i
ಸಿಎಂ, ಸಚಿವ ಕಾರಜೋಳ ಬಯಲು ಸೀಮೆ ಬಾಗಿನ ಸಮರ್ಪಣೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ತಂದಿದ್ದ ವಿಭಿನ್ನ ರೀತಿಯ ಬಯಲು ಸೀಮೆ ಬಾಗಿನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಿವಿ ಸಾಗರ ಜಲಾಶಯಕ್ಕೆ ಸಮರ್ಪಣೆ ಮಾಡಿದರು.
ನೀರಾವರಿ ಹೋರಾಟ ಸಮಿತಿ ಪ್ರತಿ ವರ್ಷ ಭದ್ರೆ ಲಿಫ್ಟ್ ಮಾಡಿ ವಿವಿ ಸಾಗರಕ್ಕೆ ಹರಿಸುವ ಮುನ್ನ ಪೂಜೆ ಸಲ್ಲಿಸಿ ಬಾಗಿನ ಭದ್ರೆಗೆ ಬಾಗಿನ ಸಲ್ಲಿಸುವ ಪರಿಪಾಟಲು ನಡೆಸಿಕೊಂಡು ಬಂದಿತ್ತು. ಪುಟ್ಟನೆಯ ಬಿದಿರಿನ ತೂಗು ತೊಟ್ಟಿಲಿನಲ್ಲಿ ಜಿಲ್ಲೆಯಲ್ಲಿ ಬೆಳೆಯುವ ಎಲ್ಲ ನಮೂನೆ ಆಹಾರ ಧಾನ್ಯ , ತರಕಾರಿ, ಹಣ್ಣುಗಳನ್ನು ಅದರಲ್ಲಿ ತುಂಬಿ ಜಲಾಶಯಕ್ಕೆ ಬಿಡಲಾಗುತ್ತದೆ. ಯಾವುದೇ ರೀತಿಯ ಪೂಜಾ ಸಾಮಾಗ್ರಿ ಅದರಲ್ಲಿ ಇರುವುದಿಲ್ಲ.
ಜೋಳ, ರಾಗಿ, ಸಾವೆ, ನವಣೆ, ಮೆಕ್ಕೋಜೋಳ, ಸೇಂಗಾ, ಹತ್ತಿ, ಹೆಸರು, ಕುಸುಬೆ ಸೇರಿದಂತೆ ೩೯ ಕ್ಕೂ ಅಽಕ ಧಾನ್ಯ ಹಾಗೂ ಸೇವಂತಿಗೆ, ಕನಕಾಂಬರ, ಜಾಜಿ, ಮಲ್ಲಿಗೆ ಸೇರಿದಂತೆ ತರಾವರಿ ಹೂ, ತೆಂಗು, ಅಡಿಕೆ, ಬಾಳೆ, ದಾಳಿಂಬೆ, ಮೋಸುಂಬೆ, ಸೇವು ಸೇರಿದಂತೆ ತೋಟಗಾರಿಕೆ ಬೆಳೆಗಳ ತೊಟ್ಟಿಲಿನಲ್ಲಿ ಇಡಲಾಗಿತ್ತು. ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಅಧ್ಯಕ್ಷ ಟಿ.ನುಲೇನೂರು ಎಂ.ಶಂಕರಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ್, ಜಿ.ಬಿ.ಶೇಖರ್, ಚಿಕ್ಕಪ್ಪನಹಳ್ಳಿ ಷಣ್ಮುಖ, ಬಸ್ತಿಹಳ್ಳಿ ಸುರೇಶ್ಬಾಬು, ಮಲ್ಲಾಪುರ ತಿಪ್ಪೇಸ್ವಾಮಿ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಕೆ.ಸಿ.ಹೊರಕೇರಪ್ಪ, ಶಿವಕುಮಾರ್, ಹಂಪಯ್ಯನಮಾಳಿಗೆ ಧನಂಜಯ್ಯ ಸೇರಿದಂತೆ ಸಮಿತಿ ಹತ್ತು ಜನರಿಗೆ ಮಾತ್ರ ಬಾಗಿನ ಸಮರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.
ವಿಶಿಷ್ಟ ರೀತಿಯ ಬಾಗಿನವನ್ನು ಹೋರಾಟ ಸಮಿತಿಯಿಂದ ಸ್ವೀಕರಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಿಶೇಷ ಆಸಕ್ತಿ ವಹಿಸಿ ಜಲಾಶಯಕ್ಕೆ ಸಮರ್ಪಿಸಿದರು. ಶಾಸಕರಾದ ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ, ಪೂರ್ಣಿಮಾ ಶ್ರೀನಿವಾಸ್, ಟಿ.ರಘುಮೂರ್ತಿ, ವೈ.ಎ.ನಾರಾಯಣಸ್ವಾಮಿ, ಕೆ.ಎಸ್.ನವೀನ್, ವಿಶ್ವೇಶ್ವರಯ್ಯ ಜಲ ನಿಗಮದ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಚೆಲುವರಾಜ್, ಭದ್ರಾ ಮೇಲ್ದಂಡೆ ಮುಖ್ಯ ಇಂಜಿನಿಯರ್ ರವಿ, ಸೂಪರಿಂಟೆಂಡ್ ಇಂಜಿನಿಯರ್ ಕೆ.ಎಂ.ಶಿವಪ್ರಕಾಶ್, ಕಾರ್ಯಕಾಲಕ ಇಂಜಿನಿಯರ್ ಚಂದ್ರಮೌಳಿ ಇದ್ದರು.