i
ಒಗ್ಗಟ್ಟು ಪ್ರದರ್ಶಿಸಿದ 4ಮಂದಿ ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳು, ಅದ್ಧೂರಿ ಪಂಚರತ್ನ ಯಾತ್ರೆಗೆ ಸಿದ್ಧತೆ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಪಂಚರತ್ನ ರಥೆ ಯಾತ್ರೆಗೆ ಸಕಲ ಸಿದ್ಧತೆ ಮಾಡಿಕೊಂಡು ಜೆಡಿಎಸ್ ವರಿಷ್ಠರು ಯಾರಿಗೆ ಟಿಕೆಟ್ ನೀಡಿದರೂ ಉಳಿದ ಮೂರು ಮಂದಿ ಮಾಡು ಇಲ್ಲವೇ ಮಡಿ ಎನ್ನುವಾರ್ಥದಲ್ಲಿ ಸಮರೋಪಾದಿಯಲ್ಲಿ ಕೆಲಸ ಮಾಡಿ ಜೆಡಿಎಸ್ ಗೆಲ್ಲುಸವ ಪಣವನ್ನು ನಾಲ್ಕು ಮಂದಿ ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳು ಶಪತ ಮಾಡಿದರು.
ಇಲ್ಲಿನ ತನ್ಯಾಸಿ ಗೌಂಡರ್ ಕಲ್ಯಾಣ ಮಂಟಪದಲ್ಲಿ ಹಿರಿಯೂರು ತಾಲೂಕು ಜೆಡಿಎಸ್ ಪಕ್ಷದ ನೇತೃತ್ವದಲ್ಲಿ ಶನಿವಾರ ನಡೆದ ಪಂಚರತ್ನ ರಥ ಯಾತ್ರೆಯ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಟಿಕೆಟ್ ಆಕಾಂಕ್ಷಿಗಳು ಒಗ್ಗಟ್ಟು ಪ್ರದರ್ಶಿಸಿ ಮಾತನಾಡಿದರು. ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೆ ಸ್ಥಳೀಯರಿಗೆ ಟಿಕೆಟ್ ನೀಡಬೇಕು. ಕಳೆದ 15 ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿ ಅಧಿಕಾರ ಇಲ್ಲದೆ ಇಡೀ ಕ್ಷೇತ್ರದ ಕಾರ್ಯಕರ್ತರು, ಮುಖಂಡರು ಒಂದು ರೀತಿಯಲ್ಲಿ ಅತಂತ್ರರಾಗಿದ್ದಾರೆ. ನಮ್ಮ ನಿಮ್ಮಲ್ಲರ ವೈಯಕ್ತಿಕ ಪ್ರತಿಷ್ಠೆಗಳನ್ನು ದೂರ ಮಾಡಿ ಪಕ್ಷದ ಗೆಲುವಿಗೆ ಶ್ರಮಿಸೋಣ ಎಂದರು.
ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಕಾಂಗ್ರೆಸ್, ಬಿಜೆಪಿ ಎರಡು ಪಕ್ಷಗಳ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಜೆಡಿಎಸ್ ಪಕ್ಷದ ಸ್ಥಳೀಯ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಕೈ ಕಾಲು ಹಿಡಿದು ಮತದಾರರ ಮನವೊಲಿಕಗೆ ಮಾಡೋಣ. ಯಾವ ಹೋಬಳಿಯಲ್ಲಿ ಜೆಡಿಎಸ್ ಸ್ಪಲ್ಪ ವೀಕ್ ಇದೆಯೋ ಅಲ್ಲಿ ಸಮಾವೇಶಗಳನ್ನು ಆಯೋಜಿಸುವ ಮೂಲಕ ಈ ಬಾರಿ ಜೆಡಿಎಸ್ ಗೆಲ್ಲಿಸಿ ಅದರಲ್ಲೂ ಸ್ಥಳೀಯರನ್ನೇ ಗೆಲ್ಲಿಸಿ ಎನ್ನುವ ಸಂದೇಶ ಸಾರೋಣ ಎಂದು ಒಗ್ಗಟ್ಟಿನಿಂದ ಟಿಕೆಟ್ ಆಕಾಂಕ್ಷಿಗಳಾದ ಜಿಪಂ ಮಾಜಿ ಅಧ್ಯಕ್ಷ ಪಿಲಾಜನಹಳ್ಳಿ ಎಂ.ಜಯಣ್ಣ, ಶ್ರಾವಣಗೆರೆ ಶಿವಪ್ರಸಾದ್ ಗೌಡ, ಚಿತ್ರದುರ್ಗ ನಿರ್ಮಿತಿ ಕೇಂದ್ರದ ಜಿಲ್ಲಾ ಯೋಜನಾಧಿಕಾರಿ ಕೆ.ಜಿ.ಮೂಡಲಗಿರಿಯಪ್ಪ, ನಿವೃತ್ತ ಮುಖ್ಯ ಇಂಜಿನಿಯರ್ ಎಂ.ರವೀಂದ್ರಪ್ಪ ಇವರುಗಳು ಹೇಳಿದರು.
ಫೆ.2 ರಂದು ಪರಶುರಾಂಪುರ ಹೋಬಳಿ ಮೂಲಕ ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೆ ಪಂಚರತ್ನ ರಥ ಯಾತ್ರೆ ಆಗಮಿಸಲಿದ್ದು ಯಶಸ್ವಿಗೆ ಪ್ರತಿಯೊಬ್ಬರು ಶ್ರಮಿಸೋಣ, ಜೆಡಿಎಸ್ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ಅವರಲ್ಲಿ ನಾಲ್ಕು ಮಂದಿ ಒಟ್ಟಿಗೆ ಜನವರಿ 21ಕ್ಕೆ ಬೆಂಗಳೂರಿಗೆ ಹೋಗಿ ಇಂತವರಿಗೆ ಟಿಕೆಟ್ ನೀಡಿ ಎಂದು ಹೇಳೋಣ, ಅಷ್ಟೇ ಅಲ್ಲ ನಾಲ್ವರಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಜೆಡಿಎಸ್ ಗೆಲ್ಲಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇವೆಂದು ವರಿಷ್ಠರಿಗೆ ಮನವರಿಕೆ ಮಾಡಿಕೊಡೋಣ ಎಂದು ನಾಲ್ಕು ಮಂದಿ ಒಮ್ಮತಕ್ಕೆ ಬಂದರು.
ತಾಲೂಕಿನಾದ್ಯಂತ 500ಕ್ಕೂ ಹೆಚ್ಚಿನ ಕಾರ್ಯಕರ್ತರು, ಮುಖಂಡರು ಪೂರ್ವಭಾವಿ ಸಭೆಗೆ ಆಗಮಿಸಿ ಸಲಹೆ ಸೂಚನೆಗಳನ್ನು ನೀಡಿದರು. ಇದೇ ಸಂದರ್ಭದಲ್ಲಿ ಜೆಡಿಎಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಮೂಲ ಜೆಡಿಎಸ್ ಮುಖಂಡರು, ಕಾರ್ಯಕರ್ತರನ್ನ ಜೆಡಿಎಸ್ ಪಕ್ಷಕ್ಕೆ ಕರೆ ತರುವ ಕಾರ್ಯವನ್ನು ಸಮರೋಪಾದಿಯಲ್ಲಿ ಮಾಡುವುದಾಗಿ ಜೆಡಿಎಸ್ ತಾಲೂಕು ಮುಖಂಡರು ಪಣ ತೊಟ್ಟರು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ಯಶೋಧರ ಉದ್ಘಾಟಿಸಿ ಮಾತನಾಡಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಹನುಮಂತರಾಯಪ್ಪ ಅಧ್ಯಕ್ಷತೆ ವಹಿಸಿದ್ದರು. ವೀಕ್ಷಕರಾದ ಪಾತಯ್ಯ, ಶರಣಪ್ಪ ಕುಂಬಾರ, ತಾಹೇರ ಖುಲ್ಸುಮ್, ಎಂ.ಜಯಣ್ಣ, ಶಿವಪ್ರಸಾದ್ ಗೌಡ, ರವಿಂದ್ರಪ್ಪ, ಮೂಡಲಿಗಿರಿಯಪ್ಪ, ಕೆ.ಮಂಜುನಾಥ್, ಮುಂತಾದವರು ಭಾಗವಹಿಸಿದ್ದರು.