i
ಜೆಡಿಎಸ್ ಕದ ತಟ್ಟುತ್ತಿರುವ ಸೋಮಶೇಖರ್, ವೀರೇಂದ್ರ ಪಪ್ಪಿ?…
ವರದಿ-ಎಚ್.ಸಿ.ಗಿರೀಶ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲೇಬೇಕು ಎನ್ನುವ ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ಮುಖಂಡ ಬಿ.ಸೋಮಶೇಖರ್, ಉದ್ಯಮಿ ವೀರೇಂದ್ರ ಪಪ್ಪಿ ಅವರು ಮತ್ತೆ ಜೆಡಿಎಸ್ ಟಿಕೆಟ್ ಪಡೆಯಲು ಶತ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಶತಗತಾಯ ಅಧಿಕಾರಕ್ಕೆ ಬರಲೇಬೇಕು ಎನ್ನುವ ಉದ್ದೇಶದಿಂದ 123 ಸೀಟುಗಳನ್ನು ಗೆಲ್ಲಲೇಬೇಕೆಂಬ ಗುರಿಯೊಂದಿಗೆ ಪಂಚರತ್ನ ರಥಯಾತ್ರೆ, ಗ್ರಾಮ ವಾಸ್ತವ್ಯ ಸೇರಿದಂತೆ ಮತ್ತಿತರ ಕಾರ್ಯಕ್ರಮಗಳಲ್ಲಿ ತುಂಬಾ ತೊಡಗಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಈಗಾಗಲೇ ತುಮಕೂರು ಜಿಲ್ಲೆಯಾದ್ಯಂತ ಪಂಚರತ್ನ ರಥಯಾತ್ರೆ ಸಂಚರಿಸಲು ಸಮಯ ನಿಗದಿಯಾಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಶಿರಾ ವಿಧಾನಸಭಾ ಕ್ಷೇತ್ರದ ಪಂಚರತ್ನ ರಥಯಾತ್ರೆ ಪೂರ್ಣಗೊಂಡ ನಂತರ ಹಿರಿಯೂರು ವಿಧಾನಸಭಾ ಕ್ಷೇತ್ರದ ಮೂಲಕ ಚಿತ್ರದುರ್ಗ ಜಿಲ್ಲೆಗೆ ಆಗಮಿಸಿ ಗ್ರಾಮ ವಾಸ್ತವ್ಯವನ್ನು ಕುಮಾರಸ್ವಾಮಿ ಮಾಡಬೇಕಿತ್ತು.
ಆದರೆ ಚಿತ್ರದುರ್ಗ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳು ಇನ್ನೂ ಅಂತಿಮವಾಗಿಲ್ಲ. ಪ್ರತಿ ಕ್ಷೇತ್ರಕ್ಕೆ 2 ರಿಂದ 3 ಮಂದಿಯಂತೆ ಟಿಕೆಟ್ ಆಕಾಂಕ್ಷಿಗಳಿದ್ದರೂ ಅವರ ಹೆಸರನ್ನು ಜೆಡಿಎಸ್ ವರಿಷ್ಠರು ಪ್ರಕಟಿಸದೆ ಮೀನಾಮೇಷ ಏಣಿಸುತ್ತಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಕೆಲ ವಿಧಾನಸಭಾ ಕ್ಷೇತ್ರಗಳಿಗೆ ಬಿಜೆಪಿ, ಕಾಂಗ್ರೆಸ್ ಮುಖಂಡರು ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಲು ಉತ್ಸಾಹ ತೋರುತ್ತಿದ್ದು ಜೆಡಿಎಸ್ ವರಿಷ್ಠರು ಕೂಡಾ ಏಕಾಏಕಿ ಯಾವುದೇ ಭರವಸೆ ನೀಡುತ್ತಿಲ್ಲ ಎನ್ನಲಾಗಿದೆ.
ಜೆಡಿಎಸ್ ವರಿಷ್ಠರು ಟಿಕೆಟ್ ಆಕಾಂಕ್ಷಿಗಳೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದರೂ ಯಾವುದೇ ರೀತಿಯ ತೀರ್ಮಾನಕ್ಕೆ ಬರಲಾಗಿಲ್ಲ. ಇನ್ನೂ ಅವರಿಗೆ ಟಿಕೆಟ್ ಕೊಟ್ಟರೆ ಹೇಗೆ, ಇವರಿಗೆ ಟಿಕೆಟ್ ಕೊಟ್ಟರೆ ಗೆಲ್ಲಬಹುದೇ ಎನ್ನುವ ಚಾಣಕ್ಯನ ಲೆಕ್ಕಾಚಾರದಲ್ಲಿ ಜೆಡಿಎಸ್ ವರಿಷ್ಠರು ಇದ್ದಂತೆ ಕಾಣುತ್ತಿದೆ.
ಹಾಗಾಗಿ ಇತರೆ ರಾಷ್ಟ್ರೀಯ ಪಕ್ಷಗಳ ಮುಖಂಡರು ಜೆಡಿಎಸ್ ಟಿಕೆಟ್ ನತ್ತ ದೃಷ್ಠಿ ನೆಟ್ಟಿದ್ದು ತೀವ್ರ ಸ್ಪರ್ಧೆ ನೀಡುವಂತವರು ಅಭ್ಯರ್ಥಿ ಆಗಲು ಮುಂದೆ ಬಂದರೆ ಖಂಡಿತ ಅವರಿಗೆ ಟಿಕೆಟ್ ಲಭ್ಯವಾಗಲಿದೆ ಎನ್ನುವ ಮಾತುಗಳನ್ನು ಜೆಡಿಎಸ್ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ.
ಬಿ.ಸೋಮಶೇಖರ್ ಯಾರು…
ಚಿತ್ರದುರ್ಗ-ದಾವಣಗೆರೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಬಿಜೆಪಿಯ ಕೆ.ಎಸ್.ನವೀನ್ ವಿರುದ್ಧ ಸೋಲು ಕಂಡಿರುವ ಬಿ.ಸೋಮಶೇಖರ್ ಅವರು ಸಿದ್ದರಾಮಯ್ಯನವರ ನಿಕಟ ಸಂಬಂಧಿಯಾಗಿದ್ದಾರೆ.
ಅಲ್ಲದೆ ಕಾಂಗ್ರೆಸ್ ಪಕ್ಷದಿಂದಲೇ ಹಿರಿಯೂರು ಕ್ಷೇತ್ರಕ್ಕೆ ಟಿಕೆಟ್ ಪಡೆದೇ ತೀರುವುದಾಗಿ ಹೇಳುತ್ತಲೇ ಜೆಡಿಎಸ್ ಪಕ್ಷದಲ್ಲೇಕೆ ಒಂದು ಕೈ ನೋಡಬಾರದು ಎಂದು ತಿಳಿದು ಈಗಾಗಲೇ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ಯಶೋಧರ ಸೇರಿದಂತೆ ಮತ್ತಿತರರನ್ನ ಭೇಟಿ ಮಾಡಿ ತನ್ನ ಉತ್ಕಟ ಬಯಕೆಯನ್ನ ಹೇಳಿಕೊಂಡಿದ್ದಾರೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಈಗಾಗಲೇ ಜೆಡಿಎಸ್ ಅಂಗಳದಲ್ಲಿ ಕಾಣಿಸಿಕೊಂಡಿರುವ ಸೋಮಶೇಖರ್ ಎಷ್ಟೇ ಹಣವಾದರೂ ಖರ್ಚು ಮಾಡಲು ಸಿದ್ಧ ಇದ್ದೇನೆ ಟಿಕೆಟ್ ಕೊಡಿ ಎಂದು ಕೇಳುತ್ತಿದ್ದಾರೆ ಎನ್ನಲಾಗುತ್ತಿದೆ. ಎಂಎಲ್ ಸಿ ಚುನಾವಣೆಯಲ್ಲಿ ಸೋತ ನಂತರ ಇಡೀ ಹಿರಿಯೂರು ವಿಧಾನಸಭಾ ಕ್ಷೇತ್ರದಾದ್ಯಂತ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹೀಗೆ ಮೂರು ಪಕ್ಷಗಳ ಮುಖಂಡರು, ಕಾರ್ಯಕರ್ತರನ್ನ ಭೇಟಿ ಮಾಡಿ ವಿಶ್ವಾಸಗಳಿಸುತ್ತಿರುವುದು ಜಗಜಾಹೀರವಾಗಿದೆ. ಒಂದು ವೇಳೆ ಸೋಮಶೇಖರ್ ಅವರಿಗೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದರೆ ಜೆಡಿಎಸ್ ಟಿಕೆಟ್ ಸಿಕ್ಕರೆ ಅಚ್ಚರಿ ಪಡುವಂತದೇನು ಇಲ್ಲ ಎನ್ನಲಾಗುತ್ತಿದೆ.
ವೀರೇಂದ್ರ ಪಪ್ಪಿ…
ಚಳ್ಳಕೆರೆ ನಗರದ ನಿವಾಸಿ, ಉದ್ಯಮಿ ವೀರೇಂದ್ರ ಪಪ್ಪಿ ಅವರು ಮತ್ತೆ ಹಿರಿಯೂರು ಕ್ಷೇತ್ರದ ಟಿಕೆಟ್ ಬಯಸಿ ಜೆಡಿಎಸ್ ಪಕ್ಷದ ಕದ ತಟ್ಟುತ್ತಿರುವ ಕುರಿತು ಗುಸುಗುಸು ಆರಂಭವಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕ ತಿಪ್ಪಾರೆಡ್ಡಿ ಅವರಿಂದ ಸೋಲು ಕಂಡಿದ್ದ ಪಪ್ಪಿ ಇತ್ತೀಚೆಗೆ ಕಾಂಗ್ರೆಸ್ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದರು. ಇದಾದ ನಂತರ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ಆರೋಪಿಯಾಗಿದ್ದರು. ಪೊಲೀಸರಿಂದ ಬಂಧಿಸುವುದನ್ನು ತಪ್ಪಿಸಿಕೊಳ್ಳಲು ಹೈಕೋರ್ಟ್ ಮೊರೆ ಹೋಗಿ ಜಾಮೀನು ಪಡೆದುಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ.
ಇದರ ಮಧ್ಯ ಚಿತ್ರದುರ್ಗ ಜಿಲ್ಲೆಯ ಪಕ್ಷ ಸಂಘಟನೆ ಹೊಣೆ ಹೊತ್ತಿರುವ ನಿಖಿಲ್ ಕುಮಾರ ಸ್ವಾಮಿ ಮಧ್ಯ ಪ್ರವೇಶ ಮಾಡಿದ್ದು ಗೆಲ್ಲುವ ಸಾಮರ್ಥ್ಯ ಇರುವಂತವರಿಗೆ ಟಿಕೆಟ್ ನೀಡಿದರಾಯಿತು ಎನ್ನುವ ಹಂಬಲವನ್ನು ತಂದೆ ಕುಮಾರಸ್ವಾಮಿ ಬಳಿ ಹೇಳಿಕೊಂಡಿದ್ದು ಆಗ ಕುಮಾರಸ್ವಾಮಿ ಹಿರಿಯೂರು ಕ್ಷೇತ್ರಕ್ಕೆ ಒಕ್ಕಲಿಗ ಜಾತಿಯವರಿಗೆ ಟಿಕೆಟ್ ನೀಡುವುದಾಗಿ ಬಹಿರಂಗ ಘೋಷಣೆ ಮಾಡಲಾಗಿದೆ. ಈ ವಿಚಾರದಿಂದ ನೀನು ದೂರ ಇರುವಂತೆ ಸಲಹೆ ನೀಡಿದರು ಎನ್ನಲಾಗುತ್ತಿದೆ. ಸದ್ಯಕ್ಕೆ ಬೂದಿ ಮುಚ್ಚಿದ ಕೆಂಡದಂತಿರುವ ಹಿರಿಯೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಸೇರಿದಂತೆ ಚಿತ್ರದುರ್ಗ ಜಿಲ್ಲೆಯ ಇತರೆ ವಿಧಾನಸಭಾ ಕ್ಷೇತ್ರಗಳಲ್ಲೂ ಅನ್ಯ ಪಕ್ಷದ ನಾಯಕರು ಜೆಡಿಎಸ್ ಪಕ್ಷದ ಕದ ತಟ್ಟುತ್ತಿರುವುದಾಗಿ ಕೇಳಿ ಬರುತ್ತಿದೆ. ಕೋಟೆ ನಾಡಿನಲ್ಲಿ ಜೆಡಿಎಸ್ ಪಕ್ಷದಿಂದ ಯಾವುದೇ ಪಕ್ಷದ ನಾಯಕರು ಸ್ಪರ್ಧಿಸುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.