i
ಒಳ ಮೀಸಲಾತಿ ಜಾರಿಗಾಗಿ ಪರಿಶಿಷ್ಟರು ಒಗ್ಗೂಡಿ ಹೋರಾಡಬೇಕು…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿಗಾಗಿ ಎಲ್ಲಾ ಪರಿಶಿಷ್ಟರು ಒಗ್ಗೂಡಿ ಹೋರಾಡಬೇಕೆಂದು ಜಿಲ್ಲಾಧ್ಯಕ್ಷ ಹುಲ್ಲೂರು ಕುಮಾರಸ್ವಾಮಿ ಹೇಳಿದರು.
ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಒತ್ತಾಯಿಸಿ ಚಿತ್ರದುರ್ಗಕ್ಕೆ ನಾಳೆ ಆಗಮಿಸುತ್ತಿರುವ ಕಾಲ್ನಡಿಗೆ ಜಾಥದ ಬಗ್ಗೆ ಒನಕೆ ಓಬವ್ವ ವೃತ್ತದಲ್ಲಿ ನಡೆದ ಜಾಗೃತಿ ಸಭೆಯಲ್ಲಿ ಹೇಳಿದರು.
ನಂತರ ಮಾತನಾಡಿದ ಡಾ.ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ನಾಳೆ ಮಧ್ಯಾಹ್ನ ೨:೦೦ ಗಂಟೆಗೆ ಚಿತ್ರದುರ್ಗದ ಯೂನಿಯನ್ ಪಾರ್ಕ್ ಬಳಿ ಡಾ|| ಬಿ.ಆರ್ ಅಂಬೇಡ್ಕರ್ ಅವರು ಜಾತಿ ಜನಸಂಖ್ಯೆಗೆ ಅನುಗುಣವಾಗಿ ದೇಶದ ಸಂಪತ್ತು, ಅಧಿಕಾರ ಹಂಚಿಕೆಯಾಗಬೇಕೆಂದು ಪ್ರತಿಪಾದಿಸಿದರು ಮತ್ತು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಸಮುದಾಯಗಳು ಅವರ ಜನಸಂಖ್ಯೆ ಆಧಾರವಾಗಿಯೇ ಶೇಕಡ ೧೫% ಮತ್ತು ಶೇಕಡ ೩% ಮೀಸಲಾತಿಯನ್ನು ಸಂವಿಧಾನದಲ್ಲಿ ಅಳವಡಿಸಿದರು. ಈ ಸಮುದಾಯಗಳಿಗೆ ಖಾತ್ರಿಪಡಿಸಿದ ಪ್ರಾತಿನಿಧ್ಯದ ಮೀಸಲಾತಿಗೆ ಸಂವಿಧಾನ ಬದ್ದ ರಕ್ಷಣೆ ಕಲ್ಪಿಸಿರುವಂತೆ ಈಗ ಆ ಸಮುದಾಯಗಳಿಗೆ ಅವರ ಜನಸಂಖ್ಯೆ ಅನುಗುಣವಾಗಿ ಹಂಚಿಕೆಗೆ ಸಂವಿಧಾನ ಸಂರಕ್ಷಣೆಯ ಅವಶ್ಯಕತೆ ಇದೆ. ಈ ಕಾರಣಕ್ಕಾಗಿಯೇ ಸಂವಿಧಾನ ಪರಿಚ್ಛೇದ ೩೪೧(೩) ಕ್ಕೆ ತಿದ್ದುಪಡಿಯಾಗಬೇಕಾಗಿದೆ. ಆಂಧ್ರಪ್ರದೇಶ ವರ್ಗೀಕರಣ ಬಿಲ್ಲು ೧೮ ವರ್ಷಗಳಿಂದ ಸಂಸತ್ತಿನಲ್ಲಿ ಧೂಳು ತಿನ್ನುತ್ತಿದೆ. ಒಂದು ವೇಳೆ ಕರ್ನಾಟಕ ರಾಜ್ಯವು ಒಳ ಮೀಸಲಾತಿಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿದರೂ, ಕರ್ನಾಟಕ ರಾಜ್ಯದ ಒಳ ಮೀಸಲಾತಿ ಚಳುವಳಿಯು ಆಂಧ್ರ, ತೆಲಂಗಾಣದಲ್ಲಿ ಸಂವಿಧಾನ ತಿದ್ದುಪಡಿಗೆ ನಡೆಯುವ ಚಳುವಳಿಯ ಭಾಗವಾಗಬೇಕಿದೆ. ಪರಿಶಿಷ್ಟ ಜಾತಿಗಳ ಜನಸಂಖ್ಯೆಗೆ ತಕ್ಕಂತೆ ಸೂಕ್ತ ಪ್ರತಿನಿಧ್ಯ (ಮೀಸಲಾತಿ) ಪರಿಣಾಮಕಾರಿ ಜಾರಿಗೆ ಒತ್ತಾಯಿಸುವ ರೀತಿಯಲ್ಲಿ ಪರಿಶಿಷ್ಟ ಆಯಾ ಸಮುದಾಯಗಳ ಜನಸಂಖ್ಯೆಯ ಪ್ರಾತಿನಿಧ್ಯದ ಅವಶ್ಯಕತೆಯನ್ನು ಒಪ್ಪಲೇಬೇಕಾಗಿದೆ ಎಂದರು. ಗುರುವಾರ ಮಧ್ಯಾಹ್ನ ೨:೦೦ ಗಂಟೆಗೆ ಚಿತ್ರದುರ್ಗದ ಯೂನಿಯನ್ ಪಾರ್ಕ್ ಬಳಿ ಸ್ವಾಗತಿಸಲಾಗುತ್ತಿದೆ. ಜನಾಂಗ ಬಾಂಧವರು ಸಾಮಾಜಿಕ ನ್ಯಾಯ ಬಯಸುವರೆಲ್ಲರೂ ಈ ರಾಜ್ಯ ಮಟ್ಟದ ಜಾಥವನ್ನು ಯಶಸ್ವಿಗೊಳಿಸಬೇಕೆಂದು ಕೋರಿದ್ದಾರೆ.
ದಲಿತ ಸಂಘರ್ಷ ಸಮಿತಿ (ಎನ್.ಮೂರ್ತಿ ಬಣ) ಸಾಮಾಜಿಕ ಸಂಘರ್ಷ ಸಮಿತಿ. ನವಪ್ರಜಾ ರಕ್ಷಣಾ ವೇದಿಕೆ, ಡಿ.ಎಸ್.ಎಸ್(ಮಹಂತೇಶ್ ಬಣ) ಮಾದಿಗ ಯುವ ಸೇನೆ, ಭಾರತೀಯ ದಲಿತ ಸಂಘರ್ಷ ಸಮಿತಿ, ಸ್ಲಂ ಜನಾಂದೋಲನ ಸಂಘಟನೆ, ಡಿ.ಎಸ್.ಎಸ್(ಮೀಸಲಾತಿ ಬಣ) ರಾಷ್ಟ್ರೀಯ ಪ್ರಬುದ್ಧ ಸೇನೆ, ಅಂಬೇಡ್ಕರ್ ಸೇನೆ, ಕರುನಾಡು ವಿಜಯ ಸೇನೆ, ಅಸ್ಪೃಶ್ಯತ ನಿವಾರಣಾ ಒಕ್ಕೂಟ, ಡಿ.ಎಸ್.ಎಸ್(ಕೃಷ್ಣಪ್ಪ ಬಣ) ಮಾದಿಗ ದಂಡೋರ, ಕಣಿವೆ ಮಾರಮ್ಮ ಸಂಘ, ನ್ಯೂ ಭಾರತ್ ರಕ್ಷಣಾ ವೇದಿಕೆ ಮುಂತಾದ 18 ಸಂಘಗಳು ಈ ಜಾಥಾವನ್ನು ಬೆಂಬಲಿಸಲಿವೆ ಎಂದರು.
ಈ ಕಾರ್ಯಕ್ರಮದಲ್ಲಿ ವಕೀಲರುಗಳಾದ ಬೆನಕನಹಳ್ಳಿ ಎನ್.ಚಂದ್ರಪ್ಪ, ಪಾಳ್ಯ ಸಿ.ಕುಮಾರ್, ಬಿ.ಟಿ.ರಾಜಣ್ಣ, ಹೆಚ್.ರಾಮಸ್ವಾಮಿ, ಕೆ.ವಸಂತ್ಕುಮಾರ್, ಉಪನ್ಯಾಸಕರುಗಳಾದ ಕೆರೆಯಾಗಳಹಳ್ಳಿ ತಿಪ್ಪೇಸ್ವಾಮಿ, ಬನ್ನಿಹಟ್ಟಿ ಮಲ್ಲೇಶ್, ಬಸವರಾಜ್, ಪ್ರೊ.ಎಲ್.ನಾಗರಾಜ್, ರಾಮ್ಬಾಬು, ಇನ್ಕಮ್ ಟ್ಯಾಕ್ಸ್ ಬಿ.ರಾಜಪ್ಪ, ಕೆಂಚಣ್ಣ ತಮಟಕಲ್ಲು, ಗಂಗಾಧರಪ್ಪ, ದೇವರಾಜ್, ಚಂದ್ರಪ್ಪ.ಸಿ, ಮೋಹನ್ ಕುಮಾರ್ ಮುಂತಾದವರು ಭಾಗವಹಿಸಿದ್ದರು.