳು ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ನಾಡಿನ ದೊಡ್ಡ ಸಾಹಿತಿಗಳಲ್ಲಿ ಮೈಲಹಳ್ಳಿ ರೇವಣ್ಣ ಒಬ್ಬರು. ಅವರು ಕೇವಲ ಚಿತ್ರದುರ್ಗಕ್ಕೆ ಸಾಹಿತಿಯಲ್ಲ. ನಮ್ಮ ನಾಡಿನ ಸಾಹಿತಿ. ಜಾನಪದ ಸಾಹಿತ್ಯದಲ್ಲಿ ಹೆಚ್ಚಿನ ಸಾಹಿತ್ಯ ಪ್ರಕಾರಗಳನ್ನು ಸಂಗ್ರಹಿಸಿ ಕೃತಿ ಪ್ರಕಟಿಸಿದ್ದಾರೆ. ಹಾಗಾಗಿ ಜಾನಪದ ಕ್ಷೇತ್ರದಲ್ಲಿ ಎರಡನೆ ತಲೆಮಾರಿನವರಾದ ಇವರು ಸಂಗ್ರಹಿಸಿ ಸಂಶೋಧನೆ ಮಾಡಿದಷ್ಟು ಬೇರೆ ಯಾರು ಮಾಡಿಲ್ಲ. ವಿಶೇಷವಾದ ಗಾಧೆ, ಒಗಟುಗಳನ್ನು ಸಂಗ್ರಹಿಸುವುದು ಡಾ.ಮೈಲಹಳ್ಳಿ ರೇವಣ್ಣರವರ ವಿಶೇಷ ಗುಣ. ಇವರ ಚಿತ್ರದುರ್ಗದ ಮಾದಾರ ಸಾಹಿತ್ಯ ಸಂಸ್ಕೃತಿ ಅವಲೋಕನ ಮಾಡಿದರೆ ಚಿತ್ರದುರ್ಗದ ಸಾಹಿತ್ಯ ಗೊತ್ತಾಗುತ್ತದೆ. ಚಿತ್ರದುರ್ಗದಲ್ಲಿ ಸಾಹಿತ್ಯ ಕೋಟೆ ಕಟ್ಟಿದ್ದಾರೆ. ಅವರ ಪರಿಭಾಷೆ ಕಲ್ಲಿನಕೋಟೆಯಷ್ಟೆ ಗಟ್ಟಿಯಾದುದು ಎಂದು ಬಣ್ಣಿಸಿದರು.
ಡಾ.ಮೈಲಹಳ್ಳಿ ರೇವಣ್ಣ ಇವರ ಪಿ.ಹೆಚ್.ಡಿ. ಥೀಸಿಸ್ ಅತ್ಯಂತ ಶ್ರೀಮಂತವಾಗಿದೆ. ಇದನ್ನೆ ಮುಂದಿಟ್ಟುಕೊಂಡು ಮಹಾಕಾವ್ಯ ಬರೆಯಬೇಕೆಂಬ ಹಪಹಪಿ ನನ್ನಲ್ಲಿಯೂ ಇತ್ತು. ಹಿಂದೆ ನಡೆದು ಬಂದ ದಾರಿಯನ್ನು ಹೊರಳಿ ನೋಡುವ ಪ್ರಕ್ರಿಯೆ ಯಾರಲ್ಲಿ ಇರುತ್ತದೋ ಅಂತಹವರು ಮಾತ್ರ ದೊಡ್ಡದಾಗಿ ಬೆಳೆಯುತ್ತಾರೆ. ಅಹಂವಿಕೆಯಿಂದ ಹೊರಗುಳಿದಿರುವ ಇವರು ಸಣ್ಣವರ ಜೊತೆ ಸಣ್ಣವರಾಗಿ, ದೊಡ್ಡವರ ಜೊತೆ ದೊಡ್ಡವರಾಗಿ ಬೆರೆಯುವ ತಾಕತ್ತು ಬೆಳೆಸಿಕೊಂಡಿದ್ದಾರೆ. ಮನಸ್ಸಿಗೆ ನೆಮ್ಮದಿಯಿದ್ದಾಗ ಮಾತ್ರ ಇಂತಹ ಸಾಧನೆಗಳನ್ನು ಮಾಡಲು ಸಾಧ್ಯ. ಇವರ ಪುಸ್ತಕಗಳು ಪಠ್ಯಗಳಾಗಿವೆ. ಬರಹದಲ್ಲಿ ಸತ್ವ, ಜೀವಂತಿಕೆಯಿದ್ದಾಗಲೆ ಪಠ್ಯಗಳಾಗಲು ಸಾಧ್ಯ. ಹಲವಾರು ಬಾರಿ ಅಕಾಡೆಮಿ ಪ್ರಶಸ್ತಿಗಳನ್ನು ತೆಗೆದುಕೊಂಡಿದ್ದಾರೆ. ಜಾನಪದ, ಹಳೆಗನ್ನಡದಲ್ಲಿ ಕೆಲಸ ಮಾಡಿ ಜನಪದರು, ಜಾನಪದ ವಿದ್ವಾಂಸರು, ಹಳೆಗನ್ನಡದವರ ಬಾಯಿಂದಲೆ ಹೊಗಳಿಸಿಕೊಂಡಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಎಲೆಮರೆಯ ಕಾಯಿಯಂತೆ ಕೆಲಸ ಮಾಡುತ್ತಿರುವ ಡಾ.ಮೈಲಹಳ್ಳಿ ರೇವಣ್ಣ ಇವರ ಸಾಹಿತ್ಯಗಳು ಚರ್ಚೆಗೆ ಬರಬೇಕು. ಇವರ ಪ್ರಬಂಧಗಳು ಪುಸ್ತಕ ರೂಪದಲ್ಲಿ ಹೊರಬರಲಿ ಎಂದು ಹಾರೈಸಿದರು.
ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದ ಡಾ.ಮೀರಾಸಾಬಿಹಳ್ಳಿ ಶಿವಣ್ಣ ಮಾತನಾಡಿ ಪೂರ್ವಜರ ಹೆಸರನ್ನು ಇಟ್ಟುಕೊಂಡಿರುವ ಡಾ.ಮೈಲಹಳ್ಳಿ ರೇವಣ್ಣ ಇವರು ಕಾಲ ಹಾದಿಯಲ್ಲಿ ಹೋಗಿ ಬರವಣಿಗೆಯಲ್ಲಿ ಅದ್ಬುತವಾದ ಸಾಧನೆಗೈದಿದ್ದಾರೆ. ಮುಳ್ಳು, ಕಲ್ಲುಗಳ ಹಾದಿಯಲ್ಲಿ ನಡೆದಿರುವ ಕಾರಣ ಜಾನಪದ ಸಂಶೋಧನೆ ನಡೆಸುವ ಅವಕಾಶ ಇವರಿಗೆ ಸಿಕ್ಕಿತು. ಗಾಧೆ, ಒಗಟುಗಳ ಬಗ್ಗೆ ಸಾಕಷ್ಟು ಕೆಲಸ ಮಾಡಿ ಜಾನಪದ ಸಂಸ್ಕೃತಿ ಇನ್ನು ಈ ನಾಡಿನಲ್ಲಿ ಉಳಿದಿದೆ ಎನ್ನುವುದನ್ನು ತೋರಿಸಿದ್ದಾರೆ. ಜಾನಪದ ಕಲಾವಿದರು, ಸಂಶೋಧಕರು, ವಿದ್ವಾಂಸರು ಬೇರೆಯಲ್ಲ. ಒಂದಕ್ಕೊಂದು ಸಂಬಂಧವಿದೆ ಎನ್ನುವುದನ್ನು ಇವರು ನಿರೂಪಿಸಿದ್ದಾರೆಂದು ಹೇಳಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಬಿ.ಆರ್.ಶಿವಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಸಾಹಿತ್ಯ, ಸಂಸ್ಕೃತಿಯಲ್ಲಿ ಪ್ರಖ್ಯಾತವಾದ ನಾಡು ನಮ್ಮದು. ಚಿತ್ರದುರ್ಗ ಜಿಲ್ಲೆ ಬಯಲುಸೀಮೆಯಾಗಿರಬಹುದು. ಆದರೆ ಜಾನಪದ ಕಲೆ, ಸಾಹಿತ್ಯದಲ್ಲಿ ಶ್ರೀಮಂತಿಕೆಯಿಟ್ಟುಕೊಂಡಿದೆ. ಸಾಹಿತ್ಯ, ಕಲಾ ಪ್ರೇಮಿಗಳ ಮೊದಲ ಕಾರ್ಯಕ್ರಮ ಇದು. ಯುವ ಪೀಳಿಗೆ ಪುಸ್ತಕ ಓದುವ ಸಂಸ್ಕೃತಿಯಿಂದ ದೂರವಾಗುತ್ತಿದ್ದಾರೆ. ಅದಕ್ಕಾಗಿ ಇಂತಹ ಕಾರ್ಯಕ್ರಮಗಳ ಮೂಲಕ ಓದುಗರನ್ನು ಸೆಳೆಯಬೇಕಾಗಿದೆ ಎಂದರು.
ನಿವೃತ್ತ ಪ್ರಾಂಶುಪಾಲ ಜೆ.ಯಾದವರೆಡ್ಡಿ, ಸರ್ಕಾರಿ ಪದವಿಪೂರ್ವ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಆರ್.ಮಲ್ಲೇಶ್, ಬಾಲಕಿಯರ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಹಾಗೂ ಕವಿ ನಾಗರಾಜ್ಬೆಳಗಟ್ಟ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ ವೇದಿಕೆಯಲ್ಲಿದ್ದರು.
ಸಾಹಿತಿ ಡಾ.ಬಿ.ಎಲ್.ವೇಣು, ಸಂಶೋಧಕ ಡಾ.ಬಿ.ರಾಜಶೇಖರಪ್ಪ, ನಿವೃತ್ತ ಪ್ರಾಂಶುಪಾಲ ಪ್ರೊ.ಹೆಚ್.ಲಿಂಗಪ್ಪ, ಪ್ರಾಧ್ಯಾಪಕ ಡಾ.ಕರಿಯಪ್ಪ ಮಾಳಿಗೆ, ಅಧ್ಯಾಪಕ ಗುರುನಾಥ್ ಬಿ.ಎಂ. ಸೇರಿದಂತೆ ಡಾ.ಮೈಲಹಳ್ಳಿ ರೇವಣ್ಣರವರ ಅಭಿಮಾನಿಗಳು ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬದವರು ವಿಚಾರ ಸಂಕಿರಣದಲ್ಲಿ ಹಾಜರಿದ್ದರು.