i
ಹಿಂಗಾರು ಬಿತ್ತನೆಗೆ ರೈತರ ಚಿತ್ತ, ಕಡಲೆ ಬಿಳ ಜೋಳ ಬಿತ್ತನೆ ಬಿರುಸು…
ವರದಿ-ನಾಗತಿಹಳ್ಳಿ ಮಂಜುನಾಥ್.
ಚಂದ್ರವಳ್ಳಿನ್ಯೂಸ್, ಹೊಸದುರ್ಗ:
ಕಳೆದ ಕೆಲವು ತಿಂಗಳುಗಳ ಹಿಂದೆ ಎಡೆ ಬಿಡದೆ ಮಲೆನಾಡಿನಂತೆ ಸುರಿದ ಮಳೆಯಿಂದಾಗಿ ರೈತನಿಗೆ ಈ ಬಾರಿ ಬೆಳೆ ನಿರೀಕ್ಷಿತ ಪ್ರಮಾಣದಲ್ಲಿ ದೊರೆತಿಲ್ಲ, ಹಿಂಗಾರಿನಲ್ಲಿಯಾದರೂ ಉತ್ತಮ ಆದಾಯ ಗಳಿಸುವ ನಿರೀಕ್ಷೆಯಿಂದ ಕಡಲೆ ಹಾಗೂ ಬಿಳಿಜೋಳ ಕಳೆದ ಒಂದು ವಾರದಿಂದ ಬಿತ್ತನೆ ಕಾರ್ಯ ತಾಲ್ಲೂಕಿನಾದ್ಯಂತ ಬಿರುಸಿನಿಂದ ಸಾಗುತ್ತಿರುವುದು ಕಂಡು ಬರುತ್ತಿದೆ.
ಈ ಭಾರಿ ಅಧಿಕ ಮಳೆಯಿಂದ ಬಹುತೇಕ ರೈತರಿಗೆ ಈರುಳ್ಳಿ ಕೈ ಕೊಟ್ಟಿದೆ, ಇದೀ ಈರುಳ್ಳಿ ಬೆಳೆದಿರುವ ಎಲ್ಲಾ ಕಡೆ ಕಡಲೆ ಬಿತ್ತನೆ ಮಾಡುತ್ತಿರುವುದು ಕಂಡು ಬರುತ್ತಿದೆ, ಕಸಬಾ ಹೋಬಳಿಯ ಬಾಗೂರು, ಆನಿವಾಳ, ಎಂ.ಜಿ ದಿಬ್ಬ, ಬೋಕಿಕೆರೆ, ಕಂಗುವಳ್ಳಿ, ಶ್ರೀರಂಗಪುರ, ಶೆಟ್ಟಿಹಳ್ಳಿ, ಸಾಣೇಹಳ್ಳಿ ಹಾಗೂ ಶ್ರೀರಾಂಪುರ ಹೋಬಳಿಯ ಕಬ್ಬಳ, ಮಲ್ಲೇನಹಳ್ಳಿ, ಮುತ್ತೂರು, ಆಲಘಟ್ಟ ಸೇರಿದಂತೆ ಕಪ್ಪು ಮಣ್ಣಿರುವ ಎಲ್ಲಾ ಪ್ರದೇಶಗಳಲ್ಲೂ ಕಡಲೆ ಹಾಗೂ ಬಿಳಿಜೋಳ ಬೆಳೆಯುತ್ತಾರೆ.
ಸಹಾಯಕ ಕೃಷಿ ನಿರ್ದೇಶಕ ಸಿ.ಎಸ್. ಈಶ’ ಅವರ ಮಾಹಿತಿಯ ಪ್ರಕಾರ ಕಡಲೆ ೯೫ ರಿಂದ ೧೦೦ ದಿನದ ಬೆಳೆಯಾಗಿದ್ದು, ಎಕರೆಗೆ ೨೦-೩೦ ಕ್ವಿಂಟಾಲ್ ಇಳುವರಿ ಸಿಗುತ್ತದೆ. ಬಿತ್ತನೆಗೆ ಒಂದು ದಿನಕ್ಕೂ ಮೊದಲು ಒಂದು ಕೆ.ಜಿ. ಬೀಜಕ್ಕೆ ೨ ಗ್ರಾಂ ಕಾರ್ಬನ್ ಡೈಜಿಮ್ ಅಥವಾ ೪ ಗ್ರಾಂ ಟ್ರೈಕೋಡರ್ಮಾ ವಿರಿಡೆ ಸೇರಿಸಿ ಬೀಜೋಪಚಾರ ಮಾಡಬೇಕು. ಒಂದು ಎಕರೆಗೆ ೨೫ ಕೆ.ಜಿ ಬೀಜ ಬಿತ್ತನೆ ಮಾಡಬೇಕು
ಬಿತ್ತನೆಗೂ ಮೊದಲು ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ ೩ ಟನ್ ಹಾಕಬೇಕು. ಎಕರೆಗೆ ರೈಜೋಬಿಯಂ (೨೦೦ ಗ್ರಾಂ) ಮತ್ತು ರಂಜಕ ಕರಗಿಸುವ ಜೀವಾಣು (ಪಿಎಸ್.ಬಿ) ಜೈವಿಕ ಗೊಬ್ಬರದಿಂದ ಅಥವಾ ಸಾರಜನಕ, ರಂಜಕ, ಪೋಟಾ? (೫, ೧೦, ೨೦ ಕೆ.ಜಿ ) ಭೂಮಿಗೆ ಹಾಕಬೇಕು. ನಂತರ ಸಾಲಿಂದ ಸಾಲಿಗೆ ೧೨ ಇಂಚ್ ಅಗಲ, ಗಿಡದಿಂದ ಗಿಡಕ್ಕೆ ೩ ಇಂಚು ಅಂತರದಲ್ಲಿ ಬಿತ್ತನೆ ಮಾಡಬೇಕು. ಕಳೆದ ತೆಗೆದ ನಂತರ ಗಿಡಗಳು ಹೂ ಬಿಡುವ ಹಂತದಲ್ಲಿ ಶೇ ೨ ರ? ಮೇಲುಗೊಬ್ಬರ ಹಾಕಬೇಕು ಎನ್ನುತ್ತಾರೆ, ಈ ಬಾರಿ ಬಿಳಿಜೋಳ ಬಿತ್ತನೆಗೆ ಆದ್ಯತೆ ನೀಡಿದ್ದೇವೆ. ಕಡಲೆ ಬಿತ್ತುವಾಗ ಅನುಸರಿಸುವ ವಿಧಾನಗಳನ್ನೇ ಬಿಳಿಜೋಳ ಬಿತ್ತಲು ಅನುಸರಿಸಲಾಗುತ್ತದೆ. ಎಕರೆಗೆ ೩-೪ ಕೆ.ಜಿ ಬಿತ್ತಿದರೆ, ೫ ಕ್ವಿಂಟಾಲ್ ಜೋಳ ಪಡೆಯಬಹುದು ಎಂದು ಹೇಳುತ್ತಾರೆ.
“ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಕಡಲೆ ಬೀಜ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದ್ದು, ಈಗಾಗಲೇ ೬೦೦ ಕ್ವಿಂಟಾಲ್ ವಿತರಣೆಯಾಗಿದ್ದು, ೨೦೦ ಕ್ವಿಂಟಾಲ್ ದಾಸ್ತಾನು ಇದೆ. ಹೆಚ್ಚಿಗೆ ಬೇಡಿಕೆ ಬಂದರೆ ಪೂರೈಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.”
–ಸಿ.ಎಸ್. ಈಶ, ಸಹಾಯಕ ಕೃಷಿ ನಿರ್ದೇಶಕ ,ಹೊಸದುರ್ಗ