i
ಬಿಜೆಪಿ ಸರ್ಕಾರಗಳಿಂದ ಎಸ್ಸಿ-ಎಸ್ಟಿ ಸಮುದಾಯಗಳ ಕಡೆಗಣನೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬಿಜೆಪಿ ನೇತೃತ್ವದ ರಾಜ್ಯ ಮತ್ತು ಕೇಂದ್ರ ಸರ್ಕಾರ ಎಸ್ಸಿ, ಎಸ್ಟಿ ಸಮುದಾಯವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಆರೋಪಿಸಿದರು.
ನಗರದ ಐಶ್ವರ್ಯ ಫೋರ್ಟ್ನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ ಅವರು, ತಳ ಸಮುದಾಯಗಳಿಗೆ ಮೀಸಲಾತಿ ಹೆಚ್ಚಳದ ಹೆಸರಿನಲ್ಲಿ ಬಿಜೆಪಿ ಸರ್ಕಾರ ಅನ್ಯಾಯ ಮಾಡುತ್ತಿದೆ. ಸಂವಿಧಾನದ 9ನೇ ಪರಿಚ್ಛೇದಕ್ಕೆ ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳದ ವಿಷಯ ಸೇರ್ಪಡೆಯಾಗಬೇಕು. ಆಗ ಮೀಸಲಾತಿ ಹೆಚ್ಚಳ ಆಗಲಿದೆ, ಯಾವುದೇ ಕಾರಣಕ್ಕೂ ಮೀಸಲಾತಿ ಹೆಚ್ಚಳ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ಈಗಾಗಲೇ ಸ್ಪಷ್ಟ ಪಡಿಸಿದೆ ಎಂದು ಅವರು ತಿಳಿಸಿದರು. ಜನವರಿ-8 ರಂದು ಚಿತ್ರದುರ್ಗದಲ್ಲಿ ನಡೆದ ಎಸ್ಸಿ ಎಸ್ಟಿ ಐಕ್ಯತಾ ಸಮಾವೇಶ ಐತಿಹಾಸಿಕ ಕಾರ್ಯಕ್ರಮವಾಗಿ ಮಾಡಲಾಯಿತು. ಎಸ್ಸಿ, ಎಸ್ಟಿ ಸಮುದಾಯದ ಸಮಾವೇಶಕ್ಕೆ ಎಲ್ಲಾರೂ ಸಹಕಾರ ನೀಡಿದ್ದಕ್ಕೆ ಧನ್ಯವಾದಗಳು. ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು ಒಗ್ಗಟ್ಟಿನಿಂದ ಕಾರ್ಯಕ್ರಮ ಯಶಸ್ಸಿಗೆ ಸಹಕಾರ ನೀಡಿದ್ದಾರೆ ಎಂದು ಅವರು ಸ್ಮರಿಸಿದರು.
ಪರಿಶಿಷ್ಟ ವರ್ಗದಲ್ಲಿ ೧೦೧ ಜಾತಿ, ಪರಿಶಿಷ್ಟ ಪಂಗಡದಲ್ಲಿ ೫೧ ಜಾತಿಗಳಿದ್ದು ಎಲ್ಲರೂ ಒಗ್ಗಟ್ಟಾಗಬೇಕು. ಜನರು ಸಾಮಾಜಿಕವಾಗಿ ಈ ಸಮುದಾಯಗಳನ್ನು ಸಮಾನವಾಗಿ ಕಾಣಬೇಕು. ಇಂತಹ ದೊಡ್ಡ ಮಹತ್ವಾಕಾಂಕ್ಷೆ ಒತ್ತು ಕಾಂಗ್ರೆಸ್ ಸಾಗುತ್ತಿದೆ. ನಮ್ಮ ಸಮಾವೇಶಕ್ಕೆ ೪ ಲಕ್ಷಕ್ಕಿಂತ ಹೆಚ್ಚಿನ ಜನರು ಬಂದಿದ್ದು ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಸಮಾವೇಶಕ್ಕೆ ಬಂದ ಎಲ್ಲರೂ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು ಎಂಬ ಗುರಿಯೊಂದಿಗೆ ವಾಪಸ್ ತೆರಳಿದ್ದಾರೆ. ನಾವೆಲ್ಲರೂ ಒಂದಾಗಬೇಕು ಎಂಬ ಭಾವನೆ ಎಸ್ಸಿ ಮತ್ತು ಎಸ್ಟಿ ಸಮುದಾಯದಲ್ಲಿ ಬಂದಿದೆ. ನಮ್ಮ ಉದ್ದೇಶ ಸಫಲವಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಎಸ್ಸಿ ಎಸ್ಟಿ ಸಮುದಾಯಗಳಿಗಾಗಿ ದಶ ಘೋಷಣೆ ಮಾಡಿದೆ. ಹತ್ತು ಘೋಷಣೆಯನ್ನು ಆದ್ಯತೆ ಮೇಲೆ ಮಾಡಲಾಗುತ್ತದೆ. ರಾಜ್ಯದ ಜನರ ಮುಂದೆ ಹತ್ತು ಭರವಸೆಗಳನ್ನು ಕಾರ್ಯಗತಗೊಳಿಸುತ್ತೇವೆ ಎಂದು ಪ್ರತಿಜ್ಞೆ ಮಾಡಲಾಗುತ್ತದೆ. ಜನರ ವಿಶ್ವಾಸದ ಮೇಲೆ ದಶ ಘೋಷಣೆ ಮಾಡಲಾಗಿದೆ. ರಾಜ್ಯ ಎಲ್ಲಾ ಜಿಲ್ಲೆಯಿಂದ ಬಂದ ಮುಖಂಡರು ಮತ್ತು ಕಾರ್ಯಕರ್ತರಿಗೆ ಧನ್ಯವಾದಗಳು ಎಂದರು.
ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ಮಾತನಾಡಿ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಇಸ್ ಕಮ್ ಬ್ಯಾಕ್ ಎಂಬ ಬಯಕೆಯನ್ನು ಆಡುತ್ತಿದ್ದಾರೆ. ಡಬಲ್ ಇಂಜಿನ್ ಸರ್ಕಾರದಲ್ಲಿ ಜನರು ಬದುಕುತ್ತಿಲ್ಲ. ಸಂವಿಧಾನದ ಅವಕಾಶವನ್ನು ದುರ್ಬಲಗೊಳಿಸುವ ತಂತ್ರ ನಡೆಯುತ್ತಿದೆ. ಜನರು ತಮ್ಮ ಹಕ್ಕುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಸಂವಿಧಾನದ ಆಶಯ ಕಾಪಡುವ ಕಡೆ ಹೆಜ್ಜೆ ಹಾಕುತ್ತಿದೆ. ಕರ್ನಾಟಕ ಬಿಜೆಪಿ ಆಡಳಿತದಿಂದ ಅಭಿವೃದ್ಧಿ 20 ವರ್ಷ ಹಿಂದಕ್ಕೆ ಸಾಗಿದೆ. ಸಂವಿಧಾನದ ಬಲವರ್ಧನೆ ಮತ್ತು ಪ್ರಜಾಸತ್ತಾತ್ಮಕ ಆಡಳಿತ ನಡೆಸಲು ನಾವು ಸಿದ್ದವಾಗಿದ್ದೇವೆ ಎಂದರು.
ಮಾಜಿ ಸಂಸದ ಉಗ್ರಪ್ಪ ಮಾತನಾಡಿ, ಬಿಜೆಪಿ ಸರ್ಕಾರ ಸ್ಯಾಂಟ್ರೋ ರವಿಯನ್ನು ಸರ್ಕಾರ ರಕ್ಷಣೆ ಮಾಡುತ್ತಿದೆ. ಅಪರಾಧಿಯನ್ನು ಬಂಧಿಸುವಲ್ಲಿ ಮೋನಾಮೇಷ ಎಣಿಸಿತು, ಆರ್ ಅಶೋಕ್ ಮತ್ತು ಸಿಟಿ ರವಿಯವರಿಗೆ ಈತನ ಬಗ್ಗೆ ಎಲ್ಲಾ ತಿಳಿದಿತ್ತು ಅದರೂ ಸಹಾ ಆತನ ಬಗ್ಗೆ ಯಾವ ಪೋಲಿಸ್ ಠಾಣೆಯಲ್ಲಿಯೂ ದೂರು ನೀಡಿರಲಿಲ್ಲ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಲಿ ನ್ಯಾಯಾಧೀಶರಿಂದ ತನಿಖೆ ಮಾಡಿಸುವಂತೆ ಉಗ್ರಪ್ಪ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶಾಸಕ ಟಿ.ರಘುಮೂರ್ತಿ, ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ಶಾಸಕ ಪರಮೇಶ್ವರನಾಯ್ಕ, ಉಮಾಪತಿ, ಎಂಎಲ್ಸಿ ರಘು ಆಚಾರ್, ಜಿಲ್ಲಾಧ್ಯಕ್ಷ ತಾಜ್ಪೀರ್, ಕಾರ್ಮಿಕ ಸಂಘಟನೆಯ ರಾಜ್ಯಾಧ್ಯಕ್ಷ ಜಿ.ಎಸ್.ಮಂಜುನಾಥ್, ಮುಖಂಡರಾದ ಹನುಮಲಿ ಷಣ್ಮುಖಪ್ಪ, ಜೆಜೆಹಟ್ಟಿ ತಿಪ್ಪೇಸ್ವಾಮಿ, ಸಂಪತ್ ಕುಮಾರ್, ಲಕ್ಷ್ಮೀಕಾಂತ್, ಮಹಡಿ ಶಿವಮೂರ್ತಿ, ಗೀತಾ ನಂದಿನಿ ಗೌಡ, ಮೈಲಾರಪ್ಪ, ಎನ್.ಡಿ.ಕುಮಾರ್, ಅಂಜನಪ್ಪ ಮುರಳೀಧರ ಹಾಲಪ್ಪ, ಬಸವರಾಜು ಸೋಮಶೇಖರ್ ಮತ್ತು ಸ್ಥಳೀಯ ಮುಖಂಡರು ಇದ್ದರು.